ಯಾರಿಗೆ ಕಣ್ಣೀರಿಟ್ಟರೋ ಅಂಥ ಕರಂದ್ಲಾಜೆಯನ್ನೇ ದೂರವಿಟ್ಟರೆ ಬಿಎಸ್ ವೈ?
Recommended Video
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರ ಮಧ್ಯೆ ಮುನಿಸು ಬಂದಿದೆಯಾ? ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕರಂದ್ಲಾಜೆ ಅವರ ಮೇಲೆ ಸಿಟ್ಟಾಗಿ, ಇತ್ತೀಚೆಗೆ ಅಷ್ಟಕ್ಕಷ್ಟೇ ಎಂಬಂತಾಗಿದ್ದಾರೆ ಎಂದು ಸುದ್ದಿ ಹರಿದಾಡುತ್ತಿರುವುದರ ನಿಜವೆ?
-ಈ ಪ್ರಶ್ನೆಗಳಿಗೆ ಹೌದು ಹಾಗೂ ಇಲ್ಲ ಎಂಬ ಎರಡೂ ಉತ್ತರ ಪಕ್ಷದ ಮೂಲಗಳಿಂದಲೇ ಸಿಗುತ್ತಿವೆ. ಯಡಿಯೂರಪ್ಪ ಅವರ ಕುಟುಂಬ ವರ್ಗದವರು ಶೋಭಾ ಕರಂದ್ಲಾಜೆ ಅವರನ್ನು ದೂರ ಇಡಲು ಪ್ರಯತ್ನಿಸಿದ್ದು ಹೌದು. ಆದರೆ ಅದು ಅಷ್ಟು ಸುಲಭವಲ್ಲದ ಸಂಗತಿ. ಯಡಿಯೂರಪ್ಪನವರು ಯಾರ ಮಾತೂ ಕೇಳುವವರಲ್ಲ ಎನ್ನುವ ಮೂಲ ಒಂದು ಕಡೆ.
ಯಡಿಯೂರಪ್ಪಗೆ ಇದ್ದ ಕಡೆಯ ಅವಕಾಶ: ಕಣ್ಣೀರಿಟ್ಟ ಪ್ರತಾಪ್ ಸಿಂಹ
ಸರಕಾರ ರಚನೆಗೆ ಮುಂದಾಗಿ, ಆ ನಂತರ ಭಾರೀ ಮುಜುಗರಕ್ಕೆ ಈಡಾದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಅವರನ್ನು ದೂರ ಮಾಡಿದ್ದಾರೆ ಎನ್ನುವ ಮಂದಿಯೂ ಇದ್ದಾರೆ. ಒಂದು ಕಾಲದಲ್ಲಿ ಸಂಪುಟದಿಂದ ಶೋಭಾ ಕರಂದ್ಲಾಜೆ ಅವರನ್ನು ಕೈ ಬಿಡುವ ಸನ್ನಿವೇಶದಲ್ಲಿ ಕಣ್ಣೀರು ಹಾಕಿದ್ದು ಇದೇ ಯಡಿಯೂರಪ್ಪನವರಾ ಎಂಬಷ್ಟು ಬದಲಾವಣೆ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಈಶ್ವರಪ್ಪ ಗೋಳಾಡಿದ್ದರು
ಅಸಲಿಗೆ ಇದು ಅಷ್ಟು ಪ್ರಾಮುಖ್ಯ ಪಡೆಯುವ ವಿಚಾರವಾ ಅಂದರೆ, ಖಂಡಿತಾ ಹೌದು. ಪಕ್ಷದೊಳಗೆ ಹಾಗೂ ಸಂಘ ಪರಿವಾರದೊಳಗೆ ಯಡಿಯೂರಪ್ಪ ಅವರ ವಿರುದ್ಧ ಕೇಳಿಬರುತ್ತಿದ್ದ ಆಕ್ಷೇಪಕ್ಕೆ ಪ್ರಮುಖ ಕಾರಣ ಶೋಭಾ ಕರಂದ್ಲಾಜೆ. ಏಕೆಂದರೆ, ಶೋಭಾ ಕರಂದ್ಲಾಜೆ ಮಾತಿಗೆ ವಿಪರೀತ ಮನ್ನಣೆ ದೊರೆಯುತ್ತದೆ. ಅವರು ಹೇಳಿದಂತೆಯೇ ಯಡಿಯೂರಪ್ಪ ಕೇಳುತ್ತಾರೆ ಎಂಬುದು ಆರೋಪವಾಗಿತ್ತು. ಹಾಗೆ ನೋಡಿದರೆ, ಬಿಎಸ್ ವೈ ಬಹುಕಾಲದ ಗೆಳೆಯ ಈಶ್ವರಪ್ಪ ಅವರೇ ಖಾಸಗಿಯಾಗಿ ಎಷ್ಟೋ ಸಲ ಈ ಬಗ್ಗೆ ಗೋಳಾಡಿಕೊಂಡಿದ್ದು ಇದೆ. ಕುರುಬರ ಸ್ವಾಮೀಜಿಯೊಬ್ಬರು ಬಹಿರಂಗ ಸಭೆಯಲ್ಲಿ ಹೇಳಿದಾಗ, ಎರಡೂ ಕೈ ಮುಗಿದ ಈಶ್ವರಪ್ಪ, ಈ ಬಗ್ಗೆ ದಯವಿಟ್ಟು ಮಾತನಾಡಬೇಡಿ ಎಂದಿದ್ದರು.
