ಆ ಹೆಂಗಸಿನ ತಪ್ಪೊಪ್ಪಿಗೆ, ಪಿ ಚಿದಂಬರಂ ಬಂಧನಕ್ಕೆ ಕಾರಣವಾಯ್ತು
"ಐಎನ್ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ, ಜಾರಿ ನಿರ್ದೇಶನಾಲಯವು ನಮ್ಮ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿಯೇ ಇಲ್ಲ, ಬೇನಾಮಿ ಸಂಸ್ಥೆಗೆ ಕೋಟ್ಯಂತರ ರುಪಾಯಿ ಸಂದಾಯವಾಗಿದೆ ಎಂಬುದು ಸುಳ್ಳು, ಇದು ದ್ವೇಷ ರಾಜಕಾರಣದ ಪರಮಾವಧಿ...." ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ನೀಡಿದ ಪ್ರತಿಕ್ರಿಯೆ ಇದು. ಇದೇ ಮೊದಲ ಬಾರಿಗೆ ಕೇಂದ್ರದ ಮಾಜಿ ಗೃಹ ಸಚಿವರನ್ನು ಹೈಡ್ರಾಮಾ ಮೂಲಕ ಬಂಧಿಸಲಾಗಿದೆ. ಪಿ ಚಿದಂಬರಂರನ್ನು ಸಿಬಿಐ ತನ್ನ ವಶದಲ್ಲಿ ವಿಚಾರಣೆಗೊಳಪಡಿಸುತ್ತಿದೆ. ಈ ಸಂದರ್ಭದಲ್ಲಿ ಅವರ ಬಂಧನಕ್ಕೆ ಮುಖ್ಯವಾಗಿ ಕಾರಣವಾದ ಆ ಮಹಿಳೆ ಬಗ್ಗೆ ಇಲ್ಲಿದೆ ಮಾಹಿತಿ...
ಅಂದು 2018ರಲ್ಲಿ ಕಾರ್ತಿ ಚಿದಂಬರಂರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಸಿಬಿಐ ಬಂಧಿಸಿದ ದಿನ ಬುಧವಾರ
ಮೊದಲು ಮಗ ಹಾಗೂ ಈಗ ಅಪ್ಪನ ಬಂಧನಕ್ಕೆ ಕಾರಣವಾಗಿದ್ದು, ಆ ಹೆಂಗಸು ನೀಡಿದ ತಪ್ಪೊಪ್ಪಿಗೆ ಹೇಳಿಕೆ. ಆ ಹೆಂಗಸು ಮತ್ತ್ಯಾರು ಅಲ್ಲ, ಇಂದ್ರಾಣಿ ಮುಖರ್ಜಿಯಾ, ಮಾಧ್ಯಮ ಲೋಕದ ದೊರೆ ಪೀಟರ್ ಮುಖರ್ಜಿಯಾ ಪತ್ನಿ, ತಮ್ಮ ಮಗಳು ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ.
ಫೆಬ್ರವರಿ 17, 2018ರಲ್ಲಿ ಇಂದ್ರಾಣಿ ಅಪ್ರೂವರ್ ಆಗಿ CrPC ಸೆಕ್ಷನ್ 164 ಅನ್ವಯ ಮ್ಯಾಜಿಸ್ಟ್ರೇಟ್ ಮುಂದೆ ಕಾರ್ತಿ ಚಿದಂಬರಂ ಹಾಗೂ ಪಿ ಚಿದಂಬರಂ ವಿರುದ್ಧ ಹೇಳಿಕೆ ದಾಖಲಿಸಿದ್ದರಿಂದ ಪಿ ಚಿದಂಬರಂ ಬಂಧಿಸಲು ಸಾಧ್ಯವಾಗಿದೆ. ಇಂದ್ರಾಣಿ ನೀಡಿರುವ ಇಮೇಲ್ ಸಾಕ್ಷಿ, ಹೋಟೆಲ್ ಹಯಾತ್ ನಲ್ಲಿ ಭೇಟಿ, ಚಿದಂಬರಂ ನೀಡಿದ ಸೂಚನೆ, ಮುಂತಾದ ಸಾಕ್ಷಿಗಳೇ ಸದ್ಯಕ್ಕೆ ಇಡಿ ಹಾಗೂ ಸಿಬಿಐಗೆ ಪ್ರಮುಖ ಅಸ್ತ್ರಗಳಾಗಿವೆ.
