ಇರಾನ್ ಅಧ್ಯಕ್ಷರು ಅಮೆರಿಕನ್ ನಿರೂಪಕಿಗೆ ಹೆಡ್ಸ್ಕಾರ್ಫ್ ಹಾಕಲು ಹೇಳಿದಾಗ...!!
ಇರಾನ್ನಲ್ಲಿ ಹಿಜಾಬ್ ಹೇರಿಕೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಅಲ್ಲಿನ ಸರಕಾರ ಸ್ವಲ್ಪವೂ ಜಗ್ಗಿಲ್ಲ. ಬದಲಾಗಿ ಹಿಜಾಬ್ ವಿರೋಧಿ ಹೋರಾಟವನ್ನು ದಮನ ಮಾಡಲು ಸಕಲ ಪ್ರಯತ್ನ ಮಾಡುತ್ತಿದೆ. ಪರಿಣಾಮವಾಗಿ 31 ಮಂದಿ ಬಲಿಯಾಗಿದ್ದಾರೆ.
ಇದೇ ಹೊತ್ತಲ್ಲಿ ಮೊನ್ನೆ ಬುಧವಾರ ಕುತೂಹಲಕಾರಿ ಬೆಳವಣಿಗೆಯೊಂದು ವರದಿಯಾಗಿದೆ. ಇರಾನ್ ಅಧ್ಯಕ್ಷ ಇಬ್ರಾಹಿಂ ರಾಯಿಸಿ ಅಮೆರಿಕಕ್ಕೆ ಹೋಗಿ ಅಲ್ಲಿನ ಟಿವಿ ನಿರೂಪಕಿ ತಲೆಗೆ ಹೆಡ್ ಸ್ಕಾರ್ಫ್ ಹಾಕಲಿಲ್ಲವೆಂದು ಸಂದರ್ಶನವನ್ನೇ ರದ್ದು ಮಾಡಿದ ಘಟನೆ ನಡೆದಿದೆ.
ಇರಾನ್ನಲ್ಲಿ ಹಿಜಾಬ್ ವಿರೋಧಿ ಹೋರಾಟ; 31 ನಾಗರಿಕರ ಹತ್ಯೆ!
ಇದು ಸಿಎನ್ಎನ್ ವಾಹಿನಿಯ ಹಿರಿಯ ನಿರೂಪಕಿ ಕ್ರಿಸ್ಟಿಯಾನೆ ಅಮಾನ್ಪೋರ್ ಅವರಿಗೆ ನಡೆದ ಘಟನೆಯಾಗಿದೆ. ಅಮಾನ್ಪೋರ್ ನಿನ್ನೆ ಗುರುವಾರ ಈ ಸಂಗತಿಯನ್ನು ಟ್ವೀಟ್ ಮಾಡಿ ಬಹಿರಂಗಪಡಿಸಿದ್ದಾರೆ.
ವಿಶ್ವ ಸಂಸ್ಥೆ ಸಾಮಾನ್ಯ ಸಭೆ ಹಿನ್ನೆಲೆಯಲ್ಲಿ ಬುಧವಾರ ಸಿಎನ್ಎನ್ ಸೇರಿದಂತೆ ವಿವಿಧ ಮಾಧ್ಯಮಗಳಿಗೆ ಇರಾನ್ ಅಧ್ಯಕ್ಷರು ಸಂದರ್ಶನ ನೀಡುವುದಿತ್ತು. ಹಿಜಾಬ್ ವಿರೋಧಿ ಪ್ರತಿಭಟನೆ ಮತ್ತು ರಾದ್ಧಾಂತದ ಕಾರಣಕ್ಕೆ ಇರಾನ್ನ ನೂತನ ಅಧ್ಯಕ್ಷರಿಗೆ ಮಾಧ್ಯಮಗಳಲ್ಲಿ ಬಹಳ ಬೇಡಿಕೆ ಇತ್ತು. ಈ ಸಂದರ್ಭದಲ್ಲಿ ಸಿಎನ್ಎನ್ನ ಆಂಕರ್ ತಲೆಗೆ ಸೆರಗು ಹಾಕಲಿಲ್ಲವೆಂದು ಇಬ್ರಾಹಿಂ ರಾಯಿಸಿ ತಮ್ಮ ಸಂದರ್ಶನವನ್ನೇ ರದ್ದುಗೊಳಿಸಿದರು.
