ಸಿಹಿಸುದ್ದಿ: ಆನ್ಲೈನ್ನಲ್ಲಿ ಪರೀಕ್ಷೆ ನಿಮ್ಮ ಮನೆಯಲ್ಲೇ ನಿಮಗೆ ಚಿಕಿತ್ಸೆ!
ನವದೆಹಲಿ, ಜುಲೈ 30: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಲೆಗಳು ಭಾರತೀಯರಿಗೆ ಕಲಿಸಿದ ಪಾಠಗಳು ಒಂದು ಎರಡಲ್ಲ. ಮೊದಲೆಲ್ಲ ಜನರಿಗೆ ಜ್ವರ, ಕೆಮ್ಮು, ನೆಗಡಿ, ಶೀತ ಹೀಗೆ ಏನೇ ಆರೋಗ್ಯ ಸಮಸ್ಯೆಗಳಿದ್ದರೂ ನೇರವಾಗಿ ವೈದ್ಯರ ಬಳಿಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಕೊವಿಡ್-19 ಕಾಲದಲ್ಲಿ ಈ ಇಡೀ ಚಿತ್ರಣವೇ ಬದಲಾಗಿ ಹೋಗಿದೆ.
ದೇಶದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಏರಿಳಿತದ ನಡುವೆ ರೋಗಿಗಳನ್ನು ನೇರವಾಗಿ ಪರೀಕ್ಷಿಸಲು ವೈದ್ಯರು ಹಿಂದು-ಮುಂದು ನೋಡುತ್ತಿದ್ದರೆ, ವೈದ್ಯರ ಬಳಿಗೆ ಹೋಗುವದಕ್ಕೆ ಸಾರ್ವಜನಿಕರು ಭಯಪಡುವಂತಾ ವಾತಾವರಣ ಸೃಷ್ಟಿಯಾಗಿದೆ. ಜಗತ್ತಿನಲ್ಲಿ ಇದೀಗ ಎಲ್ಲವೂ ಆನ್ಲೈನ್ ಆಗಿದ್ದು, ಇದಕ್ಕೆ ಭಾರತವೂ ಕೂಡ ಹೊರತಾಗಿಲ್ಲ.
ಅಲೆಗಳ ಆಟ: ಭಾರತದಲ್ಲಿ ಹೆಚ್ಚಾದ ಕೊರೊನಾವೈರಸ್ ಆತಂಕ!
ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಮೊದಲ ಅಲೆ ಮತ್ತು ಎರಡನೇ ಅಲೆಯ ಅವಧಿಯಲ್ಲಿ ಆನ್ ಲೈನ್ ಮೂಲಕ ವೈದ್ಯರನ್ನು ಸಂಪರ್ಕಿಸುವ ಜನ ಸಂಖ್ಯೆ30ಪಟ್ಟು ಹೆಚ್ಚಳವಾಗಿದೆ. ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಆನ್ಲೈನ್ ಮೂಲಕವೇ ಪರಿಹಾರ ಕಂಡುಕೊಳ್ಳುವುದಕ್ಕೆ ಜನರು ಮುಂದಾಗಿದ್ದಾರೆ. ಅಲ್ಲದೈ ವೈದ್ಯರ ಸಲಹೆ ಮೇರೆಗೆ ಆನ್ಲೈನ್ ಮೂಲಕವೇ ಔಷಧಿಗಳನ್ನೂ ಸಹ ಖರೀದಿಸಲಾಗುತ್ತಿರುವುದು ಇತ್ತೀಚಿಗೆ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಕೊರೊನಾವೈರಸ್ ಪಿಡುಗಿನ ವೇಳೆ ವೈದ್ಯಕೀಯ ವಲಯದಲ್ಲಿ ಆನ್ಲೈನ್ ಜಗತ್ತು ಹೇಗೆ ತೆರೆದುಕೊಂಡಿದೆ ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.
