ಭಾರತದ ಭೀಕರ ಪ್ರವಾಹಗಳು, 1 ಲಕ್ಷ ಮಂದಿ ಮೃತರು, 4 ಲಕ್ಷ ಕೋಟಿ ನಷ್ಟ
Recommended Video
ಕಳೆದ 65 ವರ್ಷಗಳಲ್ಲಿ ಭಾರತದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಅತಿವೃಷ್ಟಿಯಿಂದಾದ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಇದೇ ವರ್ಷದ ಮಾರ್ಚ್ ನಲ್ಲಿ ರಾಜ್ಯಸಭೆಯಲ್ಲಿ ಮಂಡಿಸಿದ ವರದಿಯಲ್ಲಿ ಈ ಬಗ್ಗೆ ಮಾಹಿತಿ ಬಹಿರಂಗವಾಯಿತು.
ಮಳೆಯಿಂದಾದ ಅನಾಹುತಗಳಲ್ಲಿ 1,07,487 ಜನರು ಮೃತರಾದರೆಂದೂ, 3,65,860 ಕೋಟಿ ರುಪಾಯಿಗಳಷ್ಟು ಬೆಲೆ ಬಾಳುವ ಬೆಳೆ, ಮನೆ ಮತ್ತಿತರ ಸಾರ್ವಜನಿಕ ಆಸ್ತಿಯು ಹಾನಿಗೊಳಗಾಗಿದೆ ಎಂದು ಕೇಂದ್ರೀಯ ಜಲ ಸಂಪನ್ಮೂಲ ಸಚಿವಾಲಯ ತಿಳಿಸಿದೆ.
ಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗ
ಪ್ರವಾಹದಿಂದ ಉಂಟಾಗುವ ಒಟ್ಟಾರೆ ಸಾವು- ನೋವುಗಳಲ್ಲಿ ಜಗತ್ತಿನ ಐದನೆಯ ಒಂದರಷ್ಟು ಜೀವ ಬಲಿ ಭಾರತ ಒಂದರಲ್ಲೇ ಸಂಭವಿಸುತ್ತವೆ ಎಂದು ವಿಶ್ವ ಬ್ಯಾಂಕಿನ ಅಧ್ಯಯನ ವರದಿ ತಿಳಿಸುತ್ತದೆ. ಅದೂ ಸಾಲದೆಂಬಂತೆ 2050ರ ಹೊತ್ತಿಗೆ ಭಾರತದ ಅರ್ಧದಷ್ಟು ಜನಸಂಖ್ಯೆಯು ಹವಾಮಾನ ಬದಲಾವಣೆಯ ದುರಂತವನ್ನು ಅನುಭವಿಸಲಿದೆ ಎಂದೂ ಅದೇ ವರದಿಯು ಹೇಳಿದೆ.
ಭೂಮಿಯ ತಾಪಮಾನದಲ್ಲಿ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಉಂಟಾದ ವಾತಾವರಣದ ಬದಲಾವಣೆಯು ಭೌಗೋಳಿಕವಾಗಿ ಮಳೆಯ ಏರುಪೇರನ್ನೂ, ಅಕಾಲಿಕ -ಅನಿರೀಕ್ಷಿತ ಅತಿವೃಷ್ಟಿ-ಅನಾವೃಷ್ಟಿಯನ್ನೂ ತಂದೊಡ್ಡಿದೆ.
ಕೇರಳ ಜಲಪ್ರಳಯ: ಚಿತ್ರಗಳ ಜೊತೆ ಸಂಪೂರ್ಣ ಮಾಹಿತಿ
ಇಡೀ ಜಗತ್ತಿನ ಮಳೆಯ ವಿಶ್ಲೇಷಣೆಯನ್ನು ಮಾಡಿದರೆ ಒಟ್ಟು ಮಳೆಯ ಪ್ರಮಾಣದಲ್ಲೇನೂ ಮಹತ್ತರವಾದ ಬದಲಾವಣೆಯಾಗಿಲ್ಲ. ಆದರೆ ಎರಡು ಮಳೆಯ ನಡುವಿನ ಅಂತರ ಅಥವಾ ಒಮ್ಮೆಲೇ ಸುರಿವ ಒಟ್ಟು ಮಳೆಯ ಪ್ರಮಾಣದಲ್ಲಿ ಮಹತ್ತರವಾದ ಬದಲಾವಣೆಗಳಾಗಿವೆ. ಅದೇ ಮಳೆ ಈಗಿನ ಒಟ್ಟಾರೆ ಬದಲಾವಣೆಯ ಮೈಲುಗಲ್ಲಾಗಿ ಬದಲಾಗಿದೆ.
