ಕರ್ತಾರ್ಪುರ ಸಾಹಿಬ್ ಕಾರಿಡಾರ್ ತೆರೆಯುತ್ತಿದ್ದಂತೆ ಪಾಕ್ಗೆ ಪ್ರವೇಶಿಸಿದ ಭಾರತೀಯ ಸಿಖ್ ಯಾತ್ರಾರ್ಥಿಗಳು
ಲಾಹೋರ್, ನವೆಂಬರ್ 17: ಇಂದಿನಿಂದ ಕರ್ತಾರ್ಪುರ ಕಾರಿಡಾರ್ ಪುನರ್ ಆರಂಭವಾಗುತ್ತಿದೆ. ಈ ನಡುವೆ ಭಾರತದ ಕರ್ತಾರ್ಪುರ ಕಾರಿಡಾರ್ ಮೂಲಕ ಗುರುದ್ವಾರ ದರ್ಬಾರ್ ಸಾಹಿಬ್ನಲ್ಲಿ ನಮನ ಸಲ್ಲಿಸಲು ಭಾರತೀಯ ಸಿಖ್ ಯಾತ್ರಾರ್ಥಿಗಳ ಜಾಥಾ ಇಂದು ಪಾಕಿಸ್ತಾನಕ್ಕೆ ದಾಟಿ ತೆರಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಭಾರತದಲ್ಲಿರುವ ಪಾಕಿಸ್ತಾನ ಹೈಕಮಿಷನ್, " ಕರ್ತಾರ್ಪುರ ಸಾಹಿಬ್ ಕಾರಿಡಾರ್ಗೆ ಮೂಲಕ ಭಾರತೀಯ ಸಿಖ್ ಯಾತ್ರಾರ್ಥಿಗಳು ಆಗಮಿಸಿದ ಸಂದರ್ಭದಲ್ಲಿ ಪಾಕಿಸ್ತಾನಿಗಳು ಭಾರತೀಯ ಸಿಖ್ ಯಾತ್ರಾರ್ಥಿಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ," ಎಂದು ತಿಳಿಸಿದೆ.
ಭಕ್ತರಿಗಾಗಿ ಮತ್ತೆ ತೆರೆದ ಕರ್ತಾರ್ಪುರ ಸಾಹಿಬ್ ಕಾರಿಡಾರ್
ಬಾಬಾ ಗುರುನಾನಕ್ ಜನ್ಮ ದಿನಾಚರಣೆಗೆ ಭಾರತದ ಭಕ್ತರನ್ನು ಆತಿಥ್ಯ ವಹಿಸಲು ಪಾಕಿಸ್ತಾನ ಎದುರು ನೋಡುತ್ತಿದೆ ಎಂದು ಕೂಡಾ ಭಾರತದಲ್ಲಿರುವ ಪಾಕಿಸ್ತಾನ ಹೈಕಮಿಷನ್ ಹೇಳಿದೆ. ಬುಧವಾರ ಮುಂಜಾನೆ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿಯ (ಎಸ್ಜಿಪಿಸಿ) ಜಾಥಾವು ಕರ್ತಾರ್ಪುರ ಕಾರಿಡಾರ್ ಮೂಲಕ ಗುರುದ್ವಾರ ದರ್ಬಾರ್ ಸಾಹಿಬ್ ಮತ್ತು ಇತರ ಗುರುದ್ವಾರಗಳಲ್ಲಿ ನಮನ ಸಲ್ಲಿಸಲು ಪಾಕಿಸ್ತಾನಕ್ಕೆ ಹೊರಟಿದೆ.
ಸಂತಸ ವ್ಯಕ್ತಪಡಿಸಿದ ಭಕ್ತರು
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಯಾತ್ರಿಕ ಗುರುವಿಂದರ್ ಸಿಂಗ್, "ನಾವು ಒಂಬತ್ತು ದಿನಗಳ ಪ್ರವಾಸಕ್ಕೆ ಹೋಗುತ್ತಿದ್ದೇವೆ. ನಾವು ಕರ್ತಾರ್ಪುರ ಸಾಹಿಬ್, ನಂಕಾನಾ ಸಾಹಿಬ್, ಡೇರಾ ಸಚ್ಚಾ ಸೌದಾ, ಡೇರಾ ಸಾಹಿಬ್ಗೆ ಭೇಟಿ ನೀಡಲಿದ್ದೇವೆ," ಎಂದು ತಿಳಿಸಿದ್ದಾರೆ. ಇನ್ನು ಮತ್ತೋರ್ವ ಯಾತ್ರಿಕ ಮಾತನಾಡಿ, "ನಾವು ಬಹಳ ಸಂತೋಷವಾಗಿದ್ದೇವೆ. ಈ ಕರ್ತಾರ್ಪುರ ಸಾಹಿಬ್ ಕಾರಿಡಾರ್ ಅನ್ನು ಸರ್ಕಾರ ತೆರೆದಿರುವುದಕ್ಕೆ ನಾವು ಬಹಳ ಸಂತಸ ಹೊಂದಿದ್ದೇವೆ," ಎಂದು ಹೇಳಿದರು.
