ಹಾಗೆ ನೋಡಿದರೆ ಒಬಾಮಾಗೆ ರಾಹುಲ್ & ಭಾರತದ ಮನಸ್ಥಿತಿ ಮಾದರಿಯಾಗಬೇಕಿತ್ತು...
ಇದು ನಿಮಗೂ ಗೊತ್ತಿರುತ್ತದೆ. ಬಾಲ್ಯದ ಕೆಲವು ದುರ್ಘಟನೆಗಳು ವಯಸ್ಕತನದ ವರ್ತನೆಗಳನ್ನು ನಿರ್ಧರಿಸುವಂತಹ ಬಲ ಹೊಂದಿರುತ್ತವೆ. ಬಹಳಷ್ಟು ಸಲ ವ್ಯಕ್ತಿ ಬದುಕಿನ ಹಾದಿ ತಪ್ಪಿಸುವುದು ಅಥವಾ ಸರಿಪಡಿಸುವ ಸಾಮರ್ಥ್ಯವನ್ನೂ ಇಂತಹ ಘಟನೆಗಳು ಹೊಂದಿರುತ್ತವೆ. ಬಾಲ್ಯದ ದುರಂತ, ದುಗುಡದ ದಿನಗಳೇ ವಯಸ್ಕತನದ ವಕ್ರತೆ, ವಿಕೃತಿಯ ವ್ಯಕ್ತಿತ್ವಕ್ಕೂ ಕಾರಣ. ಇದು ಕೇವಲ ಮನೋವಿಜ್ಞಾನದ ವಿವರಣೆಗಳಿಗಷ್ಟೇ ಸೀಮಿತವಲ್ಲ.
ಜನಪ್ರಿಯ ಮಾಧ್ಯಮವಾಗಿರುವ ಸಿನೆಮಾದಲ್ಲಿ ನಾಯಕ ಚಿಕ್ಕ ವಯಸ್ಸಿನಲ್ಲಿ ನಡೆದ ದುರ್ಘಟನೆಯೊಂದರ ಕಾರಣಕ್ಕೆ ಏನೇನೂ ಮಾಡುತ್ತಾನೆ, ಮತ್ತು ಅದನ್ನು ಜನ ಒಪ್ಪಿಕೊಂಡು ಚಪ್ಪಾಳೆ ತಟ್ಟುತ್ತಾರೆ, ಮಾನಸಿಕ ಸಮರ್ಥನೆ ನೀಡಿಕೊಂಡು ಬರುತ್ತಿದ್ದಾರೆ.
ಒಬಾಮಾ ಪುಸ್ತಕದಲ್ಲಿ ರಾಹುಲ್ ಕುರಿತ ಅಭಿಪ್ರಾಯಕ್ಕೆ ಸಂಜಯ್ ರಾವತ್ ವಿರೋಧ
ದೇಶ, ಭಾಷೆ ಯಾವುದಾಗಿದ್ದರೂ ಸರಿಯೇ ಬೆಳೆಯುವ ಮಕ್ಕಳ ಮನಸಿನ ಮೇಲೆ ಹಿಂಸೆ, ಅಪಮಾನಗಳು ಇದ್ದಂತಹ ಪಕ್ಷದಲ್ಲಿ ಪರಿಣಾಮಗಳು ನಿಧಾನವಾಗಿ ಕಾಣಿಸಿಕೊಳ್ಳುತ್ತವೆ.
