ಐಎನ್ಎಕ್ಸ್ ಮೀಡಿಯಾ: ಪಿ ಚಿದಂಬರಂಗೆ ಸುಪ್ರೀಂ ವಿಧಿಸಿರುವ ಷರತ್ತುಗಳೇನು?
ನವದೆಹಲಿ, ಡಿಸೆಂಬರ್ 04: ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಳನಿಯಪ್ಪನ್ ಚಿದಂಬರಂಗೆ ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸುಪ್ರೀಂಕೋರ್ಟಿನಿಂದ ಬುಧವಾರ(ಡಿಸೆಂಬರ್ 04) ಬೆಳಗ್ಗೆ ಷರತ್ತುಬದ್ಧ ಜಾಮೀನು ಮಂಜೂರಾಗಿದೆ. ಸುಮಾರು 105 ದಿನಗಳಿಂದ ತಿಹಾರ್ ಜೈಲಿನಲ್ಲಿದ್ದ ಚಿದಂಬರಂ ಅವರನ್ನು ಜಾರಿ ನಿರ್ದೇಶನಾಲಯವು ವಿಚಾರಣೆ ನಡೆಸುತ್ತಿತ್ತು. ಈ ಪ್ರಕರಣದ ಹಿನ್ನೆಲೆಯೇನು? ಚಿದಂಬರಂಗೆ ಜಾಮೀನು ಸಿಕ್ಕಿದ್ದು ಹೇಗೆ? ಜಾಮೀನು ನೀಡಲು ವಿಧಿಸಿರುವ ಷರತ್ತುಗಳೇನು? ವಿವರಗಳು ಇಲ್ಲಿವೆ....
ಪಿ ಚಿದಂಬರಂ ಸಲ್ಲಿಸಿದ್ದ ರೆಗ್ಯುಲರ್ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ, ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. 74 ವರ್ಷ ವಯಸ್ಸಿನ ಚಿದಂಬರಂ ಅನಾರೋಗ್ಯದ ಕಾರಣ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದಾಗಲೂ ಅರ್ಜಿ ತಿರಸ್ಕೃತಗೊಂಡಿತ್ತು. ಆದರೆ, ದೆಹಲಿಯಲ್ಲಿ ವಾಯ ಮಾಲಿನ್ಯ ಅಪಾಯ ಮಟ್ಟ ಮೀರಿರುವ ಹಿನ್ನಲೆಯಲ್ಲಿ ಚಿದಂಬರಂಗೆ ಮಾಸ್ಕ್ ನೀಡಬೇಕು. ಕುಡಿಯಲು ಶುದ್ಧ ನೀರನ್ನು ತಿಹಾರ್ ಜೈಲಿನಲ್ಲಿ ನೀಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿತ್ತು.
ವಿಮಾನ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಚಿದಂಬರಂಗೆ ಸಂಕಷ್ಟ?
ಜಸ್ಟೀಸ್ ಆರ್ ಬಾನುಮತಿ, ಎಎಸ್ ಬೋಪಣ್ಣ ಹಾಗೂ ಹೃತಿಕ್ ರಾಯ್ ಅವರಿದ್ದ ನ್ಯಾಯಪೀಠವು ಜಾರಿ ನಿರ್ದೇಶನಾಲಯವು ಚಿದಂಬರಂ ವಿರುದ್ಧ ದಾಖಲಿಸಿರುವ ಈ ಮನಿಲಾಂಡ್ರಿಂಗ್ ಪ್ರಕರಣದಲ್ಲಿ ಕೆಲವು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.
ಚಿದಂಬಾಂಗೆ ಪ್ರಮುಖ ಷರತ್ತುಗಳು
ಜಾರಿನಿರ್ದೇಶನಾಲಯವು ನಡೆಸುತ್ತಿರುವ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು. ತನಿಖೆ ವಿಚಾರಣೆಗೆ ಕರೆದಾಗ ತಪ್ಪದೇ ಹಾಜರಾಗಬೇಕು. ತನಿಖೆ, ವಿಚಾರಣೆ, ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ಹೇಳಿಕೆ ನೀಡುವಂತಿಲ್ಲ. ವಿದೇಶಕ್ಕೆ ಹಾರುವಂತಿಲ್ಲ. ಪಾಸ್ ಪೋರ್ಟ್ ನ್ಯಾಯಾಲಯದ ವಶಕ್ಕೆ ನೀಡಬೇಕು. ಸಾಕ್ಷ್ಯ ನಾಶ ಮಾಡುವಂತಿಲ್ಲ. ಸಾಕ್ಷಿಗಳ ಮೇಲೆ ಪ್ರಭಾವ ಬೀರುವಂತಿಲ್ಲ. 2 ಲಕ್ಷ ರು ವೈಯಕ್ತಿಕ ಬಾಂಡ್ ಶ್ಯೂರಿಟಿ ಸಲ್ಲಿಸಬೇಕು.