ಇಂದ್ರಾಣಿ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಏನಿತ್ತು?
ಫೆಬ್ರವರಿ 17, 2018ರಂದು ಇಂದ್ರಾಣಿ ನೀಡಿದ ಹೇಳಿಕೆಯಂತೆ, ಐಎನ್ಎಕ್ಸ್ ಮೀಡಿಯಾದಲ್ಲಿ ಹೂಡಿಕೆ ಮಾಡಲು FIPB ಅನುಮತಿ ಸಿಕ್ಕಿರಲಿಲ್ಲ. ಅಂದಿನ ವಿತ್ತ ಸಚಿವ ಚಿದಂಬರಂ ನೆರವಿನಿಂದ ಐಎನ್ ಎಕ್ಸ್ ಮೀಡಿಯಾದಲ್ಲಿ ಎಫ್ ಡಿಐ ಸಾಧ್ಯವಾಯಿತು. ಈ ಬಗ್ಗೆ ಡೀಲ್ ಕುದುರಿಸಲು ಕಾರ್ತಿ ಚಿದಂಬರಂ ಅವರನ್ನು ಭೇಟಿ ಮಾಡಲು ಸೂಚಿಸಿದರು. ಅದರಂತೆ, ದೆಹಲಿಯ ಹೋಟೆಲ್ ಹಯಾತ್ ನಲ್ಲಿ ಕಾರ್ಯತಂತ್ರ ರೂಪಿಸಲಾಯಿತು. ಕಿಕ್ ಬ್ಯಾಕ್ ಗಳನ್ನು ಕಾರ್ತಿ ಒಡೆತನದ ಕಂಪನಿಗೆ ನೀಡಲಾಯಿತು. ಈ ಕುರಿತಂತೆ ಪೀಟರ್ ಮುಖರ್ಜಿ ಸಹಿ ಹಾಕಿರುವ ವೋಚರ್ ಗಳು ಸಿಕ್ಕಿದ್ದು, ಸಿಬಿಐ ಹಾಗೂ ಇಡಿ ತಂಡಗಳು ಇದನ್ನು ಕೋರ್ಟಿಗೆ ಸಲ್ಲಿಸಿದ್ದಾರೆ.
ಇಂದು ಪಳನಿಯಪ್ಪನ್ ಚಿದಂಬರಂ ಬಂಧನವಾಗಿದ್ದು, ಬುಧವಾರ
ಕಾರ್ತಿ ಬೇನಾಮಿ ಸಂಸ್ಥೆಗೆ ಹಣ ಸಂದಾಯಕ್ಕೆ ಸಾಕ್ಷಿ
ಹೋಟೆಲ್ ನಲ್ಲಿ ಆದ ಒಪ್ಪಂದದಂತೆ ಕಾರ್ತಿ ಹೇಳಿದ ಚೆಸ್ ಮ್ಯಾನೇಜ್ಮೆಂಟ್ ಗ್ಲೋಬಲ್ ಪ್ರೈ ಲಿಮಿಟೆಡ್ ಯನ್ನು ಮಧ್ಯವರ್ತಿಯಾಗಿ ಇಟ್ಟುಕೊಂಡು ಅಡ್ವಾನ್ಟೇಂಟ್ ಸ್ಟ್ರಾಟರ್ಜಿಕ್ ಕನ್ಸಲ್ಟಿಂಗ್ ಪ್ರೈ ಲಿಮಿಟೆಡ್(ಎಎಸ್ ಸಿ ಪಿಎಲ್) ಸಂಸ್ಥೆಗೆ ಲಕ್ಷ ರು ಕಿಕ್ ಬ್ಯಾಕ್ ಮೊತ್ತವನ್ನು ಐಎನ್ ಎಕ್ಸ್ ಮೀಡಿಯಾ ಲಿಮಿಟೆಡ್ ಸಂದಾಯ ಮಾಡಿದೆ. ಈ ಕುರಿತಂತೆ ಲೆಡ್ಜರ್ ನಲ್ಲಿ ನಮೂದಿಸಲಾಗಿದೆ. ಹಣ ಪಾವತಿ ಬಗ್ಗೆ ಚೆಸ್ ಮ್ಯಾನೇಜ್ಮೆಂಟ್ ಗ್ಲೋಬಲ್ ಸಂಸ್ಥೆ ಹಾಗೂ ಐಎನ್ ಎಕ್ಸ್ ಮೀಡಿಯಾ ಸಂಸ್ಥೆ ನಡುವೆ 200 ಇಮೇಲ್ ಗಳು ಹರಿದಾಡಿವೆ.