ಆನ್ಲೈನ್ ಮೂಲಕ ವೈದ್ಯರಿಂದ ಸಲಹೆ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೊದಲ ಅಲೆ ಮತ್ತು ಎರಡನೇ ಅಲೆಯಲ್ಲಿ ಹೊಸ ಸೋಂಕಿತ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿತು. ಆಕ್ಸಿಜನ್ ಕೊರತೆ ಸೃಷ್ಟಿಯಿಂದಾಗಿ ಸಾವಿರಾರು ಜನರು ಪ್ರಾಣ ಬಿಟ್ಟರು. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಮೂಲಭೂತ ಸೌಲಭ್ಯಗಳಿಲ್ಲದೇ ಜನರು ಪರಿತಪಿಸುವಂತಾ ಸ್ಥಿತಿ ನಿರ್ಮಾಣಗಿತ್ತು. ಬೆಡ್, ಆಕ್ಸಿಜನ್ ಸೇರಿದಂತೆ ಸಾಮಾನ್ಯ ರೋಗಿಗಳು ಹಲವು ರೀತಿ ಸಮಸ್ಯೆಗಳನ್ನು ಎದುರಿಸುವಂತಾ ಸ್ಥಿತಿ ಸೃಷ್ಟಿಯಾಗಿತ್ತು. ಇಂಥ ಸಂದರ್ಭದಲ್ಲಿ ಆನ್ಲೈನ್ ಮೂಲಕ ವೈದ್ಯರನ್ನು ಸಂಪರ್ಕಿಸುವ ಮತ್ತು ಆರೋಗ್ಯ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವಂತಾ ವ್ಯವಸ್ಥೆಯೊಂದು ಆರಂಭವಾಯಿತು.
ವೈದ್ಯಕೀಯ ಚಿಕಿತ್ಸೆ ಮತ್ತು ಸಲಹೆಗೆ ಹೊಸ ಮಾರ್ಗ
ಭಾರತದಲ್ಲಿ ಒಂದು ದಿಕ್ಕಿನಲ್ಲಿ ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸುವತ್ತ ಒಂದು ವರ್ಗ ಕರ್ತವ್ಯಶ್ರದ್ಧೆಯನ್ನು ತೋರುತ್ತಿತ್ತು. ಇನ್ನೊಂದು ದಿಕ್ಕಿನಲ್ಲಿ ಸಾಮಾನ್ಯ ರೀತಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಜನರಿಗೆ ಚಿಕಿತ್ಸೆ ನೀಡುವವರು ಯಾರು ಎನ್ನುವಂತಾ ಪರಿಸ್ಥಿತಿಯಲ್ಲಿ ಮತ್ತೊಂದು ವರ್ಗದ ವೈದ್ಯಕೀಯ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿತ್ತು. ವೈದ್ಯರು ಮತ್ತು ರೋಗಿಗಳ ನಡುವೆ ದೂರವಾಣಿ ಮತ್ತು ಆನ್ಲೈನ್ ಸಂಪರ್ಕ ಸೇತುವೆಯನ್ನು ನಿರ್ಮಿಸಲಾಗಿತ್ತು. ಇದರಿಂದಾಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಹೆಚ್ಚುವರಿ ರೋಗಿಗಳ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಇಳಿಮುಖವಾಯಿತು. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದ ಜನರು ಈ ಸಂಪರ್ಕ ಸೇತುವೆಯನ್ನು ಬಳಸಿಕೊಂಡೇ ತಮ್ಮ ಆರೋಗ್ಯದಲ್ಲಿ ಚೇತರಿಕೆಯನ್ನು ಕಂಡುಕೊಳ್ಳುವುದಕ್ಕೆ ಶುರು ಮಾಡಿದ್ದರು. ಅಲ್ಲಿಂದ ಆನ್ಲೈನ್ ವೈದ್ಯರಿಗೆ ಬೇಡಿಕೆ ಹೆಚ್ಚಳವಾಯಿತು.
ಕೊರೊನಾವೈರಸ್ 2ನೇ ಅಲೆ ಮುಗಿದಿಲ್ಲ; ಕೇಂದ್ರ ಸರ್ಕಾರದ ಮಾತಿನ ಹಿಂದಿನ ಮರ್ಮ!?
