ಪೆಟ್ರೋಲ್ ರೇಟ್ ಬಗ್ಗೆ ಧ್ವನಿ ಎತ್ರೋ ಅಂದ್ರೆ, ಹಿಜಾಬ್ ಹಲಾಲ್ ಅಂತೀರಲ್ಲೋ?
ನಮ್ಮ ರಾಜ್ಯ ಮತ್ತು ದೇಶ ಕೆಲವೊಮ್ಮೆ ಎತ್ತ ಸಾಗುತ್ತಿದೆ ಎನ್ನುವ ಗಂಭೀರ ಪ್ರಶ್ನೆ ಎದುರಾಗುತ್ತಿರುವುದಕ್ಕೆ ಜನಸಾಮಾನ್ಯರೇ ಕಾರಣರಾಗುತ್ತಿದ್ದಾರಾ? ಜನರ ದೈನಂದಿನ ಜೀವನಕ್ಕೆ ತೊಂದರೆಯಾಗುತ್ತಿರುವ ಹತ್ತು ಹಲವು ಕಾರಣಗಳು ಇರುವಾಗ, ಜನರು ಯಾಕೆ ಬೇಡವಾದ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದಾರೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ. ಹಾಗಾದರೆ, ಜನರನ್ನು ದಾರಿ ತಪ್ಪಿಸುತ್ತಿರುವವರು ಯಾರು?
ಎರಡು ವರ್ಷಗಳ ಕೊರೊನಾ ದುಸ್ತರದ ಜೀವನದ ನಂತರ, ಜನಜೀವನ ಹಳಿಗೆ ಬರಲಾರಂಭಿಸಿದೆ. ಆದರೆ, ಇನ್ನೊಂದು ಕಡೆ ಬೆಲೆ ಏರಿಕೆ ಜನರನ್ನು ಹೈರಾಣಗೊಳಿಸುತ್ತಿದೆ. ಒಂದು ವರ್ಷದ ಹಿಂದಿದ್ದ ಬೆಲೆಗೂ, ಈಗಿನ ಬೆಲೆಗೂ ಅಜಗಜಾಂತರ ಹಣವನ್ನು ಹೆಚ್ಚುವರಿಯಾಗಿ ಜನರು ಕೊಡಬೇಕಾದ ಅನಿವಾರ್ಯತೆಯಲ್ಲಿದ್ದಾರೆ.
'ಬಾಯಿ ಮುಚ್ಚು ಸಾಕು'; ಬೆಲೆ ಏರಿಕೆ ಪ್ರೆಶ್ನಿಸಿದ್ದಕ್ಕೆ ಪತ್ರಕರ್ತನಿಗೆ ರಾಮದೇವ್ ಆವಾಜ್!
ಇದೊಂದೇ ಅಲ್ಲಾ, ನಿರುದ್ಯೋಗದ ಸಮಸ್ಯೆ ಮತ್ತೊಂದು ಕಡೆ. ಇದಕ್ಕೆಲ್ಲಾ ಧ್ವನಿಯಾಗಬೇಕಾಗಿರುವ ಜನಪ್ರತಿನಿಧಿಗಳಿಗೆ (ಅದೂ ಯಾವುದೇ ಪಕ್ಷದವರಿಗಾಲಿ) ಇದ್ಯಾವುದೂ ಬೇಕಾಗಿಲ್ಲ. ಮುಂದಿನ ಚುನಾವಣೆಗೆ ವೋಟ್ ಭದ್ರ ಮಾಡಿಕೊಳ್ಳಲು ಏನು ಬೇಕು ಅದನ್ನು ಮಾಡುತ್ತಿದ್ದಾರೆ, ಜನರೂ ಬಲೆಗೆ ಬೀಳುತ್ತಿದ್ದಾರೆ.
ಎಲ್ಲದರಲ್ಲೂ ರಾಜಕೀಯ ಮಾಡುವುದು ರಾಜಕಾರಣಿಗಳ ಕಾಯಕ. ಅವರ ಪಕ್ಷ ಅಧಿಕಾರದಲ್ಲಿದ್ದಾಗ ಇನ್ನೊಂದು ಪಕ್ಷಕ್ಕೆ, ಇವರಿದ್ದಾಗ ಮತ್ತೊಂದು ಪಕ್ಷವನ್ನು ಟೀಕಿಸುವುದೇ ಇವರ ಕೆಲಸ. ಇದಕ್ಕೆ ಹಿಮ್ಮೇಳಕ್ಕೆ ಅವರವರ ಪಕ್ಷದ ಕಾರ್ಯಕರ್ತರು. ಇದೆಲ್ಲಾ ಗೊತ್ತಿದ್ದ ಜನಸಾಮಾನ್ಯರು ಇವರು ಕುಣಿಸುವ ತಾಳಕ್ಕೆ ಯಾಕೆ ಕುಣಿಯುತ್ತಿದ್ದಾರೆ, ತಮ್ಮ ಹಕ್ಕನ್ನು ಪಡೆಯಲು ಯಾಕೆ ಧ್ವನಿ ಎತ್ತುತ್ತಿಲ್ಲ?
Petrol Price Today : ಮತ್ತೆ ಏರಿದೆ ಇಂಧನ ದರ: ಏ.4ರಂದು ದೇಶದ ಪ್ರಮುಖ ನಗರಗಳ ಪೆಟ್ರೋಲ್, ಡೀಸೆಲ್ ದರ ತಿಳಿಯಿರಿ
ತೈಲ ಕಂಪೆನಿಗಳು ಬೆಲೆಯನ್ನು ದಿನಂಪ್ರತಿ ಹೆಚ್ಚು ಮಾಡುತ್ತಿದೆ
ಐದು ರಾಜ್ಯಗಳ ಚುನಾವಣೆ ಮುಗಿಯುವವರೆಗೆ ಸುಮ್ಮನಿದ್ದ ತೈಲ ಕಂಪೆನಿಗಳು ಮತ್ತೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮುಂತಾದವುಗಳ ಬೆಲೆಯನ್ನು ದಿನಂಪ್ರತಿ ಹೆಚ್ಚು ಮಾಡುತ್ತಿದೆ. ಇದರಿಂದ, ಅಡುಗೆ ಅನಿಲ, ತರಕಾರಿ ಹಣ್ಣುಹಂಪಲುಗಳ ಬೆಲೆ ಗಗನಕ್ಕೇರುತ್ತಿದೆ. ಹೊಟೇಲ್ ಪದಾರ್ಥಗಳೂ ತುಟ್ಟಿಯಾಗುತ್ತಿದೆ. ಕೊರೊನಾ ಕಾರಣದಿಂದಾಗಿ ಇನ್ನೂ ಕೆಲವು ಉದ್ಯಮಗಳು ಚೇತರಿಕೆಯನ್ನು ಕಂಡಿಲ್ಲ. ಆದರೆ, ಜನರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ, ಜನರ ಆದ್ಯತೆ ಬೇಡವಾದ ವಿಚಾರವನ್ನೇ ಆವರಿಸಿಕೊಳ್ಳುತ್ತಿದೆ.
ಬಪ್ಪನಾಡಿನಲ್ಲಿ ಏನಾಯಿತು, ಉಡುಪಿಯಲ್ಲಿ ಹೈಕೋರ್ಟ್ ಆದೇಶ ಉಲ್ಲಂಘನೆ
ಬೆಲೆ ಏರಿಕೆ, ಮೂಲಭೂತ ಸೌಕರ್ಯಗಳ ಕೊರತೆ ರಾಜ್ಯದ ಪ್ರತೀ ತಾಲೂಕಿನಲ್ಲೂ ತಾಂಡವಾಡುತ್ತಿದೆ. ಇದನ್ನೆಲ್ಲಾ ಜನರ ಪ್ರತಿಧ್ವನಿಯಾಗಿ ಸರಕಾರದ ಮುಂದಿಡುವ ಕೆಲಸವನ್ನು ಮಾಡಲು ಮಾಧ್ಯಮಗಳೂ ವೈಫಲ್ಯತೆಯನ್ನು ಕಾಣುತ್ತಿದೆ. ಬಪ್ಪನಾಡಿನಲ್ಲಿ ಏನಾಯಿತು, ಉಡುಪಿಯಲ್ಲಿ ಹೈಕೋರ್ಟ್ ಆದೇಶ ಉಲ್ಲಂಘನೆ.. ಈ ಮುಂತಾದ ವಿಚಾರಗಳೇ ವರ್ಣರಂಜಿತವಾಗಿ ಪ್ರಸಾರವಾಗುತ್ತಿರುವುದು ಒಂದು ಕಡೆ. ಇನ್ನೊಂದು ಕಡೆ, ಬೇಡವಾಗಿದ್ದರೂ, ಬೇಕಾಗಿದ್ದರೂ, ಬಲವಂತವಾಗಿ ಇಂತಹ ಸುದ್ದಿಗಳನ್ನು ಅರಗಿಸಿಕೊಳ್ಳಬೇಕಾದ ಕಷ್ಟದಲ್ಲಿದ್ದಾರೆ ಜನರು.
ಸಾಮಾಜಿಕ ಜಾಲತಾಣದ ಚಟುವಟಿಕೆಗಳು
ಸಾಮಾಜಿಕ ಜಾಲತಾಣದ ಚಟುವಟಿಕೆಯನ್ನು ಅವಲೋಕಿಸಿದಾಗ, ಜನರಿಗೆ ಇಂತಹ ಸುದ್ದಿಗಳ ಮೇಲೆ ಆಸಕ್ತಿ ಜಾಸ್ತಿ. ಹಾಗಾಗಿ, ಜನರ ನಾಡಿಮಿಡಿತವನ್ನು ಚೆನ್ನಾಗಿ ಅರಿತಿರುವ ಜನ ಪ್ರತಿನಿಧಿಗಳು ಮತ್ತು ಇತರರು ಈ ವಿಚಾರಕ್ಕೆ ಮಹತ್ವನ್ನು ಕೊಡುತ್ತಿದ್ದಾರೆ. ಹೀಗಾಗಿ, ಸರಕಾರದ, ಜನಪ್ರತಿನಿಧಿಗಳ, ಮಾಧ್ಯಮಗಳ ಕುಣಿತಕ್ಕೆ ಓಲೈಕೆಗೊಂಡು, ಜನರು ಆದ್ಯತಾ ವಿಚಾರವನ್ನು ಬದಿಗೆ ಸಲ್ಲಿಸಿ, ವೃಥಾ ಮತೀಯ ಸೂಕ್ಷ್ಮತೆಯ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳುತ್ತಿವೆ ಎಂದು ಒಂದು ಹಂತಕ್ಕೆ ಹೇಳಬಹುದಾಗಿದೆ.
ಹಿಜಾಬ್, ಧಾರ್ಮಿಕ ಕೇಂದ್ರಗಳಲ್ಲಿ ವ್ಯಾಪಾರಕ್ಕೆ ನಿರ್ಬಂಧ
ಕೆಲವು ತಿಂಗಳಿನಿಂದ ನಮ್ಮ ರಾಜ್ಯ ಯಾವ ಕಾರಣಕ್ಕಾಗಿ ಸದಾ ಸುದ್ದಿಯಲ್ಲಿದೆ. ಅದು, ಬೆಲೆ ಏರಿಕೆಯ ವಿಚಾರದಲ್ಲಿ ಪ್ರತಿಭಟನೆ ಏನಾದರೂ ನಡೆಯಿತೋ, ತಮ್ಮ ಹಕ್ಕನ್ನು ಪಡೆದುಕೊಳ್ಳುವ ವಿಚಾರದಲ್ಲಿನ ಹೋರಾಟಕ್ಕೇನಾದರೂ ಜನರು ಇಳಿದ್ರಾ? ಇಲ್ಲಾ.. ಬದಲಿಗೆ, ಹಿಜಾಬ್, ಧಾರ್ಮಿಕ ಕೇಂದ್ರಗಳಲ್ಲಿ ವ್ಯಾಪಾರಕ್ಕೆ ನಿರ್ಬಂಧ, ಹಲಾಕ್ ಕಟ್, ಜಟ್ಕಾ ಕಟ್ ಮುಂತಾದ ಜಾತಿ ಸೂಕ್ಷ್ಮತೆಯ ವಿಚಾರಕ್ಕಾಗಿ ನಮ್ಮ ರಾಜ್ಯ ಸುದ್ದಿಯಲ್ಲಿದೆ. ಹಿಜಾಬ್ ನಿಂದ ಆರಂಭವಾದ ವಿವಾದ ದೇಶವನ್ನೆಲ್ಲಾ ಆವರಿಸಿಕೊಂಡಿದ್ದಕ್ಕೆ ರಾಜಕಾರಣಿಗಳು, ಮಾಧ್ಯಮಗಳು ಎಷ್ಟು ಕಾರಣವೋ ಅಷ್ಟೇ ಜನಸಾಮಾನ್ಯರು ಕೂಡಾ ಕಾರಣರು.
ಪೆಟ್ರೋಲ್ ರೇಟ್ ಬಗ್ಗೆ ಧ್ವನಿ ಎತ್ರೋ ಅಂದ್ರೆ, ಹಿಜಾಬ್ ಹಲಾಲ್ ಅಂತೀರಲ್ಲೋ?
ಹಿಜಾಬ್ ನಿಂದ ಹಿಡಿದು ಈಗಿನ ಹಲಾಲ್ ತನಕ, ಜನರಿಗಿರುವ ಆದ್ಯತೆ/ಕುತೂಹಲ, ತಮ್ಮತಮ್ಮ ಮನೆಯ ಆರ್ಥಿಕ ಹೊರೆಯ ವಿಚಾರವಲ್ಲ, ಬದಲಿಗೆ ಮತೀಯ ವಿಚಾರ. ಈ ಬಗ್ಗೆ ಜನರಿಗೆ ತಮ್ಮ ಸಮಯವನ್ನು ಹಾಳು ಮಾಡಿಕೊಳ್ಳಲು ಸಮಯವಿದೆಯೇ ಹೊರತು, ಬುಡಕ್ಕೇ ಬಂದು ಕೂತಿರುವ ಬೆಲೆ ಏರಿಕೆ ಸಮಸ್ಯೆಗಳ ಮೇಲಲ್ಲ. ಇಲ್ಲದಿದ್ದರೆ, ಎಲ್ಲೋ ಒಂದು ನಗರದಲ್ಲಿ ಆರಂಭವಾದ ಹಿಜಾಬ್ ಮತ್ತದರ ಬಾಲಂಗೋಚಿ ವಿಚಾರಗಳು ಎರಡು ಕೋಮಿನ ನಡುವೆ ಇಷ್ಟೊಂದು ದ್ವೇಷ ಬೆಳೆಸಿಕೊಳ್ಳಲು ಸಾಧ್ಯವಾಗುತ್ತಿತ್ತಾ?
ಒಂದಂತೂ ಸತ್ಯ, ಜನರು ತಮ್ಮ ಆದ್ಯತೆಗೆ ಪ್ರಾಮುಖ್ಯತೆಯನ್ನು ಕೊಡದಿದ್ದರೆ, ಹಿಜಾಬ್, ಹಲಾಲ್ ಮುಂತಾದ ವಿಚಾರಗಳು ದಿನಕ್ಕೊಂದು ಹುಟ್ಟಿಕೊಳ್ಳುತ್ತವೆ, ಅದನ್ನು ವೈಭವೀಕರಿಸಲಾಗುತ್ತದೆ. ಯಾಕೆಂದರೆ, ಇದು ವೋಟ್ ಬ್ಯಾಂಕ್ ಆಗಿ ಪರಿವರ್ತನೆಯಾಗುವ ಸಾಧ್ಯತೆಯೇ ಹೆಚ್ಚು.. ಚುನಾವಣಾ ವರ್ಷವಾಗಿರುವುದರಿಂದ ಜನರು ಹುಷಾರ್ ತಪ್ಪಬಾರದು ಎನ್ನುವುದೊಂದು ಸಲಹೆ.