ಕಾರ್ತಿ ಸಿಎ ಎಸ್ ಭಾಸ್ಕರರಾಮನ್ ಬಂಧನದ ನಂತರ
ಕಾರ್ತಿ ಸಿಎ ಎಸ್ ಭಾಸ್ಕರರಾಮನ್ ಬಂಧನದ ನಂತರ, ಎಎಸಿಪಿಎಲ್ ಗೆ ಎಫ್ ಐ ಪಿಬಿ ಅನುಮತಿ ಸಿಗಲು 35 ಲಕ್ಷ, 20,000 ಯುಎಸ್ ಡಾಲರ್, 60 ಲಕ್ಷ ರು ಹಾಗೂ 500,000 ಯುಎಸ್ ಡಾಲರ್ ಮೊತ್ತ ಕಿಕ್ ಬ್ಯಾಕ್ ನೀಡಲಾಗಿತ್ತು. ಇದೆಲ್ಲವೂ ASCPL ನ ಅಂಗ ಸಂಸ್ಥೆ ಸಿಂಗಪುರದ ಕಂಪನಿ, ನಾರ್ಥ್ ಸ್ಟಾರ್ ಸಾಫ್ಟ್ ವೇರ್ ಸಲ್ಯೂಷನ್ಸ್ ಪ್ರೈ ಲಿಮಿಟೆಡ್, ಗ್ರೀಸ್ ಮೂಲದ ಗೆಬೆನ್ ಟ್ರೇಡಿಂಗ್ ಲಿಮಿಟೆಡ್ ಮೂಲಕ ಸಂದಾಯವಾಗಿದೆ. ಇದಕ್ಕೆ ಸಂಬಂಧಿಸಿದ ವೋಚರ್ ಗಳು ಕಾರ್ತಿ ಕಚೇರಿಯಲ್ಲೇ ಸಿಕ್ಕಿದೆ. ಐಎನ್ಎಕ್ಸ್ ಮೀಡಿಯಾಕ್ಕೆ ಹೂಡಿಕೆ ವಿತ್ತ ಸಚಿವಾಲಯದ ಅನುಮತಿ ಸಿಕ್ಕ(2008) ಸಂದರ್ಭಕ್ಕೆ ವೋಚರ್ಸ್ ದಿನಾಂಕ ತಾಳೆ ಆಗುತ್ತಿದೆ.
4 ಕೋಟಿಗೆ ಅನುಮತಿ 300 ಕೋಟಿ ರು ಹೂಡಿಕೆ
ವಿದೇಶದಿಂದ ನೇರವಾಗಿ ಬಂಡವಾಳ ಹೂಡಿಕೆ ಅನುಮತಿ ಪಡೆದ ಐಎನ್ ಎಕ್ಸ್ ಮೀಡಿಯಾಕ್ಕೆ ಶೇ 26ರಷ್ಟು ಹೂಡಿಕೆಯನ್ನು ಐಎನ್ ಎಕ್ಸ್ ನ್ಯೂಸ್ ನಲ್ಲಿ ತೊಡಗಿಸಿಕೊಳ್ಳಲು ಮುಂದಾಗುತ್ತದೆ. ಆದಾಯ ತೆರಿಗೆ ಇಲಾಖೆ ಗಮನಕ್ಕೆ ಬಂದು ಹೂಡಿಕೆ ಕಷ್ಟವಾಗುತ್ತದೆ. ನಂತರ ಕಾರ್ತಿ ಎಂಟ್ರಿಯಾಗಿ 4.6 ಕೋಟಿ ರು ಹೂಡಿಕೆಗೆ FIPB ಅನುಮತಿ ಪಡೆದು 300 ಕೋಟಿ ವಿದೇಶಿ ಹೂಡಿಕೆ ಪಡೆಯಲಾಗಿದೆ ಎಂಬುದು ಆರೋಪ. ಈ ಡೀಲ್ ಪೂರ್ಣಗೊಳಿಸಲು ಮಧ್ಯವರ್ತಿ ಸಂಸ್ಥೆ, ಕಿಕ್ ಬ್ಯಾಕ್ ಪಡೆಯಲು ಬೇನಾಮಿ ಸಂಸ್ಥೆಯನ್ನು ಕಾರ್ತಿ ಸೂಚಿಸಿದ್ದರು ಎಂಬ ಆರೋಪವಿದೆ.
