ಮತ್ತೊಂದು ಮಾಸ್ಟರ್ ಪ್ಲಾನ್ ಜೊತೆ ರೆಡಿಯಾಗಿದ್ದಾರಾ ಎಂಬಿ ಪಾಟೀಲರು?
Recommended Video
ಬೂದಿ ಮುಚ್ಚಿದ ಕೆಂಡದಂತಾಗಿದ್ದ ಲಿಂಗಾಯತ ಪ್ರತ್ಯೇಕ ಧರ್ಮದ ವಿವಾದವನ್ನು ಹಿರಿಯ ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲ ಒಂದು ಮಾಸ್ಟರ್ ಪ್ಲಾನ್ ಜತೆ ಬೂದಿಯಿಂದ ಹೊರಗೆಳೆದು ತರುವ ಕೆಲಸಕ್ಕಿಳಿದಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ವಿವಾದದ ಬಾವುಟವನ್ನು ಅವರು ಬಹು ಮೇಲೆತ್ತಿ ಪ್ರದರ್ಶಿಸಿದರಾದರೂ, ಯಡಿಯೂರಪ್ಪ ಅವರಿಗಾಗಿ ಈ ವಿವಾದ ಜ್ವಾಲಾಮುಖಿಯಾಗಿ ಪರಿವರ್ತನೆಯಾಗಲಿಲ್ಲ.
ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಸ್ತಾವನೆ : ಎಂ.ಬಿ.ಪಾಟೀಲ್ ಹೇಳಿದ್ದೇನು?
ಯಾರೇನೇ ಹೇಳಿದರೂ ಫೈನಲಿ, ಯಡಿಯೂರಪ್ಪ ಅವರೇ ಖುದ್ದು ಲಿಂಗಾಯತರಾದ್ದರಿಂದ ಅವರನ್ನು ಮತ್ತೊಮ್ಮೆ ಸಿಎಂ ಗದ್ದುಗೆಯಲ್ಲಿ ಕೂರಿಸಬೇಕು ಎಂಬ ಲೆಕ್ಕಾಚಾರ ಸಮುದಾಯದಲ್ಲಿ ದೊಡ್ಡ ಮಟ್ಟದ ಶಕ್ತಿ ಪಡೆಯಿತು.
ಸಿದ್ದರಾಮಯ್ಯ ಭೇಟಿ ಮಾಡಿದ ಎಂ.ಬಿ. ಪಾಟೀಲ: ಚರ್ಚೆಯ ಗುಟ್ಟೇನು?
ಹೀಗಾಗಿ ಸಿಎಂ ಹುದ್ದೆಯ ರೇಸಿನಿಂದ ತತ್ಕಾಲಕ್ಕೆ ಎಂ.ಬಿ. ಪಾಟೀಲರನ್ನು ದೂರವಿಡಬೇಕು, ಹಾಗೆಯೇ ಆ ಸಮುದಾಯದ ಮತಗಳು ಕೈ ಪಾಳೆಯಕ್ಕೆ ದಕ್ಕಬೇಕು ಎಂಬ ಸಿದ್ದರಾಮಯ್ಯ ಅವರ ನಿರೀಕ್ಷೆ ಈಡೇರಲಿಲ್ಲ.
ಹೈಕಮಾಂಡ್ ಏನು ಬಯಸುತ್ತದೋ...
ವಾಸ್ತವವಾಗಿ ಸಿದ್ದರಾಮಯ್ಯ ಅವರು ಸಿಎಂ ಖುರ್ಚಿಯಲ್ಲಿ ಕುಳಿತಿದ್ದಾಗಲೇ ಎಂ.ಬಿ.ಪಾಟೀಲರು ಸಿಎಂ ಹುದ್ದೆಯ ಮೇಲೆ ಕಣ್ಣು ಹಾಕಿದ್ದರು. ಹೈಕಮಾಂಡ್ ಏನು ಬಯಸುತ್ತದೋ? ಅದನ್ನು ಪೂರೈಸಲು ನಾನು ಸಿದ್ದ ಎಂದೂ ಹೇಳಿ ಬಂದಿದ್ದರು.
