ಕ್ಷಮಿಸಿ, ದೇವೇಗೌಡರದು ಕುಟುಂಬ ರಾಜಕಾರಣ ಅಲ್ಲವೇ ಅಲ್ಲ!
ಜೆಡಿಎಸ್ ಅಂದಾಕ್ಷಣ ಕಣ್ಣೆದುರು ಮೂಡುವ ಚಿತ್ರ ಎಚ್.ಡಿ.ದೇವೇಗೌಡರದು. ಆ ನಂತರ ಅವರ ಅಕ್ಕಪಕ್ಕ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ರೇವಣ್ಣ. ಅವರಿಬ್ಬರ ಹಿಂದೆ ಅನಿತಾ ಕುಮಾರಸ್ವಾಮಿ ಹಾಗೂ ಭವಾನಿ ರೇವಣ್ಣ. ಈ ಚಿತ್ರಗಳೆಲ್ಲದರ ಹಿಂದೆ ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿ.
ಇದು ಇಷ್ಟಕ್ಕೆ ನಿಲ್ಲುತ್ತದಾ? ಜೆಡಿಎಸ್ ಪಕ್ಷದಲ್ಲಿ ದೇವೇಗೌಡರ ಕುಟುಂಬ ನಿರ್ವಹಿಸುತ್ತಿರುವ ಪಾತ್ರವೇನು? ಅದನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಈ ರೀತಿಯದ್ದನ್ನು ಕುಟುಂಬ ರಾಜಕಾರಣ ಅಂತ ಕರೆಯಬೇಕೋ ಅಥವಾ ರಾಜಕಾರಣಿಗಳ ಕುಟುಂಬ ಎನ್ನಬೇಕೋ?
ಬುಧವಾರವಷ್ಟೇ ಜೆಡಿಎಸ್ ನೇತೃತ್ವದ ಕಾಂಗ್ರೆಸ್ ಬೆಂಬಲದಲ್ಲಿ ಮೈತ್ರಿ ಸರಕಾರದ ಸಂಪುಟ ವಿಸ್ತರಣೆ ಆಗಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಈಗಾಗಲೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇನ್ನು ಅವರ ಹಿರಿಯ ಸಹೋದರ ಎಚ್.ಡಿ.ರೇವಣ್ಣ ಸಂಪುಟ ಸಹೋದ್ಯೋಗಿಯಾಗಿ ಇರಲಿದ್ದಾರೆ. ಜತೆಗೆ ಮತ್ತೊಬ್ಬರು ಸಂಬಂಧಿ ಡಿ.ಸಿ.ತಮ್ಮಣ್ಣ ಅವರು ಕೂಡ ಸಂಪುಟದಲ್ಲಿ ಸಚಿವರು.
ಸಂಪುಟ ನೋಡಿದ್ರೆ ಖಾತ್ರಿ, ಕಾಂಗ್ರೆಸ್ ರಿಮೋಟೂ ದೇವೇಗೌಡರ ಕಿಸೆಯಲ್ಲಿ!
ದೇವೇಗೌಡರೂ ಸೇರಿದಂತೆ ಸಂಬಂಧಿ, ನೆಂಟರು, ರಕ್ತ ಸಂಬಂಧಿಗಳು ಜೆಡಿಎಸ್ ಪಕ್ಷದಲ್ಲಿ ಯಾರು- ಏನಾಗಿದ್ದಾರೆ ಎಂಬ ಮಾಹಿತಿಯು ಕೇವಲ ಮಾಹಿತಿಗಾಗಿ ನಿಮ್ಮೆದುರು ಇದೆ.
