ಮಹಿಳಾ ದಿನದ ವಿಶೇಷ: ನೋವು ನುಂಗಿ ನಗುವ ಚೆಲ್ಲುವ ಆಕೆಗೊಂದು ನಮನ..
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದೆ. ಪ್ರತಿದಿನ ಪ್ರತಿಕ್ಷಣ ತನ್ನ, ಮಕ್ಕಳು, ಗಂಡ, ಸಂಸಾರ, ಉದ್ಯೋಗ ಹೀಗೆ ಹತ್ತು ಹಲವು ಜವಾಬ್ದಾರಿ ಮತ್ತು ಒತ್ತಡದಲ್ಲೇ ಕಾಲ ಕಳೆಯುವ ಆಕೆಗೆ ಪ್ರತ್ಯೇಕ ದಿನವನ್ನು ಮೀಸಲಿಟ್ಟು ಗೌರವ ಸಲ್ಲಿಸುವ ದಿನ ಇದಾಗಿದೆ.
ನಾವು ಮಹಿಳೆಗೆ ಗೌರವ ನೀಡಿದರೆ ಸಾಕು ಮತ್ತೇನು ಬೇಡ ಮಹಿಳಾ ದಿನಾಚರಣೆಗೊಂದು ಅರ್ಥ ಬಂದು ಬಿಡುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ತನ್ನ ಹಿಡಿತ ಸಾಧಿಸಿದ್ದರೂ, ಎಲ್ಲೋ ಒಂದು ಕಡೆ ದೌರ್ಜನ್ಯದಿಂದ ಮುಕ್ತವಾಗಿಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕಾಗಿದೆ. ಕುಟುಂಬ ನಿರ್ವಹಣೆಯಿಂದ ಆರಂಭವಾಗಿ ಹೊರಗೆ ಹೋಗಿ ನಿಭಾಯಿಸುವ ಕರ್ತವ್ಯದವರೆಗೆ ಆಕೆಯ ಕೊಡುಗೆ ಈ ಸಮಾಜಕ್ಕೆ ಒಂದೇ ಎರಡೇ ಲೆಕ್ಕವೇ ಹಾಕಲಾಗದು.
ವಿಶೇಷ: ಮಹಿಳಾ ದೌರ್ಜನ್ಯದ ಸುತ್ತ ಸತ್ಯ ಮಿಥ್ಯಗಳು
ಅವಳದು ಸವೆಸಿದ್ದು ಸಂಕಷ್ಟದ ಹಾದಿ..
ಪುರುಷ ಸಮಾಜದಲ್ಲಿ ಆಕೆ ಕೇವಲ ಮನೆಗಷ್ಟೆ ಸೀಮಿತ ಎಂಬ ಕಾಲವಿತ್ತು. ಆದರೆ ಪೌರಾಣಿಕ ಯುಗದಿಂದ ಇಲ್ಲಿವರೆಗಿನ ಹಾದಿಯನ್ನು ಗಮನಿಸುವುದಾದರೇ ಆಕೆ ನೋವು ನುಂಗಿದ್ದಾಳೆ, ದೌರ್ಜನ್ಯ ಅನುಭವಿಸಿದ್ದಾಳೆ, ಮತ್ಯಾರದೋ ಅವಲಂಬಿಯಾಗಿ ಬದುಕು ಸವೆಸಿದ್ದಾಳೆ. ಅದರ ನಡುವೆಯೂ ಎಲ್ಲ ಕಷ್ಟನಷ್ಟಗಳನ್ನು ಬದಿಗೊತ್ತು ತನ್ನ ಬದುಕನ್ನು ಕಟ್ಟಿಕೊಂಡಿದ್ದಾಳೆ. ಹೀಗಾಗಿ ಸಮಾಜದಲ್ಲಿ ಮಹತ್ವದ ಪಾತ್ರವಹಿಸಿರುವ ಆಕೆ ಇವತ್ತಿಗೂ ಆದರ್ಶನೀಯವಾಗಿ ಉಳಿದು ಬರುತ್ತಿದ್ದಾಳೆ.
ಬರೀ ಹೆಣ್ಣಲ್ಲ ಸಮಾಜದ ಕಣ್ಣು
ಮುಂದುವರೆದ ಈ ಆಧುನಿಕ ಯುಗದಲ್ಲಿ ಪುರುಷನಿಗೆ ಸಮಾನಳಾಗಿ ನಿಂತು ಎಲ್ಲ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸುವ ಮೂಲಕ ಕೇವಲ ಕುಟುಂಬದಲ್ಲಿ ಒಂದು ಹೆಣ್ಣಾಗಿ ಉಳಿಯದೆ ಸಮಾಜದ ಕಣ್ಣಾಗಿ ಬೆಳಗುತ್ತಿದ್ದಾಳೆ. ಒಂದು ಕಾಲದಲ್ಲಿ ಅಡುಗೆ ಮನೆಗಷ್ಟೆ ಸೀಮಿತಳಾಗಿದ್ದವಳು ಇವತ್ತು ಮನೆಯ ಹೊಸಿಲು ದಾಟಿ, ಶೈಕ್ಷಣಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದಾಳೆ. ಇದು ಪ್ರಗತಿಯ ಸಂಕೇತವೂ ಹೌದು. ಹಾಗೆಂದು ಆಕೆ ದೌರ್ಜನ್ಯ ಅನುಭವಿಸುತ್ತಿಲ್ಲ ಎಂದು ಹೇಳಲಾಗದು.
