ಹುಡುಕಾಟದ ತುಡಿತವೇ ಜೀವನ : ಶಿವಮಣಿ ಜತೆ ಸಂದರ್ಶನ
ಇರಾನ್ ದೇಶದ ಚಿತ್ರಕರ್ಮಿ ಜಾಫರ್ ಪನಾಹಿ, ಹೊಸ ಅಲೆ ಚಿತ್ರಗಳ ಹರಿಕಾರ ಎಂದೇ ಗುರುತಿಸಲ್ಪಡುತ್ತಾರೆ. ಪನಾಹಿ ಬಗ್ಗೆ ಕನ್ನಡದಲ್ಲಿ ನಾಟಕವೊಂದು ಸಿದ್ಧವಾಗುತ್ತಿದೆ. ಈ ನಾಟಕಕ್ಕಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಿರ್ದೇಶಕರಿಬ್ಬರು ಕೈಜೋಡಿಸಿರುವುದು ವಿಶೇಷ.
'ಮೈತ್ರಿ' ಚಿತ್ರ ಖ್ಯಾತಿ ಗಿರಿರಾಜ್ ಬಿ.ಎಂ ಅವರು ಜಾಫರ್ ಪನಾಹಿ ಹಾಗೂ ಇರಾನ್ ಸ್ಥಿತಿ ಗತಿಗಳ ಬಗ್ಗೆ ಸ್ಥೂಲ ಚಿತ್ರಣ ನೀಡಬಲ್ಲ ನಾಟಕವನ್ನು ರಂಗಕ್ಕೆ ತರುತ್ತಿದ್ದಾರೆ. ಈ ನಾಟಕದ ಪ್ರಮುಖ ಪಾತ್ರಧಾರಿಯಾಗಿ 'ಗೋಲಿಬಾರ್' ಖ್ಯಾತಿಯ ನಿರ್ದೇಶಕ ಶಿವಮಣಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ನಾಟಕಕ್ಕೆ 'ಸುಗಂಧದ ಸೀಮೆಯಾಚೆ' ಎಂಬ ಹೆಸರಿಡಲಾಗಿದೆ. ಸದ್ಯಕ್ಕೆ ನಾಟಕದ ತಯಾರಿ ಜೋರಾಗಿ ನಡೆದಿದ್ದು, ಫೆಬ್ರವರಿ 10ರಂದು ಬೆಂಗಳೂರಿನ ಹನುಮಂತನಗರದ ಕೆ.ಎಚ್ ಕಲಾ ಸೌಧದಲ್ಲಿ ಹಾಗೂ ಫೆ. 18ರಂದು ಬಸವೇಶ್ವರ ನಗರದ ಕೆಇಎ ರಂಗಮಂದಿರದಲ್ಲಿ ಸಂಜೆ 7ಕ್ಕೆ ಪ್ರದರ್ಶನಗೊಳ್ಳಲಿದೆ.
ಟ್ಯಾಕ್ಸಿ, ಕ್ರಿಮನ್ಸ್ ಗೋಲ್ಡ್, ದಿ ಸರ್ಕಲ್, ದಿ ವೈಟ್ ಬಲೂನ್ ಮುಂತಾದ ಹೊಸ ಅಲೆ ಚಿತ್ರಗಳನ್ನು ತೆರೆಗೆ ತಂದು ಜಾಗತಿಕ ಮನ್ನಣೆ ಗಳಿಸಿದ ಜಾಫರ್ ಪನಾಹಿ ಪಾತ್ರದಲ್ಲಿ ಶಿವಮಣಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
1986ರ ನಂತರ ಮತ್ತೊಮ್ಮೆ ರಂಗಭೂಮಿಗೆ ಮರಳುತ್ತಿರುವ ಶಿವಮಣಿ ಅವರು ತಮ್ಮ ಈ ಹೊಸ ಸಾಹಸದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕೇಳಲು ಶಿವಮಣಿ ಅವರಿಗೆ ಕರೆ ಮಾಡಿದಾಗ...
'ಕಂಗಳು ವಂದನೆ ಹೇಳಿದೆ... ಹೃದಯವು ತುಂಬಿ ಹಾಡಿದೆ...ಎಂಬ ಕಾಲರ್ ಟ್ಯೂನ್ ಕೇಳಿಸಿತು...
ಈ ಪಾತ್ರ ಒಪ್ಪಿಕೊಳ್ಳಲು ಕಾರಣವೇನು?
ಜೊಸೆಫ್ ಪನಾಹಿ ಅವರ ರೆಬೆಲ್ ಕ್ಯಾರೆಕ್ಟರ್ ನನಗಿಷ್ಟ. ಅವರು ಹೇಗೆ ತಮ್ಮ ದೇಶದ ವ್ಯವಸ್ಥೆ, ಕಟ್ಟುಪಾಡುಗಳ ವಿರುದ್ಧ ಸಿಡಿದೆದ್ದ ರೀತಿ ನಮ್ಮ ಕಣ್ತೆರೆಸುತ್ತೆ.