ಹಾಗೊಂದು ವೇಳೆ ನಿಮ್ಮನ್ನು ಸಿಎಂ ಮಾಡಿದರೆ ಸಿದ್ದರಾಮಯ್ಯ ಬಂಡಾಯವೇಳಬಹುದು. ಹಾಗವರು ಬಂಡಾಯವೆದ್ದರೆ ಇಪ್ಪತ್ತರಷ್ಟು ಶಾಸಕರು ಅವರ ಹಿಂದೆ ಹೋಗಬಹುದು. ಹಾಗಾದಾಗ ಏನು ಮಾಡಬಹುದು? ಅನ್ನುವ ಪ್ರಶ್ನೆಗೆ ಉತ್ತರ ಕಂಡುಕೊಂಡು ಬನ್ನಿ ಎಂದಾಗ ಎಂ.ಬಿ. ಪಾಟೀಲರು ಅದಕ್ಕೆ ಬೇಕಾದ ಉತ್ತರವನ್ನೂ ಕಂಡುಕೊಂಡಿದ್ದರು.
ಸಿದ್ದರಾಮಯ್ಯ ಮತ್ತವರ ಬೆಂಬಲಿಗರು ಕಾಂಗ್ರೆಸ್ ತೊರೆದರೆ ನೀವು ಕೈ ಪಾಳೆಯಕ್ಕೆ ಸಪೋರ್ಟು ನೀಡಬೇಕು ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಅವರ ಮಗ ಕುಮಾರಸ್ವಾಮಿ ಜತೆ ಮಾತನಾಡಿದ್ದರು.
ಒಂದೇ ಕಲ್ಲಿಗೆ ಮೂರು ಹಕ್ಕಿ ಢಮಾರ್
ಅಷ್ಟೊತ್ತಿಗಾಗಲೇ ಸಿದ್ದರಾಮಯ್ಯ ಮತ್ತು ದೇವೇಗೌಡರ ನಡುವೆ ದೊಡ್ಡ ಮಟ್ಟದ ಜಗಳ ಶುರುವಾಗಿತ್ತಲ್ಲ? ಹೀಗಾಗಿ ಸಿದ್ದರಾಮಯ್ಯ ಅವರು ಸಿಎಂ ಖುರ್ಚಿಯಿಂದ ಕೆಳಗಿಳಿದರೆ ಸಾಕು ಎಂಬ ಲೆಕ್ಕಾಚಾರದಲ್ಲಿ ದೇವೇಗೌಡರು ಎಂಬಿ ಪಾಟೀಲರ ಈ ಪ್ರಪೋಸಲ್ಲಿಗೆ ಓಕೆ ಎಂದಿದ್ದರು.
ಒಂದು ವೇಳೆ ಎಂ.ಬಿ. ಪಾಟೀಲರನ್ನು ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಿಸಲು ನೆರವು ನೀಡಿದರೆ ಜೆಡಿಎಸ್ ಪಾಳೆಯಕ್ಕೆ ಹಲವು ರೀತಿಯಲ್ಲಿ ನೆರವು ಸಿಗಬಹುದು ಎಂಬುದು ಅವರ ಲೆಕ್ಕಾಚಾರವಾಗಿತ್ತು.
ಮೊದಲನೆಯದಾಗಿ ಎಂ.ಬಿ. ಪಾಟೀಲರಿಗೆ ಆ ಜಾಗ ದಕ್ಕಿಸಿಕೊಟ್ಟರೆ ತಮಗೆ ಅಂಟಿಕೊಂಡ ಲಿಂಗಾಯತ ವಿರೋಧಿ ಎಂಬ ಹಣೆಪಟ್ಟಿ ಕಳಚಿ ಬೀಳುತ್ತದೆ. ಎರಡನೆಯದಾಗಿ ಕಾಂಗ್ರೆಸ್ ಪಕ್ಷದ ಜತೆಗಿನ ಸಂಬಂಧ ಗಟ್ಟಿಯಾಗುತ್ತದೆ. ಮೂರನೆಯದಾಗಿ ತಮ್ಮ ಶತ್ರುವೆನ್ನಿಸಿಕೊಂಡ ಸಿದ್ದರಾಮಯ್ಯ ಪದಚ್ಯುತರಾದಂತಾಗುತ್ತದೆ ಎಂಬುದು ಈ ಲೆಕ್ಕಾಚಾರ.