ಸವಾಲು ಹಾಕಿದ ಕಾರ್ತಿ ಚಿದಂಬರಂ
ಕಾರ್ತಿ ಸವಾಲು: ದೇಶದಲ್ಲಿ ಯಾರ ಮನೆ ಮೇಲೆ ನಾಲ್ಕು ಬಾರಿ ತನಿಖಾ ಸಂಸ್ಥೆ ದಾಳಿ ನಡೆಸಿಲ್ಲ, ನನ್ನ ಮನೆ, ಕಚೇರಿ ಮೇಲೆ ದಾಳಿ ನಡೆದಿದೆ. 20 ಬಾರಿ ವಿಚಾರಣೆಗೆ ಸಮನ್ಸ್ ಬಂದಿತ್ತು. ಪ್ರತಿ ಬಾರಿ 10 ರಿಂದ 12 ಗಂಟೆಗಳ ವಿಚಾರಣೆ ಎದುರಿಸಿದ್ದೇನೆ, 12 ದಿನಗಳ ಕಾಲ ಸಿಬಿಐ ಕಸ್ಟಡಿಯಲ್ಲಿದ್ದೆ. ಆದರೆ, ಇಲ್ಲಿ ತನಕ ನನ್ನ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿಲ್ಲ. 2008ರಲ್ಲಿ ನಡೆದಿದೆ ಎನ್ನಲಾದ ಪ್ರಕರಣಕ್ಕೆ 2017ರಲ್ಲಿ ಎಫ್ಐಆರ್ ಹಾಕಲಾಗಿದೆ. 305 ಕೋಟಿ ರು ಪಡೆದ ಕಂಪನಿ ನನ್ನ ಹೆಸರಿನಲ್ಲಿದೆ ಎನ್ನುತ್ತಾರೆ. ಇಂಥ ಕಂಪನಿ ಹೊಂದಲು ನಾನು ಉತ್ಸುಕನಾಗಿದ್ದೇನೆ, ಅದು ಯಾವ ಕಂಪನಿ ಎಂದು ದಯವಿಟ್ಟು ಹೇಳಿ, ನಾನು ನನ್ನ ತಂದೆ ಸಾರ್ವಜನಿಕ ಬದುಕಿನಲ್ಲಿದ್ದು, ವೃತ್ತಿಪರ ರಾಜಕಾರಣಿಗಳಾಗಿದ್ದೇವೆ, ಸಂಸದರಾಗಿದ್ದು ನಮ್ಮ ಆಸ್ತಿ ವಿವರಗಳನ್ನು ಮುಚ್ಚಿಡುವಂತಿಲ್ಲ. ನಾನು ಚುನಾವಣೆ ಎದುರಿಸಿದಾಗ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿದ್ದೇನೆ. ಈ ಬಗ್ಗೆಅನುಮಾನವಿದ್ದರೆ, ಪ್ರಶ್ನಿಸಲಿ ಎಂದು ಕಾರ್ತಿ ಚಿದಂಬರಂ ಸವಾಲು ಹಾಕಿದ್ದಾರೆ.
ಏನಿದು ಐಎನ್ಎಕ್ಸ್ ಮೀಡಿಯಾ ಪ್ರಕರಣ
ಏನಿದು ಪ್ರಕರಣ?: ಯುಪಿಎ 1 ಅಧಿಕಾರದಲ್ಲಿದ್ದಾಗ ವಿತ್ತ ಸಚಿವರಾಗಿದ್ದ ಪಿ ಚಿದಂಬರಂ ಅವರು 2007ರಲ್ಲಿ ಐಎನ್ಎಕ್ಸ್ ಮೀಡಿಯಾ ಸಂಸ್ಥೆಗೆ ಸುಮಾರು 305 ಕೋಟಿ ರುಗಳನ್ನು ವಿದೇಶದಿಂದ ಹೂಡಿಕೆ ರೂಪದಲ್ಲಿ ಪಡೆಯಲು ಅನುಮತಿ ದೊರಕಿಸಿಕೊಟ್ಟಿದ್ದರು.