ಶಿವಮೊಗ್ಗದವರೆಗೆ ಶೋಭಾ ಕರಂದ್ಲಾಜೆ ಭಾವಚಿತ್ರ ಹಾಕಿರಲಿಲ್ಲ
ವಿಧಾನಸಭೆ ಚುನಾವಣೆಗೆ ಮುಂಚೆ ಪರಿವರ್ತನಾ ಯಾತ್ರೆ ಕೈಗೊಂಡಿದ್ದ ವೇಳೆ ಹೊನ್ನಾಳಿಯಿಂದ ಶಿಕಾರಿಪುರದವರೆಗೆ ಸಾಗಿದ ಮೆರವಣಿಗೆ ವೇಳೆ ದಾವಣಗೆರೆ ಗಡಿ ಭಾಗದಿಂದ ಶಿವಮೊಗ್ಗದ ಶಿಕಾರಿಪುರದವರೆಗೆ ಹಾಕಿದ್ದ ಫ್ಲೆಕ್ಸ್- ಬಂಟಿಂಗ್ಸ್ ಗಳಲ್ಲಿ ಶೋಭಾ ಕರಂದ್ಲಾಜೆ ಅವರ ಭಾವಚಿತ್ರ ಇರದಂತೆ ನೋಡಿಕೊಳ್ಳಲಾಗಿತ್ತು. ಯಡಿಯೂರಪ್ಪ ಅವರ ಕುಟುಂಬ ಈ ವಿಚಾರದಲ್ಲಿ ಸ್ಪಷ್ಟವಾಗಿತ್ತು. ಅದಕ್ಕಾಗಿ ಶತಾಯಗತಾಯ ಪ್ರಯತ್ನ ಮಾಡಿದ್ದು ಕಮಲ ಪಕ್ಷದ ಕೆಲವು ಹಿರಿಯರ ಗಮನಕ್ಕೂ ಬಂದಿತ್ತು. ಯಡಿಯೂರಪ್ಪ ಅವರು ಯಾರನ್ನಾದರೂ ನಂಬಿಬಿಟ್ಟರೆ, ಹಚ್ಚಿಕೊಂಡು ಬಿಟ್ಟರೆ ಎಂಥವರನ್ನೂ ಎದುರು ಹಾಕಿಕೊಂಡು ಸ್ಥಾನಮಾನ ಕೊಡಿಸುತ್ತಾರೆ ಎಂಬುದಕ್ಕೆ ಸೋಮಣ್ಣ, ಲೆಹರ್ ಸಿಂಗ್, ರೇಣುಕಾಚಾರ್ಯ, ಶೋಭಾ ಕರಂದ್ಲಾಜೆ, ಜಿಎಸ್.ಬಸವರಾಜು...ಹೀಗೆ ಉದಾಹರಣೆ ಮುಂದುವರಿಯುತ್ತದೆ. ಅದೇ ರೀತಿ ಸಿಟ್ಟಾದರೆ ಭವಿಷ್ಯವೇ ಖಲ್ಲಾಸ್ ಅನ್ನೋದಕ್ಕೆ ತುಮಕೂರಿನ ಸೊಗಡು ಶಿವಣ್ಣ ಉದಾಹರಣೆ ಸಿಗ್ತಾರೆ.