ಆನ್ಲೈನ್ ಮೂಲಕ ವೈದ್ಯರನ್ನು ಸಂಪರ್ಕಿಸುವವರ ಸಂಖ್ಯೆ ಹೆಚ್ಚಳ
ಭಾರತದ ಬೃಹತ್ ವೈದ್ಯಕೀಯ ಕಂಪನಿ ಎನಿಸಿರುವ ಪ್ರಾಕ್ಟೋ ಈ ಕುರಿತು ವರದಿಯೊಂದನ್ನು ನೀಡಿದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಅವಧಿಯಲ್ಲಿ ಆನ್ಲೈನ್ ಮುಖಾಂತರ ವೈದ್ಯರನ್ನು ಸಂಪರ್ಕಿಸುವವರ ಸಂಖ್ಯೆ 10 ಪಟ್ಟು ಹೆಚ್ಚಳವಾಗಿದೆ. ಕಳೆದ 2020ರ ಜನವರಿಯಿಂದ ಫೆಬ್ರವರಿಗೆ ಹೋಲಿಸಿ ನೋಡಿದಾಗ 2021ರ ಏಪ್ರಿಲ್ ಮೇ ತಿಂಗಳ ಹೊತ್ತಿಗೆ ಆನ್ಲೈನ್ ವೈದ್ಯರಿಗೆ 10 ಪಟ್ಟು ಬೇಡಿಕೆ ಹೆಚ್ಚಳವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆನ್ಲೈನ್ ಮೂಲಕ ವೈದ್ಯರನ್ನು ಸಂಪರ್ಕಿಸುವವರಲ್ಲಿ ಶೇ.50ರಷ್ಟು ಜನರು ಸಾಮಾನ್ಯ ವೈದ್ಯರು ಮತ್ತು ಶ್ವಾಸಕೋಶಶಾಸ್ತ್ರಜ್ಞರಿಂದ ಕೊರೊನಾವೈರಸ್ ಸೋಂಕು ಮತ್ತು ಕಾಲೋಚಿತ ಜ್ವರ ಬಗ್ಗೆ ಸಲಹೆ ಪಡೆದುಕೊಂಡಿರುವುದು ಗೊತ್ತಾಗಿದೆ. ಇದೇ ಅವಧಿಯಲ್ಲಿ ಶೇ.10ರಷ್ಟು ಜನರು ಸ್ತ್ರೀರೋಗಶಾಸ್ತರಜ್ಞರು, ಶೇ.8ರಷ್ಟು ಚರ್ಮರೋಗಶಾಸ್ತ್ರಜ್ಞರು, ಶೇ.5ರಷ್ಟು ಮಂದಿ ನವಜಾತಶಿಶು ತಜ್ಞರನ್ನು ಸಂಪರ್ಕಿಸಿರುವುದು ಗೊತ್ತಾಗಿದೆ. ಇದೇ ಅವಧಿಯಲ್ಲಿ ಸಾಮಾನ್ಯ ವೈದ್ಯರು ಮತ್ತು ಶ್ವಾಸಕೋಶಶಾಸ್ತ್ರಜ್ಞರಿಗೆ ಅತಿಹೆಚ್ಚು ಬೇಡಿಕೆಯಿರುವುದು ಸ್ಪಷ್ಟವಾಗಿದೆ.
ಪ್ರಾಕ್ಟೊ ವರದಿಯಲ್ಲಿ, ಮೊದಲ ಅಲೆಗಿಂತ ಎರಡನೇ ಅಲೆಯ ಸಂದರ್ಭದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಟೆಲಿಮೆಡಿಸಿನ್ ಬಳಕೆಯಾಗಿದೆ. COVID-19 ಅನ್ನು ಎದುರಿಸಲು ಆರೋಗ್ಯ ಸೇವೆ ಒದಗಿಸುವ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ತೆಗೆದುಕೊಂಡ ನಿರ್ಧಾರ ನಿರ್ಣಾಯಕವಾಗಿದ್ದು ಹೆಚ್ಚು ಸಹಕಾರಿ ಎನಿಸಿತು.
