ಅಹ್ಮದ್ ಪಟೇಲ್ ಜಾಗಕ್ಕೆ ಬಂದರೇ ಸೋನಿಯಾ ಆಪ್ತ ಕಮಲ್ ನಾಥ್?
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷದ ಬಂಡಾಯ ನಾಯಕರ ಜತೆಗೆ ಶನಿವಾರ ಮಹತ್ವದ ಸಭೆ ನಡೆಸಲಿದ್ದಾರೆ. ಪಕ್ಷದ ನಾಯಕತ್ವದ ಬದಲಾವಣೆ ಹಾಗೂ ಒಟ್ಟಾರೆ ವ್ಯವಸ್ಥೆಯ ಪುನಾರಚನೆಗೆ ಆಗ್ರಹಿಸಿರುವ ನಾಯಕರು ಅನೇಕ ಬಾರಿ ಪಕ್ಷ ಸಾಗುತ್ತಿರುವ ರೀತಿಯ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಪಕ್ಷದ ನಾಯಕತ್ವ ಅಗೋಚರವಾಗಿದೆ. ಪಕ್ಷವು ಮುಂಬರುವ ಎಲ್ಲ ಚುನಾವಣೆಗಳಲ್ಲಿ ಬಿಜೆಪಿಯನ್ನು ಎದುರಿಸಿ ಬೆಳೆಯಬೇಕೆಂದರೆ ಪ್ರಬಲ 'ಗೋಚರ' ನಾಯಕತ್ವದ ಅಗತ್ಯವಿದೆ ಎಂದು ಹೇಳಿದ್ದರು.
ಇಂದು ನಡೆಯುತ್ತಿರುವ ಸೋನಿಯಾ ಗಾಂಧಿ ಮತ್ತು ಪಕ್ಷದ ಬಂಡಾಯ ಮುಖಂಡರ ನಡುವಿನ ಸಭೆಯ ಪ್ರಮುಖ ರೂವಾರಿ ಕಮಲ್ ನಾಥ್. ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಅವರ ಸರ್ಕಾರ ಮಾರ್ಚ್ನಲ್ಲಿ ಉರುಳಿತ್ತು. ಬಹುಕಾಲದಿಂದಲೂ ಗಾಂಧಿ ಕುಟುಂಬಕ್ಕೆ ಬಹಳ ಆಪ್ತರಾಗಿರುವ ಕಮಲ್ ನಾಥ್, ಬಂಡಾಯ ನಾಯಕರೊಂದಿಗೆ ಸಮಾಲೋಚನೆ ನಡೆಸದೆ ಇರುವುದು ಪಕ್ಷಕ್ಕೆ ಮಾರಕವಾಗಬಹುದು ಎಂದು ಮುಖಂಡರಿಗೆ ಮನವರಿಗೆ ಮಾಡಿದ್ದಾರೆ.
ಶೇ. 99.9ರಷ್ಟು ಕಾರ್ಯಕರ್ತರು ರಾಹುಲ್ ಗಾಂಧಿಯನ್ನು ಅಧ್ಯಕ್ಷರನ್ನಾಗಿ ನೋಡಲು ಬಯಸುತ್ತಾರೆ: ರಣದೀಪ್ ಸುರ್ಜೇವಾಲಾ
ಪಕ್ಷದ ಪ್ರತಿ ಹಂತದಲ್ಲಿಯೂ ಆಮೂಲಾಗ್ರ ಬದಲಾವಣೆಗಳಾಗಬೇಕು ಎಂದು ಆಗಸ್ಟ್ನಲ್ಲ ಕಾಂಗ್ರೆಸ್ನ 23 ಹಿರಿಯ ನಾಯಕರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಇದು ಭಾರಿ ಕೋಲಾಹಲ ಸೃಷ್ಟಿಸಿತ್ತು. ಪಕ್ಷದ ಅನೇಕ ನಾಯಕರು ಚುನಾವಣೆಗಳಲ್ಲಿನ ಪಕ್ಷದ ಸೋಲಿಗೆ ಕಾರಣಗಳನ್ನು ವಿವರಿಸಿ ನಾಯಕತ್ವದ ಲೋಪವನ್ನು ಎತ್ತಿತೋರಿಸುವ ಕಾರ್ಯ ಮುಂದುವರಿಸಿದ್ದರು. ಮುಂದೆ ಓದಿ.