ಹಾಗಂತಲೇ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಎಂ.ಬಿ.ಪಾಟೀಲರ ಪ್ರಪೋಸಲ್ಲಿಗೆ ಒಪ್ಪಿಗೆ ನೀಡಿ ಕಳಿಸಿದರು. ಈ ಪ್ರಪೋಸಲ್ಲಿನ ಜತೆ ಎಂ.ಬಿ. ಪಾಟೀಲರು ದೆಹಲಿಯಲ್ಲಿದ್ದ ತಮ್ಮ ಮೂಲವನ್ನು ಸಂಪರ್ಕಿಸಿದರು.
ಕುಮಾರಸ್ವಾಮಿಗಾಗಿ ಲಿಂಗಾಯತ ವಿವಾದದ ಬೇರಿಗೆ ಎಂಬಿ ಪಾಟೀಲರ ನೀರು
ಭರವಸೆ ನೀಡಿದವರೇ ಸಿದ್ದುಗೆ ಫೋನಾಯಿಸಿದ್ದರು
ವೆಲ್ ಡನ್ ಪಾಟೀಲ ಜೀ, ನಿಮ್ಮ ಈ ಪ್ರಪೋಸಲ್ಲನ್ನು ಮೇಡಂ ಮುಂದಿಟ್ಟು ಒಪ್ಪಿಗೆ ಕೊಡಿಸುತ್ತೇವೆ ಎಂದು ಯಾರು ಭರವಸೆ ನೀಡಿದರೋ? ಅವರೇ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರಿಗೆ ಪೋನಾಯಿಸಿ, ನಿಮ್ಮ ಸಚಿವ ಸಂಪುಟದಲ್ಲಿರುವ ಎಂ.ಬಿ. ಪಾಟೀಲರು ತಮ್ಮನ್ನು ಸಿಎಂ ಮಾಡುವಂತೆ ಹೈಕಮಾಂಡ್ ಗೆ ಮನವಿ ಮಾಡಿಕೊಂಡಿದ್ದಾರೆ. ಒಂದು ವೇಳೆ ಏನೇ ತೊಂದರೆಯಾದರೂ ಅದನ್ನು ಹೇಗೆ ಸರಿಪಡಿಸಬಹುದು ಎಂದೂ ಹೇಳಿದ್ದಾರೆ ಎಂದು ವಿವರಿಸಿದರು.
ಯಾವಾಗ ಅವರು ಈ ವಿವರವನ್ನು ಸಿದ್ದರಾಮಯ್ಯ ಅವರಿಗೆ ಹೇಳಿದರೋ? ಆಗ ಸಿದ್ದರಾಮಯ್ಯ ಕೂಡಾ ಅವರ ಲಾಯಲ್ಟಿಯನ್ನು ಮೆಚ್ಚಿಕೊಂಡು, ನೀವು ನಿಜಕ್ಕೂ ನನ್ನ ಶಕ್ತಿಯಾಗಿ ದಿಲ್ಲಿಯಲ್ಲಿದ್ದೀರಿ ಎಂದು ತಾರೀಫು ಮಾಡಿದರು. ಅಷ್ಟೇ ಅಲ್ಲ, ಇಡೀ ಬೆಳವಣಿಗೆಯ ಕುರಿತು ತಮ್ಮ ಚಿಂತಕರ ಚಾವಡಿಯಲ್ಲಿ ಚರ್ಚಿಸಿದರು.
