JNUದಲ್ಲಿ ನಡೆಯುತ್ತಿರುವ ಸಂಶೋಧನೆ, ಆವಿಷ್ಕಾರಗಳೇನು?
ಜೆಎನ್ಯು- ಇಲ್ಲಿ ಏನಿದೆ? ಇಲ್ಲಿ ಯಾವಾಗಲೂ ಪ್ರತಿಭಟನೆಗಳು ಏಕೆ ನಡೆಯುತ್ತವೆ? ಇಲ್ಲಿ ಓದುತ್ತಿರುವವರೆಲ್ಲ ದೇಶದ್ರೋಹಿಗಳೇ? ಸಂಶೋಧನೆ ನೆಪದಲ್ಲಿ ಇಲ್ಲಿ ಕಾಲಹರಣ ಮಾಡಲಾಗುತ್ತಿದೆಯೇ? ಜೆಎನ್ಯುದಲ್ಲಿ ತೆರಿಗೆದಾರರ ಹಣ ದುಂದು ವ್ಯರ್ಥವಾಗುತ್ತಿದೆಯೇ? ಜೆಎನ್ಯು ಎನ್ನುವುದು ಪ್ರಬುದ್ಧ ಪ್ರಜೆಗಳನ್ನು ತಯಾರಿಸುವ ಆಲಯವಾಗದೆ ದೇಶಕ್ಕೆ ಮಾರಕವಾಗುವ ಜನರ ತಾಣವಾಗುತ್ತಿದೆಯೇ?
ಜೆಎನ್ಯುದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು, ಅಲ್ಲಿನ ಸಂಘರ್ಷಗಳ ಕುರಿತು ವಿಶ್ವವಿದ್ಯಾಲಯದ ಕುರಿತು ಹೊರಜಗತ್ತಿನಲ್ಲಿ ಬೇರೆಯದೇ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಜೆಎನ್ಯು ಕೊಡುಗೆಯ ಕುರಿತಾದ ಪ್ರಶ್ನೆಗಳೂ ಉದ್ಭವಿಸುತ್ತಿವೆ. ಆದರೆ ಜೆಎನ್ಯುನಲ್ಲಿ ಏನು ನಡೆಯುತ್ತದೆ? ಇಷ್ಟು ದಿನ ಜೆಎನ್ಯು ಸಮಾಜಕ್ಕೆ ಏನು ನೀಡಿದೆ? ಇವುಗಳ ಒಳಹೊಕ್ಕು ನೋಡಿದರೆ ಜೆಎನ್ಯು ಎಂಬ ದಿಗ್ಗಜ ಶಿಕ್ಷಣ ಸಂಸ್ಥೆಯ ಕೊಡುಗೆ ತಿಳಿಯುತ್ತದೆ.
ಜೆಎನ್ಯು ಸೃಷ್ಟಿಸಿದ ಆರ್ಥಿಕ ತಜ್ಞರು, ಶಿಕ್ಷಣ ತಜ್ಞರು, ರಾಜಕಾರಣಿಗಳ ದೊಡ್ಡ ಪಟ್ಟಿಯೇ ಇದೆ. ವೈದ್ಯಕೀಯ, ತಂತ್ರಜ್ಞಾನ, ವಿಜ್ಞಾನ ಕ್ಷೇತ್ರಗಳಿಗೂ ಜೆಎನ್ಯು ಕೊಡುಗೆ ಅಪಾರ. ಜೆಎನ್ಯುದ ಪರಿಸರ ವಿಜ್ಞಾನ ವಿಭಾಗದ ಪ್ರೊಫೆಸರ್ ದಿನೇಶ್ ಮೋಹನ್ 2019ರಲ್ಲಿ ಅತಿ ಹೆಚ್ಚು ಜನರು ಪರಾಮರ್ಶೆಗೆ ಬಳಸಿಕೊಳ್ಳಲಾದ ಸಂಶೋಧಕರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಹೋರಾಟದ ಬಗ್ಗೆ ಸರ್ಕಾರಗಳಿಗೆ ಏಕೆ ಭಯ?
