ಈ ದಿನದ ವಿಶೇಷ: ಅಂಧರಿಗಾಗಿ 'ಕನ್ನಡ ತಂತ್ರಾಂಶ'ದ ಪ್ರಯತ್ನ
ಬೆಂಗಳೂರು, ಸೆಪ್ಟೆಂಬರ್ 28: ಇಂದು ಮಾಹಿತಿಗಾಗಿ ಪುಸ್ತಕಗಳು, ಪತ್ರಿಕಾ ಲೇಖನಗಳನ್ನು ಹುಡುಕುವಷ್ಟು ತಾಳ್ಮೆ, ಸಮಯ ಜನರಿಗಿಲ್ಲ. ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಬೆರಳಿನಂಚಿನಲ್ಲಿ ಟೈಪಿಸಿದರೆ ಸಾಕು ಸಾವಿರಾರು ಮಾಹಿತಿಗಳನ್ನು ಹುಡುಕಿ ನಮ್ಮೆದುರು ತೆರೆದಿಡುತ್ತದೆ. ಸೆಪ್ಟೆಂಬರ್ 28ಅನ್ನು 'ಅಂತಾರಾಷ್ಟ್ರೀಯ ಸಾರ್ವತ್ರಿಕ ಮಾಹಿತಿ ಪ್ರವೇಶದ ದಿನ' ಎಂದು ವಿಶ್ವಸಂಸ್ಥೆ ಆಚರಿಸುತ್ತಿದೆ.
ವಿಶ್ವಸಂಸ್ಥೆ ಇಂತಹ ದಿನವನ್ನು ಆಚರಿಸುತ್ತಿರುವುದರ ಹಿಂದಿನ ಉದ್ದೇಶ, ಪ್ರತಿಯೊಬ್ಬರಿಗೂ ಪ್ರತಿ ಸಮಯದಲ್ಲಿಯೂ ಮಾಹಿತಿಗಳನ್ನು ಹುಡುಕಾಡುವ, ಮಾಹಿತಿಗಳನ್ನು ಪಡೆದುಕೊಳ್ಳುವ ಮತ್ತು ಇತರರಿಗೂ ಮಾಹಿತಿಯನ್ನು ತಲುಪಿಸುವ ಹಕ್ಕು ಇರಬೇಕು ಎನ್ನುವುದು.
ಗೂಗಲ್ ಟಿಟಿಎಸ್ ನಲ್ಲಿ ಕನ್ನಡ ಧ್ವನಿ; ಬೆಳಗಾವಿ ಅಂಧನ ಸಾಧನೆ
ಈಗ ನೀವು ಪ್ರತಿ ಭಾಷೆಯಲ್ಲಿಯೂ ಅದರ ಲಿಪಿಯಲ್ಲಿಯೇ ಮಾಹಿತಿಗಳನ್ನು ಕೇಳಿ ಪಡೆದುಕೊಳ್ಳಲು ಅನುಕೂಲವಾಗುವಷ್ಟು ತಂತ್ರಜ್ಞಾನ ಬೆಳೆದಿದೆ. ಬೆಳೆದಿದೆ ಎನ್ನುವುದಕ್ಕಿಂತ ಪ್ರತಿ ಭಾಷೆಯಲ್ಲಿಯೂ ಭಾಷಾ ಪ್ರೇಮಿಗಳು ಹಾಗೂ ತಂತ್ರಜ್ಞರು ಅಂತಹದ್ದೊಂದು ನಿಸ್ವಾರ್ಥ ಕಾರ್ಯಗಳನ್ನು ನಡೆಸಿದ್ದಾರೆ ಮತ್ತು ನಡೆಸುತ್ತಿದ್ದಾರೆ. ಇಂದು ಕನ್ನಡದಲ್ಲಿ ನೀವು ಅರಸುವ ಮಾಹಿತಿಗಳು ಸುಲಭವಾಗಿ ಎಟುಕುತ್ತವೆ ಎಂದರೆ ಅದರ ಹಿಂದೆ ಸಾವಿರಾರು ಜನರ ಶ್ರಮವಿದೆ.
ಅಂಧರಿಗೂ ಕನ್ನಡದಲ್ಲಿಯೇ ತಾಂತ್ರಿಕ ಮಾಹಿತಿಯನ್ನು ಒದಗಿಸುವ ತಂಡವೊಂದಿದೆ. 'ಕನ್ನಡ ತಂತ್ರಾಂಶ' ಹೆಸರಿನ ಈ ತಂಡ, 2015ರಿಂದ ಆಧುನಿಕ ತಂತ್ರಜ್ಞಾನಗಳ ಬಳಕೆಯಲ್ಲಿ ಎದುರಾಗುವ ಸಮಸ್ಯೆಗಳು, ಗೊಂದಲಗಳನ್ನು ಪರಿಹರಿಸಿಕೊಳ್ಳಲು ನೆರವಾಗುವ ಕಾರ್ಯ ಮಾಡುತ್ತಿದೆ. ಮುಂದೆ ಓದಿ.
ತಂತ್ರಜ್ಞಾನ ಪೂರಕವಾಗಿದೆಯೇ?
