ಅಂಡಮಾನ್ ನಲ್ಲಿ ಅಮೆರಿಕನ್ ನನ್ನು ಕೊಂದ ನಿಗೂಢ ಬುಡಕಟ್ಟು ಸೆಂಟಿನಿಲೀಸ್
ಸೆಂಟಿನಿಲೀಸ್ ಬುಡಕಟ್ಟು ಜನಾಂಗದ ಬಗ್ಗೆ ಬುಧವಾರ ಬೆಳಗ್ಗೆಯಿಂದ ಮತ್ತೆ ಚರ್ಚೆ ಶುರುವಾಗಿದೆ. ಅಮೆರಿಕದ ಪ್ರವಾಸಿಯೊಬ್ಬನನ್ನು ಈ ಸಮುದಾಯದವರು ಕೊಂದಿದ್ದಾರೆ ಎಂಬುದು ಸುದ್ದಿ. ಅಮೆರಿಕದ ಜಾನ್ ಆಲೆನ್ ಚೌ ಹತ್ಯೆಗೀಡಾದ ವ್ಯಕ್ತಿ. ಯಾವುದೇ ಅನುಮತಿ ಪಡೆಯದೆ ಮೀನುಗಾರರು ಕರೆದೊಯ್ದಿದ್ದರು.
ಇಲ್ಲಿ ಮುಖ್ಯವಾದ ವಿಷಯ ಏನೆಂದರೆ, ಸಂರಕ್ಷಿತ ಬುಡಕಟ್ಟು ಜನಾಂಗ ಸೆಂಟಿನಿಲೀಸ್ ಬಗ್ಗೆ ಬಹಳ ಮಾಹಿತಿ ಗೊತ್ತಿಲ್ಲ. ಮೂರು ದಶಕಗಳಿಂದ ಮಾಡಿರುವ ವೈಜ್ಞಾನಿಕ ಅಧ್ಯಯನವು ಅವರ ಜೀವನ ಶೈಲಿ ಹಾಗೂ ಅವರ ಬಗ್ಗೆ ಕೆಲ ಮಟ್ಟಿಗಿನ ಪ್ರಾಥಮಿಕ ಮಾಹಿತಿಯನ್ನು ಒದಗಿಸಿದೆ. ಅದು ಕೂಡ ಬಹಳ ಆಸಕ್ತಿಕರವಾಗಿದೆ.
ಸೆಂಟಿನಿಲೀಸ್ ಬಗೆಗಿನ ಕುತೂಹಲಕರ ಸಂಗತಿಗಳು ಇಲ್ಲಿವೆ:
* ಆಫ್ರಿಕಾ ಮೂಲದವರಾದ ಈ ಜನಾಂಗವು ಮಾನವನ ಉದಯದ ಆರಂಭ ಕಾಲದ ಮುಂದುವರಿಕೆ ಎಂದು ನಂಬಲಾಗಿದೆ. ಅವರು ಮಾತನಾಡುವ ಭಾಷೆಯು ಇದೇ ಪ್ರದೇಶದ ಇತರ ಬುಡಕಟ್ಟು ಸಮುದಾಯದವರಿಗೂ ಅರ್ಥವಾಗಲ್ಲ.
ಅಂಡಮಾನ್-ನಿಕೋಬಾರ್ ನಲ್ಲಿ ಅಮೆರಿಕ ಪ್ರವಾಸಿಗನ ಹತ್ಯೆ, ಶವಕ್ಕಾಗಿ ಶೋಧ
* ಪೋರ್ಟ್ ಬ್ಲೇರ್ ಪಶ್ಚಿಮಕ್ಕೆ ಐವತ್ತು ಕಿ.ಮೀ. ಇರುವ ದ್ವೀಪದಲ್ಲಿ ಇವರು ವಾಸಿಸುತ್ತಾರೆ. ಆ ಸಮುದಾಯದವರ ಸಂಖ್ಯೆ ನೂರೈವತ್ತಕ್ಕಿಂತ ಕಡಿಮೆ ಹಾಗೂ ನಲವತ್ತರಷ್ಟಿರಬಹುದು ಎಂದು ನಂಬಲಾಗಿದೆ.
* ಕಳೆದ ಅರವತ್ತು ಸಾವಿರ ವರ್ಷದ ಅವಧಿಯಲ್ಲಿ ಇವರ ಜೀವನದಲ್ಲಿ ಯಾವುದೇ ಪ್ರಗತಿ ಆಗಿಲ್ಲ. ತುಂಬ ನಿಯಮಿತವಾದ ಬದುಕು ಅವರದು. ಮುಖ್ಯವಾಗಿ ಮೀನು ಹಾಗೂ ತೆಂಗಿನಕಾಯಿ ಅವರ ಆಹಾರ.
* ಹೊರಜಗತ್ತಿನ ಜತೆಗೆ ಸಂಪರ್ಕವೇ ಇಲ್ಲದ ಈ ಜನರಿಗೆ ಸುಲಭವಾಗಿ ಸೋಂಕು ತಗಲುಬಹುದು. ಇಲ್ಲಿಗೆ ಭೇಟಿ ನೀಡುವ ವ್ಯಕ್ತಿಯೊಬ್ಬ ಯಾವುದೋ ಸಾಮಾನ್ಯ ಸೋಂಕಿನಿಂದ ಇಡೀ ಬುಡಕಟ್ಟು ಸಮುದಾಯವೇ ನಾಶವಾಗುವ ಸಾಧ್ಯತೆಗಳಿವೆ.