ಗಾಂಧೀಜಿ ಕನಸು ನನಸಾಗಬೇಕು
ಕೆಲವು ಕ್ಷೇತ್ರಗಳು ಪುರುಷರಿಗಷ್ಟೆ ಸೀಮಿತವಾಗಿದ್ದ ಕಾಲವಿತ್ತು. ಈಗ ಹಾಗಿಲ್ಲ, ಎಲ್ಲ ಕ್ಷೇತ್ರಕ್ಕೂ ಮಹಿಳೆ ದಾಪುಗಾಲಿಟ್ಟಿದ್ದಾಳೆ. ಮಹಿಳೆಯರಿಗೆ ಆಗಲ್ಲ ಎಂದು ಹೇಳುತ್ತಾ ಬಂದಿದ್ದೆಲ್ಲವನ್ನು ಅವಳು ಮಾಡಿ ತೋರಿಸಿದ್ದಾಳೆ. ಆದರೂ ಮಧ್ಯರಾತ್ರಿಯೂ ನಿರ್ಭಯವಾಗಿ ಮಹಿಳೆ ನಡೆಯುವಂತಾಗಬೇಕು ಎಂಬ ಗಾಂಧೀಜಿಯವರ ಕನಸು ಇನ್ನೂ ನನಸಾಗಿಲ್ಲ. ಪರಿಣಾಮ ಮಹಿಳೆಯನ್ನು ಕಾಮುಕ ದೃಷ್ಠಿಯಿಂದ ನೋಡುವ, ಆಕೆಯ ಅಸಹಾಯಕತೆಯನ್ನು ಬಳಸಿಕೊಂಡು ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಬಿದ್ದಿಲ್ಲ. ನಾವು ಬಹಳ ವಿಷಯದಲ್ಲಿ ಮುಂದುವರೆದಿದ್ದರೂ ಇವತ್ತಿಗೂ ಬಹಳಷ್ಟು ಹೆಣ್ಣು ಹೆತ್ತವರು ಮಗಳಿಗೆ ವಿದ್ಯಾಭ್ಯಾಸ ಕೊಡಿಸಿ ಮದುವೆ ಮಾಡಿಬಿಟ್ಟರೆ ತಮ್ಮ ಕರ್ತವ್ಯ ಮುಗಿಯಿತು ಎಂದು ಭಾವಿಸುತ್ತಾರೆ. ಆದರೆ ಬದಲಾದ ಕಾಲಘಟ್ಟದಲ್ಲಿ ಅವಳ ಬದುಕನ್ನು ಅವಳೇ ಕಟ್ಟಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಬೇಕಾದ ಅಗತ್ಯತೆಯೂ ಇದೆ ಎಂಬದನ್ನು ಅರಿಯುವುದು ಅಗತ್ಯವಿದೆ.
ಗ್ರಾಮೀಣರಿಗೆ ಪ್ರೋತ್ಸಾಹದ ಕೊರತೆ
ನಗರ ಪ್ರದೇಶದಲ್ಲಿ ಎಲ್ಲ ಮೂಲ ಸೌಕರ್ಯಗಳು ದೊರೆಯುವುದರಿಂದ ಹೆಣ್ಣು ಮಕ್ಕಳು ಬೇರೆ ಬೇರೆ ರೀತಿಯಲ್ಲಿ ಸಾಧನೆ ಮಾಡಲು ಅವಕಾಶ ದೊರೆಯುತ್ತಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಅವಕಾಶಗಳ ಕೊರತೆಯಿಂದಾಗಿ ಹೆಚ್ಚಿನ ಹೆಣ್ಣು ಮಕ್ಕಳಲ್ಲಿ ಪ್ರತಿಭೆಯಿದ್ದರೂ ಅದಕ್ಕೆ ಸೌಲಭ್ಯ ಮತ್ತು ಪ್ರೋತ್ಸಾಹದ ಕೊರತೆಯಿಂದಾಗಿ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೂ ತಮ್ಮ ವ್ಯಾಪ್ತಿಯಲ್ಲಿ ಸ್ವಸಾಮರ್ಥ್ಯದಿಂದ ಸಾಧನೆ ಮಾಡಿದ ಮಹಿಳೆಯರು ಬೇಕಾದಷ್ಟು ಇದ್ದಾರೆ. ಕೃಷಿ, ಹೈನುಗಾರಿಕೆ, ಗುಡಿಕೈಗಾರಿಕೆಯ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಇನ್ನು ಕೆಲವರು ತಮ್ಮೊಂದಿಗೆ ಇನ್ನೊಂದಷ್ಟು ಮಂದಿಗೂ ಕೆಲಸ ನೀಡಿರುವುದು ಸಂತೋಷದ ವಿಚಾರವೇ.
ಸಮಸ್ಯೆ ಎದುರಿಸಿ ಬದುಕುವುದು ಅಗತ್ಯ
ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ತಮ್ಮ ಛಾಪು ಮೂಡಿಸಿದ್ದರೂ ಎಲ್ಲರೂ ಸುಖಿಗಳಾಗಿದ್ದಾರೆ ಎನ್ನಲಾಗುತ್ತಿಲ್ಲ. ಅಲ್ಲಲ್ಲಿ ಅತ್ಯಾಚಾರ, ದೌರ್ಜನ್ಯ, ವರದಕ್ಷಿಣೆ ಕಿರುಕುಳದಂತಹ ಅಮಾನವೀಯ ಕೃತ್ಯಗಳು ಮಹಿಳೆಯರ ಮೇಲೆ ನಡೆಯುತ್ತಲೇ ಇದೆ. ಇದನ್ನು ಎದುರಿಸಿ ಬದುಕುವ ಧೈರ್ಯವನ್ನು ಮಹಿಳೆಯರು ಮಾಡಬೇಕಾಗಿದೆ. ಆಗ ಮಹಿಳಾ ದಿನಾಚರಣೆಗೆ ಅರ್ಥ ಬರುತ್ತದೆ.