ಗಿರಿರಾಜ್ ಜತೆ ನಾನು ಟೈಗರ್ ಗಲ್ಲಿ ಎಂಬ ಚಿತ್ರದಲ್ಲಿ ನಟಿಸಿದ್ದೆ. ಇಬ್ಬರು ಒಳ್ಳೆ ಸ್ನೇಹಿತರಾದೆವು, ಈ ನಾಟಕದ ಬಗ್ಗೆ ಹೇಳಿದರು. ಪಾತ್ರದ ಬಗ್ಗೆ ತಿಳಿಸಿದರು. ತಕ್ಷಣವೇ ಒಪ್ಪಿಕೊಂಡೆ.
ಮತ್ತೆ ನಾಟಕರಂಗಕ್ಕೆ ಮರಳಿದ್ದರ ಬಗ್ಗೆ ಹೇಳಿ
1986ರಲ್ಲಿ ನಾನು ಆರ್ ನಾಗೇಶ್ ಅವರ ನಾಟಕದ ಟ್ರೂಪ್ ನಲ್ಲಿದ್ದೆ. ನಾನಿನ್ನೂ ಆಗ ರಂಗಕ್ಕೆ ಚಿಕ್ಕವನು. ಜನನಾಟ್ಯಮಂಡಳಿದಲ್ಲಿ ಅನೇಕ ನಾಟಕಗಳನ್ನು ಮಾಡಿದ್ದ ನೆನಪು.
ಮಾನು, ನಳಿನಾ ಮೂರ್ತಿ, ಪ್ರಕಾಶ್ ರೈ ಜತೆ ನಟಿಸಿದ ನೆನಪಿದೆ. ಒಥೆಲೋ, ಮಾಡು ಸಿಕ್ಕದ್ದಲ್ಲ ಕೆಲವು ನಾಟಕ ಮರೆಯುವುದ್ದೆ ಆಗಲ್ಲ. ಹಾಗೆ ನೋಡಿದರೆ ನಾನು ಡೈರೆಕ್ಟರ್ ಆಗಿ ಚಿತ್ರರಂಗಕ್ಕೆ ಬಂದಾಗ ಇನ್ನೂ 24 ವರ್ಷವಾಗಿತ್ತು, ಅಷ್ಟೇ. ನಾಟಕ ರಂಗಕ್ಕೆ ಮರಳಿರುವುದು ಒಂಥರಾ ಬ್ಯಾಕ್ ಟು ಹೋಮ್ ಅಂತಾ ಅನ್ನಿಸುತ್ತಿದೆ.ಡೈರೆಕ್ಟರ್ ಗಿರಿರಾಜ್ ಹಾಗೂ ಡೈರೆಕ್ಟರ್ ಶಿವಮಣಿ ಕಾಂಬಿನೇಷನ್
ನಾನಿಲ್ಲಿ ವಿದ್ಯಾರ್ಥಿಯಾಗಿ ಬಂದಿದ್ದೇನೆ. ನಾನೊಬ್ಬ ನಟ, ಪಾತ್ರಧಾರಿ ಮಾತ್ರ. ಗಿರಿ ಅವರು ಪಾತ್ರವನ್ನು ರಂಗದ ಮೇಲೆ ತರುವ ಮುನ್ನ ಸಾಕಷ್ಟು ಆ ಪಾತ್ರದ ಬಗ್ಗೆ ಅಧ್ಯಯನ ಮಾಡಿರುತ್ತಾರೆ. ಗಿರಿ ಅವರ ನಿರ್ದೇಶನದ ಜಟ್ಟ, ಮೈತ್ರಿ, ಅಮರಾವತಿ ಎಲ್ಲವನ್ನು ನೋಡಿದ್ದೇನೆ. ಬ್ರಿಡ್ಜ್ ಸಿನಿಮಾಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಬೇಕು. ಗಿರಿ ಸಾಕಷ್ಟು ತಿಳಿದುಕೊಂಡಿದ್ದಾರೆ, ಹೊಸ ಹೊಸ ಪ್ರಯೋಗವನ್ನು ಮಾಡುವ ಆಸೆಯಿದೆ.
ಏನಿದು ಸುಗಂಧ ಸೀಮೆಯಾಚೆಯಲ್ಲಿ?
ಈ ನಾಟಕದಲ್ಲಿ ವೈವಿಧ್ಯತೆಯಿದೆ. ಹೊಸ ವಿಚಾರಗಳಿವೆ. ಹಾಡು ಡ್ಯಾನ್ಸ್ ಗಳಿವೆ. ಪನಾಹಿ ಪಾತ್ರ ಹೇಳಬೇಕಾದ ವಿಚಾರಗಳನ್ನು ಜನರಿಗೆ ಮುಟ್ಟಿಸುವ ರೀತಿ ನಿಮ್ಮ ಗಮನ ಸೆಳೆಯುತ್ತದೆ. ಅತ್ತರ್ ಬಳಸುತ್ತಿದ್ದ ರೀತಿಯ ಬಗ್ಗೆ ಕಾಣಬಹುದು. ಸುಗಂಧ ಹೇಗೆ ಸೀಮೆಯಾಚೆಗೂ ಪ್ರಸ್ತುತ ಎಂಬುದನ್ನು ತೋರಿಸಿದ್ದಾರೆ.