ಕೊರೊನಾ ಸಂಕಷ್ಟ ಕಾಲದಲ್ಲಿ ದಾದಿಯರ ಸೇವೆ ಸ್ಮರಿಸೋಣ
ನಾಡಿನ ಸಮಸ್ತ ದಾದಿಯರಿಗೆ, ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯ ಹಾರ್ದಿಕ ಶುಭಾಶಯಗಳು..
ಸೇವಾ ಮನೋಭಾವ ಎಂದರೇನು ಎಂಬ ಅರಿವು ಮೂಡಿಸಿದ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮ ದಿನವಾದ ಇಂದು ಅವರನ್ನು ಹೃದಯ ಪೂರ್ವಕವಾಗಿ ಸ್ಮರಿಸುತ್ತಾ, ಸೇವೆಯಲ್ಲಿಯೇ ದೇವರನ್ನು ಕಾಣುವ, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದು, ದೇಶದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡಿ ಜನರ ಜೀವವನ್ನು ಹಿಂಡುತ್ತಿರುವ ಈ ವಿಷಮ ಪರಸ್ಥಿತಿಯಲ್ಲಿಯೂ ತಮ್ಮ ಜೀವದ ಹಂಗನ್ನು ತೊರೆದು ದೇಶದ ಜನರ ಜೀವ ರಕ್ಷಣೆಗಾಗಿ, ಕೋವಿಡ್ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ನಾಡಿನ ಸಮಸ್ತ ದಾದಿಯರಿಗೆ ಅಂತರಾಷ್ಟ್ರೀಯ ದಾದಿಯರ ದಿನಾಚರಣೆಯ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.-ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ.
ಫ್ಲಾರೆನ್ಸ್ ನೈಟಿಂಗೇಲ್ ಅವರು ರಾತ್ರಿ ವೇಳೆ ಯುದ್ಧ ಭೂಮಿಯಲ್ಲಿ ಕತ್ತಲಲ್ಲಿ ಕಂದೀಲು ಹಿಡಿದು ಗಾಯಗೊಂಡ ಸೈನಿಕರ ಸೇವೆ ಮಾಡಿದ ಮಹಾನ್ ಮಹಿಳೆ. ಇವರನ್ನು "ಲೇಡಿ ವಿತ್ ಲ್ಯಾಂಪ್" "Lady with lamp" ಎಂದೇ ಕರೆಯುತ್ತಾರೆ. ದಾದಿಯರು ಎಂದರೇ ಕೇವಲ ಸೇವಕರು ಎಂಬಂತೆ ನೋಡುತ್ತಿದ್ದ ಜನರಿಗೆ ಫ್ಲಾರೆನ್ಸ್ ನೈಟಿಂಗೇಲ್ ಅವರು ದಾದಿಯರು ಎಂದರೇನು ಎಂಬುದುನ್ನು ತೋರಿಸಿ ಕೊಟ್ಟಿದ್ದರು.
ದೇಶದಲ್ಲಿ ಯುದ್ಧ ಘೋಷಣೆಯಾದಾಗ ಸೈನಿಕರು ಹೇಗೆ ಗಡಿಯಲ್ಲಿ ನಿಂತು ತಮ್ಮ ಜೀವವನ್ನು ಪಣಕ್ಕಿಟ್ಟು ವೈರಿಗಳ ಜೊತೆಗೆ ಕಾದಾಡುತ್ತಾರೆಯೋ, ಹಾಗೆ ಇಂದು ಕೊರೋನಾ ವೈರಸ್ ಎಂಬ ವೈರಿ ನಮ್ಮ ದೇಶದ ಜನರ ದೇಹವನ್ನು ಸೇರಿ ಅವರ ಉಸಿರು ನಿಲ್ಲಿಸುತ್ತಿದೆ. ಇಂತಹ ವಿಷಮ ಸ್ಥಿತಿಯಲ್ಲಿ ಸೈನಿಕರ ರೀತಿಯಲ್ಲಿ ಜೀವದ ಹಂಗು ತೊರೆದು ಜನರ ಜೀವ ರಕ್ಷಣೆ ಮಾಡುತ್ತಿರುವ ದಾದಿಯರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿ, ಮತ್ತೊಮ್ಮೆ ಅಂತರಾಷ್ಟ್ರೀಯ ದಾದಿಯರ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತೇನೆ.
ದೇಶದಾದ್ಯಂತ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಕಾರಣ ಸಾರ್ವಜನಿಕರು ಯಾರು ಮನೆಯಿಂದ ಹೊರಬರದೆ ಸರ್ಕಾರದ ಮಾರ್ಗಸೂಚಿಯನ್ನು ಪಾಲನೆ ಮಾಡುವ ಮೂಲಕ ಕೊರೋನಾ ವೈರಸ್ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ವಿನಂತಿಸಿಕೊಳ್ಳುತ್ತೇನೆ. ಮನೆಯಲ್ಲಿಯೇ ಇರಿ, ಕ್ಷೇಮವಾಗಿರಿ ಎಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಸಾಮಾಜಿಕ ಜಾಲ ತಾಣಗಳಲ್ಲಿ ಕರೆ ನೀಡಿದ್ದಾರೆ.