ಚಿದಂಬರಂ ಪರ ವಕೀಲರ ವಾದಕ್ಕೆ ಮನ್ನಣೆ
ಆರ್ಥಿಕ ಅಪರಾಧದ ಗಂಭೀರತೆಯನ್ನು ಪರಿಗಣಿಸುವುದು ಸರಿ, ಆದರೆ, ಇದೆ ಮಾದರಿ ಪ್ರಕರಣದಲ್ಲಿ ನಮ್ಮ ಕಕ್ಷಿದಾರರ ವಿರುದ್ಧ ಸಿಬಿಐ ಸಲ್ಲಿಸಿರುವ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಹೀಗಾಗಿ, ಪ್ರಕರಣದ ಗಂಭೀರತೆ ಆಧಾರದ ಮೇಲೆ ಜಾಮೀನು ನೀಡದಿರುವುದು ಸರಿಯಲ್ಲ ಎಂದು ಚಿದಂಬರಂ ಪರ ವಕೀಲರಾದ ಕಪಿಲ್ ಸಿಬಾಲ್ ಹಾಗೂ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು.
ಆ ಹೆಂಗಸಿನ ತಪ್ಪೊಪ್ಪಿಗೆ, ಪಿ ಚಿದಂಬರಂ ಬಂಧನಕ್ಕೆ ಕಾರಣವಾಯ್ತು
ಇದಲ್ಲದೆ, ನಮ್ಮ ಕಕ್ಷಿದಾರರು ಈ ಪ್ರಕರಣದಲ್ಲಿ ಶರಣಾಗರಾಗಲು ಮುಂದಾಗಿದ್ದರು. ವಿಚಾರಣೆಗೆ ಸಹಕರಿಸಿದ್ದಾರೆ ಎಂದು ವಾದಿಸಿದ್ದನ್ನು ನ್ಯಾಯಪೀಠ ಪುರಸ್ಕರಿಸಿದೆ.
ಪಿ ಚಿದಂಬರಂ ಬಂಧಿಸಲು ಸಾಧ್ಯವಾಗಿತ್ತು
ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮೊದಲು ಮಗ ಹಾಗೂ ಈಗ ಅಪ್ಪನ ಬಂಧನಕ್ಕೆ ಕಾರಣವಾಗಿದ್ದು, ಆ ಹೆಂಗಸು ನೀಡಿದ ತಪ್ಪೊಪ್ಪಿಗೆ ಹೇಳಿಕೆ. ಆ ಹೆಂಗಸು ಮತ್ತ್ಯಾರು ಅಲ್ಲ, ಇಂದ್ರಾಣಿ ಮುಖರ್ಜಿಯಾ, ಮಾಧ್ಯಮ ಲೋಕದ ದೊರೆ ಪೀಟರ್ ಮುಖರ್ಜಿಯಾ ಪತ್ನಿ, ತಮ್ಮ ಮಗಳು ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ.
ಕಾರ್ತಿ ಇಂದ್ರಾಣಿ ಭೇಟಿ; ಚಿದು ಕಾರ್ಯತಂತ್ರ ರಹಸ್ಯ ಬಯಲು ಮಾಡಿದ 'ಇಡಿ'
ಫೆಬ್ರವರಿ 17, 2018ರಲ್ಲಿ ಇಂದ್ರಾಣಿ ಅಪ್ರೂವರ್ ಆಗಿ CrPC ಸೆಕ್ಷನ್ 164 ಅನ್ವಯ ಮ್ಯಾಜಿಸ್ಟ್ರೇಟ್ ಮುಂದೆ ಕಾರ್ತಿ ಚಿದಂಬರಂ ಹಾಗೂ ಪಿ ಚಿದಂಬರಂ ವಿರುದ್ಧ ಹೇಳಿಕೆ ದಾಖಲಿಸಿದ್ದರಿಂದ ಪಿ ಚಿದಂಬರಂ ಬಂಧಿಸಲು ಸಾಧ್ಯವಾಗಿತ್ತು. ಇಂದ್ರಾಣಿ ನೀಡಿರುವ ಇಮೇಲ್ ಸಾಕ್ಷಿ, ಹೋಟೆಲ್ ಹಯಾತ್ ನಲ್ಲಿ ಭೇಟಿ, ಚಿದಂಬರಂ ನೀಡಿದ ಸೂಚನೆ, ಮುಂತಾದ ಸಾಕ್ಷಿಗಳೇ ಸದ್ಯಕ್ಕೆ ಇಡಿ ಹಾಗೂ ಸಿಬಿಐಗೆ ಪ್ರಮುಖ ಅಸ್ತ್ರಗಳಾಗಿವೆ.
