ಯಶೋಗಾಥೆ: SSLCಯಲ್ಲಿ ಜಸ್ಟ್ ಪಾಸ್ ಆಗಿದ್ದ ತುಷಾರ್ ಈಗ ಐಎಎಸ್ ಅಧಿಕಾರಿ
ಮಕ್ಕಳ ಭವಿಷ್ಯವನ್ನು ಹಲವಾರು ಜನ ಪೋಷಕರು ಅಂಕಪಟ್ಟಿಯಲ್ಲಿ ಅಳೆದುಬಿಡುತ್ತಾರೆ. ಶಾಲಾ ದಿನಗಳಲ್ಲಿ ಒಂದೆರೆಡು ವರ್ಷ ಜಸ್ಟ್ ಪಾಸಾಗಿದ್ದರೆ ಸಾಗಿ ಮಕ್ಕಳ ಭವಿಷ್ಯವನ್ನು ಅಳೆಯುವ ಪೋಷಕರು ನಮ್ಮಲ್ಲಿ ಹಲವಾರು ಜನ ಇದ್ದಾರೆ. ಕಡಿಮೆ ಅಂಕ ಪಡೆದರೆ ಸಾಕು ಮಕ್ಕಳು ಮುಂದೆ ಓದುವ ಅಗತ್ಯತೆ ಇಲ್ಲ, ಆತನಿಗೆ ಮುಂದೆ ಯಾವುದೇ ಕೆಲಸ ಸಿಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಎಷ್ಟೋ ಜನ ಮಕ್ಕಳು ಕಡಿಮೆ ಅಂಕ ಪಡೆದಾಗ ಶಾಲೆ ಬಿಡಿಸಿ ಕೆಲಸಕ್ಕೆ ಕಳುಹಿಸಿದ ಉದಾಹರಣಗಳು ನಮ್ಮಲ್ಲಿ ಸಾಕಷ್ಟು ಇವೆ.
ಆದರೆ ಇಂದು ಕಡಿಮೆ ಅಂಕ ಪಡೆದ ಹುಡುಗ ಮುಂದಿನ ಭವಿಷ್ಯದಲ್ಲಿ ಐಎಎಸ್ ಅಧಿಕಾರಿ ಆಗಬಹುದು ಎಂದು ಯೋಚಿಸುವ ಪೋಷಕರು ನಮ್ಮಲ್ಲಿ ಇದ್ದಾರಾ? ಇದ್ದರೂ ಅದು ಬೆರಳೆಣಿಯಷ್ಟು. ಅಷ್ಟಕ್ಕೂ ಈ ವಿಚಾರ ಹೇಳುವುದಕ್ಕೂ ಕಾರಣ ಇದೆ. ಇಲ್ಲಿ ಶಾಲೆಯಲ್ಲಿ ಜಸ್ಟ್ ಪಾಸಾಗಿದ್ದ ಹುಡುಗನೊಬ್ಬ ಈಗ ಐಎಎಸ್ ಅಧಿಕಾರಿಯಾಗಿದ್ದಾರೆ. ಅವರ ಹೆಸರು ತುಷಾರ್ ಸುಮೇರಾ. ತುಷಾರ್ ಎಲ್ಲಿಯವರು ಏನಿವರ ಸಾಧನೆ? ಹೆಚ್ಚಿನ ಮಾಹಿತಿ ಮುಂದೆ ಓದಿ...
ಐಎಸ್ಎಸ್ ಅಧಿಕಾರಿ ತುಷಾರ್
ಹೌದು... ತುಷಾರ್ ಸುಮೇರಾ ಭರೂಚ್ (ಗುಜರಾತ್) ನಲ್ಲಿ ನೇಮಕಗೊಂಡು ಭಾರತೀಯ ಆಡಳಿತ ಸೇವೆ (IAS) ಅಧಿಕಾರಿಯಾಗಿದ್ದಾರೆ. ಅವರ 10 ನೇ ತರಗತಿಯ ಅಂಕಪಟ್ಟಿ ಆನ್ಲೈನ್ನಲ್ಲಿ ವೈರಲ್ ಆಗಿದೆ. ಅದು ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆಂದು ತೋರಿಸುತ್ತದೆ. ಆದರೆ ಅವರ ಅಂಕ ನೋಡಿದರೆ ನೀವು ಗಾಬರಿಯಾಗುತ್ತೀರಿ. ಸುಮೇರಾ ಇಂಗ್ಲಿಷ್ನಲ್ಲಿ 100ಕ್ಕೆ 35, ಗಣಿತದಲ್ಲಿ 36 ಮತ್ತು ವಿಜ್ಞಾನದಲ್ಲಿ 38 ಪಡೆದಿದ್ದಾರೆ. ಹೀಗೆ ಜಸ್ಟ್ ಪಾಸ್ ಆಗಿದ್ದ ಹುಡುಗ ಇವತ್ತು ಐಎಎಸ್ ಅಧಿಕಾರಿಯಾಗಿದ್ದಾರೆ.
