ಸೌದಿಯಲ್ಲಿ ಆ ಮಹಿಳೆಯರ ಕರಾಳ ದಿನ ಮತ್ತು ಪಾರಾಗಿ ಬಂದ ರೋಚಕ ಕತೆ
ಹೈದರಾಬಾದ್, ಮೇ 08: "ನನ್ನ ಬದುಕನ್ನು ಕೊನೆಯಾಗಿಸಿಕೊಳ್ಳಬೇಕೆಂದು ಗಟ್ಟಿಯಾಗಿ ನಿರ್ಧರಿಸಿದ್ದೆ, ಆದ್ದರಿಂದ ಬಾತ್ ರೂಮ್ ಕ್ಲೀನ್ ಮಾಡುವ ಲಿಕ್ವಿಡ್ ಅನ್ನು ನೀರು ಕುಡಿದಂತೆ ಕುಡಿದುಬಿಟ್ಟಿದ್ದೆ!" ಸೌದಿ ಅರೇಬಿಯಾದಲ್ಲಿ ನರಕದಂಥ ದಿನಗಳನ್ನು ಕಳೆದ ಜೈನಾಬ್ ಬೇಗಮ್ ಎಂಬ ಮಹಿಳೆ ಕಣ್ಣೀರೊರೆಸುತ್ತ ಹೇಳಿದ ಮಾತು ಇದು!
ಹೌದು, ಆಕೆಯ ಹೆಸರು ಜೈನಾಬ್ ಬೇಗಮ್. ಒಂದು ವರ್ಷದ ಹಿಂದೆ ಉತ್ತಮ ಸಂಬಳದ ಆಸೆಯಿಂದ, ಸ್ವಾಲಂಬಿಯ ಕನಸು ಹೊತ್ತು ಸೌದಿ ಅರೇಬಿಯಾಕ್ಕೆ ತೆರಳಿದ್ದ ಅವರಿಗೆ ಸಿಕ್ಕಿದ್ದು ಚಿತ್ರಹಿಂಸೆ, ಹತಾಶೆ ಮತ್ತು ಖಿನ್ನತೆಯ ಉಡುಗೊರೆ!
ನೆರವು ನೀಡಿದ ಸುಷ್ಮಾ ಸ್ವರಾಜ್ ಗೆ ಋಣಿ ಎಂದ ಹೈದರಾಬಾದ್ ಯುವಕ
ಇದು ಒಬ್ಬ ಜೈನಾಬ್ ಕತೆಯಲ್ಲ. ಶಾಹಿನ್ ನಗರದ ಇಲ್ಯಾಸ್ ಬೇಗಮ್, ಸಿಂಗರೇನಿ ಕಾಲೋನಿಯ ಅಮೇನಾ ಸಹ ಸೌದಿ ಅರೇಬಿಯಾದಲ್ಲಿ ಚಿತ್ರ ಹಿಂಶೆಯ ಶಿಕ್ಷೆ ಅನುಭವಿಸಿ, ಕೊನೆಗೆ ಭಾರತೀಯ ರಾಯಭಾರ ಕಚೇರಿಯ ನೆರವಿನಿಂದ ಸ್ವದೇಶಕ್ಕೆ ಮರಳಿದ್ದಾರೆ. ಬದುಕಿನ ಬಗ್ಗೆ ಅವರಲ್ಲಿ ಭರವಸೆಯನ್ನೇ ಕಳೆದ ಸೌದಿಯ ಆ ದಿನಗಳು ಮತ್ತು ಅಲ್ಲಿಂದ ಪಾರಾಗಿ ಬಂದ ರೋಚಕ ಕತೆಯನ್ನು ಹಂಚಿಕೊಂಡಿದ್ದಾರೆ.