ಶುರು ಹಚ್ಚಿಕೊಳ್ಳಿ ಪಾಟೀಲರೇ ಎಂದ ಸಿದ್ದು
ಆಗ ಹೊರಹೊಮ್ಮಿದ್ದೇ ವೀರಶೈವ-ಲಿಂಗಾಯತ ಧರ್ಮ ಬೇರೆ ಬೇರೆ ಎಂಬ ಹೋರಾಟದ ಪ್ಲಾನು. ಹೇಗಿದ್ದರೂ ವೀರಶೈವರು ಮುಂದುವರಿದ ಸಮುದಾಯದ ಭಾಗ. ಲಿಂಗಾಯತರು ಹಿಂದುಳಿದ ಮತ್ತು ದಲಿತ ಸಮುದಾಯಗಳಿಂದ ಬಂದವರು. ಬಸವಣ್ಣನವರ ಕಾಲದಲ್ಲಿ ಜಾತಿಯ ವಿಷಗಾಳಿಯಿಂದ ರೋಸತ್ತು ಲಿಂಗಾಯತರಾದವರು. ಈ ಇತಿಹಾಸವನ್ನು ಹೇಳಿ ಅವರನ್ನು ಸೆಳೆಯುವುದು ಸುಲಭ ಎಂಬುದು ಈ ಚಿಂತಕರ ಚಾವಡಿಯ ಲೆಕ್ಕಾಚಾರವಾಗಿತ್ತು.
ಹಾಗಂತಲೇ ತಮ್ಮನ್ನು ಸಿಎಂ ಮಾಡಿದರೆ ಏನೂ ತೊಂದರೆಯಿಲ್ಲ ಅಂತ ಎಂ.ಬಿ. ಪಾಟೀಲರು ದಿಲ್ಲಿಯ ನಾಯಕರಿಗೆ ವಿವರಿಸಿದ ಎರಡೇ ದಿನಗಳಲ್ಲಿ ಅವರನ್ನು ಸಿದ್ದರಾಮಯ್ಯ ಕರೆಸಿಕೊಂಡರು.
ರೀ, ಪಾಟೀಲರೇ, ನೀವು ಮುಂದಿನ ಸಿಎಂ ಆಗಬೇಕು ಅಂತ ನನ್ನಾಸೆ. ಆದರೆ ಸಿಎಂ ಆಗಬೇಕು ಎಂದರೆ ಒಂದು ಸಮುದಾಯದ ಬೆಂಬಲ ಇರಬೇಕು. ಹೇಗಿದ್ದರೂ ನೀವು ಲಿಂಗಾಯತ ಸಮುದಾಯದವರು. ಆದರೆ ಸದ್ಯದ ಸ್ಥಿತಿಯಲ್ಲಿ ಯಡಿಯೂರಪ್ಪ ಅವರು ಆ ಸಮುದಾಯದ ನಾಯಕರಾಗಿ ಕುಳಿತಿದ್ದಾರೆ. ಹೀಗಾಗಿ ನೀವು ವೀರಶೈವ ಬೇರೆ, ಲಿಂಗಾಯತ ಬೇರೆ ಎಂಬ ಹೋರಾಟ ಶುರು ಹಚ್ಚಿಕೊಳ್ಳಿ ಎಂದರು.
ಸಿದ್ದು ಮಾತಿಗೆ ತಲೆಯಲ್ಲಾಡಿಸಿದ ಪಾಟೀಲ
ಯಾವಾಗ ಸಿದ್ದರಾಮಯ್ಯ ಅವರು ಈ ಪ್ರಪೋಸಲ್ಲು ಮುಂದಿಟ್ಟು, ನೀವು ಸಿಎಂ ಆಗಬೇಕು ಎಂಬುದು ನನ್ನಾಸೆ, ಹೀಗಾಗಿ ನಿಮ್ಮ ಜಾತಿಯ ನಾಯಕರಾಗಿ ಎಂದು ಸಿದ್ಧರಾಮಯ್ಯ ಬಾಯಿಬಿಟ್ಟು ಹೇಳಿದರೋ? ಆಗ ಎಂ.ಬಿ. ಪಾಟೀಲರಿಗೂ ಹೌದು ಎನ್ನಿಸಿತು.
ತಮ್ಮ ಸಮುದಾಯದ ನಾಯಕರಾಗದೆ ಮುಖ್ಯಮಂತ್ರಿಯಾಗುವುದು ಯಾರಿಗೇ ಆದರೂ ಕಷ್ಟ. ಸನ್ನಿವೇಶದ ಕೂಸಾಗಿ ಹೊರಹೊಮ್ಮುವುದು ಬೇರೆ. ಆದರೆ ಇವತ್ತಿನ ಸ್ಥಿತಿಯಲ್ಲಿ ನಾಯಕರಾದವರು ಕನಿಷ್ಠ ಪಕ್ಷ ತಮ್ಮ ಸಮುದಾಯಕ್ಕಾದರೂ ಒಪ್ಪಿತರಾಗಿರಬೇಕು ಅಂತ ಅವರಿಗನ್ನಿಸಿತು.