ಇಸ್ಲಾಮಿಕ್ ಕ್ರಾಂತಿಗೆ ನಾಂದಿ ಹಾಡಿದ ದೇಶ ಇರಾನ್ನಲ್ಲಿ ಹಿಜಾಬ್ ವಿರೋಧಿಸಿದ ಮಹಿಳೆಯರು
ಸಂದರ್ಶನ ರದ್ದಾದ ಕಥೆ
ಇರಾನ್ ಅಧ್ಯಕ್ಷ ಇಬ್ರಾಹಿಂ ರಾಯಿಸಿ ಅವರ ಸಂದರ್ಶನಕ್ಕೆ ಸಿಎನ್ಎನ್ ಸಿಬ್ಬಂದಿ ಕ್ಯಾಮರಾ ಸೇರಿ ಎಲ್ಲಾ ಸಜ್ಜುಗೊಳಿಸಿದ್ದರು. ಸಂದರ್ಶನದ ಸಮಯ ಮೀರಿ 40 ನಿಮಿಷವಾದರೂ ಇರಾನ್ ಅಧ್ಯಕ್ಷರ ಸುಳಿವೇ ಇರಲಿಲ್ಲ. ನಂತರ ಬಂದ ಅಧ್ಯಕ್ಷರ ಸಹಾಯಕರು, ಮೊಹರಂ ಮತ್ತು ಸಫರ್ನ ಪವಿತ್ರ ಮಾಸವಾದ್ದರಿಂದ ತಲೆಗೆ ಸ್ಕಾರ್ಫ್ ಕಟ್ಟಿಕೊಳ್ಳಬೇಕೆಂದು ತಿಳಿಸಿದರು. ಇದು ಅಮೆರಿಕವಾದ್ದರಿಂದ ತಾನಿಲ್ಲಿ ಸ್ಕಾರ್ಫ್ ಕಟ್ಟುವುದಿಲ್ಲ ಎಂದು ಹೇಳಿದರು. ನಂತರ ಇರಾನ್ ಅಧ್ಯಕ್ಷರು ಈ ಸಂದರ್ಶನವನ್ನೇ ಕೊನೆಗೆ ರದ್ದು ಮಾಡಿದರು. ಇದು ಕ್ರಿಸ್ಟಿಯಾನೆ ಅಮಾನ್ಪೋರ್ ನೀಡಿದ ಮಾಹಿತಿ. ನ್ಯೂಯಾರ್ಕ್ ನಗರದಲ್ಲಿ ಈ ಸಂದರ್ಶನ ನಡೆಯುವುದಿತ್ತು.
ಕ್ರಿಸ್ಟಿಯಾನೆ ಅಮಾನ್ಪೋರ್ ಇರಾನ್ ತಂದೆ ಮತ್ತು ಅಮೆರಿಕನ್ ತಾಯಿಯ ಮಗಳು. ಅಮೆರಿಕದಲ್ಲೇ ಹುಟ್ಟಿ, ಓದಿ ಬೆಳೆದವರು.
|
ಕ್ರಿಸ್ಟಿಯಾನೆ ಟ್ವೀಟ್ ಮಾಡಿದ್ದು...
ಸಿಎನ್ಎನ್ ನಿರೂಪಕಿ ಕ್ರಿಸ್ಟಿಯಾನೆ ಅಮಾನ್ಪೋರ್ ತಮ್ಮ ಟ್ವೀಟ್ಗಳಲ್ಲಿ ಹೇಳಿದ್ದೇನು ಎಂಬ ವಿವರ ಇಲ್ಲಿದೆ:
"ನೈತಿಕ ಪೊಲೀಸರಿಂದ ಬಂಧಿತಳಾಗಿದ್ದ ಮಹಸಾ ಅಮಿನಿ ಕಳೆದ ವಾರ ಸಾವನ್ನಪ್ಪಿದ ಬಳಿಕ ಇರಾನ್ನಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಮಹಿಳೆಯರು ಹಿಜಾಬ್ ಅನ್ನು ಸುಟ್ಟುಹಾಕುತ್ತಿದ್ದಾರೆ. ಮಾನವಹಕ್ಕು ಸಂಘಟನೆಗಳ ಪ್ರಕಾರ ಕನಿಷ್ಠವೆಂದರೂ ೮ ಮಂದಿ ಹತ್ಯೆಯಾಗಿದ್ದಾರೆ. ಕಳೆದ ರಾತ್ರಿ ಈ ಬಗ್ಗೆ ನಾನು ಅಧ್ಯಕ್ಷ ರಾಯಿಸಿಗೆ ಪ್ರಶ್ನೆ ಕೇಳಲು ಯೋಜಿಸಿದ್ದೆ.