ಬಾತ್ ರೂಮ್ ಕ್ಲೀನಿಂಗ್ ಲಿಕ್ವಿಡ್ ಕುಡಿದಿದ್ದ ಜೈನಾಬ್
"ಅವರು ನನ್ನನ್ನು ಚಪ್ಪಲಿಯಿಂದ ಹೊಡೆಯುತ್ತಿದ್ದರು. ನಾನು ಹಣ ಕೇಳಿದರೆ ಅಥವಾ ಮನೆಗೆ ಫೋನ್ ಮಾಡುವುದಕ್ಕೆ ಹೋದರೆ ಅದಕ್ಕೆ ಅವಕಾಶ ನೀಡುತ್ತಿರಲಿಲ್ಲ. ಮತ್ತಷ್ಟು ಹಿಂಸಿಸುತ್ತಿದ್ದರು. ನನ್ನ ತಾಳ್ಮೆಯ ಮಿತಿ ಮೀರಿದಾಗ ನನಗೆ ಸಾಯದೆ ಬೇರೆ ದಾರಿ ಕಾಣಲಿಲ್ಲ. ಅದಕ್ಕಾಗಿ ಬಾತ್ ರೂಂ ಕ್ಲೀನ್ ಮಾಡುವ ಲಿಕ್ವಿಡ್ ಕುಡಿದೆ... ಸಾಯುತ್ತಿದ್ದ ನನ್ನನ್ನು ಯಾರೂ ಆಸ್ಪತ್ರೆಗೆ ಸೇರಿಸಿದರು. ಈ ವಿಷಯ ನನ್ನ ಮಗಳಿಗೆ ತಿಳಿಯಿತು. ಆಕೆ ಭಾರತೀಯ ರಾಯಭಾರ ಕಚೇರಿಗೆ ವಿಷಯ ತಿಳಿಸಿದಳು. ಕೂಡಲೆ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ ನನ್ನನ್ನು ಸಂಪರ್ಕಿಸಿ, ನನ್ನನ್ನು ಅಲ್ಲಿಂದ ರಕ್ಷಿಸಿದರು. ನಾನು ಈಗ ವಾಪಸ್ ಹೈದರಾಬಾದಿಗೆ ಬಂದಿದ್ದೇನೆ. ಆದರೆ ಅಲ್ಲಿ ಅನುಭವಿಸಿದ ಚಿತ್ರಹಿಂಸೆ ದಿನವೂ ನನಗೆ ದುಃಸ್ವಪ್ನವಾಗಿ ಕಾಡುತ್ತಿದೆ"- ಜೈನಾಬ್ ಬೇಗಮ್
ಆಕೆಯನ್ನು ಮೂರನೇ ಮಹಡಿಯಿಂದ ತಳ್ಳಲಾಗಿತ್ತು!
"2016 ರಲ್ಲಿ ದುಬೈಯಲ್ಲಿ ನನಗೆ ಕೆಲಸದ ಆಫರ್ ನೀಡಲಾಗಿತ್ತು. ನಾನು ಅಲ್ಲಿಗೆ ತೆರಳುತ್ತಿದ್ದಂತೆಯೇ ನನ್ನನ್ನು ರಿಯಾಧ್ ಗೆ ಕಳಿಸಲಾಯಿತು. ಕೆಲಸದ ಹೊರೆ ಹೆಚ್ಚಾಯಿತೆಂದು ನಾನು ದೂರು ನೀಡಿದ್ದಕ್ಕಾಗಿ ನನ್ನನ್ನು ನಿಷ್ಕರುಣೆಯಿಂದ ಹೊಡೆಯಲಾಯ್ತು. ಹಿಂಸೆ ತಡೆಯಲಾರದೆ ನಾನು ಓಡಿದೆ. ಆಗ ನನ್ನನ್ನು ಮೂರನೇ ಮಹಡಿಯಿಂದ ತಳ್ಳಲಾಯ್ತು. ಆಸ್ಪತ್ರೆಗೆ ಸೇರಿದ್ದ ನನ್ನನ್ನು ಹೇಗೋ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ ಭೇಟಿ ಮಾಡಿ, ರಕ್ಷಿಸಿದರು. ವಾಪಸ್ ತವರು ದೇಶಕ್ಕೆ ಕಳಿಸಿದರು. ಆ ಕರಾಳ ದಿನಗಳನ್ನು ಸಾಯುವವರೆಗೂ ಮರೆಯುವುದಕ್ಕೆ ಸಾಧ್ಯವಿಲ್ಲ"-ಇಲ್ಯಾಸ್ ಬೇಗಮ್
ಸುಷ್ಮಾರನ್ನು ಭೇಟಿಯಾದ ಪಾಕ್ ರಿಟರ್ನ್ಡ್ ಹಮೀದ್ ಅನ್ಸಾರಿ
ದಿನಕ್ಕೆ ಒಂದೇ ಹೊತ್ತು ಊಟ!