ಹಾಗೆಯೇ, ತಮ್ಮ ಪ್ರಪೋಸಲ್ಲಿನ ವಿವರ ಸಿದ್ದರಾಮಯ್ಯ ಅವರಿಗೆ ತಲುಪಿದೆ ಎಂಬ ರಹಸ್ಯ ಮಾಹಿತಿ ದಕ್ಕಿದ ಮೇಲೆ ತುಂಬ ಶ್ರದ್ದೆಯಿಂದ ವೀರಶೈವ ಬೇರೆ, ಲಿಂಗಾಯತ ಬೇರೆ ಎಂಬ ವಿವಾದಕ್ಕೆ ಅವರು ಶಕ್ತಿ ತುಂಬಿದರು.
ಆದರೆ ಲಾಭವಾಗಿದ್ದು ಮಾತ್ರ ಯಡಿಯೂರಪ್ಪಗೆ
ಒಂದು ಮಟ್ಟದಲ್ಲಿ ಅದು ನಾಡಿನ ಗಮನವನ್ನೂ ಸೆಳೆಯಿತು. ಆದರೆ ಫೈನಲಿ, ಯಡಿಯೂರಪ್ಪ ಅವರು ತಮ್ಮ ರಾಜಕೀಯ ಬದುಕಿನ ಮುಸ್ಸಂಜೆಯಲ್ಲಿರುವುದರಿಂದ ಮತ್ತೊಮ್ಮೆ ಅವರನ್ನು ಸಿಎಂ ಮಾಡಬೇಕು ಎಂಬ ಹಠ ಸಮುದಾಯಕ್ಕೆ ಮುಖ್ಯವಾಯಿತು.
ಹೀಗಾಗಿ ಆಳದಲ್ಲಿ ವೀರಶೈವ ಬೇರೆ, ಲಿಂಗಾಯತ ಬೇರೆ ಎಂದು ಒಪ್ಪಿಕೊಂಡವರೂ ಆಳದಲ್ಲಿ ಯಡಿಯೂರಪ್ಪ ಅವರನ್ನು ಬೆಂಬಲಿಸಿದರು. ಆ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ನಿಂತರು. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ನಾಡಿನ ಗಮನ ಸೆಳೆಯುವಂತಹ ಹೋರಾಟವನ್ನು ರೂಪಿಸಿದರೂ ಅದರ ಲಾಭ ಎಂ.ಬಿ. ಪಾಟೀಲರಿಗೆ ಆಗಲಿಲ್ಲ.
ಲಿಂಗಾಯತ ಧರ್ಮವನ್ನು ಪ್ರತ್ಯೇಕ ಧರ್ಮವಾಗಿ ಪರಿಗಣಿಸಿ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಸಿದ್ದರಾಮಯ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳಿಸಿದರೂ ಅದು ಹಾಗೆಯೇ ಇತ್ತು. ಇತ್ತೀಚೆಗೆ ಆ ಶಿಫಾರಸನ್ನು ಕೇಂದ್ರ ಸರಕಾರ ತಿರಸ್ಕಾರ ಮಾಡಿದೆ. ಹೀಗಾಗಿ, ಹೊಸ ಹುಮ್ಮಸ್ಸಿನೊಂದಿಗೆ, ಹೊಸ ಸ್ಟ್ರಾಟಜಿಯೊಂದಿಗೆ ಮತ್ತೆ ಹೋರಾಟಕ್ಕಿಳಿಯುವುದು ಎಂಬಿ ಪಾಟೀಲರಿಗೆ ಅನಿವಾರ್ಯವಾಗಿದೆ.
ಪಂಚರಾಜ್ಯದಲ್ಲಿನ ಸೋಲು ಯಡಿಯೂರಪ್ಪಗೆ ವರವೋ? ಶಾಪವೋ?