ಸಭೆಯಲ್ಲಿ ಯಾರೆಲ್ಲ ಭಾಗಿ?
ಕೊರೊನಾ ವೈರಸ್ ಸೋಂಕು ತೀವ್ರಗೊಂಡ ಬಳಿಕ ಕಾಂಗ್ರೆಸ್ನ ಪ್ರಮುಖ ನಾಯಕರು ಇದೇ ಮೊದಲ ಬಾರಿಗೆ ಒಟ್ಟಾಗಿ ಸೇರಿ ಸಭೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ಕಮಲ್ ನಾಥ್ ಕೂಡ ಭಾಗಿಯಾಗುತ್ತಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕೆಸಿ ವೇಣುಗೋಪಾಲ್, ಹಾಜರಾಗುತ್ತಿದ್ದಾರೆ. ಬಂಡಾಯವೆದ್ದಿದ್ದ ಗುಲಾಂ ನಬಿ ಆಜಾದ್ ನೇತೃತ್ವದ ತಂಡದೊಂದಿಗೆ ಮಾತುಕತೆ ನಡೆಯಲಿದೆ. ಶಶಿ ತರೂರ್, ವೀರಪ್ಪ ಮೊಯ್ಲಿ, ಭೂಪಿಂದರ್ ಸಿಂಗ್ ಹೂಡಾ, ಪೃಥ್ವಿರಾಜ್ ಚೌಹಾಣ್, ಮುಕುಲ್ ವಾಸ್ನಿಕ್, ಮಿಲಿಂದ್ ದಿಯೋರಾ, ಮನೀಶ್ ತಿವಾರಿ ಪ್ರಮುಖವಾಗಿ ಹಾಜರಿರಲಿದ್ದಾರೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಹಾಜರಾತಿ ಇನ್ನೂ ಖಚಿತವಾಗಿಲ್ಲ.
ಕಮಲ್ ನಾಥ್ ಮುಂಚೂಣಿಯಲ್ಲಿ
ಈ ಸಭೆ ಬಂಡಾಯ ನಾಯಕರೊಂದಿಗೆ ಎಂದಿದ್ದರೂ ಇಲ್ಲಿ ಪ್ರಮುಖವಾಗಿ ಎದ್ದು ಕಾಣುತ್ತಿರುವುದು ಕಮಲ್ ನಾಥ್. ಇಲ್ಲಿ ಎರಡೂ ಕಡೆಗಳ ನಡುವೆ ಪ್ರಾಮಾಣಿಕವಾದ ದಲ್ಲಾಳಿಯಂತೆ ಕೆಲಸ ಮಾಡಿರುವುದು ಅವರು. ಅತ್ತ ಅವರು ಭಿನ್ನಮತ ಹೊಂದಿರುವ ನಾಯಕರ ಗುರಿಯಾದ ಪಕ್ಷದೊಳಗಿನ ಚುನಾವಣೆಯನ್ನೂ ಬಯಸಿದ್ದಾರೆ, ಇತ್ತ ಗಾಂಧಿ ಕುಟುಂಬ ಎದುರಿಸುತ್ತಿರುವ ಹೊಸ ಪರಿಸ್ಥಿತಿಯಲ್ಲಿ ಅವರಿಗೆ ಜತೆಯಾಗಿಯೂ ನಿಂತಿದ್ದಾರೆ. ಏಕೆಂದರೆ ಕಾಂಗ್ರೆಸ್ ತನ್ನ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ನಾಯಕತ್ವದೆಡೆಗಿನ ಪ್ರಶ್ನೆ ಎದುರಿಸುತ್ತಿದೆ.