* ಕಳೆದ ಐವತ್ತು ವರ್ಷಕ್ಕೂ ಹೆಚ್ಚು ಸಮಯದಿಂದ ಅವರನ್ನು ತಲುಪಲು ಮಾಡಿದ ಎಲ್ಲ ಪ್ರಯತ್ನಗಳೂ ವಿಫಲವಾಗಿವೆ. ನಾವು ಯಾರ ಜತೆಗೂ ಬೆರೆಯಲು ಬಯಸುವುದಿಲ್ಲ ಎಂಬುದನ್ನು ಆಕ್ರಮಣಕಾರಿ ಧಾಟಿಯಲ್ಲಿ ಪದೇ ಪದೇ ವ್ಯಕ್ತಪಡಿಸಿದ್ದಾರೆ.
* ಈ ಸಮುದಾಯದ ಜತೆ ಸ್ನೇಹ ಸಂಪರ್ಕ ಸಾಧಿಸಲು ಸಾಧ್ಯವಾದ ಏಕೈಕ ವ್ಯಕ್ತಿ ತ್ರಿಲೋಕ್ ನಾಥ್ ಪಂಡಿತ್. ಅದೂ 1991ರಲ್ಲಿ.
* 1981ರಲ್ಲಿ ಸರಕು ಹಡಗು ಎಂವಿ ಪ್ರಿಮ್ ರೋಸ್ ಉತ್ತರ ಸೆಂಟಿನೆಲ್ ದ್ವೀಪದಲ್ಲಿ ತಂಗಿತ್ತು. ಭಾರತೀಯ ಹೆಲಿಕಾಪ್ಟರ್ ಗಳು ವಾರದ ನಂತರ ಆ ಸಿಬ್ಬಂದಿಯನ್ನು ರಕ್ಷಿಸಿದವು. ಆ ಹಡಗಿನ ಅವಶೇಷಗಳು ಇಂದಿಗೂ ಅಲ್ಲಿ ಕಾಣಲು ಸಿಗುತ್ತವೆ.
* 2006ರಲ್ಲಿ ಆ ದ್ವೀಪಕ್ಕೆ ತೆರಳಿದ್ದ ಇಬ್ಬರು ಮೀನುಗಾರರನ್ನು ಈ ಸಮುದಾಯದವರು ಕೊಂದಿದ್ದರು. 2004ರಲ್ಲಿ ಸುನಾಮಿ ಸಂಭವಿಸಿದಾಗ ಕೂಡ ಸೆಂಟಿನಿಲೀಸ್ ಹೊರ ಜಗತ್ತಿನಿಂದ ಯಾವುದೇ ಸಹಾಯ ಪಡೆಯಲಿಲ್ಲ. ನೆರವಿಗೆ ಧಾವಿಸಿದ ಪರಿಹಾರ ಕಾರ್ಯಾಚರಣೆ ಹೆಲಿಕಾಪ್ಟರ್ ಮೇಲೆ ಬಾಣ ಹಾಗೂ ಚೂಪಾದ ಆಯುಧಗಳನ್ನು ತೂರಿದ್ದರು.
* ಸೆಂಟಿನಿಲೀಸ್ ಪ್ರತ್ಯೇಕವಾಗಿ ಬದುಕುವುದಕ್ಕೆ ಸೂಕ್ತ ವಾತಾವರಣ ನಿರ್ಮಿಸಲು ಭಾರತ ಸರಕಾರ ಕಾನೂನು ರೂಪಿಸಿದೆ. ಅದರ ಅಡಿಯಲ್ಲಿ ಯಾರೇ ಆಗಲಿ ಕಾನೂನುಬಾಹಿರವಾಗಿ ಈ ಸಮುದಾಯದವರನ್ನು ಸಂಪರ್ಕಕ್ಕೆ ಯತ್ನಿಸುವಂತಿಲ್ಲ.
* ಈ ವರ್ಷದ ಆರಂಭದಲ್ಲಿ ಭಾರತ ಸರಕಾರವು ಕೇಂದ್ರಾಡಳಿತ ಪ್ರದೇಶದ ಈ ದ್ವೀಪವೂ ಸೇರಿ ಇಪ್ಪತ್ತೆಂಟು ಇತರೆ ದ್ವೀಪಗಳನ್ನು ನಿರ್ಬಂಧಿತ ಪ್ರದೇಶ ಅನುಮತಿಯಿಂದ 2022ರ ಡಿಸೆಂಬರ್ ತನಕ ತೆಗೆಯಲಾಯಿತು. ಇದರರ್ಥ ಯಾವುದೇ ವಿದೇಶೀಯರು ಸರಕಾರದ ಅನುಮತಿ ಇಲ್ಲದೆ ದ್ವೀಪಕ್ಕೆ ತೆರಳಬಹುದು ಎಂದು ಪಿಟಿಐ ಸುದ್ದಿ ಸಂಸ್ಥೆಯು ವರದಿ ಮಾಡಿದೆ.