ಎಚ್.ಡಿ.ದೇವೇಗೌಡ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ
ಮಾಜಿ ಪ್ರಧಾನಮಂತ್ರಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು ಆಗಿ ಎಚ್.ಡಿ.ದೇವೇಗೌಡರು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹಾಸನವನ್ನು ಪ್ರತಿನಿಧಿಸುವ ಸಂಸದರಾಗಿರುವ ದೇವೇಗೌಡರ ಹೋರಾಟದ ಬಗ್ಗೆ ಕರ್ನಾಟಕ ರಾಜಕಾರಣದಲ್ಲೇ ಹಲವಾರು ನಿದರ್ಶನಗಳಿವೆ. ಅವರ ರಾಜಕೀಯ ಜೀವನದಲ್ಲಿ ಯಾವ ಅಧಿಕಾರವನ್ನೂ ಪೂರ್ಣಾವಧಿ ಅನುಭವಿಸದ ರಾಜಕಾರಣಿ. ಸಚಿವ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಹೀಗೆ ಒಟ್ಟಾರೆಯಾಗಿ ಲೆಕ್ಕ ಹಾಕಿದರೂ ಐದು ವರ್ಷದಷ್ಟು ಕೂಡ ಅಧಿಕಾರ ಕೇಂದ್ರದಲ್ಲಿ ಇರದ ದೇವೇಗೌಡರು ಸಿದ್ಧಾಂತಗಳ ಜತೆಗೆ ರಾಜಿ ಮಾಡಿಕೊಂಡವರಲ್ಲ. ಹಾಸನದ ಹಳ್ಳಿಯೊಂದರಲ್ಲಿ ಹುಟ್ಟಿದ ಅವರನ್ನು ರಾಷ್ಟ್ರ ಮಟ್ಟದಲ್ಲಿ ಮಿಂಚುವಂತೆ ಮಾಡಿದ್ದೇ ಅವರ ಇಂಥ ಗುಣಗಳು.
ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷರು
ದೇವೇಗೌಡ-ಚನ್ನಮ್ಮ ದಂಪತಿಯ ಮಗ ಎಚ್.ಡಿ.ಕುಮಾರಸ್ವಾಮಿ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ- ಚನ್ನಪಟ್ಟಣ ಎರಡೂ ಕ್ಷೇತ್ರದಿಂದ ಗೆದ್ದಿದ್ದ ಎಚ್.ಡಿ.ಕುಮಾರಸ್ವಾಮಿ ರಾಮನಗರಕ್ಕೆ ರಾಜೀನಾಮೆ ನೀಡಿದ್ದಾರೆ. ಸದ್ಯಕ್ಕೆ ಜೆಡಿಎಸ್ ನ ರಾಜ್ಯಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ. ಇವರನ್ನು ಅದೃಷ್ಟದ ರಾಜಕಾರಣಿ ಅಂತ ಕರೆಯಲಾಗುತ್ತದೆ. ಶಾಸಕರಾದ ಮೊದಲ ಬಾರಿಗೆ ಮುಖ್ಯಮಂತ್ರಿ ಆದರು. ಇಪ್ಪತ್ತು ತಿಂಗಳ ಅವಧಿಯಲ್ಲಿ ಬೆಳವಣಿಗೆ ವೇಗವೂ ಅಗಾಧವಾಗಿತ್ತು. ನೋಡನೋಡುತ್ತಲೇ ನಾಯಕರಾಗಿ ಬೆಳೆದರು. ಇನ್ನು ಈ ಬಾರಿ ಮೂವತ್ತೇಳು ಸದಸ್ಯರ ಜತೆಗೆ ಜೆಡಿಎಸ್ ಗೆ ಮುಖ್ಯಮಂತ್ರಿ ಸ್ಥಾನ ಕುಮಾರಸ್ವಾಮಿ ಅವರಿಗೆ ಒಲಿದು ಬಂದಿದೆ. ಎಪ್ಪತ್ತೆಂಟು ಸ್ಥಾನಗಳಲ್ಲಿ ಗೆದ್ದರೂ ಸರಕಾರದ ಚುಕ್ಕಾಣಿ ವಹಿಸಿಕೊಳ್ಳಲು ಕಾಂಗ್ರೆಸ್ ಪಕ್ಷವು ಜೆಡಿಎಸ್ ಗೆ ಅವಕಾಶ ಮಾಡಿಕೊಟ್ಟಿದೆ. ಅಲ್ಲಿಗೆ ಎಚ್ ಡಿಕೆ ಅದೃಷ್ಟವಂತರು ಎಂದು ಯಾಕೆ ಕರೆಸಿಕೊಳ್ಳುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಎಚ್.ಡಿ.ರೇವಣ್ಣ, ಸಂಪುಟ ದರ್ಜೆ ಸಚಿವ