"ವಿಶ್ವಸಂಸ್ಥೆ ಸಾಮಾನ್ಯ ಸಭೆಗಾಗಿ ಇರಾನ್ ಅಧ್ಯಕ್ಷ ರಾಯಿಸಿ ನ್ಯೂಯಾರ್ಕ್ಗೆ ಬಂದಿದ್ದರು. ಅಮೆರಿಕದ ನೆಲದಲ್ಲಿ ಅಧ್ಯಕ್ಷ ರಾಯಿಸಿಗೆ ಇದು ಮೊದಲ ಸಂದರ್ಶನವಾಗುವುದಿತ್ತು. ಹಲವು ವಾರಗಳ ಸಿದ್ಧತೆಯಾಗಿತ್ತು. ೮ ಗಂಟೆಗಳ ಕಾಲ ಟ್ರಾನ್ಸ್ಲೇಶನ್ ಉಪಕರಣ, ಲೈಟ್, ಕ್ಯಾಮೆರಾ ಎಲ್ಲವನ್ನೂ ಸಜ್ಜೊಗೊಳಿಸಿ ನಾವು ತಯಾರಾದೆವು. ಆದರೆ, ಅಧ್ಯಕ್ಷ ರಾಯಿಸಿಯ ಸುಳಿವೇ ಇಲ್ಲ.
"ಸಂದರ್ಶನ ಪ್ರಾರಂಭವಾಗಬೇಕಾದ ಸಮಯ ಮೀರಿ 40 ನಿಮಿಷವಾದ ಬಳಿಕ ಅಧ್ಯಕ್ಷರ ಸಹಾಯಕರೊಬ್ಬರು ಬಂದರು. ಇದು ಮೊಹರ್ರಂ ಮತ್ತು ಸಫರ್ನ ಪವಿತ್ರ ತಿಂಗಳುಗಳಾದ್ದರಿಂದ ನಾನು ಹೆಡ್ಸ್ಕಾರ್ಫ್ ಕಟ್ಟಬೇಕೆಂದು ಅಧ್ಯಕ್ಷರು ತಿಳಿಸಿದ್ದಾರೆ ಎಂದು ಅವರು ಹೇಳಿದರು.
"ನಾನು ನಯವಾಗಿ ಆಗಲ್ಲ ಎಂದೆ. ನಾವು ನ್ಯೂಯಾರ್ಕ್ನಲ್ಲಿದ್ದೇವೆ. ಹೆಡ್ಸ್ಕಾರ್ಫ್ ಕಟ್ಟಬೇಕೆಂಬ ಯಾವ ಕಾನೂನಾಗಲೀ ಸಂಪ್ರದಾಯವಾಗಲೀ ಇಲ್ಲಿ ಇಲ್ಲ ಎಂದೆ. ನಾನು ಇರಾನ್ನಿಂದ ಹೊರಗೆ ಸಂದರ್ಶನ ಮಾಡಿದ ಹಿಂದಿನ ಯಾವ ಇರಾನ್ ಅಧ್ಯಕ್ಷರೂ ಈ ರೀತಿಯ ಒತ್ತಾಯ ಮಾಡಿರಲಿಲ್ಲ ಎಂದೆ.
"ನಾನು ತಲೆಗೆ ಸ್ಕಾರ್ಫ್ ಕಟ್ಟಿಕೊಳ್ಳದೇ ಹೋದರೆ ಸಂದರ್ಶನ ನಡೆಯುವುದಿಲ್ಲ ಎಂದು ಆ ಸಹಾಯಕ ಸ್ಪಷ್ಟವಾಗಿ ಹೇಳಿದರು. ಇದು ಗೌರವದ ವಿಚಾರವೆಂದು ಹೇಳಿದ ಅವರು ಇರಾನ್ನ ಪರಿಸ್ಥಿತಿಯನ್ನು ಉಲ್ಲೇಖಿಸಿದರು.
"ಆದರೂ ನಾನು ಇಂಥ ಅನಿರೀಕ್ಷಿತ ಷರತ್ತನ್ನು ಒಪ್ಪಲು ಸಾಧ್ಯ ಇಲ್ಲ ಎಂದೆ... ಹೀಗೆ ಸಂದರ್ಶನ ರದ್ದಾಯಿತು. ಇರಾನ್ನಲ್ಲಿ ಜನರನ್ನು ಕೊಲ್ಲಲಾಗುತ್ತಿರುವಾಗ ಅಧ್ಯಕ್ಷ ರಾಯಿಸಿ ಜೊತೆ ಮಾತನಾಡುವುದು ಬಹಳ ಮುಖ್ಯವಾಗಿತ್ತು" ಎಂದು ಕ್ರಿಸ್ಟಿಯಾನೆ ಅಮಾನ್ಪೋರ್ ತಮ್ಮ ಸರಣಿ ಟ್ವೀಟ್ಗಳಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ 31 ಮಂದಿ ಸಾವು
ತಲೆಗೆ ಸರಿಯಾಗಿ ಹಿಜಾಬ್ ಹಾಕಿಲ್ಲ ಎಂದು ಬಂಧಿತಳಾಗಿದ್ದ 22 ವರ್ಷದ ಯುವತಿ ಸಾವನ್ನಪ್ಪಿದ ಬಳಿಕ ಇರಾನ್ನಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ಮಹಿಳೆಯರು ಹಿಜಾಬ್ ಸುಟ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇರಾನ್ನ ಹಲವು ಭಾಗಗಳಲ್ಲಿ ಜನರು ದಂಗೆ ಏಳುತ್ತಿದ್ದಾರೆ.
