ಒಕ್ಕಲಿಗರ ಒಳಮನಸ್ಸುಗಳಲ್ಲಿ ಇದೇನಿದು ಬಿಜೆಪಿ ವಿರೋಧಿ ಅಲೆ?
ಮಾಜಿ ಸಚಿವ ಡಿ. ಕೆ. ಶಿವಕುಮಾರ್ರನ್ನು ಜಾರಿ ನಿರ್ದೇಶನಾಲಯ (ಇ. ಡಿ.) ದಿಲ್ಲಿಯಲ್ಲಿ ಬಂಧಿಸಿದ ಪ್ರಕರಣ ಕರ್ನಾಟಕದಲ್ಲಿ ಒಕ್ಕಲಿಗ ಸಮುದಾಯದ ಸಿಟ್ಟು ಬಿಜೆಪಿ ಕಡೆಗೆ ತಿರುಗಲು ದೊಡ್ಡ ಮಟ್ಟದಲ್ಲಿ ಕಾರಣ ಆಗಬಹುದಾ? ಈಗಿನ ಪರಿಸ್ಥಿತಿ ಗಮನಿಸಿದರೆ ರಾಜ್ಯದಲ್ಲಿ ಅಂಥದ್ದೊಂದು ವಾತಾವರಣ ಕಂಡುಬರುತ್ತಿದೆ.
ಯಾವ ಜಿಲ್ಲೆಗಳಲ್ಲಿ ಅಥವಾ ಕ್ಷೇತ್ರಗಳಲ್ಲಿ ಒಕ್ಕಲಿಗರ ಸಮುದಾಯದ ಮತಗಳು ಪ್ರಮುಖ ಪಾತ್ರ ವಹಿಸುತ್ತವೋ ಅಲ್ಲೆಲ್ಲ ಬಿಜೆಪಿಗೆ ಮುಂದಿನ ಚುನಾವಣೆಗಳು ಬಹಳ ಕಷ್ಟ ಆಗಲಿವೆ ಎಂದು ಈಗಾಗಲೇ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಚಾಲ್ತಿಗೆ ಬಂದಿದೆ. ಪ್ರಮುಖವಾಗಿ ಮೂರು ವಿಚಾರಗಳು ಈಗಿನ ಪರಿಸ್ಥಿತಿಯಲ್ಲಿ ಮುನ್ನೆಲೆಗೆ ಬಂದು, ಅದು ಕೇಂದ್ರದಲ್ಲಿರುವ ಬಿಜೆಪಿ ವಿರುದ್ಧದ ಸಿಟ್ಟಾಗಿ ಪರಿವರ್ತನೆಯಾಗುತ್ತಿದೆ. ಏನು ಆ ಸಿಟ್ಟು? ಯಾವುದು ಮೂರು ವಿಚಾರಗಳು?
ಅಶೋಕ್ 'ಕಿರೀಟ' ಅಶ್ವಥ್ ನಾರಾಯಣ್ ತಲೆಗೆ; ಬದಲಾಯ್ತಾ ಬೆಂಗಳೂರು ಬಿಜೆಪಿ ಆದ್ಯತೆ?
ಮೊದಲನೆಯದು, ಎಚ್. ಡಿ. ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್- ಕಾಂಗ್ರೆಸ್ ಸರಕಾರವನ್ನು ಕೆಡವಿದ್ದು. ಎರಡನೆಯದು, ಕೆಫೆ ಕಾಫಿ ಡೇ ಸಿದ್ಧಾರ್ಥ್ ಸಾವಿಗೆ ಆದಾಯ ತೆರಿಗೆ ಇಲಾಖೆಯ ಕಿರುಕುಳ- ಪರೋಕ್ಷವಾಗಿ ಕೇಂದ್ರ ಸರಕಾರದ ಕಾನೂನುಗಳು ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ಇಂದಿಗೂ ಚರ್ಚೆಯಲ್ಲಿರುವುದು.
ದೇವೇಗೌಡರು, ಕುಮಾರಸ್ವಾಮಿ ನಂತರ ಹೆಚ್ಚು ಪ್ರಭಾವಿ
ಇವುಗಳ ಜತೆಗೆ, ಇದೀಗ ಜೆಡಿಎಸ್ ನ ದೇವೇಗೌಡರು- ಕುಮಾರಸ್ವಾಮಿ ಇವರಿಬ್ಬರನ್ನು ಹೊರತುಪಡಿಸಿದರೆ ಸಮುದಾಯದಲ್ಲಿ ಪ್ರಮುಖ ನಾಯಕ ಎನಿಸಿಕೊಂಡಿರುವ ಡಿ. ಕೆ. ಶಿವಕುಮಾರ್ ಬಂಧನದ ಮೂಲಕ ಒಕ್ಕಲಿಗ ಸಮುದಾಯದ ಪ್ರಭಾವಿಗಳನ್ನು ತುಳಿಯುವ ಕೆಲಸ ಶುರುವಾಗಿದೆ ಎಂಬ ಭಾವನೆ ಬೇರೂರುತ್ತಿದೆ. ಈ ವಿಚಾರ ಇನ್ನಷ್ಟು ಗಟ್ಟಿಯಾದರೆ, ಒಕ್ಕಲಿಗರ ಸಾಮುದಾಯಿಕ ಸಿಟ್ಟು ದೊಡ್ಡ ಮಟ್ಟದ ಕಿಚ್ಚಾಗಿ ಪರಿವರ್ತನೆಯಾದರೆ ಏನಾಗಬಹುದು? ಕರ್ನಾಟಕದಲ್ಲಿ ಸಂಖ್ಯಾದೃಷ್ಟಿಯಿಂದ ಎರಡನೇ ಅತಿ ದೊಡ್ಡ ಸಮುದಾಯ ಒಕ್ಕಲಿಗರದ್ದು. ಯಾವ ಜಿಲ್ಲೆ- ವಿಧಾನಸಭಾ, ಲೋಕಸಭಾ ಕ್ಷೇತ್ರಗಳಲ್ಲಿ ಒಕ್ಕಲಿಗರ ಮತಗಳಿವೆಯೋ ಅಲ್ಲಿ ಬಿಜೆಪಿ ಸಹಜವಾದ ಆಡಳಿತ ವಿರೋಧಿ ಅಲೆಯ ಜತೆಗೆ ಭಾವನಾತ್ಮಕ ವಿರೋಧವೊಂದನ್ನು ಎದುರಿಸುವ ಲಕ್ಷಣಗಳು ಕಾಣಿಸುತ್ತಿವೆ.