ಕೊರೊನಾ ವೈರಸ್ ಸೋಂಕು ಕಾರಣದಿಂದಾಗಿ ಕರ್ತಾರ್ಪುರ ಸಾಹಿಬ್ ಕಾರಿಡಾರ್ ಅನ್ನು ಮುಚ್ಚಲಾಗಿತ್ತು. ಈ ಕಾರಿಡಾರ್ಗೆ ವೀಸಾವಿಲ್ಲದೆಯೇ ಭೇಟಿ ನೀಡಬಹುದಾಗಿದ್ದು, ಈ 4.7-ಕಿಲೋಮೀಟರ್ ಉದ್ದದ ಕಾರಿಡಾರ್ ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್ ಮೂಲಕ ಭಾರತದ ಗಡಿಯನ್ನು ಸೇರುತ್ತದೆ. ಕಾರಿಡಾರ್ ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್, ಗುರುನಾನಕ್ ದೇವ್ ಅಂತಿಮ ವಿಶ್ರಾಂತಿ ಸ್ಥಳವನ್ನು ಪಂಜಾಬ್ನ ಗುರುದಾಸ್ಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ದೇಗುಲಕ್ಕೆ ಸಂಪರ್ಕಿಸುತ್ತದೆ.
ಅಫ್ಘಾನಿಸ್ತಾನದ 20 ಸಾವಿರ ಹಿಂದೂ, ಸಿಖ್ಖರಿಗೆ ಕೆನಡಾದಿಂದ ಶಾಶ್ವತ ಪುನರ್ವಸತಿ
ಕರ್ತಾರ್ಪುರ ಕಾರಿಡಾರ್ ಅನ್ನು ಮತ್ತೆ ತೆರೆಯುವ ಭಾರತ ಸರ್ಕಾರದ ನಿರ್ಧಾರವನ್ನು ಪಾಕಿಸ್ತಾನದ ಉನ್ನತ ಸಿಖ್ ಸಂಸ್ಥೆ ಮತ್ತು ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ಮಂಗಳವಾರ ಸ್ವಾಗತಿಸಿದೆ. ಇದು ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಕೊನೆಯ ನಿವಾಸಕ್ಕೆ ಯಾವುದೇ ಅಡೆತಡೆಯಿಲ್ಲದೆ ಭೇಟಿ ನೀಡಲು ಭಾರತೀಯ ಸಿಖ್ಖರಿಗೆ ಸಹಾಯ ಮಾಡುತ್ತದೆ ಎಂದು ಹೇಳಿದೆ.
ಕರ್ತಾರ್ಪುರ ಕಾರಿಡಾರ್ ಅನ್ನು ಬುಧವಾರದಿಂದ ಪುನರಾರಂಭಿಸುವುದಾಗಿ ಭಾರತ ಸರ್ಕಾರವು ಮಂಗಳವಾರ ಘೋಷಿಸಿದೆ. ಸಿಖ್ ಧರ್ಮದ ಸ್ಥಾಪಕ ಗುರುನಾನಕ್ ದೇವ್ ಅಂತಿಮ ಕ್ಷಣಗಳನ್ನು ಕಳೆದ ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್ ನಿಂದ ಗುರುದಾಸ್ ಪುರ ಜಿಲ್ಲೆಯ ದೇರಾ ಬಾಬಾ ನಾನಕ್ ದೇಗುಲಕ್ಕೆ ಈ ಕರ್ತಾರ್ ಪುರ್ ಕಾರಿಡಾರ್ ಸಂಪರ್ಕ ಕಲ್ಪಿಸುತ್ತದೆ. "ಗುರುನಾನಕ್ ಜನ್ಮ ದಿನಾಚರಣೆಗೆ ಇನ್ನೂ ಮೂರು ದಿನಗಳು ಬಾಕಿಯಿರುವಂತೆಯೇ ಈ ಕಾರಿಡಾರ್ ಪುನರಾರಂಭಿಸುವ ಭಾರತ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಇದರಿಂದ ಭಾರತದ ಪಂಜಾಬ್ ನಿಂದ ಸಿಖ್ಖರು ಕರ್ತಾರ್ ಪುರ ಗುರುದ್ವಾರಕ್ಕೆ ಬರಲು ಅವಕಾಶವಾಗುತ್ತದೆ," ಎಂದು ಪಾಕಿಸ್ತಾನ ಸಿಖ್ ಗುರುದ್ವಾರ ಪ್ರಬಂಧಕ ಸಮಿತಿ ಅಧ್ಯಕ್ಷ ಸರ್ದಾರ್ ಅಮೀರ್ ಸಿಂಗ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಗುರುಪರ್ವ್ ನವೆಂಬರ್ 19 ರ ಶುಕ್ರವಾರದಂದು ಆರಂಭವಾಗಲಿದೆ. ಅದಕ್ಕೂ ಮೊದಲು ಪಂಜಾಬ್ ಬಿಜೆಪಿ ನಾಯಕರೊಬ್ಬರು ಕರ್ತಾರ್ಪುರ ಸಾಹಿಬ್ ಕಾರಿಡಾರ್ ಅನ್ನು ನವೆಂಬರ್ 18 ರಂದು ತೆರೆಯಬಹುದು ಎಂದು ಹೇಳಿದ್ದರು. ಆದರೆ, ಅದಕ್ಕಿಂತ ಒಂದು ದಿನ ಮುಂಚಿತವಾಗಿ ಅಂದರೆ ನವೆಂಬರ್ 17ರಂದು ಕರ್ತಾರ್ಪುರ ಕಾರಿಡಾರ್ ಅನ್ನು ಮತ್ತೆ ತೆರೆದಿರುವುದು ಭಕ್ತರಲ್ಲಿ ಹರ್ಷ ಮೂಡಿಸಿದೆ. ಮೊದಲ ಬ್ಯಾಚ್ನಲ್ಲಿ 250 ಭಕ್ತರು ಕರ್ತಾರ್ಪುರ ಗುರುದ್ವಾರಕ್ಕೆ ಹೋಗಬಹುದು ಎಂದು ಬಿಜೆಪಿ ಮುಖಂಡ ಹರ್ಜಿತ್ ಗ್ರೀವನ್ ಹೇಳಿದ್ದರು.
(ಒನ್ಇಂಡಿಯಾ ಸುದ್ದಿ)