ಮಕ್ಕಳ ಮನಸ್ಸಿನಲ್ಲಾಗುವ ಈ ಪರಿಣಾಮಗಳು ಸಾಮಾನ್ಯ.ವಾಗಿ ಹಿಂಸೆಗೆ ಪ್ರತಿಹಿಂಸೆ, ಅಪಮಾನಕ್ಕೆ ಪ್ರತೀಕಾರ ಅಥವಾ "ಮುಯ್ಯಿಗೆ ಮುಯ್ಯೀ" ಎನ್ನುವ ಗಾದೆಯ ಮಾತಿನ ರೀತಿಯಲ್ಲಿಯೇ ನೆರವೇರುತ್ತವೆ. ಒಟ್ಟಿನಲ್ಲಿ ಹೇಳುವುದಾದರೇ ಬಾಲ್ಯದ ದಿನಗಳು ಅತಿಸೂಕ್ಷ್ಮದದ ದಿನಗಳು. ಸಮಾಜ ವಿರೋಧಿ ಕೃತ್ಯ, ಆತಂಕವಾದ, ನಯವಂಚನೆ, ಕಪಟತನದ ವರ್ತನೆಗಳಂತೆಯೇ , ಧರ್ಮಶ್ರದ್ಧೆ, ಸತ್ಯ, ನಿಷ್ಠೆ, ಶಿಸ್ತು, ಸೃಜನಶೀಲತೆಯ ವ್ಯಕ್ತಿತ್ವಗಳನ್ನು ರೂಪಿಸುವಂತಹ ಕ್ಷಣಗಳು ಬಾಲ್ಯದ ದುರಂತಗಳ ಹಿನ್ನೆಲೆಯಲ್ಲಿಯೇ ಮೊಳಕೆಯೊಡೆಯುತ್ತವೆ.
ವಿಕೃತ ವ್ಯಕ್ತಿಗಳಾಗುವುದಕ್ಕೂ ಬಾಲ್ಯದ ಬವಣೆಗಳು ಕಾರಣವೆನ್ನುವುದನ್ನು ಬೆಂಬಲಿಸುವ ಮನೋವಿಜ್ಞಾನದ ಅಧ್ಯಯನಗಳು ಹೇರಳ. ಹೆಚ್ಚಿನ ಪ್ರಕರಣಗಳಲ್ಲಿದು ಬಾಲ್ಯದಲ್ಲಿ ಜರುಗಿದ ದೌರ್ಜನ್ಯದ ಸನ್ನಿವೇಶಗಳ ನೆನಪಿನ ಅವಶೇಷಗಳಿಂದಲೇ ಜನಿಸುವುದು.
ಇಂತಹ ಮನೋವಿಕಾಸಕ್ಕೆ, ಬಡವ, ಬಲ್ಲಿದ ಎನ್ನುವ ಭೇದಗಳಿರದು. ದೌರ್ಜನ್ಯ, ಹಿಂಸೆಗೆ ಒಳಗಾಗುವ ಯಾವುದೇ ಮಗುವಿನ ಮನಸ್ಸು ಅಷ್ಟೊಂದು ಸುಲಭವಾಗಿ ಎಲ್ಲವನ್ನು ಮರೆಯಲು ಸಾಧ್ಯವಾಗುವುದಿಲ್ಲ. ಹಾಗೆಯೇ ಅವುಗಳನ್ನು ಯಶಸ್ವಿಯಾಗಿ ನಿರ್ವಹಿಸುವಂತಹ ಅವಕಾಶಗಳಿದ್ದರೂ ಸಹ ಒಂದಲ್ಲಾ ಒಂದು ರೀತಿಯ ಕೊರತೆಗಳು ನಡೆನುಡಿ, ಹೊಂದಾಣಿಕೆಯ ಮೂಲಕ ಕಾಣಿಸಿಕೊಳ್ಳಬಲ್ಲದು.
ಬರಾಕ್ ಒಬಾಮ ಹೊಸ ಪುಸ್ತಕದಲ್ಲಿ ರಾಹುಲ್ ಗಾಂಧಿ ಬಗ್ಗೆ ಲೇವಡಿ
ಶಾಲೆಯ ದಿನಗಳಲ್ಲಿ ಮಹಾತ್ಮಾ ಗಾಂಧೀಜಿಯವರಿಗೆ ಸಹಪಾಠಿಯ ಉತ್ತರವನ್ನು ಕಾಪಿಡಿಸು ಎಂದು ಹೇಳಿದ ಶಿಕ್ಷಕರ ಮಾತನ್ನು ಒಪ್ಪದಿದ್ದದ್ದೂ ಕೂಡ ಅವರ ಸತ್ಯಪ್ರಜ್ಞೆಯನ್ನು ಬಲಪಡಿಸಿದ ಮೂಲ ಘಟನೆ ಎನ್ನುತ್ತದೆ ಮನೋವಿಜ್ಞಾನ. ಈ ಮಾದರಿಯ ಬಾಲ್ಯದ ಅನುಭವಗಳೇ ಕೆಲವರಿಗೆ ಪ್ರಖ್ಯಾತಿಯನ್ನು ತಂದುಕೊಟ್ಟಿದ್ದು ಬೆಳಕಿಗೆ ಬಂದಿದ್ದರೂ, ಬೆಳಕಿಗೆ ಬಾರದವುಗಳೂ ಸಾಮಾನ್ಯ ಜನರ ಜೀವನದ ಮೇಲೆ ಪರಿಣಾಮಗಳನ್ನು ಬೀರಿರುತ್ತವೆ.