ಒಕ್ಕಲಿಗರ ಯುವ ಮನಸುಗಳು ಬಿಜೆಪಿ ಕಡೆಗೆ ವಾಲಿದ್ದವು
ಅದರಲ್ಲೂ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಸೇರಿ ವಿವಿಧ ಜಿಲ್ಲೆ ಹಾಗೂ ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯದ ಮತಗಳು ಪ್ರಮುಖವಾಗಿವೆ. ಸಾಂಪ್ರದಾಯಿಕವಾಗಿ ಕರ್ನಾಟಕದಲ್ಲಿ ಲಿಂಗಾಯತರು ಬಿಜೆಪಿ ಜತೆಗೂ ಒಕ್ಕಲಿಗರು ಜೆಡಿಎಸ್ ಹಾಗೂ ಅಲ್ಪ ಪ್ರಮಾಣದಲ್ಲಿ ಕಾಂಗ್ರೆಸ್ ಜತೆಗೂ ನಿಂತಿದ್ದರು. ಆದರೆ 2014ರ ನಂತರದ ದಿನಗಳಲ್ಲಿ ಒಕ್ಕಲಿಗರ ಯುವ ಮನಸ್ಸುಗಳು ಬಿಜೆಪಿ ಕಡೆಗೆ ವಾಲಿದ್ದವು. ಆದರೆ ಸಿದ್ಧಾರ್ಥ್ ಸಾವಿನ ನಂತರ ಈ ಮನಸ್ಥಿತಿಯಲ್ಲಿ ಬದಲಾವಣೆಗಳು ಕಾಣಿಸುತ್ತಿವೆ. ಡಿ. ಕೆ. ಶಿವಕುಮಾರ್ ಬಂಧನ ನಂತರ ಅದು ಇನ್ನಷ್ಟು ಗಟ್ಟಿಯಾದಂತೆ ಕಾಣಿಸುತ್ತಿದೆ.
ಬಿಜೆಪಿಯ ನಾಯಕರಿಗೆ ಒಕ್ಕಲಿಗರ ಮತ ಸೆಳೆಯುವ ಶಕ್ತಿ ಇಲ್ಲ
ಆದರೆ, ಒಕ್ಕಲಿಗ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟುಕೊಂಡೇ ಬಿಜೆಪಿ ಡಾ. ಸಿ. ಎನ್. ಅಶ್ವಥ್ ನಾರಾಯಣ್ ರನ್ನು ಬಿಜೆಪಿಯಿಂದ ಉಪ ಮುಖ್ಯಮಂತ್ರಿ ಮಾಡಲಾಯಿತು. ಆದರೆ ಇದು ಬೆಂಗಳೂರು ಆಚೆಗೆ ದೊಡ್ಡ ಮಟ್ಟದ ಪ್ರಭಾವ ಬೀರುವ ಕೆಲಸ ಮಾಡುವಂತೆ ಕಾಣಿಸುತ್ತಿಲ್ಲ. ಇನ್ನು ಆರ್. ಅಶೋಕ್ ಪ್ರಭಾವ ಪಕ್ಷದೊಳಗೆ ಸ್ವಲ್ಪ ಕಡಿಮೆ ಆಗಿದೆ ಎಂದುಕೊಂಡರೂ ಮೂಲೆಗುಂಪೇನೂ ಮಾಡಿಲ್ಲ. ಕೇಸರಿ ಪಾಳಯದಲ್ಲಿ ಇರುವ ಒಕ್ಕಲಿಗ ಸಮಾಜದ ಉಳಿದ ನಾಯಕರಿಗೆ ದೊಡ್ಡ ಮಟ್ಟದಲ್ಲಿ ಮತ ಸೆಳೆಯುವ ಶಕ್ತಿ ಇಲ್ಲ.
ಉಪ ಚುನಾವಣೆ ಮೇಲೆ ಏನು ಪರಿಣಾಮ ಬೀರಬಹುದು?
ಇಂಥ ಸನ್ನಿವೇಶದಲ್ಲಿ ಮೇಲಿಂದ ಮೇಲೆ (ಕುಮಾರಸ್ವಾಮಿ ಸರಕಾರ ಕೆಡವಿದ್ದು, ಸಿದ್ಧಾರ್ಥ್ ಆತ್ಮಹತ್ಯೆ, ಡಿ. ಕೆ. ಶಿವಕುಮಾರ್ ಬಂಧನ) ಒಕ್ಕಲಿಗ ಸಮುದಾಯವನ್ನು ಕೆಣಕುವ ಘಟನೆಗಳು ಬಿಜೆಪಿ ಕಡೆಯಿಂದ ನಡೆದಿವೆ. ಇದು ಮುಂಬರುವ ಉಪಚುನಾವಣೆಯ ಮೇಲೆ ಬೀರುವ ಪರಿಣಾಮಗಳನ್ನು ಕಾದು ನೋಡಬೇಕಿದೆ.