ಸಿದ್ದರಾಮಯ್ಯ ಮಾತಿನಿಂದ ಕನಲಿದ ಯಡಿಯೂರಪ್ಪ
ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಹಾಗೂ ವರುಣಾ ಕ್ಷೇತ್ರದಿಂದ ತಮ್ಮ ಮಗ ವಿಜಯೇಂದ್ರಗೆ ಬಿಜೆಪಿ ಟಿಕೆಟ್ ಕೊಡಿಸಲು ಯಡಿಯೂರಪ್ಪ ಹರಸಾಹಸ ಪಟ್ಟರು. ಆದರೆ ಸಾಧ್ಯವಾಗಲೇ ಇಲ್ಲ. ಬರೀ ಅಷ್ಟೇ ಆಗಿದ್ದರೆ ಬೇಸರ ಆಗಿರುತ್ತಿರಲಿಲ್ಲ. ಸಿದ್ದರಾಮಯ್ಯ ಅವರು ಆಡಿದ ಮಾತು ಬಿಎಸ್ ವೈಗೆ ದೊಡ್ಡ ಆಘಾತವನ್ನೇ ಮಾಡಿತು. "ಇವರೆಂಥ ಪಕ್ಷದ ಅಧ್ಯಕ್ಷ, ತಮ್ಮ ಮಗನಿಗೇ ಟಿಕೆಟ್ ಕೊಡಿಸುವುದಕ್ಕೆ ಆಗಲಿಲ್ಲ" ಅಂದುಬಿಟ್ಟರು. ಅಲ್ಲಿಯವರೆಗೆ ಚುನಾವಣೆ ಪ್ರಚಾರದಲ್ಲಿ ಮೋದಿ- ಅಮಿತ್ ಶಾ ಅಬ್ಬರದಿಂದ ತೊಡಗಿಕೊಂಡು, ತಾವೇ ಎಲ್ಲ ಎಂಬಂತೆ ತೋರಿಸಿಕೊಳ್ಳುತ್ತಿದ್ದರೂ ತಮ್ಮ ಅಹಂ ತೋರಗೊಡದೆ ಸುಮ್ಮನಿದ್ದ ಯಡಿಯೂರಪ್ಪ ಆ ಹಂತದಲ್ಲಿ ಕನಲಿ ಹೋದರು. ಅಲ್ಲಿಗೆ ಪಕ್ಷವನ್ನು ಗೆಲ್ಲಿಸುವ ಉಮ್ಮೇದಿ ಹಾಗೂ ಆಸಕ್ತಿಯೇ ಕಳೆದುಕೊಂಡು, ಚಿಪ್ಪಿನೊಳಗೆ ಸೇರಿಕೊಂಡು ಬಿಟ್ಟರು.
ನಿಜವಾದ್ದೋ ಅಥವಾ ತೋರ್ಪಡಿಕೆ ಸಿಟ್ಟೋ?
ಮೂಲಗಳ ಪ್ರಕಾರ, ಈ ಬಾರಿ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ಸರಕಾರ ರಚನೆಗೆ ಮುಂದಾಗುವ ಉದ್ದೇಶವೇ ಯಡಿಯೂರಪ್ಪ ಅವರಿಗೆ ಇರಲಿಲ್ಲ. ಅವರಿಗೆ ಮಾತ್ರವಲ್ಲ, ಪಕ್ಷದಲ್ಲಿ ಬಹುತೇಕ ಯಾರಿಗೂ ಇರಲಿಲ್ಲ. ಆದರೆ ಶೋಭಾ ಕರಂದ್ಲಾಜೆ ಸಲಹೆಯಂತೆ ಅಖಾಡಕ್ಕೆ ಇಳಿದರು ಯಡಿಯೂರಪ್ಪ. ಈ ಪ್ರಯತ್ನದಿಂದ ರಾಷ್ಟ್ರಮಟ್ಟದಲ್ಲಿ ಮುಖಭಂಗ ಎದುರಿಸುವಂತಾಯಿತು. ಈ ಹಿಂದಿನ ಆಪರೇಷನ್ ಕಮಲದಿಂದ ಆದ ಡ್ಯಾಮೇಜ್ ನಿಂದ ಹೊರಬಂದು, ಹೊಸ ವರ್ಚಸ್ಸು ಬರುವಂತೆ ಮಾಡಬೇಕು, ಅದ್ಭುತ ಆಡಳಿತ ಕೊಡಬೇಕು, ಇದು ತಮ್ಮ ಪಾಲಿಗೆ ಕೊನೆ ಅವಕಾಶ ಎಂದು ಗೊತ್ತಿದ್ದ ಯಡಿಯೂರಪ್ಪ ಅವರಿಗೆ ಭಾರೀ ಭ್ರಮನಿರಸನ ಆಯಿತು. ಸಾಮಾನ್ಯವಾಗಿಯೇ ಸಿಟ್ಟಿನ ಮನುಷ್ಯರಾದ ಯಡಿಯೂರಪ್ಪ ಆ ಕಾರಣಕ್ಕೆ ಶೋಭಾ ಕರಂದ್ಲಾಜೆ ಅವರನ್ನು ದೂರ ಇಟ್ಟಿದ್ದಾರೆ ಎಂಬುದು ಸದ್ಯದ ಸುದ್ದಿ. ಮತ್ತೊಂದು ಮೂಲದ ಪ್ರಕಾರ, ಪಕ್ಷ, ಸಂಘ ಪರಿವಾರ ಹಾಗೂ ಕುಟುಂಬದ ಒಳಗಿನ ಒತ್ತಡದ ಕಾರಣಕ್ಕೆ ಕೆಲ ಕಾಲದ ಮಟ್ಟಿಗೆ ಇಂಥ ತೋರ್ಪಡಿಕೆ ಸಿಟ್ಟಿರುತ್ತದೆ ಎಂಬ ಮಾತೂ ಚಾಲ್ತಿಯಲ್ಲಿದೆ.