ದೇಶದಲ್ಲಿ ಕೊವಿಡ್-19 ಸೋಂಕಿತ ಸಂಖ್ಯೆಗಳ ಏರಿಳಿತ
ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಳಿತ ಶುರುವಾಗಿದೆ. ದೇಶದಲ್ಲಿ ಕೊವಿಡ್-19 ಸೋಂಕಿನ ಮೂರನೇ ಅಲೆಯ ಭೀತಿ ಹೆಚ್ಚಾಗುತ್ತಿದೆ. ಕಳೆದ ಒಂದೇ ದಿನ 44,230 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 42,360 ಸೋಂಕಿತರು ಗುಣಮುಖರಾಗಿದ್ದರೆ, 555 ಜನರು ಪ್ರಾಣ ಬಿಟ್ಟಿದ್ದಾರೆ. ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,15,72,344ಕ್ಕೆ ಏರಿಕೆಯಾಗಿದ್ದು, 3,07,43,972 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೂ 4,23,217 ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದು, 4,05,155 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಇಂಥ ಸಂದರ್ಭದಲ್ಲಿ ಆನ್ಲೈನ್ ವೈದ್ಯರಿಗೆ ಬೇಡಿಕೆ ಹೆಚ್ಚುವುದಕ್ಕೆ ಕಾರಣ ಮತ್ತು ಈ ಕುರಿತು ಪ್ರಮುಖ ಅಂಶಗಳ ಮೇಲೆ ಗಮನ ಹರಿಸಬೇಕಾಗಿದೆ.
ಆನ್ಲೈನ್ ವೈದ್ಯರಿಗೆ ಡಿಮ್ಯಾಂಡ್; ಪ್ರಮುಖ ಅಂಶಗಳು
* ಸಾಮಾನ್ಯ ವೈದ್ಯರು ಮತ್ತು ಶ್ವಾಸಕೋಶಶಾಸ್ತ್ರಜ್ಞರಿಗೆ ಹೆಚ್ಚಿದ ಬೇಡಿಕೆ: 2021ರ ಏಪ್ರಿಲ್ ಮತ್ತು ಮೇ ತಿಂಗಳ ಅವಧಿಯಲ್ಲಿ ಸಾಮಾನ್ಯ ವೈದ್ಯರು ಮತ್ತು ಶ್ವಾಸಕೋಶಶಾಸ್ತ್ರಜ್ಞರನ್ನು ಸಂಪರ್ಕಿಸುವವರ ಸಂಖ್ಯೆಯು 30 ಪಟ್ಟು ಹೆಚ್ಚಳವಾಯಿತು. ಕಳೆದ ಬಾರಿ ಕೊರೊನಾವೈರಸ್ ಹಾವಳಿ ಹೆಚ್ಚಾಗಿದ್ದ ಸಂದರ್ಭಕ್ಕೆ ಹೋಲಿಸಿ ನೋಡಿದರೆ 6ಪಟ್ಟು ಅತ್ಯಧಿಕವಾಗಿತ್ತು ಎಂದು ತಿಳಿದು ಬಂದಿದೆ.
* ವೈದ್ಯರನ್ನು ಸಂಪರ್ಕಿಸುವವರಲ್ಲಿ ಯುವಕರೇ ಹೆಚ್ಚು: ಆನ್ಲೈನ್ ಮೂಲದ ವೈದ್ಯರನ್ನು ಸಂಪರ್ಕಿಸುವವರಲ್ಲಿ 21 ರಿಂದ 30 ವರ್ಷದೊಳಗಿನ ಯುವಕರೇ ಶೇ.50ರಷ್ಟಿದ್ದಾರೆ. 31 ರಿಂದ 40 ವರ್ಷದವರು ಶೇ.22ರಷ್ಟಿದ್ದು, ಶೇ.13ರಷ್ಟು ಜನ ವೃದ್ಧರಾಗಿದ್ದಾರೆ.
* ಲಸಿಕೆ ಅಡ್ಡಪರಿಣಾಮದ ಬಗ್ಗೆ ಹೆಚ್ಚು ವಿಚಾರಣೆ: ಕೊರೊನಾವೈರಸ್ ಲಸಿಕೆ ಪಡೆದುಕೊಂಡ ತಮ್ಮ ಆಪ್ತರು, ಸಂಬಂಧಿಗಳು ಮತ್ತು ತಮ್ಮ ಬಗ್ಗೆ ವಿಚಾರಿಸುವುದಕ್ಕೆ ಸಂಪರ್ಕಿಸಿದವರ ಸಂಖ್ಯೆಯೇ ಹೆಚ್ಚಾಗಿದೆ. ಲಸಿಕೆ ಪಡೆದ ನಂತರದಲ್ಲಿ ಕಾಣಿಸಿಕೊಳ್ಳುವ ಶೀತ, ಕೆಮ್ಮು, ಗಂಟಲು ನೋವು, ಮೂಗು ಸೋರುವಿಕೆ ಮತ್ತು ತಲೆನೋವಿನ ಬಗ್ಗೆ ವೈದ್ಯರಲ್ಲಿ ವಿಚಾರಿಸಿರುವುದು ಗೊತ್ತಾಗುತ್ತದೆ.