2007ರಲ್ಲಿ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ (Foreign Investment Promotion Board)ಯಿಂದ 4.62 ಕೋಟಿ ರುಪಾಯಿ ಹೂಡಿಕೆ ಮಾಡಲು ಅನುಮೋದನೆ ಸಿಕ್ಕಿತ್ತು. ಆದರೆ ಮಾರಿಷಸ್ ನ ಎರಡು ಕಂಪನಿಗಳಿಂದ ಪೀಟರ್ ಮತ್ತು ಇಂದ್ರಾಣಿ ಒಡೆತನದ ಕಂಪನಿ ಐಎನ್ಎಕ್ಸ್ ಮೀಡಿಯಾ ಪಡೆದದ್ದು 305 ಕೋಟಿ ರುಪಾಯಿಗಳು. ಇದರ ವಿರುದ್ಧ ಕಂದಾಯ ಇಲಾಖೆ ವಿಚಾರಣೆಗೆ ಆದೇಶಿಸಿತ್ತು. ಈ ವಿಚಾರಣೆಯನ್ನು ತಪ್ಪಿಸಲು ಕಾರ್ತಿ ಅವರು ತಮ್ಮ ಕಂಪನಿಯ ಮೂಲಕ ಐಎನ್ಎಕ್ಸ್ ಮೀಡಿಯಾ ಕಂಪನಿಯಿಂದ 10 ಲಕ್ಷ ರುಪಾಯಿ ಕಮಿಷನ್ ಪಡೆದಿದ್ದರು.
ಮಾಧ್ಯಮ ದೊರೆ ಪೀಟರ್ ಮುಖರ್ಜಿಯಾ
2014ರಲ್ಲಿ ಮೀಡಿಯಾ ಕುಳ ಪೀಟರ್ ಮುಖರ್ಜಿಯಾ ಅವರು ತನ್ನ ಹೆಂಡತಿ ಇಂದ್ರಾಣಿಯನ್ನು ಮುಂದಿಟ್ಟುಕೊಂಡು ಐಎನ್ಎಕ್ಸ್ ಬ್ಯಾನರ್ ಅಡಿಯಲ್ಲಿ ಹಲವಾರು ಕಂಪನಿಗಳನ್ನು ಆರಂಭಿಸಿದ್ದರು. ಐಎನ್ಎಕ್ಸ್ ನ್ಯೂಸ್ ಪ್ರೈ.ಲಿ., ಐಎನ್ಎಕ್ಸ್ ಮೀಡಿಯಾ ಪ್ರೈ.ಲಿ., ಐಪಿಎಂ ಇನ್ಕಾನ್ ಪ್ರೈ.ಲಿ., ಐಎನ್ಎಕ್ಸ್ ಎಕ್ಸಿಕ್ಯೂಟಿವ್ ಸರ್ಚ್ ಪ್ರೈ.ಲಿ. ಮುಂತಾದ ಕಂಪನಿಗಳನ್ನು ಆರಂಭಿಸಿದ್ದರು.
2012ರ ಏಪ್ರಿಲ್ 24ರಂದು ತನ್ನ ಮಗಳು ಶೀನಾ ಬೋರಾ ಅವರನ್ನು ಷಡ್ಯಂತ್ರ ರಚಿಸಿ ಹತ್ಯೆಗೈಯುವ ಮುನ್ನ ಪೀಟರ್ ಮತ್ತು ಇಂದ್ರಾಣಿ ಅವರು ಐಎನ್ಎಕ್ಸ್ ಗ್ರೂಪ್ ಆಫ್ ಕಂಪನಿಗಳಲ್ಲಿ ಹೂಡಿಕೆದಾರರಾಗಿದ್ದರು. ಶೀನಾ ಬೋರಾ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಜೈಲು ಸೇರಿದ್ದಾರೆ.