ನ್ಯಾಷನಲ್ ಇನ್ಸ್ಟಿಟ್ಯೂಷನ್ ರಾಕಿಂಗ್ ಫ್ರೇಮ್ವರ್ಕ್ನಲ್ಲಿ ಜೆಎನ್ಯು ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಐಐಟಿಗಳೊಂದಿಗೆ ಸ್ಪರ್ಧಿಸಿ ದೇಶದ ಹತ್ತು ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದೆನಿಸಿಕೊಂಡಿದೆ. ವಿಶ್ವವಿದ್ಯಾಲಯಗಳ Rankingಅನ್ನು ಆ ಸಂಸ್ಥೆಯಲ್ಲಿ ನಡೆಯುವ ವಿಜ್ಞಾನ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಸಂಶೋಧನೆಗಳ ಆಧಾರದಲ್ಲಿ ನೀಡಲಾಗುತ್ತದೆ. ಜೆಎನ್ಯುದಲ್ಲಿ ಶೈಕ್ಷಣಿಕ, ಸಾಹಿತ್ಯ-ಭಾಷೆ, ಆರ್ಥಿಕ ವಿಚಾರಗಳ ಜತೆಗೆ ಮಹತ್ವದ ಸಂಶೋಧನೆಗಳು, ಆವಿಷ್ಕಾರಗಳು ನಡೆಯುತ್ತಿವೆ. ಈ ಆವಿಷ್ಕಾರಗಳಲ್ಲಿ ಕೆಲವೊಂದರ ಪರಿಚಯ ಇಲ್ಲಿದೆ.
ಸುಧಾರಿತ ಇಗ್ನಿಷನ್ ಪ್ಲಗ್
ವಾಹನ, ಯಂತ್ರಗಳಲ್ಲಿ ಬಳಸಲಾಗುವ ಇಂಟರ್ನಲ್ ಕಂಬಷನ್ ಎಂಜಿನ್ನ ಸುಧಾರಿತ ಇಗ್ನಿಷನ್ ಸ್ಪಾರ್ಗ್ ಪ್ಲಗ್ಅನ್ನು ಜೆಎನ್ಯುದ ತಂತ್ರಜ್ಞಾನ ವಿಭಾಗ ಆವಿಷ್ಕರಿಸಿದೆ. ಅಡ್ವಾನ್ಸಡ್ ಇನ್ಸ್ಟ್ರುಮೆಂಟೇಷನ್ ರೀಸರ್ಚ್ ಫ್ಯಾಕಲ್ಟಿಯ (ಎಐಆರ್ಎಫ್) ಪ್ರೊ. ಶತೇಂದ್ರ ಶರ್ಮಾ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.
JNU ಶುಲ್ಕ ಹೆಚ್ಚಳ: ಪ್ರತಿಭಟನೆ ಏಕೆ? ಕೇಂದ್ರ ವಿವಿಗಳ ಶುಲ್ಕ ಎಷ್ಟು?
ಸುಧಾರಿತ ಪಾನೀಯ ಪ್ಯಾಕೆಟ್
ಕೋಕ್, ಪೆಪ್ಸಿ, ಹಣ್ಣಿನ ರಸ, ಹಾಲು, ವೈನ್ ಹಾಗೂ ವಿವಿಧ ಬಗೆಯ ಪಾನೀಯ ಮತ್ತು ದ್ರವಗಳನ್ನು ಪ್ಯಾಕ್ ಮಾಡುವ ಸುಧಾರಿತ ಕ್ಯಾನ್ಅನ್ನು ವಿಶ್ವವಿದ್ಯಾಲಯದ ತಂತ್ರಜ್ಞಾನ ವಿಭಾಗ ಸಿದ್ಧಪಡಿಸಿದೆ. ವಾಹನಗಳು, ಯಂತ್ರಗಳಲ್ಲಿ ಬಳಸುವ ಬ್ಯಾಟರಿಗಳು ಹೆಚ್ಚು ದೀರ್ಘಾವಧಿ ಬಾಳಿಕೆ ಬರುವಂತೆ ಸುಧಾರಣೆ ಮಾಡುವ ತಂತ್ರಜ್ಞಾನವನ್ನು ತಯಾರಿಸಲಾಗಿದೆ.