"ನನಗೆ ದಿನಕ್ಕೆ ಒಂದೇ ಹೊತ್ತು ಊಟ ಕೊಡುತ್ತಿದ್ದರು. ನೀರು ಬೇಕೆಂದರೂ ನಾನು ಪರಿಪರಿಯಾಗಿ ಬೇಡಬೇಕಿತ್ತು. ಪ್ರತಿದಿನವೂ ಹಸಿವು ತಾಳಲಾರದೆ ನನಗೆ ನಿದ್ದೆಯೂ ಬರುತ್ತಿರಲಿಲ್ಲ. ಜೊತೆಗೆ ಇಡೀ ದಿನವೂ ನನ್ನ ಶಕ್ತಿ ಮೀರಿ ಕೆಲಸ ಮಾಡಬೇಕಿತ್ತು, ಜೊತೆಗೆ ಅವರು ನೀಡುವ ಹಿಂಸೆ ಸಹಿಸಿಕೊಳ್ಳಬೇಕಿತ್ತು. ನಾನು ಒಂದು ದಿನ ಓಡಿ ಬಂದು ಪೊಲೀಸರಿಗೆ ದೂರು ನೀಡಿದೆ. ಅದೃಷ್ಟವಶಾತ್ ಅವರು ನನ್ನನ್ನು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳ ಬಳಿ ಕಳಿಸಿಕೊಟ್ಟರು. ನನ್ನನ್ನು ಅಲ್ಲಿಂದ ರಕ್ಷಿಸಿ ಭಾರತಕ್ಕೆ ವಾಪಸ್ ಕರೆತರಲಾಯ್ತು. ಅಲ್ಲಾಹ್ ದಯೆಯಿಂದ ನಾವೇನೋ ಪಾರಾದೆವು. ಆದರೆ ನಮ್ಮಂತೆ ಎಷ್ಟೋ ಮಹಿಳೆಯರು ಅಲ್ಲಿ ಪ್ರತಿದಿನ ಚಿತ್ರ ಹಿಂಸೆ ಸನುಭವಿಸುತ್ತಿದ್ದಾರೆ" ಎಂದು ಅಮೇನಾ ಕಳವಳ ವ್ಯಕ್ತಪಡಿಸುತ್ತಾರೆ.
ಪುರುಷರಿಗೂ ಕಷ್ಟ ತಪ್ಪಿಲ್ಲ
ಕೇವಲ ಮಹಿಳೆಯರು ಮಾತ್ರವಲ್ಲ, ಪುರುಷರಿಗೂ ಸೌದಿ ಅರೇಬಿಯಾದಲ್ಲಿ ಈ ಸಂಕಟ ತಪ್ಪಿಲ್ಲ. ಇತ್ತೀಚೆಗಷ್ಟೇ ಹೈದರಾಬಾದಿನ ಹಫಿಸ್ ಬಹಾವುದ್ದಿನ್ ಎಂಬ ಯುವಕನನ್ನು ಶಿಕ್ಷಕನನ್ನಾಗಿ ಕರೆಸಿಕೊಂಡು, ನಂತರ ಕ್ಲೀನರ್ ಕೆಲಸ ಕೊಟ್ಟು, ಸಾಕಷ್ಟು ಹಿಂಸೆ ನೀಡಿದ ಘಟನೆ ನಡೆದಿತ್ತು. ಆತನನ್ನು ಭಾರತೀಯ ರಾಯಭಾರ ಕಚೇರಿ ರಕ್ಷಿಸಿತ್ತು. ಅದಕ್ಕಾಗಿ ಆತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಧನ್ಯವಾದ ಅರ್ಪಿಸಿದ್ದ.