ನಿನ್ನೆ ಗುರುವಾರ ಪ್ರತಿಭಟನೆಗಳನ್ನು ಹತ್ತಿಕ್ಕಲು ಇರಾನೀ ಭದ್ರತಾ ಪಡೆಗಳು ಪ್ರಯತ್ನಿಸಿದವು. ಪರಿಣಾಮವಾಗಿ 31 ಮಂದಿ ನಾಗರಿಕರು ಹತರಾಗಿರುವುದು ವರದಿಯಾಗಿದೆ.
"ಇರಾನ್ನ ಜನರು ತಮ್ಮ ಮೂಲಭೂತ ಹಕ್ಕು ಮತ್ತು ಘನತೆಯನ್ನು ಗಳಿಸಲು ಬೀದಿಗೆ ಇಳಿದರೆ ಸರಕಾರ ಈ ಶಾಂತಿಯುತ ಪ್ರತಿಭಟನೆಗೆ ಬುಲೆಟ್ನಿಂದ ಉತ್ತರ ನೀಡುತ್ತಿದೆ" ಎಂದು ಇರಾನ್ ಮಾನವ ಹಕ್ಕು ನಿರ್ದೇಶಕ ಮಹಮೂದ್ ಅಮಿರಿ-ಮೊಗಾದ್ದಮ್ ಹೇಳಿದ್ದಾರೆ.
ಇರಾನ್ನ 30ಕ್ಕೂ ಹೆಚ್ಚು ನಗರಗಳಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗಳು ನಡೆಯುತ್ತಿವೆ. ಮಹಿಳೆಯರು ಮಾತ್ರವಲ್ಲ ಪುರುಷರೂ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
|
ಮಹಿಳೆಗೆ ಹೊಡೆದವನಿಗೆ ಗೂಸಾ
ಇರಾನ್ನಲ್ಲಿ ಎದ್ದಿರುವ ಜನಾಕ್ರೋಶ ಹೊಸ ಕ್ರಾಂತಿಗೆ ಎಡೆ ಮಾಡಿಕೊಡುತ್ತಿರುವಂತೆ ತೋರುತ್ತದೆ. ಹಾಗಂತ ಅನಿಸಲು ಕಾರಣವಾಗಿದ್ದು ಈ ಒಂದು ವಿಡಿಯೋ. ಸಾರ್ವಜನಿಕ ಸ್ಥಳವೊಂದರಲ್ಲಿ ಗಂಡಸೊಬ್ಬ ಮಹಿಳೆ ಕೆನ್ನೆಗೆ ಭಾರಿಸಿ ತನ್ನ ಪಾಡಿಗೆ ತಾನು ಹೋಗಲು ತೊಡಗಿದ್ದ. ಆಗ ಅಲ್ಲಿಗೆ ಜನರು ಸುತ್ತುವರಿದು ಬಂದು ಆ ವ್ಯಕ್ತಿಗೆ ಚೆನ್ನಾಗಿ ತದುಕಿದ ಘಟನೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಸನ್ನಿವೇಶವನ್ನು ಕೆಲ ಕಾಲದ ಹಿಂದೆ ಇರಾನ್ನಲ್ಲಿ ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಈಗ ಅಲ್ಲಿ ಪರಿವರ್ತನೆ ಅಗುತ್ತಿರುವಂತೆ ಕಾಣುತ್ತಿದೆ. ಇರಾನ್ನಲ್ಲಿ ಪ್ರತಿಭಟನೆಗಳನ್ನು ಹತ್ತಿಕ್ಕಲು ಇಂಟರ್ನೆಟ್ ಕಡಿತ ಮಾಡಿದ್ದರೂ ಜನರ ಆಕ್ರೋಶದ ಕಿಡಿಯನ್ನು ಆರಿಸಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
(ಒನ್ಇಂಡಿಯಾ ಸುದ್ದಿ)