ತನಗಾಗಿ ಬದುಕುವುದನ್ನೇ ಮರೆಯುವ ತ್ಯಾಗಮಯಿ 'ಅಮ್ಮ'
ಅಮ್ಮನನ್ನು ವರ್ಣಿಸಲು ಪದಗಳುಂಟೆ, ವರ್ಣಿಸಲು ಹೊರಟರೆ, ಭಾಷೆಯೇ ಬಡವಿಯಾಗುವುದು. ಲೇಖನ ಕವನ ಇವೆಲ್ಲವು ಸಹಿತ ಅವಳ ಮುಂದೆ ಶೂನ್ಯದಂತೆ ಕಾಣುವುದು. ಕೆಲವೊಂದು ಸಾರಿ ಬೇರೆ ಹೆಣ್ಣು ನೊಂದಾಗ ದೌರ್ಜನ್ಯಕ್ಕೆ ಒಳಗಾದಾಗ ಮನನೊಂದು ಅಮ್ಮನನ್ನು ತೊರಯಬಾರದೆಂಬ ಮನಸ್ಸು ಮಿಡಿಯುತ್ತದೆ. ಎಲ್ಲವನ್ನೂ ತೊರೆದು ಇತರರ ಬದುಕಿಗೆ ಅಣಿಯಾಗುವುದಕ್ಕಿಂತ ಅಮ್ಮನ ಒಳಲಾಡದಲ್ಲಿ ಬದುಕಬೇಕೆಂಬ ಆಸೆ ನನ್ನದು....
ನನಗೆ ಸೃಷ್ಟಿಕರ್ತನ ನಿಷ್ಕಲ್ಮಷ ಜೀವಿ ಎಂದರೆ ಇವಳೇ ಅಂತಾ ಗೊತ್ತಾಗಿದ್ದು ಸ್ವಲ್ಪ ತಡವೇ. ಅವಳು ನನ್ನೊಂದಿಗೆ ಇದ್ದಾಗ ನನ್ನೆದೆಯ ಭಾರವೆಲ್ಲ ಹಗುರಾಯಿತು. ಜೀವನಪೂರ್ತಿ ನಾನೆಂದು ತೊರೆಯರಲಾದ ಬಹುದೊಡ್ಡ ನನ್ನ ಪಾಲಿನ ಮಾಣಿಕ್ಯವೇ ನನ್ನವ್ವ...
'ಅಮ್ಮ' ಹೀಗೇ ಇರಬೇಕೆಂದು ಯಾರು ಹೇಳಿದ್ದು ನಿಮಗೆ?
ನನ್ನದು ಕೂಡು ಕುಟುಂಬ. ಕೆಲಸದ ಜಂಜಾಟದಲ್ಲೂ ಅವ್ವನ ಪ್ರೀತಿ ಇತರ ನೋಡುಗರಿಗೆ ಸ್ವಲ್ಪ ಅತೀಶಯವಾಗಿ ಆಗಾಗ ಅನಿಸುತ್ತಿತ್ತು. ನನ್ನ ಬದುಕಿಗೆ ಸ್ಪೂರ್ತಿಯಾಗಿ, ಅಕ್ಷರದ ಅನ್ನ ಉಣಬಡಿಸಿದ್ದು ಸಹ ಬಡತನದಲ್ಲಿಯೇ. ಅವಳು ಕಳೆದಂತ ನೋವಿನ ದಿನಗಳು ತನಗೆ ಹುಟ್ಟಿದ ಮಕ್ಕಳಿಗೆ ಬರಬಾರದೆಂದು, ಅವಳಿಗಿಂತ ಹೆಚ್ಚಿನ ಸಂತಸದಿಂದ ಕಳೆಯಲು ಅವ್ವ ನೋವುಂಡಿದ್ದು ಅಷ್ಟಿಷ್ಟಲ್ಲ.
ನಮ್ಮನ್ನು ಸದೃಢ ಮಾಡಲು ತವರಮನೆಯಿಂದ ಆಕಳು ತಂದು ಹಾಲುಣಿಸಿದ್ದ ಮುಕ್ಕೋಟಿ ದೇವಿಯೇ ನನ್ನವ್ವ ಮಹಾದೇವಿ. ತನ್ನ ಮೂರು ಮಕ್ಕಳ ಏಳ್ಗೆಗಾಗಿ ಸೆಣೆಸಾಡಿದ್ದು ಅಷ್ಟಿಷ್ಟಲ್ಲ. ಅವಳಿಗೆ ಸಾಟಿಯಾಗಿ ಬದುಕಿನ ಕಷ್ಟಗಳನ್ನು ಬವಣಿಸಿದರಲ್ಲಿ ಅರ್ಧ ಪಾಲು ಅಪ್ಪನದು ಕೂಡಾ... ಶ್ರೀಮಂತರ ಮಕ್ಕಳಂತೆ ನಮ್ಮನ್ನು ಪಟ್ಟಣದಲ್ಲಿ ಓದಿಸಿ ನಮ್ಮ ಭವಿಷ್ಯಕ್ಕೆ ನಾವೇ ಹೊಣೆ ಎನ್ನುವ ಮಟ್ಡಿಗೆ ನಮ್ಮನ್ನು ಪೋಷಿಸಿದ ಕಣ್ಮಣಿಗಳು.