ಸಾಧನೆ ಮಾಡುತ್ತಾರೆಂದು ಯಾರೂ ಕೂಡ ನಂಬಿರಲಿಲ್ಲ
ಹೀಗೆ ಕಡಿಮೆ ಅಂಕ ಪಡೆಯುತ್ತಿದ್ದ ತುಷಾರ್ ಅವರನ್ನು ಶಾಲೆಯಲ್ಲಾಗಲೀ ಅವರ ಹಳ್ಳಿಯಲ್ಲಾಗಲೀ ಅವರು ಇಂತಹದೊಂದು ಸಾಧನೆ ಮಾಡುತ್ತಾರೆಂದು ಯಾರೂ ಕೂಡ ನಂಬಿರಲಿಲ್ಲ. ತುಷಾರ್ ಸುಮೇರಾ ಜೀವನದಲ್ಲಿ ಗಮನಾರ್ಹವಾದುದನ್ನು ಸಾಧಿಸುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ಆರಂಭದಲ್ಲಿ ಅವರು ಸರ್ಕಾರಿ ಶಾಲೆಯಲ್ಲಿ ಪಾಠ ಮಾಡಲು ಪ್ರಾರಂಭಿಸಿದರು. ನಂತರ 2021 ರಲ್ಲಿ ಅವರು UPSC ನಲ್ಲಿ ಉತ್ತಮ ಅಂಕದಿಂದ ತೇರ್ಗಡೆಯಾದರು.
ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ
2009 ರ ಐಎಎಸ್ ಬ್ಯಾಚ್ನ ಅವನೀಶ್ ಶರಣ್ ಅವರು ತುಷಾರ್ ಸುಮೇರಾ ಅವರ ಮಾರ್ಕ್ಶೀಟ್ ಅನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ನಂತರ ಪೋಸ್ಟ್ ಆದ ಅಂಕಪಟ್ಟಿ ತಮ್ಮದೇ ಎಂದು ತುಷಾರ್ ಸುಮೇರಾ ಒಪ್ಪಿಕೊಂಡರು ಮತ್ತು ಶರಣ್ ಅವರಿಗೆ ಧನ್ಯವಾದ ಹೇಳಿದರು. ಅಂದಿನಿಂದ ಅಂಕಪಟ್ಟಿ ವೈರಲ್ ಆಗಿದೆ. ತುಷಾರ್ ಸುಮೇರಾ ಅವರ ಜೀವನ ಕಥೆಯನ್ನು ಅನೇಕರು ಸ್ಫೂರ್ತಿದಾಯಕವೆಂದು ಹಂಚಿಕೊಂಡಿದ್ದಾರೆ.
ಐಎಎಸ್ ಅಧಿಕಾರಿಯಾಗಿ ಕೆಲಸ
''ಐಎಎಸ್ ಅಧಿಕಾರಿಯಾಗಿ ಕೆಲಸ ಮಾಡುವುದು ತುಂಬಾ ತೃಪ್ತಿ ತಂದಿದೆ. ಒಂದೇ ದಿನದಲ್ಲಿ ಒಬ್ಬರು ಬೋರ್ಡ್ ಪರೀಕ್ಷೆಗಳು, ಸಾರ್ವಜನಿಕ ಆರೋಗ್ಯ ಕೇಂದ್ರ, ಮಮ್ಲತಾರ್ ಕಚೇರಿ ಮತ್ತು ಜನ ಸೇವಾ ಕೇಂದ್ರವನ್ನು ಪರಿಶೀಲಿಸುತ್ತಾರೆ. ಈ ಭೇಟಿ ಮತ್ತು ವಿಮರ್ಶೆಯು ಅನೇಕ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ತರುವ ಸಾಮರ್ಥ್ಯವನ್ನು ಹೊಂದಿದೆ. ನಿಜವಾಗಿಯೂ ಇದೊಂದು ಪ್ರಮುಖ ಪಾತ್ರ!" ಎಂದು ತುಷಾರ್ ಸುಮೇರಾ ಈ ಹಿಂದೆ ಟ್ವಿಟ್ಟರ್ನಲ್ಲಿ ಬರೆದಿದ್ದಾರೆ.ಹೀಗಾಗಿ ಯಾರನ್ನೂ ತಕ್ಷಣಕ್ಕೆ ಅಳೆಯಬಾರದು ಸಮಯ ಸಂದರ್ಭಗಳು ಅವರನ್ನು ಬದಲಾಯಿಸುತ್ತವೆ ಅನ್ನೋದಕ್ಕೆ ಇದೊಂದು ನಿದರ್ಶನ.
Recommended Video