ಇಷ್ಟೊಂದು ಸುದೀರ್ಘ ಪೀಠಿಕೆಗೆ ಕಾರಣ ಇತ್ತೀಚೆಗೆ ಸಾರ್ವಜನಿಕ ಚರ್ಚೆಯನ್ನು ಪ್ರಚೋದಿಸಿರುವ, ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಸಂಸದ ರಾಹುಲ್ ಗಾಂಧಿಯವರ ವ್ಯಕ್ತಿತ್ವದ ಲಕ್ಷಣಗಳ ಬಗ್ಗೆ ಆಡಿರುವಂತಹ ಮಾತುಗಳು.
ರಾಹುಲ್ ಗಾಂಧಿ ನಿರುತ್ಸಾಹ, ಶ್ರದ್ಧೆಯ ಲಕ್ಷಣಗಳು ಕಡಿಮೆ ಇರುವಂತಹ ವ್ಯಕ್ತಿ ಎನ್ನುವ ಅವರ ಅಭಿಪ್ರಾಯ ಬಹಳ ಹಗುರವಾಗಿ ಆಡಿರುವಂತಹ ಮಾತುಗಳು. ಬಾಲ್ಯದ ಬೆಳವಣಿಗೆಯಲ್ಲಿ ತಂದೆಯ ಪಾತ್ರ ಎಷ್ಟು ಮುಖ್ಯವೆನ್ನುವುದನ್ನು ಕಡೆಗಾಣಿಸಿ ಆಡಿರುವ ಅಪ್ರಬುದ್ಧ ತಿಳಿವಳಿಕೆ ಅದು.
ಈ ದೇಶದ ಇತಿಹಾಸದಲ್ಲಿ ಜರುಗಿದ ಭಯಂಕರ ದುರ್ಘಟನೆಗಳ ಪರಿಣಾಮವನ್ನು ನೇರವಾಗಿ ಎದುರಿಸಿದ ಬಾಲ್ಯ ಪ್ರಿಯಾಂಕ ಮತ್ತು ರಾಹುಲ್ ಗಾಂಧಿ ಅವರದ್ದು. ಮಧ್ಯವಯಸ್ಸಿನಲ್ಲಿದ್ದ ತಂದೆಯ ಘೋರ ಹತ್ಯೆ, ಅಜ್ಜಿಯ ಘೋರ ಹತ್ಯೆಯನ್ನು ಎದುರಿಸಿದವರವರುಗಳು.
ಇನ್ನೂ ಆಳಕ್ಕೆ ಇಳಿಯುವುದಾದರೆ, ಚಿಕ್ಕ ವಯಸ್ಸಿನಲ್ಲಿ ಭಯಾನಕ ಘಟನೆಗಳಿಗೆ ಈಡಾದ ಮಕ್ಕಳು ಮುಂದೆ ಪ್ರತೀಕಾರ ಬಯಸುತ್ತಾರೆ. ಹಿಂಸಾತ್ಮಕತೆ, ಪರಪೀಡನೆ, ಮಹದಾಡಂಬರ, ರಾಜಕೀಯ ಕುಟಿಲತೆ, ಅಹಂ ಆರಾಧನೆಯ ಗುಣಗಳು ಸಹಜವಾಗಿಯೇ ಅಂತವರಲ್ಲಿ ಕಾಣಿಸಿಕೊಳ್ಳುವುದು ಸ್ವಾಭಾವಿಕ ಎನ್ನುತ್ತದೆ ಮನೋವಿಜ್ಞಾನ. ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿಯವರುಗಳಲ್ಲಿ ಇಂತಹ ಯಾವ ಗುಣಗಳು ಈವರೆಗೆ ಸಾರ್ವಜನಿಕವಾಗಿ ವ್ಯಕ್ತವಾಗಿಲ್ಲ ಎಂಬುದು ಗಮನಾರ್ಹ.