ಎಲ್ಲರಿಗೂ ಮಾಹಿತಿ ಪಡೆಯುವ ಹಕ್ಕು ಇದೆ ಎಂಬ ವಿಶ್ವಸಂಸ್ಥೆಯ ಉದ್ದೇಶದಂತೆ ಪ್ರತಿಯೊಬ್ಬರಿಗೂ ಮಾಹಿತಿಗಳನ್ನು ಒದಗಿಸುವ ಪ್ರಯತ್ನ ಸುಲಭವಲ್ಲ. ಅದರಲ್ಲಿಯೂ ದೈಹಿಕ ಅಂಗವೈಕಲ್ಯವುಳ್ಳ ಜನರಿಗೆ ಮಾಹಿತಿ ಪಡೆದುಕೊಳ್ಳುವಲ್ಲಿ ಹಲವು ಸವಾಲುಗಳಿವೆ. ಮುಖ್ಯವಾಗಿ ದೃಷ್ಟಿಹೀನರು ಬಳಸುವಷ್ಟು ತಂತ್ರಜ್ಞಾನ ಅನುಕೂಲಕರವಾಗಿದೆಯೇ ಎಂಬ ಪ್ರಶ್ನೆ ಇದೆ.
ಕೆಲವು ತಂತ್ರಾಂಶಗಳ ನೆರವು
ನಮ್ಮ ನಡುವಿನ ಅನೇಕ ದೃಷ್ಟಿಹೀನರು ಮೊಬೈಲ್ ಸೇರಿದಂತೆ ಅನೇಕ ತಂತ್ರಜ್ಞಾನಗಳನ್ನು ಎಲ್ಲರಂತೆ ಬಳಸುತ್ತಾರೆ. ಆದರೆ ಅವರಿಗೆ ಎಲ್ಲ ತಂತ್ರಾಂಶಗಳು ಅನುಕೂಲಕರವಾಗಿಲ್ಲ. ಕೆಲವು ಕಿರು ತಂತ್ರಾಂಶಗಳು ದೃಷ್ಟಿ ದೋಷವುಳ್ಳರಿಗೂ ಸಹಾಯ ಮಾಡುತ್ತಿವೆ ಎಂದು 'ಕನ್ನಡ ತಂತ್ರಾಂಶ' ಹೇಳುತ್ತದೆ.
ಅಂಗವಿಕಲರತ್ತ ಗಮನಹರಿಸಿ
ಜಗತ್ತಿನಲ್ಲಿ ಶೇ 15ರಷ್ಟು ಜನರು ಒಂದಲ್ಲ ಒಂದು ರೀತಿ ಅಂಗವೈಕಲ್ಯ ಹೊಂದಿರುತ್ತಾರೆ ಎಂದು ಸಮೀಕ್ಷೆಯೊಂದು ಹೇಳುತ್ತದೆ. ಭಾರತದಲ್ಲಿ ಶೇ 2.6-10ರಷ್ಟು ಜನರು ಅಂಗವೈಕಲ್ಯ ಹೊಂದಿದ್ದಾರೆ. ಎಲ್ಲ ರೀತಿಯ ಸೇವೆಗಳನ್ನು ಒದಗಿಸುವವರು ಹಾಗೂ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುತ್ತಿರುವವರು ಅವರ ಬಗ್ಗೆ ಗಮನಹರಿಸಬೇಕು. ಇದರಿಂದ ಹಲವಾರು ಪ್ರಾಮಾಣಿಕ ಗ್ರಾಹಕರು ಸಿಗುತ್ತಾರೆ ಎಂದು 'ಕನ್ನಡ ತಂತ್ರಾಂಶ' ತಂಡ ಹೇಳಿದೆ (ಕೃಪೆ: ಇ-ಜ್ಞಾನ ಪುಟ).
ಡಿಜಿಟಲ್ ನಿರ್ಲಕ್ಷಿತರು
ದೃಷ್ಟಿ ಸಮಸ್ಯೆ ಉಳ್ಳವರನ್ನು ಡಿಜಿಟಲ್ ಜಗತ್ತಿನ ನಿರ್ಲಕ್ಷಿತರು ಎಂದು ಕರೆದಿರುವ ತಂಡ, ಅಂಗವಿಕಲರ ಹಕ್ಕು ಅಧಿನಿಯಮ, ಅಂಗವೈಕಲ್ಯವುಳ್ಳ ವ್ಯಕ್ತಿಯ ಹಕ್ಕುಗಳ ವಿಶ್ವಸಂಸ್ಥೆಯ ಸಮ್ಮೇಳನದಂತಹ ಕಾಯ್ದೆಗಳು ಅವರ ಪರವಾಗಿದೆ. ಆದರೆ ಅವುಗಳಿಗೆ ಅನುಗುಣವಾದ ಪ್ರಯತ್ನಗಳು ನಡೆಯಬೇಕಿದೆ ಎಂದು 'ಕನ್ನಡ ತಂತ್ರಾಂಶ' ತಂಡ ಅಭಿಪ್ರಾಯಪಟ್ಟಿದೆ.