ರೇಬಿಸ್ಗೆ ಸುಧಾರಿತ ಲಸಿಕೆ
ರೇಬಿಸ್ ವೈರಸ್ನ ಪ್ರತಿಜನಕ ರಕ್ಷಕಗಳ ಆಧಾರದಲ್ಲಿ ವಿಶ್ವವಿದ್ಯಾಲಯ ಡಿಎನ್ಎ ಲಸಿಕೆಯನ್ನು ಜೆಎನ್ಯುದ ಜೈವಿಕ ತಂತ್ರಜ್ಞಾನ ವಿಭಾಗದ ಪ್ರೊ. ರಾಕೇಶ್ ಭಟ್ನಾಗರ್ ನೇತೃತ್ವದಲ್ಲಿ ತಯಾರಿಸಲಾಗಿದೆ. ಪ್ರತಿಜನಕ ರಕ್ಷಕವನ್ನು ಡಿಎನ್ಎ ವ್ಯಾಕ್ಸಿನ್ ಕೋಶದಲ್ಲಿ ಇರಿಸಲಾಗಿದೆ. ಇದನ್ನು ಅಗತ್ಯವಿರುವ ಸ್ಥಳಕ್ಕೆ ತೆಗೆದುಕೊಂಡು ಹೋಗಿ ನೇರವಾಗಿ ಬಳಸಬಹುದಾಗಿದೆ. ಜತೆಗೆ ಇದು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಈ ಲಸಿಕೆಯನ್ನು ಇಲಿ ಮತ್ತು ನಾಯಿಗಳ ಮೇಲೆ ಪ್ರಯೋಗಿಸಲಾಗಿದೆ. ಅತ್ಯಧಿಕ ಮಟ್ಟದಲ್ಲಿರುವ ರೇಬಿಸ್ ವೈರಾಣುವನ್ನು ಇದು ಸಂಪೂರ್ಣವಾಗಿ ನಿಯಂತ್ರಿಸಬಲ್ಲದು.
ಸದಾ ಸುದ್ದಿಯಲ್ಲೇ ಇರುವ JNU ಹಿಂದಿದೆ ವೈಭವದ ಇತಿಹಾಸ
ದೀರ್ಘ ಬಾಳಿಕೆ ಬರುವ ಬಲ್ಬ್ಗಳು
ಸುದೀರ್ಘ ಕಾಲ ಬಾಳಿಕೆ ಬರುವ ಪ್ರಕಾಶಮಾನ ಬಲ್ಬ್ ಹಾಗೂ ಪ್ರಜ್ವಲಿಸುವ ಟ್ಯೂಬ್ಗಳ ತಂತ್ರಜ್ಞಾನವನ್ನು ಜೆಎನ್ಯು ಅಭಿವೃದ್ಧಿಪಡಿಸಿದೆ. ಈ ಆವಿಷ್ಕಾರವು ಮುಂದಿನ 10-20 ವರ್ಷಗಳಲ್ಲಿ ವಾಣಿಜ್ಯ ಬಳಕೆಗೆ ವ್ಯಾಪಕವಾಗಿ ನೆರವಾಗಲಿದೆ. ಈಗಿರುವ ಬೆಳಕಿನ ತಂತ್ರಜ್ಞಾನಗಳನ್ನು ಸುಧಾರಿಸಿ ಅವುಗಳು ಕಡಿಮೆ ವಿದ್ಯುತ್ ಬಳಸಿ ಹೆಚ್ಚು ಬೆಳಕು ಬೀರುವಂತೆ ಮತ್ತು ಸುದೀರ್ಘ ಕಾಲ ಬಾಳಿಕೆ ಬರುವಂತೆ ವಿನ್ಯಾಸಗೊಳಿಸಲಾಗಿದೆ.