* ಮಧ್ಯರಾತ್ರಿ ವೈದ್ಯರ ಸಂಪರ್ಕಿಸುವವರ ಸಂಖ್ಯೆ: 2021ರ ಏಪ್ರಿಲ್ ಮೇ ತಿಂಗಳ ಅವಧಿಯಲ್ಲಿ ಶೇ.30ರಷ್ಟು ಜನರು ರಾತ್ರಿ 11 ರಿಂದ ಬೆಳಗ್ಗೆ 6 ಗಂಟೆ ಅವಧಿಯ ಮಧ್ಯೆ ವೈದ್ಯರನ್ನು ಸಂಪರ್ಕಿಸಿರುವುದು ವರದಿಯಾಗಿದೆ. ಕಳೆದ ಬಾರಿಗಿಂತ ಈ ಬಾರಿ ವೈದ್ಯರನ್ನು ಸಂಪರ್ಕಿಸಿದವರ ಸಂಖ್ಯೆಯು ಮೂರು ಪಟ್ಟು ಹೆಚ್ಚಾಗಿದೆ.
* ಆನ್ಲೈನ್ ಮೂಲಕ ವೈದ್ಯರನ್ನು ಸಂಪರ್ಕಿಸಿದ ಮಹಿಳೆಯರ ಸಂಖ್ಯೆಯಲ್ಲಿ ಶೇ.10ರಷ್ಟು ಏರಿಕೆ: ಕಳೆದ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭಕ್ಕೆ ಶೇ.25ರಷ್ಟು ಮಹಿಳೆಯರು ವೈದ್ಯರನ್ನು ಸಂಪರ್ಕಿಸಿದ್ದು, ಈ ಬಾರಿ ಶೇ.35ರಷ್ಟು ಮಹಿಳೆಯರು ಆನ್ಲೈನ್ ಮೂಲಕ ವೈದ್ಯರನ್ನು ಸಂಪರ್ಕಿಸಿದ್ದಾರೆ. ಆ ಮೂಲಕ ಶೇಕಡಾವಾರು ಪ್ರಮಾಣ 10ರಷ್ಟು ಹೆಚ್ಚಳವಾಗಿದೆ.
* ಮೆಟ್ರೋ ಸಿಟಿಗಳಲ್ಲಿ ಆನ್ಲೈನ್ ವೈದ್ಯರ ಸಂಪರ್ಕ: ಬೆಂಗಳೂರು, ದೆಹಲಿ-ಎನ್ಆರ್ ಸಿ ಮತ್ತು ಮುಂಬೈ ಸೇರಿದಂತೆ ಇತರೆ ಮೆಟ್ರೋ ಸಿಟಿಗಳಲ್ಲಿ ಆನ್ಲೈನ್ ವೈದ್ಯರನ್ನು ಸಂಪರ್ಕಿಸಿದವರ ಸಂಖ್ಯೆಯಲ್ಲಿ 9 ಪಟ್ಟು ಹೆಚ್ಚಳವಾಗಿದೆ. ಈ ಪೈಕಿ ಶೇ.46ರಷ್ಟು ಜನರು ಕೊರೊನಾವೈರಸ್ ಸೋಂಕಿಗೆ ಸಂಬಂಧಿಸಿದಂತೆ ವಿಚಾರಿಸಿರುವುದು ಗೊತ್ತಾಗಿದೆ.