ದೇವೇಗೌಡ-ಚನ್ನಮ್ಮ ದಂಪತಿಯ ಮತ್ತೊಬ್ಬ ಮಗ ಎಚ್.ಡಿ.ರೇವಣ್ಣ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರದಲ್ಲಿ ಸಂಪುಟ ದರ್ಜೆಯ ಸಚಿವರು. ಜ್ಯೋತಿಷಿಗಳು ಸಹ ಮೂಗಿನ ಬೆರಳಿಟ್ಟು ಕೊಳ್ಳುವಂತೆ ಮಾಡಬಲ್ಲ ಜ್ಯೋತಿಷ್ಯ ಜ್ಞಾನ ಇವರದು. ಕೆಎಂಎಫ್ ಬಗ್ಗೆ ಇವರಿಗಿರುವ ಪ್ರೀತಿ- ಅಕ್ಕರಾಸ್ಥೆ ಪ್ರಶ್ನಾತೀತ. ಒಳ್ಳೆ ಕೆಲಸಗಾರ, ಪಟ್ಟು ಬಿಡದ ರಾಜಕಾರಣಿ, ಹಠಮಾರಿ...ಹೀಗೆ ರೇವಣ್ಣ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ವಿಶ್ಲೇಷಣೆ ಮಾಡುತ್ತಾರೆ. ಈ ಹಿಂದೆ ಪ್ರಮುಖ ಖಾತೆಗಳನ್ನು ನಿರ್ವಹಿಸಿದ ಅನುಭವ ಇರುವ ರೇವಣ್ಣ ರಾಜಕಾರಣಕ್ಕೆ ಪ್ರವೇಶ ಪಡೆದಿದ್ದು ಬಹಳ ಚಿಕ್ಕ ವಯಸ್ಸಿಗೆ. ಆದರೆ ಅದೃಷ್ಟದ ವಿಚಾರದಲ್ಲಿ ಮುಖ್ಯಮಂತ್ರಿ ಗಾದಿ ತಲುಪಿಲ್ಲ ಅನ್ನೋದು ಬಿಟ್ಟರೆ, ಪ್ರಮುಖ ಖಾತೆಗಳಲ್ಲಿ ಹೆಚ್ಚಿನ ಅವಧಿಯ ಅಧಿಕಾರ ಕಂಡವರು.
ಡಿ.ಸಿ.ತಮ್ಮಣ್ಣ, ಮೈತ್ರಿ ಸರಕಾರದಲ್ಲಿ ಸಚಿವರು
ಮಂಡ್ಯ ಜಿಲ್ಲೆಯ ಮದ್ದೂರಿನಿಂದ ವಿಧಾನಸಭೆಗೆ ಆಯ್ಕೆಯಾಗಿ, ಈ ಬಾರಿ ಮೈತ್ರಿ ಸರಕಾರದಲ್ಲಿ ಸಚಿವರಾಗಿರುವ ಡಿ.ಸಿ.ತಮ್ಮಣ್ಣ ಅವರು ಎಚ್.ಡಿ.ದೇವೇಗೌಡ ಅವರಿಗೆ ಬೀಗರಾಗಬೇಕು. ದೇವೇಗೌಡರ ಮಗ ಎಚ್.ಡಿ.ರಮೇಶ್ ಗೆ ತಮ್ಮಣ್ಣ ಅವರ ಮಗಳು ಸೌಮ್ಯಾ ಅವರನ್ನು ತಂದುಕೊಳ್ಳಲಾಗಿದೆ.
ಚನ್ನರಾಯಪಟ್ಟಣದ ಶಾಸಕ ಸಿ.ಎನ್.ಬಾಲಕೃಷ್ಣ
ಚನ್ನರಾಯಪಟ್ಟಣದ ಶಾಸಕರಾಗಿ ಜೆಡಿಎಸ್ ನಿಂದ ಭರ್ಜರಿ ಗೆಲುವು ಸಾಧಿಸಿದ ಸಿ.ಎನ್.ಬಾಲಕೃಷ್ಣ ಅವರು ದೇವೇಗೌಡರು-ಚನ್ನಮ್ಮ ದಂಪತಿಯ ಮಗಳು ಅನಸೂಯಾರ ಪತಿ ಡಾ.ಸಿ.ಎನ್.ಮಂಜುನಾಥ್ ಅವರ ತಮ್ಮ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಸಹ ಬಾಲಕೃಷ್ಣ ಅವರು ಇದೇ ಕ್ಷೇತ್ರದಿಂದ ಜೆಡಿಎಸ್ ನಿಂದಲೇ ಜಯ ಗಳಿಸಿದ್ದರು.
ರಾಮನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅನಿತಾ ಕುಮಾರಸ್ವಾಮಿ
ಇನ್ನು ದೇವೇಗೌಡರ ಸೊಸೆ- ಕುಮಾರಸ್ವಾಮಿ ಅವರ ಪತ್ನಿ ಅನಿತಾ ಈ ಬಾರಿ ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಜೆಡಿಎಸ್ ಪಕ್ಷದ ಟಿಕೆಟ್ ಆಕಾಂಕ್ಷಿ. ಅವರೊಮ್ಮೆ ತುಮಕೂರು ಜಿಲ್ಲೆ ಮಧುಗಿರಿ ಕ್ಷೇತ್ರದಿಂದ ಶಾಸಕಿ ಆಗಿ ಆಯ್ಕೆ ಆಗಿದ್ದರು. ಆ ನಂತರ ಕೆಲ ಚುನಾವಣೆಗಳನ್ನು ಸೋತಿದ್ದರು ಕೂಡ. ಆದರೆ ಈಗ ಪತಿಯ ರಾಜೀನಾಮೆಯಿಂದ ತೆರವಾಗಿರುವ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವ ಇರಾದೆ ಇರಿಸಿಕೊಂಡಿದ್ದಾರೆ.
ರಾಜಕೀಯ ಮಹತ್ವಾಕಾಂಕ್ಷೆಯ ಭವಾನಿ ರೇವಣ್ಣ
ದೇವೇಗೌಡ- ಚನ್ನಮ್ಮ ದಂಪತಿಯ ಮಗ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ಮಹತ್ವಾಕಾಂಕ್ಷಿ. ಜೆಡಿಎಸ್ ಕಾರ್ಯಕರ್ತರು, ಮುಖಂಡರು ಹೇಳುವ ಪ್ರಕಾರ ಹಾಗೂ ವಿವಿಧ ಸನ್ನಿವೇಶಗಳಲ್ಲಿ ಗಮನಿಸಿದಂತೆ ಭವಾನಿ ಅವರ ರಾಜಕೀಯ ಮಹತ್ವಾಕಾಂಕ್ಷೆ ತಿಳಿಯುತ್ತದೆ. ಪತಿ ಹಾಗೂ ಮಗನ ರಾಜಕೀಯ ಜೀವನಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಅವರು ಸದ್ಯಕ್ಕೆ ಹಾಸನ ಜಿಲ್ಲೆಯ ಹೊಳೆನರಸೀಪುರದ ಹಳೇಕೋಟೆಯ ಜಿಲ್ಲಾ ಪಂಚಾಯಿತಿ ಸದಸ್ಯೆ.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ
ಅತ್ಯುತ್ಸಾಹಿ, ಅವಸರ ಎಲ್ಲವೂ ಕಾಣುತ್ತಿರುವ ದೇವೇಗೌಡ- ಚನ್ನಮ್ಮ ದಂಪತಿಯ ಮೊಮ್ಮಗ, ಎಚ್.ಡಿ.ರೇವಣ್ಣ - ಭವಾನಿ ದಂಪತಿಯ ಮಗ ಪ್ರಜ್ವಲ್ ರನ್ನು ಈಗಾಗಲೇ ಹಾಸನದ ಸಂಸತ್ ಚುನಾವಣೆ ಅಭ್ಯರ್ಥಿ ಹಾಗೂ ತಮ್ಮ ಉತ್ತರಾಧಿಕಾರಿ ಎಂದು ದೇವೇಗೌಡರು ಘೋಷಿಸಿಯಾಗಿದೆ. ಸದ್ಯಕ್ಕೆ ಪಕ್ಷದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಪ್ರಜ್ವಲ್ ನಿರ್ವಹಿಸುತ್ತಿದ್ದಾರೆ. ಈ ಬಾರಿ ವಿಧಾನಸಭಾ ಚುನಾವಣೆಗೆ ಮೈಸೂರಿನ ಹುಣಸೂರು ಅಥವಾ ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಸ್ಪರ್ಧಿಸುವ ಉದ್ದೇಶ ಹೊಂದಿದ್ದ ಪ್ರಜ್ವಲ್, ತಮ್ಮ ಹೇಳಿಕೆ ಮೂಲಕ ನಕಾರಾತ್ಮಕವಾಗಿ ಸುದ್ದಿಯಾದವರು.
ಮೈಸೂರಿನ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಂಗಪ್ಪ
ದೇವೇಗೌಡರ ಮಗಳು ಅನಸೂಯಾ ಹಾಗೂ ಅಳಿಯ ಡಾ.ಸಿ.ಎನ್.ಮಂಜುನಾಥ್ ರ ಮಗಳ ಮಾವ ರಂಗಪ್ಪ ಅವರು ಮೈಸೂರು ವಿವಿ ಉಪ ಕುಲಪತಿ ಆಗಿದ್ದರು. ಆ ನಂತರ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದಾರೆ.