ಕನ್ನಡದ ಅಂತರ್ಜಾಲ ಪತ್ರಿಕೆ ಕಾಡುನಾಡು ಸುತ್ತೋಣ ಬನ್ನಿ!
ಕನ್ನಡ ಹಾಗೂ ಕಾನನ ಉಳಿಸಲು, ಭಾಷೆ ಮತ್ತು ಪರಿಸರ ಅಭಿಮಾನವನ್ನು ಬೆಳಸಲು ಕಾಡು ನಾಡು ಎಂಬ ತಂಡ ಪುಟ್ಟ ಹೆಜ್ಜೆ ಇಡುತ್ತಿದೆ. ಮಕ್ಕಳನ್ನು ಪುಸ್ತಕದ ಹುಳು ಮಾಡದೆ ಪರಿಸರದತ್ತ ಕರೆದೊಯ್ಯಲು ಒಂದು ಪ್ರಯತ್ನ ಮಾಡುತ್ತಿದೆ ಈ ತಂಡ. ಕನ್ನಡದ ತ್ರೈಮಾಸಿಕ ಅಂತರ್ಜಾಲ ಪತ್ರಿಕೆ ಕಾಡು ನಾಡು ಹಾಗೂ ತಂಡದ ಬಗ್ಗೆ ಇನ್ನಷ್ಟು ಮುಂದೆ ಓದಿ...
ನಾವೆಲ್ಲರೂ ಮತ್ತೆ ಅಲ್ಲಿಗೇ ಹೋಗಲು ಹಂಬಲಿಸುತ್ತೇವೆ. ಹಪಹಪಿಸುತ್ತೇವೆ. ಏಕೆಂದರೆ ನಮ್ಮ ಹಿರಿಯರೆಲ್ಲರ ಹಿರಿಯರ ಆವಾಸ ಅದೇ ಆಗಿತ್ತು. ಅಲ್ಲೊಂದು ಊರು, ಊರ ಪಕ್ಕದಲ್ಲೊಂದು ಕಾಡು, ಕಾಡಿಗೆ ಬೆಸೆದ ಬದುಕು, ನಮ್ಮ ಪೂಜೆ- ಪುನಸ್ಕಾರ ಎಲ್ಲವೂ ಅದೇ ಆಗಿತ್ತಲ್ಲವಾ?
ಈ ವಿಶ್ವದಲ್ಲಿ ಬದುಕಲು ಇಚ್ಛೆ ಇದ್ದರೆ ಈ ಟಿಪ್ಸ್ ಪಾಲಿಸಿ
ಆದರೆ, ನಾವು ಅದಕ್ಕೆ ಬೆನ್ನು ತೋರಿದೆವು. ಅಂದರೆ ತಲೆಮಾರಿನಿಂದ ತಲೆಮಾರಿಗೆ ಕಾಡುಗಳು ಸೈಟು, ಕೃಷಿ ಭೂಮಿ, ರೆಸಾರ್ಟ್ ಗಳ ಸಿಮೆಂಟ್, ರಾಸಾಯನಿಕಗಳಿಂದ ಉಸಿರುಗಟ್ಟಿದವು. ಆದರೆ ಅದನ್ನು ಬಳಸಿಕೊಂಡವರ ತಿಜೋರಿಗಳಲ್ಲಿ ಹಣ ಕುಣಿದಾಡಿತು. ಆದರೆ ಕಾಡಿನಲ್ಲಿರಬೇಕಿದ್ದ ಪ್ರಾಣಿಗಳು ರಸ್ತೆಗೆ ಬಂದವು. ಮನೆಯೆದುರು ನಿಂತವು. ಕೊಟ್ಟಿಗೆಯ ಜಾನುವಾರು ಅವುಗಳು ಆಹಾರವಾದವು.
ಜಲಕೃಷಿಕ ಕರ್ನಲ್ ಪ್ರಕಾಶ್ ಜತೆ ಮಾತುಕತೆ-1
ಮತ್ತೆ ಕಾಡಿನ ಬಳಿಗೆ ಓಡಲು ಈಗಿನ ತಲೆಮಾರು ಹಂಬಲಿಸಿದರೂ ಸಂಬಂಧದ ತಂತು ಕಳೆದುಕೊಂಡಿದ್ದಕ್ಕೋ ಏನೋ ಪೂರ್ಣ ಪ್ರಮಾಣದಲ್ಲಿ ಸಂಬಂಧ ಬೆಸೆಯಲು ಸಾಧ್ಯವಾಗುತ್ತಿಲ್ಲ. ಆ ಪ್ರಯತ್ನಕ್ಕೆ ಸಹಾಯ ಮಾಡುವುದಕ್ಕೆ ಇವರಿದ್ದಾರೆ. ಕಾಡುನಾಡು ತಂಡ. ಕಾಡು ಹಾಗೂ ನಾಡು, ಜೀವ ವೈವಿಧ್ಯತೆಯ ಪರಿಚಯ, ಪರಿಸರ ಜಾಗೃತಿ, ಕುತೂಹಲ, ಚೆಂದದ ಚಿತ್ರಗಳ ಸಂಪುಟ ಎಲ್ಲವನ್ನು ಉಚಿತವಾಗಿ ನಿಮ್ಮ ಮುಂದಿಡುತ್ತಿದೆ ಈ ತಂಡ.
ಕಲ್ಪನೆ ಹೇಗೆ ಹುಟ್ಟಿತು? ಹೇಗೆ? ಏಕೆ?
ಕಾಡುನಾಡು ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾದ ವಸುಧೀಶ ಹೊಸಬೆಟ್ಟು ಅವರು ಮಾತನಾಡಿ, ನನ್ನ ಸ್ನೇಹಿತರಾದ ಸುಧೀಂದ್ರ ರಾವ್ ಅವರು ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರಾಗಿದ್ದಾರೆ. ಐದು ವರ್ಷಗಳಿಂದ ಆ ಕ್ಷೇತ್ರದಲ್ಲಿದ್ದಾರೆ.
ನಾನು ಟೆಕ್ನಿಕಲ್ ಹಿನ್ನಲೆಯಿಂದ ಬಂದವನು. ವನ್ಯಜೀವಿಗಳ ಬಗ್ಗೆ ಒಂದು ವೆಬ್ ಸೈಟ್ ಮಾಡಬೇಕು, ಸಂಪೂರ್ಣ ಕನ್ನಡದಲ್ಲಿರಬೇಕು ಎಂದರು. ಸಮಾನ ಆಸಕ್ತಿ ಇದ್ದಿದ್ದರಿಂದ ಅಂತರ್ಜಾಲ ಪತ್ರಿಕೆ ಹೊರತರಬೇಕು ಎಂಬ ಹಂಬಲ ಕೈಗೂಡಿತು. ಚಿತ್ರದಲ್ಲಿ : ವಸುಧೀಶ ಹೊಸಬೆಟ್ಟು.
ನಿಮ್ಮ ತಂಡದಲ್ಲಿ ಯಾರೆಲ್ಲ ಇದ್ದೀರಿ?
ಸುಧೀಂದ್ರ ರಾವ್, ದೀಪಾ ರಾವ್ ಹಾಗೂ ನಾನು ಈ ಅಂತರ್ಜಾಲ ಪತ್ರಿಕೆ, ವೆಬ್ ಸೈಟ್ ನಿರ್ವಹಣೆ, ಕಾಡುನಾಡು ಸಂಸ್ಥೆಯನ್ನು ಮುನ್ನಡೆಸುತ್ತಿದ್ದೇವೆ. ಇದಕ್ಕೆ ಹಲವಾರು ಸ್ನೇಹಿತರು, ಪರಿಸರ ಪ್ರೇಮಿಗಳ ನೆರವು ಇದೆ.
ನಿಮ್ಮ ಊರು, ಹಿನ್ನಲೆ? : ನಾನು ಮತ್ತು ಸುಧೀಂದ್ರರಾವ್ ಚಿಕ್ಕಂದಿನಿಂದ ಗೆಳೆಯರು. ನಮ್ಮದು ಸುರತ್ಕಲ್ ಕೃಷ್ಣಾಪುರ. ಸುಧೀಂದ್ರ ಅವರದ್ದು ಪಣಂಬೂರು. ಇಬ್ಬರು ಎನ್ಎಂ ಪಿಟಿ ಶಾಲೆಯಲ್ಲಿ ಒಂದನೇ ತರಗತಿಯಿಂದ 10ನೇ ತರಗತಿ ತನಕ ಒಟ್ಟಿಗೆ ಓದಿದವರು. ಗೆಳೆತನ ಹೀಗೆ ಬೆಳೆದುಕೊಂಡು ಬಂದಿದೆ. ಚಿತ್ರದಲ್ಲಿ : ಕಾಡು ನಾಡು ಪತ್ರಿಕೆಯ ಮುಖಪುಟ
ಆನ್ ಲೈನ್ ನಲ್ಲಿ ಏಕೆ?
ಕನ್ನಡದಲ್ಲಿ ಈ ವಿಷಯದ ಬಗ್ಗೆ ಈ ರೀತಿಯಲ್ಲಿ ಯಾವುದೇ ಅಂತರ್ಜಾಲ ಪತ್ರಿಕೆ, ವೆಬ್ ಸೈಟ್ ಗಳಿರಲಿಲ್ಲ. ಸದ್ಯಕ್ಕೆ ಆನ್ ಲೈನ್ ಮೂಲಕ ನಿಯತಕಾಲಿಕೆ ಹಾಗೂ ವೆಬ್ ಸೈಟ್ ಮಾಡುವುದು ನಮ್ಮ ಮೊದಲ ಹಂತದ ಯೋಜನೆಯಾಗಿದೆ. ಇಂಗ್ಲೀಷ್ ನಲ್ಲಿ ವೈಲ್ಡ್ ಸರ್ಜನ್ ಮಾದರಿ ಇ ಮ್ಯಾಗಜೀನ್ ಹೊರತರುವುದು ನಮ್ಮ ಗುರಿಯಾಗಿದೆ.
ಮೂರು ತಿಂಗಳ ಸಂಚಿಕೆ ಏಕೆ? : ಮೇ ನಲ್ಲಿ ಶುರು ಮಾಡಿದ್ದು, ಇಲ್ಲಿ ತನಕ ಮೂರು ಸಂಚಿಕೆ ಹೊರ ತಂದಿದ್ದೇವೆ. ವೆಬ್ ಸೈಟ್ ನಲ್ಲಿ ಹಾಗೂ ಫೇಸ್ ಬುಕ್ ನಲ್ಲಿ ಡೌನ್ ಲೋಡ್ ಲಿಂಕ್ ಕೊಟ್ಟಿದ್ದೇವೆ. ಪಿಡಿಎಫ್ ಅವೃತ್ತಿ ಡೌನ್ ಲೋಡ್ ಭಾರತ, ಆಸ್ಟ್ರ್ರೇಲಿಯಾ, ಯುಎಸ್ ಸೇರಿ ವಿವಿಧ ದೇಶಗಳಿಂದ ಪ್ರತಿಕ್ರಿಯೆ ಬಂದಿದೆ.
ಮಾಹಿತಿ ಕಲೆ ಹಾಕುವುದು, ವಿನ್ಯಾಸ?
ಮಾಹಿತಿ ಕಲೆ ಹಾಕುವುದು, ವಿನ್ಯಾಸ ನಾವೇ ಮಾಡುತ್ತಿದ್ದೇವೆ. ನಾನು ಹಾಗೂ ದೀಪರಾವ್ ಅವರು ಲೇಖನಗಳನ್ನು ಬರೆಯುತ್ತೇವೆ.
ನಾವು ವಾಟ್ಸಾಪ್ ಗ್ರೂಪ್ ಮಾಡಿಕೊಂಡಿದ್ದೇವೆ. ಫೋಟೋಗ್ರಾಫರ್ಸ್ ಸಂದರ್ಶನ ಮಾಡಿ ಮುಂಚಿತವಾಗಿ ಎಲ್ಲಾ ಸಿದ್ಧಪಡಿಸಿಕೊಳ್ಳುತ್ತೇವೆ. ಸಮಾನ ಆಸಕ್ತರು ನೆರವಾಗುತ್ತಿದ್ದಾರೆ. ಆಫ್ ಲೈನ್ ನಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಪರಿಸರ ಕಾಳಜಿ ಇರುವ ಅನೇಕ ಮಂದಿ ನಮಗೆ ನೆರವಾಗುತ್ತಿದ್ದಾರೆ. ವಾರಾಂತ್ಯಗಳಲ್ಲಿ ಪರಿಸರ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಹೋಗುತ್ತಿರುತ್ತೇವೆ. ಚಿತ್ರದಲ್ಲಿ : ದೀಪಾರಾವ್.
ಸಾರ್ವಜನಿಕರು ಹೇಗೆ ಕೊಡುಗೆ ನೀಡಬಹುದು?
ನಮ್ಮ ವೆಬ್ ಸೈಟ್ ನಲ್ಲಿರುವ ಇಮೇಲ್ ಮೂಲಕ ಅಥವಾ ನಮ್ಮನ್ನು ಸಂಪರ್ಕಿಸಿ ಲೇಖನಗಳನ್ನು ನೀಡಬಹುದು. ಇಂಗ್ಲೀಷ್ ನಲ್ಲಿದ್ದರೆ ಅದನ್ನು ಕನ್ನಡಕ್ಕೆ ಭಾಷಾಂತರಿಸಿ ಬಳಸಿಕೊಳ್ಳುತ್ತೇವೆ. ನಮ್ಮ ಮನೆ ಹತ್ತಿರ ಎನ್ ಸಿ ಬಿಎಸ್ ಇದೆ ಅಲ್ಲಿ ಬರುವ ಅನೇಕ ಉತ್ಸಾಹಿಗಳಿಂದ ಆರ್ಟಿಕಲ್ ಪಡೆಯುತ್ತೇವೆ. ಚಿತ್ರದಲ್ಲಿ : ಸುಧೀಂದ್ರರಾವ್
ಸರ್ಕಾರ, ಇಲಾಖೆ ನೆರವು ಕೇಳಿದ್ದೀರಾ?
ಪರಿಸರ ಸಂರಕ್ಷಣೆ ಕುರಿತ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಸಚಿವರೊಬ್ಬರಿಗೆ ತಿಳಿಸಿದ್ದೆವು. ಅರಣ್ಯ ಅಧಿಕಾರಿಯೊಬ್ಬರಿಗೂ ಹೇಳಿದ್ದೆವು. ಆದರೆ, ಆಗಿನ್ನು ಮೊದಲ ಸಂಚಿಕೆ ಹೊರಬಂದಿದ್ದು, ಹೀಗಾಗಿ ನಾವು ಹೆಚ್ಚು ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.
ಪ್ರತಿಕ್ರಿಯೆ ಹೇಗೆ ಸಿಕ್ಕಿದೆ? : ಒಮ್ಮೆ ನಾನು ಮೆಟ್ರೋದಲ್ಲಿ ಹೋಗುವಾಗ ಯಾರೋ ಒಬ್ಬರು ಬಂದು ನಿಮ್ಮ ಇ ಬುಕ್ ಚೆನ್ನಾಗಿದೆ ಎಂದರು. ನನಗೆ ಅಚ್ಚರಿಯಾಯಿತು. ಒಂದಷ್ಟು ಸಲಹೆ ನೀಡಿದರು. ಹೀಗೆ ಸಂಚಿಕೆಯ ನಂತರವೂ ಹೊಸ ಓದುಗರು ಸಿಗುತ್ತಿದ್ದಾರೆ.
ಮುಂದಿನ ಯೋಜನೆಗಳೇನು?
ಮುಂದಿನ ಯೋಜನೆ ಎಂದರೆ ಶಾಲೆಗಳಿಗೆ ಹೋಗಿ ಪರಿಸರ, ಹಕ್ಕಿಗಳು, ಚಿಟ್ಟೆಗಳ ಬಗ್ಗೆ ಜಾಗೃತಿ ಮೂಡಿಸುವ ಯೋಜನೆ ಇದೆ. ಇ ಮ್ಯಾಗಜೀನ್ ಗಳನ್ನು ಮುದ್ರಿಸಿ ಲೈಬ್ರರಿಗಳಿಗೆ ತಲುಪಿಸುವ ಯೋಜನೆಯೂ ಇದೆ.
ನಮ್ಮದೇ ಹಣ ಹಾಗೂ ಸಮಯ ಹಾಕಿ ಎಲ್ಲವನ್ನು ಮಾಡುತ್ತಿದ್ದೇವೆ. ಸದ್ಯಕ್ಕೆ ಎಲ್ಲರೂ ಚಿತ್ರಗಳನ್ನು ಉಚಿತವಾಗಿ ನೀಡುತ್ತಿದ್ದೇವೆ. ಪ್ರಯೋಜಕರು ಸಿಕ್ಕರೆ ಅವರ ನಿಯಮಗಳಿಗೆ ತಕ್ಕಂತೆ ನಡೆದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಯೋಚಿಸಲಾಗುವುದು. ಆಪ್, ಇ ಬುಕ್ ವರ್ಷನ್ ತರುವ ಆಲೋಚನೆ ಇದೆ. ಮ್ಯಾಕ್ ರೀಡರ್ಸ್ ಗಳಿಗೆ ಇ ಮೊಬಿ ವರ್ಷನ್ ಮಾಡುತ್ತೇವೆ.