ಅರಿಸಿನದಿಂದ ರೋಗಗಳಿಗೆ ಚಿಕಿತ್ಸೆ
ಅರಿಸಿನ ತುಣುಕಿನಲ್ಲಿನ ಹಳದಿ ಅಂಶವಾದ ಕರ್ಕ್ಯೂಮಿನ್ ಅನೇಕ ಚಿಕಿತ್ಸೆಗಳಿಗೆ ಬಹಳ ಪರಿಣಾಮಕಾರಿ ಔಷಧವಾಗಬಲ್ಲದು. ಆದರೆ ಅದರ ಜೈವಿಕ ಲಭ್ಯತೆಯ ಕೊರತೆಯಿಂದ ಅದನ್ನು ಔಷಧವನ್ನಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶುದ್ಧ ಕರ್ಕ್ಯೂಮಿನ್ನ ನ್ಯಾನೋ ರೂಪವನ್ನು ಸಿದ್ಧಪಡಿಸಲು ಜೆಎನ್ಯುದ ಜೈವಿಕ ತಂತ್ರಜ್ಞಾನ ವಿಭಾಗ ತಂತ್ರಜ್ಞಾನವೊಂದನ್ನು ರೂಪಿಸಿದೆ. ಇದನ್ನು ಮಲೇರಿಯಾ ಚಿಕಿತ್ಸೆಗೆ ಮುಖ್ಯವಾಗಿ ಬಳಸಿಕೊಳ್ಳಬಹುದಾಗಿದೆ.
ಜೀವ ವಿಜ್ಞಾನಗಳ ವಿಭಾಗವು ಬ್ರಾಸ್ಸಿಕಾ ತಳಿಗಳ ಮರುಸೃಷ್ಟಿಯ ಸಾಮರ್ಥ್ಯವನ್ನು ವೃದ್ಧಿಸುವ ಮಾದರಿಗೆ ಸಂಬಂಧಿಸಿದಂತೆ ಸಂಶೋಧನೆಗಳನ್ನು ನಡೆಸಿದೆ. ಸ್ತನ ಕ್ಯಾನ್ಸರ್ ಕೋಶಗಳಿಗೆ ಚಿಕಿತ್ಸೆ ನೀಡಲು ಯೋಗ್ಯವಾದ ಹೊಸ ಕ್ಯಾನರ್ ನಿಗ್ರಹ ಚಿಕಿತ್ಸೆಯನ್ನು ಜೆಎನ್ಯುದ ಜೀವ ವಿಜ್ಞಾನ ವಿಭಾಗದ ಕಂಡುಹಿಡಿದಿದೆ.
ಬರಗಾಲದಲ್ಲಿ ಬೆಳೆಯುವ ಅಕ್ಕಿ
ಇಂಡಿಕಾ ರೈಸ್ ಐಆರ್64 ಅಕ್ಕಿಯಲ್ಲಿನ ಹೈಬ್ರಿಡ್ ಮಾದರಿಯ ಹಿಸ್ಟಡೈನ್ ಕಿನೇಸ್ ಜೀನ್ಅನ್ನು ಪ್ರತ್ಯೇಕಿಸುವ ತಂತ್ರಜ್ಞಾನ ಆವಿಷ್ಕರಿಸಲಾಗಿದೆ. ಅಧಿಕ ಉಷ್ಣಾಂಶದಲ್ಲಿಯೂ ಬೆಳೆದು ಅತ್ಯಧಿಕ ಫಸಲು ನೀಡಬಲ್ಲ ಜಿಎಂ ರಹಿತ ಸುಧಾರಿತ ಅಕ್ಕಿಯನ್ನು ಆವಿಷ್ಕರಿಸಲಾಗಿದೆ. ಇದು ಅಲ್ಪ ಬರಗಾಲ ಮತ್ತು ಕಡಿಮೆ ಗುಣಮಟ್ಟದ ನೀರಿನಲ್ಲಿಯೂ ಬೆಳೆಯುವ ಸಾಮರ್ಥ್ಯ ಹೊಂದಿದೆ.