ಮಂತ್ರಿಗಿರಿ ಸಿಗದ ಕಾರಣ ಸಿಟ್ಟಿಗೆದ್ದ ಪಾಟೀಲರು
ಅದೇನೇ ಇದ್ದರೂ ಫೈನಲಿ, ಇಂತಹ ಹೋರಾಟದಿಂದ ನಿರೀಕ್ಷಿತ ಲಾಭ ದೊರೆಯದೆ ಹೋಗಿದ್ದರಿಂದ ಸಿದ್ದರಾಮಯ್ಯ ಬೇಸತ್ತರು. ಹೀಗಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದ ತಾವು ಗೆಲ್ಲಲು ಕಾರಣರಾದ ಶಿವಾನಂದ ಪಾಟೀಲರಿಗೆ ಎಚ್ ಡಿ ಕುಮಾರಸ್ವಾಮಿ ಸರ್ಕಾರದಲ್ಲಿ ಮಂತ್ರಿ ಸ್ಥಾನ ಕೊಡಿಸಿ ಮೌನವಾದರು.
ಹೀಗೆ ತಮಗೆ ಮಂತ್ರಿಗಿರಿ ಸಿಗದ ಕಾರಣಕ್ಕಾಗಿ ಎಂ.ಬಿ. ಪಾಟೀಲರು ಅಸಮಾಧಾನಗೊಂಡಿದ್ದು, ಸಣ್ಣ ಸೈಜಿನ ಬಂಡಾಯವೆಬ್ಬಿಸಿದ್ದು ನಿಜ. ಅದರೆ ಸನ್ನಿವೇಶ ತಮ್ಮ ಪರವಾಗಿಲ್ಲ ಎಂಬ ಸತ್ಯವನ್ನರಿತು ಅವರು ಮೌನವಾದರು. ಅವರು ಮೌನ ತಾಳಿದರೂ ಸೂಕ್ತ ಅವಕಾಶಕ್ಕಾಗಿ ಕಾದು ಕುಳಿತಿದ್ದಂತೂ ದಿಟ. ಡಿಸೆಂಬರ್ 22ರಂದು ನಡೆಯಲಿರುವ ಸಂಪುಟ ವಿಸ್ತರಣೆಯಲ್ಲಾದರೂ ಮಂತ್ರಿಗಿರಿ ಸಿಗಬಹುದೆಂಬ ಆಶಾಭಾವನೆ ಅವರಲ್ಲಿದೆ.
ಸಿಎಂ ಹುದ್ದೆಯ ಮೇಲೆ ಡಿಕೆಶಿ ಕಣ್ಣು
ಆದರೆ ಯಾವಾಗ ಪಕ್ಷದ ನಾಯಕ ಡಿ.ಕೆ. ಶಿವಕುಮಾರ್ ಅವರು ವೀರಶೈವ ಧರ್ಮ ಬೇರೆ, ಲಿಂಗಾಯತ ಧರ್ಮ ಬೇರೆ ಎಂದು ನಾವು ಮಾಡಿದ ಹೋರಾಟ ವಿಫಲವಾಯಿತು. ಪಕ್ಷಕ್ಕೆ ಹಾನಿಯಾಯಿತು ಎಂದರೋ? ಮತ್ತದನ್ನು ಸಿದ್ದರಾಮಯ್ಯ ಕೂಡಾ ಸಮರ್ಥಿಸಿದರೋ? ಆಗ ಎಂ.ಬಿ. ಪಾಟೀಲರಿಗೆ ಒಂದು ವಾಸನೆ ಸಿಕ್ಕಿತು.
ಅದೆಂದರೆ ಡಿಕೆ ಶಿವಕುಮಾರ್ ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗಲು ಪರೋಕ್ಷವಾಗಿ ವೀರಶೈವ-ಲಿಂಗಾಯತ ಸಮುದಾಯಕ್ಕೆ ಗಾಳ ಹಾಕುತ್ತಿದ್ದಾರೆ. ಹಾಗೆಯೇ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿದ್ದೆ ಎಂಬ ಕಾರಣಕ್ಕಾಗಿ ಸಿದ್ಧರಾಮಯ್ಯ ತಮ್ಮನ್ನು ಮುಗಿಸಲು ಹೊರಟಿದ್ದಾರೆ ಎಂಬುದು ಈ ವಾಸನೆ.
ಯಾವಾಗ ಅವರಿಗೆ ಈ ವಾಸನೆ ಸಿಕ್ಕಿತೋ? ಆಗವರು ಮೇಲೆದ್ದು ನಿಂತರು. ಕುತೂಹಲದ ಅಂಶವೆಂದರೆ, ಅವರು ರೆಡಿಯಾಗುತ್ತಿದ್ದಂತೆಯೇ ಕೇಂದ್ರ ಸರ್ಕಾರದ ಮುಂದಿದ್ದ ಪ್ರಪೋಸಲ್ಲು ಕೂಡಾ ರದ್ದಾಗಿ ಹೋಯಿತು.
ಲಿಂಗಾಯತ ಪ್ರತ್ಯೇಕ ಧರ್ಮ ಹೇಳಿಕೆ: ಡಿಕೆಶಿ ಮೇಲೆ ಎಂಬಿ.ಪಾಟೀಲ್ ಕಿಡಿ
ಹೋರಾಟಕ್ಕೆ ಮತ್ತೆ ಇಳಿಯಲಿದ್ದಾರೆ ಪಾಟೀಲರು
ಯಾವಾಗ ಈ ಬೆಳವಣಿಗೆ ನಡೆಯಿತೋ? ಈಗ ಎಂ.ಬಿ. ಪಾಟೀಲರು ತೆರೆ ಮರೆಯಲ್ಲಿ ನಡೆಸಿಕೊಂಡು ಬಂದಿದ್ದ ಚಟುವಟಿಕೆಗಳಿಗೆ ಮತ್ತೆ ಶಕ್ತಿ ತುಂಬತೊಡಗಿದ್ದಾರೆ. ಹೇಗಿದ್ದರೂ ಯಡಿಯೂರಪ್ಪ ಸಿಎಂ ಆಗುವುದು ಕಷ್ಟ. ಹೀಗೆ ಯಡಿಯೂರಪ್ಪ ಅವರಿಗೆ ಅವಕಾಶ ದಕ್ಕದಿದ್ದರೆ ಸಹಜವಾಗಿಯೇ ಮುಂದಿನ ದಿನಗಳಲ್ಲಿ ಆ ಸಮುದಾಯ ತಮ್ಮ ಹಿಂದೆ ಬರಲಿದೆ ಎಂಬುದು ಅವರ ಲೆಕ್ಕಾಚಾರ.
ಯಡಿಯೂರಪ್ಪ ಸಕ್ರಿಯರಾಗಿರುವವರೆಗೆ ಅವರೇ ಲಿಂಗಾಯತ ನಾಯಕರಾದರೂ ಮುಂದಿನ ವಿಧಾನಸಭಾ ಚುನಾವಣೆಯ ವೇಳೆಗಾದರೂ ತಮ್ಮ ನೆತ್ತಿಯ ಮೇಲೇ ಆ ಕಿರೀಟ ಹತ್ತಿ ಕೂರಬೇಕು. ಹಾಗೆ ಹತ್ತಿ ಕೂರಬೇಕು ಎಂದರೆ ನಾನು ಸಕ್ರಿಯನಾಗಿರಬೇಕು ಎಂಬುದು ಎಂ.ಬಿ. ಪಾಟೀಲರ ಲೆಕ್ಕಾಚಾರ.
ಹೀಗಾಗಿ ಅವರ ಲೆಕ್ಕಾಚಾರ ಮತ್ತೆ ಬಿರುಗಾಳಿಯ ರೂಪ ಪಡೆದುಕೊಳ್ಳುತ್ತಿದೆ. ಅಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷದಲ್ಲಿರುವ ಸಿಎಂ ಹುದ್ದೆಯ ಆಕಾಂಕ್ಷಿಗಳಿಗೆ ಮತ್ತು ಬಿಜೆಪಿಗೆ ಸಹಿಸಲಾಗದ ಬೆಳವಣಿಗೆಯಾಗಿ ಪರಿವರ್ತನೆಯಾಗಿದೆ. ಮುಂದೇನಾಗಲಿದೆಯೋ? ಕಾದು ನೋಡಬೇಕು.