ಈ ಮಾತನ್ನು ಬಲಪಡಿಸುವಂತಹ ಒಂದು ಉದಾಹರಣೆ ಎಂದರೆ, 1963ರಲ್ಲಿ ಅಮೆರಿಕದ ಡಲ್ಲಾಸ್ ನಗರದಲ್ಲಿ ಹತ್ಯೆಗೀಡಾದ ಅಮೆರಿಕದ ಅತ್ಯಂತ ಜನಪ್ರಿಯ ಅಧ್ಯಕ್ಷ ಜೆ.ಎಫ್ ಕೆನಡಿ ಪ್ರಕರಣ. ಕೆನಡಿ ಸತ್ತ ನಂತರದ ದುರಂತ ಪತ್ನಿ ಶ್ರೀಮತಿ ಜಾಕಿಲಿನ್ ಕೆನಡಿಯ ಬದುಕಿನ ರೀತಿಯನ್ನೇ ಸಂಪೂರ್ಣವಾಗಿ ಬದಲಾಯಿಸಿತು.
ಅದಕ್ಕೆ ಹೋಲಿಸಿದರೆ ತೊಂಬತ್ತರ ದಶಕದಲ್ಲಿ ಭಾರತದಲ್ಲಿ ಹತ್ಯೆಗೀಡಾದ ಭಾರತದ ಪ್ರಧಾನಿ ರಾಜೀವ ಗಾಂಧಿಯವರ ಧರ್ಮಪತ್ನಿ ಶ್ರೀಮತಿ ಸೋನಿಯಾ ಗಾಂಧಿಯವರ ಮೇಲಾದ ಪರಿಣಾಮಗಳು ದೊಡ್ಡ ಮಟ್ಟದ ಸಾರ್ವಜನಿಕ ಸಂಕಷ್ಟಕ್ಕೆ ಕಾರಣವಾಗಿಲ್ಲ. ಅವರ ವೈಯಕ್ತಿಕ ನಡೆನುಡಿಗಳನ್ನಾಗಲೀ, ಕುಟುಂಬದ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಾಗಲೀ ಉದಾಸೀನ ಮಾಡಿದಂತೆ ಕಂಡುಬರುವುದಿಲ್ಲ. ಬದಲಿಗೆ ಭಾರತೀಯ ಕೌಟುಂಬಿಕ ಮತ್ತು ಸಾಮಾಜಿಕ ಪರಂಪರೆಯ ಪ್ರಭಾವಗಳನ್ನೇ ಅಳವಡಿಸಿಕೊಂಡು ಮಕ್ಕಳ ಪಾಲನೆ, ಪೋಷಣೆ ಮಾಡಿರುವುದು ಮುಖ್ಯ.
ಮತ್ತು, ಇಂತಹ ಪ್ರಬುದ್ಧ ಸಂಗತಿಗಳನ್ನು ಯಾವ ಲಾಭಕ್ಕೂ ಬಳಸಿಕೊಳ್ಳದೇ, ಸಾರ್ವಜನಿಕರ ಕರುಣೆ, ಮರುಕ ನಿರೀಕ್ಷಿಸದೇ ಸಾಮಾನ್ಯರ ಕುಟುಂಬವೆನ್ನುವಂತೆ ಇದ್ದಿದ್ದು ಈ ನೆಲದ ಬಲ ಎನ್ನುಬಹದು.
ಇವೆಲ್ಲವನ್ನು ಗಮನಿಸಿದಾಗ ಅಮೆರಿಕದ ಮಾಜಿ ಅಧ್ಯಕ್ಷ ಒಬಾಮ ಅವರ ಕೃತಿಯಲ್ಲಿ ಕಂಡುಬರುವ ರಾಹಲ್ ಗಾಂಧಿಯವರ ಬಗ್ಗೆ ಬರೆದಿರುವ ವಾಕ್ಯಗಳು ಪೂರ್ವಗ್ರಹ ಪೀಡಿತ ಎಂದೆನಿಸುವುದಿಲ್ಲವೆ?