ಆನ್ಲೈನ್ ಕಲಿಕೆ: ಡಿಜಿಟಲ್ ಸಾಧನಗಳಿಲ್ಲದೇ ಶಿಕ್ಷಣದಿಂದ ಮಕ್ಕಳು ದೂರ!
ಬೆಂಗಳೂರು, ಜೂನ್ 25: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹರಡುವಿಕೆ ನಡುವೆ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿ ತೊಂದರೆ ಆಗದಂತೆ ಆನ್ ಲೈನ್ ಕ್ಲಾಸ್ ಮೂಲಕ ಡಿಜಿಟಲ್ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಕೇಂದ್ರ ಸರ್ಕಾರ ಪದೇ ಪದೆ ಡಿಜಿಟಲ್ ಇಂಡಿಯಾದ ಬಗ್ಗೆ ಪ್ರಸ್ತಾಪಿಸುತ್ತದೆ. ಎಲ್ಲ ವಲಯಗಳನ್ನು ಡಿಜಿಟಲೀಕರಣ ಮಾಡಲು ಹೊರಟಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವೇ ನೀಡಿರುವ ಅಂಕಿ-ಅಂಶಗಳು ದಿಗ್ಭ್ರಮೆ ಮೂಡಿಸುತ್ತವೆ.
ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಹಾಕುವ ಕುರಿತು ರಾಜ್ಯ ಸರ್ಕಾರದ ಮಹತ್ವದ ತೀರ್ಮಾನ!
ಕರ್ನಾಟಕ ಮತ್ತು ಬಿಹಾರದಲ್ಲಿ ಡಿಜಿಟಲ್ ಸೌಲಭ್ಯಗಳಿಲ್ಲದೇ ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿಗಳ ಸಂಖ್ಯೆ ಬೆರಗು ಹುಟ್ಟಿಸುತ್ತದೆ. ಪ್ರಾಥಮಿಕ ವರದಿ ಪ್ರಕಾರ, ಬಿಹಾರದಲ್ಲಿ 1 ಕೋಟಿಗೂ ಅಧಿಕ ವಿದ್ಯರ್ಥಿಗಳು ಡಿಜಿಟಲ್ ಕಲಿಕೆಗೆ ಅಗತ್ಯವಿರುವ ಸಾಧನಗಳಿಲ್ಲದೇ ಶಿಕ್ಷಣದಿಂದ ದೂರ ಉಳಿದಿದ್ದಾರೆ. ಅದೇ ರೀತಿ ಕರ್ನಾಟಕ ಮತ್ತು ಜಾರ್ಖಂಡ್ ನಲ್ಲಿ 30,000 ವಿದ್ಯಾರ್ಥಿಗಳಿಗೆ ಡಿಜಿಟಲ್ ಕಲಿಕಾ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ರಾಜಸ್ಥಾನ ಮತ್ತು ಕೇರಳದಲ್ಲಿ ಡಿಜಿಟಲ್ ಕಲಿಕೆಗೆ ವ್ಯವಸ್ಥೆ
ಕೇರಳ ಮತ್ತು ರಾಜಸ್ಥಾನ ರಾಜ್ಯಗಳು ಡಿಜಿಟಲ್ ಕಲಿಕಾ ಸಾಧನಗಳನ್ನು ಒದಗಿಸುವಲ್ಲಿ ಅಗ್ರಸ್ಥಾನದಲ್ಲಿವೆ. ಈ ರಾಜ್ಯಗಳಲ್ಲಿ ಬಹುಪಾಲು ವಿದ್ಯಾರ್ಥಿಗಳಿಗೆ ಡಿಜಿಟಲ್ ಕಲಿಕೆಗೆ ಅಗತ್ಯವಿರುವ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ರಾಜ್ಯ ಸರ್ಕಾರಗಳು ಯಶಸ್ವಿಯಾಗಿವೆ.
ಹಲವು ರಾಜ್ಯಗಳು ಡಿಜಿಟಲ್ ಕಲಿತಾ ಅಂಕಿ-ಅಂಶ ನೀಡಿಲ್ಲ
ಕೇಂದ್ರ ಶಿಕ್ಷಣ ಸಚಿವಾಲಯವು ಮಹಿಳೆಯರು, ಮಕ್ಕಳು, ಶಿಕ್ಷಣ, ಯುವ ಮತ್ತು ಕ್ರೀಡೆಗಳ ಸಂಸದೀಯ ಸ್ಥಾಯಿ ಸಮಿತಿಯೊಂದಿಗೆ ಸೋಮವಾರ ಅಂಕಿ-ಅಂಶಗಳನ್ನು ಹಂಚಿಕೊಂಡಿದೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ದೆಹಲಿ ಮತ್ತು ಈಶಾನ್ಯದ ಹಲವು ರಾಜ್ಯಗಳು ಸೇರಿದಂತೆ ಅನೇಕ ರಾಜ್ಯಗಳು ಇನ್ನೂ ಅಗತ್ಯ ದತ್ತಾಂಶವನ್ನು ನೀಡಿಲ್ಲ. ಈ ಹಿನ್ನೆಲೆ ಇದೊಂದು ಪ್ರಾಥಮಿಕ ವರದಿಯಾಗಿದೆ.
ಯಾವ ರಾಜ್ಯಗಳಲ್ಲಿ ಶಾಲೆಗಳು ಆರಂಭ ಯಾವಾಗ?
ಕಳೆದ ಒಂದು ವರ್ಷದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಶಾಲೆಗಳು ಮತ್ತು ಕಾಲೇಜುಗಳು ಆನ್ಲೈನ್ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಒತ್ತಾಯಿಸುತ್ತಿವೆ. ವರ್ಚುವಲ್ ಮಾಧ್ಯಮಕ್ಕೆ ಶಿಕ್ಷಣವನ್ನು ಸೀಮಿತಗೊಳಿಸಿದ ಹೊರತಾಗಿಯೂ ಡಿಜಿಟಲ್ ಕಲಿಕೆ ಸಾಧನಗಳನ್ನು ಹೊಂದಲಾಗದೇ ವಿದ್ಯಾರ್ಥಿಗಳು ಶಿಕ್ಷಣದಿಂದಲೇ ದೂರ ಉಳಿಯುತ್ತಿದ್ದಾರಾ ಎಂಬ ಪ್ರಶ್ನೆ ಮೇಲಿಂದ ಮೇಲೆ ಕೇಳಿ ಬರುತ್ತಿದೆ.
ಬಿಹಾರ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಶಾಲಾ-ಕಾಲೇಜುಗಳನ್ನು ಜುಲೈ ತಿಂಗಳಿನಿಂದ ಪುನಾರಂಭ ಮಾಡುವುದಕ್ಕೆ ಆಯಾ ರಾಜ್ಯ ಸರ್ಕಾರಗಳು ಸೂಚನೆ ನೀಡಿವೆ. ಹಾಗಿದ್ದರೂ ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ಹೆಚ್ಚಿನ ರಾಜ್ಯ ಸರ್ಕಾರಗಳು ಈ ವಿಷಯದ ಬಗ್ಗೆ ಇನ್ನೂ ಯಾವು ನಿರ್ಧಾರಗಳನ್ನು ಅಧಿಕೃತವಾಗಿ ಘೋಷಿಸಿಲ್ಲ.
"ವಿದ್ಯಾರ್ಥಿಗಳಲ್ಲಿ ಕಲಿಕೆ ಅಂತರ ಸೃಷ್ಟಿಯಾಗುತ್ತಿದೆಯೇ?"
"ಕೇಂದ್ರ ಶಿಕ್ಷಣ ಸಚಿವಾಲಯವು ಇಂಟರ್ ನೆಟ್ ಮತ್ತು ಡಿಜಿಟಲ್ ಸಾಧನಗಳು ಇಲ್ಲದೇ ಶಿಕ್ಷಣದಿಂದ ದೂರ ಉಳಿದಿರುವ ಮಕ್ಕಳ ಸಂಖ್ಯೆಯ ಅಂಕಿ-ಅಂಶಗಳನ್ನು ಹಂಚಿಕೊಂಡಿದೆ. ಆದರೆ ಸೌಲಭ್ಯಗಳ ಕೊರತೆ ಮತ್ತು ಅದು ಯಾವ ರೀತಿಯ ಕಲಿಕೆಯ ಅಂತರ ಸೃಷ್ಟಿಸಿದೆ ಎಂಬುದನ್ನು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಅದನ್ನು ಮೌಲ್ಯಮಾಪನ ಮಾಡಲುಸಚಿವಾಲಯವನ್ನು ಕೇಳಿದ್ದೇವೆ," ಎಂದು ಸಂಸದೀಯ ಸಮಿತಿ ಮುಖ್ಯಸ್ಥ ವಿಯನ್ ಸಹಸ್ರಬುದ್ಧೆ 'ದಿ ಪ್ರಿಂಟ್'ಗೆ ತಿಳಿಸಿದ್ದಾರೆ.