ಭಾರತದಲ್ಲಿ ಇದುವರೆಗೂ ಕಂಡ ಭಾರೀ ಪ್ರವಾಹಗಳ ಪಟ್ಟಿ ಇಂತಿದೆ :
1943ನೇ ಇಸವಿ, 10,000 ಜನರು ಸಾವು
ಎಲ್ಲೆಲ್ಲಿ ಹಾನಿ?: ಚೆನ್ನೈ, ಮದ್ರಾಸ್ ಪ್ರಾಂತ್ಯ. 6 ದಿನಕ್ಕೂ ಹೆಚ್ಚು ದಿನ ನಿರಂತರ ಮಳೆಯಿಂದಾಗಿ ಕೋವಂ ನದಿ ದಂಡೆಯಲ್ಲಿದ್ದ ಕೊಳೆಗೇರಿ ನಿವಾಸಿಗಳಿಗೆ ಹೆಚ್ಚು ಹಾನಿ.
1955ನೇ ಇಸವಿ, 1,700 ಜನರು ಸಾವು
ಎಲ್ಲೆಲ್ಲಿ ಹಾನಿ?: ಉತ್ತರ ಭಾರತದ ರಾಜ್ಯಗಳು. ಮುಂಗಾರು ಮಳೆ ಉತ್ತರ ಭಾರತದ ಮೂರು ರಾಜ್ಯಗಳನ್ನು ನಲುಗಿಸಿತ್ತು. ಸಾವಿರಾರು ಮನೆಗಳು ನೆಲಸಮವಾಗಿ, ಜನ ಜೀವನ ಅಸ್ತವ್ಯಸ್ತವಾಯಿತು.
1961, 1,000 ಜನರು ಸಾವು
ಎಲ್ಲೆಲ್ಲಿ ಹಾನಿ?: ಬಿಹಾರದ ಪಾಟ್ನಾ ಸುತ್ತಮುತ್ತ ಭಾರೀ ಮಳೆ ಹಾಗೂ ಬನ್ ಸಾಗರ್ ಮತ್ತು ರಿಹಾಂಡ್ ಜಲಾಶಯದಿಂದ ಹೆಚ್ಚಿನ ನೀರು ಬಿಟ್ಟ ಪರಿಣಾಮ ಉಂಟಾದ ಪ್ರವಾಹದಿಂದಾಗಿ 12 ಗ್ರಾಮಗಳು ಜಲಾವೃತಗೊಂಡು ಮನೆಗಳು ಕುಸಿದವು.
1968, 4,892 ಜನರು ಸಾವು
ಎಲ್ಲೆಲ್ಲಿ ಹಾನಿ?: ರಾಜಸ್ತಾನ ಮತ್ತು ಗುಜರಾತ್ ನಲ್ಲಿ ಸತತ ಮಳೆ ಹಾಗೂ ಪ್ರವಾಹದಿಂದ 25,000 ಜನರನ್ನು ತಗ್ಗು ಪ್ರದೇಶದಿಂದ ಸ್ಥಳಾಂತರಿಸಲಾಯಿತು. 4 ದಿನಗಳಲ್ಲಿ 506 ಮಿ.ಮೀ. ಮಳೆ ಬಿದ್ದು, ಪಾಟ್ನಾ ಹಾಗೂ ಸುತ್ತಮುತ್ತಲಿನ ಪ್ರದೇಶ ಜಲಾವೃತವಾಗಿತ್ತು.
1978, 3,800 ಜನರು ಸಾವು
ಎಲ್ಲೆಲ್ಲಿ ಹಾನಿ?: ಉತ್ತರ ಭಾರತ: ಭಾರೀ ಮಳೆಯಿಂದಾಗಿ ದಿಲ್ಲಿ ತುರ್ತುಪರಿಸ್ಥಿತಿಯ ದಿನಗಳನ್ನು ನೆನಪಿಸಿತು. 4 ಲಕ್ಷ ಜನರು ಹಾನಿಗೀಡಾಗಿದ್ದರು. ದೂರವಾಣಿ, ವಿದ್ಯುತ್ ಸಂಪರ್ಕ ಕಡಿತಗೊಂಡಿತು
2004, 3,076 ಜನರು ಸಾವು
ಎಲ್ಲೆಲ್ಲಿ ಹಾನಿ?: ಪೂರ್ವ ಭಾರತ (ಬಾಂಗ್ಲಾ ಗಡಿ): ಪೂರ್ವ ಭಾರತ ಬಾಂಗ್ಲಾ ಗಡಿಯಲ್ಲಿ ಉಂಟಾದ ಪ್ರವಾಹದಿಂದ ಗಡಿ ಭಾಗದಲ್ಲಿದ್ದ ಜನರು ತೀವ್ರ ಸಂಕಷ್ಟಕ್ಕೆ ಒಳಗಾದರು.
2005, 1,503 ಜನರು ಸಾವು
ಎಲ್ಲೆಲ್ಲಿ ಹಾನಿ?: ಮಹಾರಾಷ್ಟ್ರ ಮತ್ತು ಕರ್ನಾಟಕ: ಮುಂಬೈನಲ್ಲಿ 12 ಗಂಟೆಗಳ ಕಾಲ ಕುಂಭದ್ರೋಣ ಮಳೆ ಸುರಿದು ಇತಿಹಾಸದಲ್ಲಿ 8ನೇ ಅತಿ ಹೆಚ್ಚು (644 ಮಿ.ಮೀ) ಮಳೆ ಪ್ರಮಾಣ ದಾಖಲಾಯಿತು.