ಅಹ್ಮದ್ ಪಟೇಲ್ ಸ್ಥಾನಕ್ಕೆ ಕಮಲ್ ನಾಥ್
ಸೋನಿಯಾ ಗಾಂಧಿ ಅವರ ಆಪ್ತರಾಗಿ ಗುರುತಿಸಿಕೊಂಡಿರುವ ಕಮಲ್ ನಾಥ್, ಸೋನಿಯಾ ಅತ್ಯಾಪ್ತರಾಗಿದ್ದ ಅಹ್ಮದ್ ಪಟೇಲ್ ಅವರ ಸ್ಥಾನವನ್ನು ಒಂದು ರೀತಿ ತುಂಬುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ. ಪಕ್ಷದ ಖಜಾಂಚಿಯಾಗಿದ್ದ ಅಹ್ಮದ್ ಪಟೇಲ್ ಅವರು ಇತ್ತೀಚೆಗೆ ಕೋವಿಡ್ನಿಂದ ನಿಧನರಾಗಿದ್ದರು. ಈ ಹುದ್ದೆಯನ್ನು ಕಮಲ್ ನಾಥ್ಗೆ ನೀಡಲು ಸೋನಿಯಾ ಬಯಸಿದ್ದಾರೆ ಎನ್ನಲಾಗಿದೆ. ಏಕೆಂದರೆ ಕಮಲ್ ನಾಥ್ ಪಕ್ಷದ ಎಲ್ಲ ವರ್ಗದೊಂದಿಗೂ ಉತ್ತಮ ಸಂಬಂಧ ಹೊಂದಿದ್ದಾರೆ. ಅಹ್ಮದ್ ಪಟೇಲ್ ಅವರಂತೆ ಗಾಂಧಿ ಕುಟುಂಬ ಹಾಗೂ ಇತರೆ ನಾಯಕರ ನಡುವೆ ಸೇತುವೆಯಂತೆ ಕೆಲಸ ಮಾಡಲು ಕಮಲ್ ತುಡಿಯುತ್ತಿದ್ದಾರೆ.
ರಾಹುಲ್ ನಾಯಕತ್ವದಲ್ಲಿ ಎರಡು ಬಾರಿ ಸೋಲು
ರಾಹುಲ್ ಗಾಂಧಿ ಅವರ ಆಪ್ತರು ಅವರೇ ಪಕ್ಷದ ನಾಯಕತ್ವ ವಹಿಸಬೇಕೆಂಬ ಬಯಕೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ರಾಹುಲ್ ಅವರು ನಂಬಿಕೊಂಡಿರುವ ವಲಯದಲ್ಲಿ ಚುನಾವಣೆಯಲ್ಲಿ ಗೆಲ್ಲಬಲ್ಲ ದೊಡ್ಡ ಮಾಸ್ ಲೀಡರ್ಗಳಿಲ್ಲ. ರಾಹುಲ್ ನಾಯಕತ್ವದಲ್ಲಿ ಈಗಾಗಲೇ ಎರಡು ಬಾರಿ ಪಕ್ಷ ಅನುಭವಿಸಿರುವ ಸೋಲಿನ ಆಘಾತದಿಂದ ಹೊರಬರುವುದು ಕಷ್ಟವಾಗಿದೆ.
ಸೋನಿಯಾ ಗಾಂಧಿ ಅನಾರೋಗ್ಯ
ಇನ್ನೊಂದೆಡೆ ಸೋನಿಯಾ ಗಾಂಧಿ ಅವರ ಅನಾರೋಗ್ಯ ಪಕ್ಷಕ್ಕೆ ಕಾಡುತ್ತಿದೆ. ಹೀಗಾಗಿ ಅವರೇ ನಾಯಕತ್ವದಲ್ಲಿ ಮುಂದುವರಿಯಲಿ ಎಂದು ಒತ್ತಾಯಿಸುವುದಕ್ಕೂ ಬಂಡಾಯ ಮುಖಂಡರು ಹಿಂದೇಟು ಹಾಕುತ್ತಿದ್ದಾರೆ. ಅವರು ಪೂರ್ಣಾವಧಿ ನಾಯಕತ್ವಕ್ಕೆ ಅಪೇಕ್ಷಿಸುತ್ತಿದ್ದಾರೆ. ಆದರೆ ಅವರಿಗೆ ರಾಹುಲ್ ಗಾಂಧಿಯ ನಾಯಕತ್ವದ ಬಗ್ಗೆ ವಿಶ್ವಾಸವಿಲ್ಲ. ರಾಹುಲ್ ಕೂಡ ಅದರ ಬಗ್ಗೆ ಆಸಕ್ತಿ ಹೊಂದಿದಂತಿಲ್ಲ. ಹೀಗಾಗಿ ಇಬ್ಬರ ಹೊರತಾಗಿ ಹೊಸಬರಿಗೆ ನಾಯಕತ್ವ ನೀಡುವ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆಯಿದೆ.
ಅಶೋಕ್ ಗೆಹ್ಲೋಟ್ ಕೇಂದ್ರಕ್ಕೆ?
ಪಕ್ಷದಲ್ಲಿನ ಬಂಡಾಯ ಮತ್ತು ಯುವ ಮುಖಂಡರ ನಡುವೆ ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಅಶೋಕ್ ಗೆಹ್ಲೋಟ್ ಅವರನ್ನು ಕೇಂದ್ರ ರಾಜಕೀಯಕ್ಕೆ ಕರೆಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಆದರೆ ಅವರು ತಮ್ಮ ಕನಸಿನ ಹುದ್ದೆಯನ್ನು ಬಿಡಲು ಒಪ್ಪುವುದು ಕಡಿಮೆ. ಈ ಸಭೆಯಲ್ಲಿ ಅವರೂ ಪಾಲ್ಗೊಳ್ಳುತ್ತಿರುವುದು ಬದಲಾವಣೆಯ ಸಾಧ್ಯತೆಯನ್ನು ಸೂಚಿಸಿದೆ.
ಗಾಂಧಿ ಕುಟುಂಬ ಅಥವಾ ಹೊರಗಿನವರು?
ಕಾಂಗ್ರೆಸ್ ನಾಯಕತ್ವದಲ್ಲಿ ಯಾವ ರೀತಿಯ ಬದಲಾವಣೆಗಳಾಗಬಹುದು? ಗಾಂಧಿ ಕುಟುಂಬಕ್ಕೇ ನಾಯಕತ್ವ ಇರಲಿ ಎಂದಾದರೆ ಸೋನಿಯಾ ಮಕ್ಕಳಾದ ರಾಹುಲ್ ಅಥವಾ ಪ್ರಿಯಾಂಕಾ ಗಾಂಧಿ ವಾದ್ರಾ ಅವರಲ್ಲಿ ಒಬ್ಬರ ಆಯ್ಕೆಗೆ ಆದ್ಯತೆ ನೀಡಬಹುದು. ಪ್ರಸ್ತುತದ ಸನ್ನಿವೇಶದಲ್ಲಿ ಗಾಂಧಿ ಕುಟುಂಬದಾಚೆಗೆ ಬೇರೆ ನಾಯಕರನ್ನು ಆಯ್ಕೆ ಮಾಡಬೇಕು ಎಂಬ ಉದ್ದೇಶ ಅನೇಕ ಮುಖಂಡರಲ್ಲಿ ಇದ್ದರೂ,ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುವ ಧೈರ್ಯ ಕಾಣಿಸುತ್ತಿಲ್ಲ. ಹೀಗಾಗಿ ಬಂಡಾಯ ಮುಖಂಡರೊಂದಿಗಿನ ಸಭೆ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸಭೆಯಲ್ಲಿ ಮುಖಂಡರು ನಾಯಕತ್ವದ ಬದಲಾವಣೆ ಹಾಗೂ ಪಕ್ಷದ ಪುನರ್ ರಚನೆಗೆ ಸೂಕ್ತ ರೂಪುರೇಷೆಯನ್ನು ಮುಂದಿಡುವ ನಿರೀಕ್ಷೆಯಿದೆ.