ಇಂದಿಗೂ ತನ್ನ ಕಷ್ಟದ ಮೂಟೆಗಳನ್ನು ಬೆನ್ನಿಗಂಟಿಸಿಕೊಂಡು ತೊಂದರೆಯೇ ಇಲ್ಲದಂತೆ ನಟಿಸುವ ಮಹಾನಟಿ ನಮ್ಮಮ್ಮ. ನಾವು ಹುಟ್ಟಿದ ಮೇಲೆ ತನಗಾಗಿ ಬದುಕುವುದನ್ನೆ ಮರೆತ ಮರುವಗೇಡಿ ಇವಳು. ಅದೋಂದು ದಿನ ಕೂಡುಕುಟಂಬದಿಂದ ಹೊರಬಂದಾಗ ನೋವನ್ನುಂಡು ಅವಳು ತ್ಯಾಗಿಯಾದ ಆ ದಿನಗಳು ಇಂದಿಗೂ ಕಣ್ಣುಕಟ್ಟಿವೆ.
ವಿಶೇಷ ಲೇಖನ: ಅಮ್ಮ... ನಮ್ಮೆಲ್ಲರ ಬದುಕಿನ ಜೀವಂತ ಪವಾಡ!
ಹಬ್ಬ ಹರಿದಿನಗಳಲ್ಲಿ ಅವಳು ಹಳೆಯ ಸೀರೆಯನ್ನುಟ್ಟು ನಮಗೆ ಹೊಸ ಬಟ್ಟೆ ತೊಡಿಸಿ ಸಂಭ್ರಮಿಸಿದ ಸಂತಸ, ನಮಗೆ ಬಿಸಿರೊಟ್ಟಿ ತಟ್ಟೆ ಅವಳು ಮಾತ್ರ ತಂಗಳ ರೊಟ್ಟಿ ತಿಂದು, ಯಾವುದೋದಿನ ರುಚಿಯಾಗಿ ಮಾಡಿದಾಗ ನಮಗೆ ಬಡಿಸಿ ಮಿಕ್ಕಿದರೆ ತಿನ್ನುವದು ಇಲ್ಲವಾದರೆ ಅನಾರೋಗ್ಯದ ನೆಪ ಹೇಳಿ ಜರಿಯುವದು. ಹೇಳುತ್ತಾ ಹೋದರೆ ಮುಗಿಯದ ಮಹಾಚರಿತ್ರೆ ಅವಳದ್ದು.
ಹೊತ್ತು ಹೆತ್ತು ಆಲಿ ಆಡಿಸಿ ಜಗತ್ತು ತೋರಿಸಿದ ಕರುಣೆಯ ಅಪರಂಜಿಯನ್ನು ಬಿಟ್ಟು ಮತ್ತೊಬ್ಬರ ಬದುಕಿನ ಜೀವನ ಜ್ಯೋತಿ ಬೆಳಗಿಸಲು ಕೆಲವೊಂದು ಸಾರಿ ಮನಸ್ಸು ಒಪ್ಪುವುದಿಲ್ಲ. ನಿನಗೆ ಒಪ್ಪಿಗೆಯಾದರೆ ನಿನ್ನ ಅಂಗೈ ಜೀವಿಯಾಗಿ ನಿನ್ನ ಬಳಿ ಕೊನೆ ಉಸಿರು ಇರುವವರೆಗೆ ಬದುಕುವ ಆಸೆ ನನ್ನದು.
ಇಂದು ವಿಶ್ವ ಅಮ್ಮಂದಿರ ಆಚರಣೆ ಅದೊಂದು ದಿನವಾಗಿ ಉಳಿಯದೆ ಅಮ್ಮಂದಿರು ಅನಾಥ ಆಶ್ರಮ ಸೇರದಂತೆ ಈ ಜಗತ್ತು ಕಣ್ಮರೆಯಾಗುವತನಕ ಅಮ್ಮಂದಿರನ್ನು ಪೂಜಿಸುವ ಪರಂಪರೆಯನ್ನು ಉಳಿಸೋಣ...