2008, 200 ಜನರು ಸಾವು
ಎಲ್ಲೆಲ್ಲಿ ಹಾನಿ?: ಕರ್ನಾಟಕ, ಆಂಧ್ರಪ್ರದೇಶ - ವಾಯುಭಾರ ಕುಸಿತದಿಂದ ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಭಾರೀ ಮಳೆಯಾಗಿ ಮನೆಗಳು ಕುಸಿದರೆ, ಬೆಳೆ ಹಾನಿ, 571 ಗ್ರಾಮಗಳ 17.5 ಲಕ್ಷ ಮಂದಿ ನಿರ್ವಸತಿಗರಾದರು.
2009, 139 ಜನರು ಸಾವು
ಎಲ್ಲೆಲ್ಲಿ ಹಾನಿ?: ಉತ್ತರ ಕರ್ನಾಟಕ. 8 ದಿನಗಳ ಕಾಲ ನಿರಂತರ ಮಳೆ. ತುಂಗಭದ್ರಾ, ಮಲಪ್ರಭಾ ಪ್ರವಾಹ, ನೂರಾರು ಗ್ರಾಮಗಳು ಜಲಾವೃತ, ಮಂತ್ರಾಲಯ ಮುಳುಗಡೆ
2013, 9,700 ಜನರು ಸಾವು
ಎಲ್ಲೆಲ್ಲಿ ಹಾನಿ?: ಉತ್ತರಾ ಖಂಡ್, ಉತ್ತರ ಪ್ರದೇಶ, ಛತ್ತೀಸ್ ಗಢ, ಮುಂಬೈ. ಕುಂಭದ್ರೋಣ ಮಳೆ: ಕೇದಾರನಾಥ್, ಹರಿದ್ವಾರ, ಹೃಷಿಕೇಶದಲ್ಲಿ ಭೂಕುಸಿತ, ಕಟ್ಟಡಗಳು ನೆಲಸಮ. ವಾಣಿಜ್ಯ ನಗರಿ ಸಂಪೂರ್ಣ ಜಲಾವೃತ.
2014, 400 ಜನರು ಸಾವು
ಎಲ್ಲೆಲ್ಲಿ ಹಾನಿ?: ಜಮ್ಮು-ಕಾಶ್ಮೀರ. ಜಮ್ಮುವಿನ ತಾವಿ, ಶ್ರೀನಗರ, ಕಾಶ್ಮೀರ, ವೈಷ್ಣೋದೇವಿಯಲ್ಲಿ ಭೂ ಕುಸಿತವಾಗಿ ರಸ್ತೆಗಳು ಬಂದ್, ಪ್ರಪಾತಕ್ಕೆ ಉರುಳಿದ ಬಸ್ ಗಳು.
2015, 431 ಜನರು ಸಾವು
ಎಲ್ಲೆಲ್ಲಿ ಹಾನಿ?: ತಮಿಳುನಾಡು-ಆಂಧ್ರ ಪ್ರದೇಶ. ಹಿಂದೆಂದೂ ಕಂಡರಿಯದ ಮಳೆಯಿಂದ ನಲುಗಿದ ತಮಿಳುನಾಡು. ಸಾವಿರಾರು ಮಂದಿ ನಿರ್ವಸತಿಗರಾದರು. ಚೆನ್ನೈ ಜಲಾವೃತವಾಯಿತು.
2016, 8,000 ಜನರು ಸಾವು
ಎಲ್ಲೆಲ್ಲಿ ಹಾನಿ?: ಪೂರ್ವ ಭಾರತ. ಅಸ್ಸಾಂನಲ್ಲಿ ಬ್ರಹ್ಮಪುತ್ರ್ ನದಿಯ ಪ್ರವಾಹದಿಂದಾಗಿ 18 ಲಕ್ಷ ಜನರಿಗೆ ಹಾನಿಯಾಯಿತು.
2018 ಇಲ್ಲಿಯವರೆಗೆ
ಎಲ್ಲೆಲ್ಲಿ ಹಾನಿ: ಕೇರಳ-ಕರ್ನಾಟಕದ ಕೊಡಗು, ಚಿಕ್ಕಮಗಳೂರು, ಮಂಗಳೂರು, ಶಿವಮೊಗ್ಗ 15 ದಿನಗಳಿಂದ ನಿರಂತರ ಮಳೆ, ನೂರಾರು ಜೀವ ಹಾನಿ, ತುಂಬಿದ ಜಲಾಶಯ, ಉಕ್ಕಿ ಹರಿದ ನದಿಗಳು, ಗ್ರಾಮಗಳು ಜಲಾವೃತ, ಭೂಕುಸಿತ, ಮನೆಗಳು ನೆಲಸಮ, 352 ಕೊಚ್ಚಿಹೋದ ಸೇತುವೆಗಳು