* ಮೆಟ್ರೋ ಸಿಟಿ ಅಲ್ಲದ ನಗರಗಳಲ್ಲಿ ಆನ್ಲೈನ್ ವೈದ್ಯರ ಸಂಪರ್ಕ: ಮೆಟ್ರೋ ಸಿಟಿ ಅಲ್ಲದೇ ನಗರಗಳಲ್ಲಿ ಶೇ.53ರಷ್ಟು ಜನರು ಕೊರೊನಾವೈರಸ್ ಸೋಂಕಿಗೆ ಸಂಬಂಧಿಸಿದ ಪ್ರಶ್ನೆಗಳಿಗಾಗಿಯೇ ವೈದ್ಯರನ್ನು ಸಂಪರ್ಕಿಸಿರುವುದು ಗೊತ್ತಾಗಿದೆ. ಜೈಪುರ್, ಲಕ್ನೋ, ಭೋಪಾಲ್, ಕಾನ್ಪುರ್ ಮತ್ತು ಚಂಢೀಗರ್ ನಗರಗಳಲ್ಲಿ 12 ಪಟ್ಟು ಆನ್ಲೈನ್ ವೈದ್ಯರ ಸಂಪರ್ಕ ಪ್ರಮಾಣ ಹೆಚ್ಚಳವಾಗಿದೆ.
ಆನ್ಲೈನ್ ವೈದ್ಯರ ಬಗ್ಗೆ ಡಾ. ಅಲೆಕ್ಸಾಂಡರ್ ಕುರುವಿಲ್ಲಾ ಸ್ಪಷ್ಟನೆ
"ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಆರಂಭಗೊಂಡ ದಿನದಿಂದಲೇ ಆನ್ಲೈನ್ ಮೂಲಕ ವೈದ್ಯರನ್ನು ಸಂಪರ್ಕಿಸುವ ಪದ್ಧತಿ ಶುರುವಾಗಿತ್ತು. ಎರಡನೇಅಲೆಯ ಸಂದರ್ಭದಲ್ಲಿ ಈ ಪ್ರಮಾಣ ಹೆಚ್ಚಳವಾಗಿದೆ. ಮೂರನೇ ಅಲೆಯ ವೇಳೆಯಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದ್ದು, ಅದಕ್ಕಾಗಿ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಾಗಿದೆ. ಪ್ರಾಕ್ಟೋ ಸ್ಟ್ಯಾಂಡ್ ಕಮಿತಿಯು ಈ ನಿಟ್ಟಿನಲ್ಲಿ ರೋಗಿಗಳಿಗೆ 24*7 ಗುಣಮಟ್ಟದ ಸೇವೆ ಒದಗಿಸಲು ಸಿದ್ಧವಿದೆ. ಅದಕ್ಕೆ ಸಂಬಂಧಿಸಿದಂತೆ ಆರೋಗ್ಯ ತಜ್ಞರು ಮತ್ತು ವೈದ್ಯರಿಗೆ ಸೂಕ್ತ ರೀತಿಯಲ್ಲಿ ಬೆಂಬಲ ನೀಡುವ ಮೂಲಕ ಕಾರ್ಯಾಚರಣೆಯನ್ನು ಮುಂದುವರಿಸುತ್ತದೆ," ಎಂದು ಪ್ರಾಕ್ಟೋ ಮುಖ್ಯ ಆರೋಗ್ಯ ಅಧಿಕಾರಿ ಅಲೆಕ್ಸಾಂಡರ್ ಕುರುವಿಲ್ಲಾ ತಿಳಿಸಿದ್ದಾರೆ.
