ಫ್ಲಾರೆನ್ಸ್ ನೈಟಿಂಗೇಲ್ ಯಾರು? ವಿಶ್ವ ದಾದಿಯರ ದಿನಾಚರಣೆ ಏಕೆ?
ಇವತ್ತು ವಿಶ್ವ ದಾದಿಯರ ದಿನ. ಹಿಂದೆಂದಿಗಿಂತಲೂ ಈಗ ದಾದಿಯರ ದಿನಾಚರಣೆ ಅರ್ಥಪೂರ್ಣ. ಈ ಸಂದರ್ಭದಲ್ಲಿ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕೊರೊನಾ ಯೋಧರಲ್ಲಿ ದಾದಿಯರ ಪಾತ್ರ ಪ್ರಮುಖ. ಸೋಂಕಿತರೊಂದಿಗೆ ಸತತ ಸಂಕರ್ಪ ಹೊಂದಿರುವವವರು ಇವರೇ. ತಮ್ಮ ಜೀವದ ಹಂಗು ತೊರೆದು ಕೊರೊನಾ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡವರು ಆರೋಗ್ಯ ಕಾರ್ಯಕರ್ತರು. ಕ್ರಿಮಿಯನ್ ಯುದ್ದದಲ್ಲಿ ಕಣ್ಣಿಗೆ ಕಾಣುವ ವೈರಿಗಳೊಂದಿಗೆ ಹೋರಾಡಿ ಗಾಯಗೊಂಡಿದ್ದ ಸೈನಿಕರಿಗೆ ಶೂಶ್ರುಷೆ ಮಾಡಿದ್ದ ಫ್ಲಾರೆನ್ಸ್ ನೈಟಿಂಗೇಲ್ ಅವರ ಸೇವಾ ಮನೋಭಾವನೆ ಮತ್ತೊಮ್ಮೆ ಮರುಕಳಿಸಿದಂತೆ ಜಗತ್ತಿನಾದ್ಯಂತ ಸುಮಾರು 20 ಮಿಲಿಯನ್ಗೂ ಹೆಚ್ಚು ದಾದಿಯರು ಕೊರೊನಾ ವೈರಸ್ ವಿರುದ್ದದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.
1853ರಲ್ಲಿ ರಶಿಯಾ ಹಾಗೂ ಬ್ರಿಟನ್ ದೇಶಗಳ ಮಧ್ಯೆ ನಡೆದಿದ್ದ ಕ್ರಿಮಿಯನ್ ಯುದ್ದದಲ್ಲಿ ಗಾಯಗೊಂಡಿದ್ದ ಬ್ರಿಟಿಷ್ ಸೈನಿಕರಿಗೆ ಅಕ್ಷರಶಃ ದೇವತೆಯಂತೆ ಕಂಡಿದ್ದು ಫ್ಲಾರೆನ್ಸ್ ನೈಟಿಂಗೇಲ್. ಸ್ವಚ್ಛತೆಗೆ ಆಧ್ಯತೆ ಕೊಡುವ ಮೂಲಕ ಗಣನೀಯವಾಗಿ ಸಾವಿನ ಸಂಖ್ಯೆಯನ್ನು ತಪ್ಪಿಸಿದ್ದು ಫ್ಲಾರೆನ್ಸ್ ನೈಟಿಂಗೇಲ್ ಅವರು. ಹೀಗಾಗಿಯೆ ಅವರನ್ನು ಆಧುನಿಕ ನರ್ಸಿಂಗ್ ವ್ಯವಸ್ಥೆಗೆ ಮುನ್ನುಡಿ ಬರೆದವರು ಎಂದೇ ಅವರ ಜನ್ಮದಿನವನ್ನು ವಿಶ್ವ ದಾದಿಯರ ದಿನವೆಂದು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.
ವಿಶ್ವ ದಾದಿಯರ ದಿನ: ಕೇವಲ ಕೊರೊನಾ ಯೋಧರು ಎಂದು ಕರೆದರೆ ಸಾಕೇ?
ಕೈಯಲ್ಲಿ ದೀಪ ಹಿಡಿದುಕೊಂಡು ಇಡೀ ರಾತ್ರಿ ಗಾಯಾಳು ಸೈನಿಕರಿಗೆ ಉಪಚರಿಸುತ್ತಿದ್ದರಿಂದ ಫ್ಲಾರೆನ್ಸ್ ನೈಟಿಂಗೇಲ್ ಅವರನ್ನು ಸೈಕಿನರು ದೀಪ ಧಾರಿಣಿ ದೇವತೆ ಎಂದು ಕರೆದಿದ್ದರು. ಆಗರ್ಭ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಮನುಕುಲದ ಸೇವೆಗೆ ಎಲ್ಲವನ್ನು ತ್ಯಾಗ ಮಾಡಿದ ಮಾನವತಾವಾದಿ ಫ್ಲಾರೆನ್ಸ್ ನೈಟಿಂಗೇಲ್ ಅವರನ್ನೇ ಆದರ್ಶವನ್ನಾಗಿಟ್ಟುಂಡು ದಾದಿಯರೂ ಈಗಲೂ ಸೇವೆ ಮಾಡುತ್ತಿದ್ದಾರೆ. ಆದರೆ ಜೀವನ ಹೋಗಲಿ ಜೀವ ಸಾಗಿಸುವುದಕ್ಕಾದರೂ ಅವರಿಗೆ ಸೂಕ್ತ ಸೌಲಭ್ಯಗಳನ್ನು ಸರ್ಕಾರ ಕೊಡಬೇಕಿದೆ.
ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲು ಪ್ರತೀ ಒಂದು ಸಾವಿರ ಜನಸಂಖ್ಯೆಗೆ ದಾದಿಯರ ಸಂಖ್ಯೆ 2:3 ಇರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಶಿಫಾರಸು ಮಾಡುತ್ತದೆ. ಭಾರತದಲ್ಲಿ ಈ ಅನುಪಾತ ಪ್ರತೀ ಸಾವಿರ ಜನಸಂಖ್ಯೆಗೆ 1:8 ಇದೆ. ಕೊರೊನಾ ವೈರಸ್ ಸೃಷ್ಟಿಸಿರುವ ಈ ಸಂಕಷ್ಟದಿಂದಲಾದರೂ ಸರ್ಕಾರ ಇನ್ನುಮುಂದೆ ಆರೋಗ್ಯ ಕ್ಷೇತ್ರಕ್ಕೆ ಸೂಕ್ತ ಗಮನ ಕೊಡಬೇಕಿದೆ. ಸಧ್ಯ ಕೊರೊನಾ ಯೋಧರು ಎಂದು ಸರ್ಕಾರ ಕರೆಯುತ್ತಿರುವ ದಾದಿಯರು, ನರ್ಸ್ಗಳು, ಆಶಾ ಕಾರ್ಯರ್ತರು, ಗುತ್ತಿಗೆ ಆಧಾರದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿರುವ ವೈದ್ಯರು, ಕಿರಿಯ ಆರೋಗ್ಯ ಸಹಾಯಕಿಯರು ಸೇರಿದಂತೆ ಎಲ್ಲರಿಗೂ ಸೂಕ್ತ ಭದ್ರತೆ ಕೊಡಬೇಕಿದೆ.