ಜಾರಿ ನಿರ್ದೇಶನಾಲಯ ಕೋರ್ಟಿಗೆ ನೀಡಿದ ಮಾಹಿತಿ
ಚಿದಂಬರಂಗೆ ಸೇರಿದ 11 ಸ್ಥಿರಾಸ್ತಿ ಹಾಗೂ ವಿದೇಶದಲ್ಲಿರುವ 17 ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಬೇಕಿದೆ. 305 ಕೋಟಿ ರು ಅವ್ಯವಹಾರ, 10 ಲಕ್ಷ ರು ಲಂಚಗಿಂತ ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ ಎಂದು ಜಾರಿ ನಿರ್ದೇಶನಾಲಯವು ಸುಪ್ರೀಂಕೋರ್ಟಿಗೆ ತಿಳಿಸಿದೆ. ಯಾರ ಹೆಸರಿನಲ್ಲಿ ಬೇನಾಮಿ ಕಂಪನಿಗಳನ್ನು ಸೃಷ್ಟಿಸಲಾಗಿತ್ತೋ ಅವರುಗಳು ಚಿದಂಬರಂ ಮೊಮ್ಮಗಳ ಹೆಸರಿನಲ್ಲಿ ಉಯಿಲು ಬರೆದಿದ್ದಾರೆ ಎಂಬ ಹೊಸ ಅಂಶವನ್ನು ಇಡಿ ಅಧಿಕಾರಿಗಳು ಜಸ್ಟೀಸ್ ಆರ್ ಬಾನುಮತಿ ಹಾಗೂ ಎಸ್ಎಸ್ ಬೋಪಣ್ಣ ಅವರಿರುವ ನ್ಯಾಯಪೀಠದ ಮುಂದಿಟ್ಟಿದ್ದಾರೆ.
ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂಗೆ ಜಾಮೀನು
ಕಿಕ್ ಬ್ಯಾಕ್ ಪಡೆಯಲು ಬೇನಾಮಿ ಸಂಸ್ಥೆ
ವಿದೇಶದಿಂದ ನೇರವಾಗಿ ಬಂಡವಾಳ ಹೂಡಿಕೆ ಅನುಮತಿ ಪಡೆದ ಐಎನ್ ಎಕ್ಸ್ ಮೀಡಿಯಾಕ್ಕೆ ಶೇ 26ರಷ್ಟು ಹೂಡಿಕೆಯನ್ನು ಐಎನ್ ಎಕ್ಸ್ ನ್ಯೂಸ್ ನಲ್ಲಿ ತೊಡಗಿಸಿಕೊಳ್ಳಲು ಮುಂದಾಗುತ್ತದೆ. ಆದಾಯ ತೆರಿಗೆ ಇಲಾಖೆ ಗಮನಕ್ಕೆ ಬಂದು ಹೂಡಿಕೆ ಕಷ್ಟವಾಗುತ್ತದೆ. ನಂತರ ಕಾರ್ತಿ ಎಂಟ್ರಿಯಾಗಿ 4.6 ಕೋಟಿ ರು ಹೂಡಿಕೆಗೆ FIPB ಅನುಮತಿ ಪಡೆದು 300 ಕೋಟಿ ವಿದೇಶಿ ಹೂಡಿಕೆ ಪಡೆಯಲಾಗಿದೆ ಎಂಬುದು ಆರೋಪ. ಈ ಡೀಲ್ ಪೂರ್ಣಗೊಳಿಸಲು ಮಧ್ಯವರ್ತಿ ಸಂಸ್ಥೆ, ಕಿಕ್ ಬ್ಯಾಕ್ ಪಡೆಯಲು ಬೇನಾಮಿ ಸಂಸ್ಥೆಯನ್ನು ಕಾರ್ತಿ ಸೂಚಿಸಿದ್ದರು ಎಂಬ ಆರೋಪವಿದೆ.