ಕೊರೊನಾವೈರಸ್ ಕಾಲದಲ್ಲಿ ಟೆಲಿಮೆಡಿಸನ್ ಉಪಯೋಗ
"ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಟೆಲಿಮೆಡಿಸನ್ ವ್ಯವಸ್ಥೆಯು ಹೆಚ್ಚು ಉಪಯುಕ್ತವಾಗಿದೆ. ತಜ್ಞರೊಂದಿಗೆ ನೈಜ-ಸಮಯದ ತ್ವರಿತ, ನಿಖರ ಸಮಾಲೋಚನೆ ಒದಗಿಸಲು ಇದು ಹೆಚ್ಚು ಸಹಕಾರಿಯಾಗಿದೆ. ವೈದ್ಯಕೀಯ ಸಿಬ್ಬಂದಿಯು ವಾಸ್ತವ ಪರಿಸ್ಥಿತಿಯಲ್ಲಿ ಪರೀಕ್ಷೆ ರೋಗನಿರ್ಣಯ ಹಾಗೂ ಚಿಕಿತ್ಸೆ ನೀಡಲು ಸಾಧ್ಯವಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಕೊರೊನಾವೈರಸ್ ಸೋಂಕಿತ ಪ್ರಕರಣ ಮತ್ತು ಆರೈಕೆಯಲ್ಲಿ ತೊಡಗಿರುವ ಸಂದರ್ಭದಲ್ಲಿ ಟೆಲಿಮೆಡಿಸಿನ್ ವ್ಯವಸ್ಥೆಯು ಹೆಚ್ಚು ಪರಿಣಾಮಕಾರಿ ಮತ್ತು ಪರ್ಯಾಯ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಬೆಡ್ ಸೇರಿದಂತೆ ಆಸ್ಪತ್ರೆಯ ಸಂಪನ್ಮೂಲವನ್ನು ಬಳಸದೇ ಜೀವವನ್ನು ರಕ್ಷಿಸುವ ಕೆಲಸವನ್ನು ಮಾಡುತ್ತಿದೆ," ಎಂದು ಪ್ರಾಕ್ಟೊದ ವೈದ್ಯಕೀಯ ನಿರ್ದೇಶಕ ಸಿ.ಎಂ.ಎ. ಬೆಳ್ಳಿಯಪ್ಪ ತಿಳಿಸಿದ್ದಾರೆ.
ಪ್ರಾಕ್ಟೋ ಕಂಪನಿ ಬಗ್ಗೆ ತಿಳಿಯಿರಿ
ಭಾರತದಲ್ಲಿ ಪ್ರಾಕ್ಟೋ ಎನ್ನುವುದು ಒಂದು ಸಮಗ್ರ ಆರೋಗ್ಯ ವ್ಯವಸ್ಥೆಯನ್ನು ಒದಗಿಸುವ ಕಂಪನಿಯಾಗಿದೆ. ವೈದ್ಯರು, ತಪಾಸಣೆ ಕೇಂದ್ರ, ಔಷಧಿ, ಆಸ್ಪತ್ರೆ, ಡಯಾಗ್ನಸ್ಟಿಕ್ ಸೇರಿದಂತೆ ಹಲವು ರೀತಿಯ ಆರೋಗ್ಯ ಸೇವೆಗಳನ್ನು ಒದಗಿಸುವ ಸಮಗ್ರ ಕಂಪನಿಯಾಗಿದೆ. ಆಸ್ಪತ್ರೆಗಳಿಗೆ ಓಡಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಇರುವ ರೋಗಿಗಳ ಸೇವೆಗೆ ಕಂಪನಿ ಹಲವು ರೀತಿ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಆನ್ಲೈನ್ ಮೂಲಕ ಸೂಕ್ತ ವೈದ್ಯರ ಸಮಾಲೋಚನೆಗೆ ಸಮಯ ನಿಗದಿಗೊಳಿಸುವುದು. ವೈದ್ಯರ ಸಮಾಲೋಚನೆ ನಂತರ ಮನೆಗೆ ಸೂಕ್ತ ಔಷಧಿಗಳನ್ನು ತಲುಪಿಸುವುದು, ಅಗತ್ಯ ಬಿದ್ದಲ್ಲಿ ಪರಿಣಿತ ವೈದ್ಯರ ಮೂಲಕ ರೋಗಿಯು ತಮ್ಮ ಮನೆಯಲ್ಲೇ ಲ್ಯಾಬ್ ಪರೀಕ್ಷೆಗಳನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಿದೆ. ಈ ರೀತಿಯ ವೈದ್ಯಕೀಯ ಸೇವೆ ಒದಗಿಸುವ ಸಿಬ್ಬಂದಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಂಪನಿಯು ಸಾಪ್ಫವೇರ್ ವೊಂದರನ್ನು ಅಭಿವೃದ್ಧಿಪಡಿಸಿದೆ. ಜಗತ್ತಿನಾದ್ಯಂತ ಲಕ್ಷಾಂತರ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಜೊತೆಗೆ ತಕ್ಕ ಸಮಯಕ್ಕೆ ಅಗತ್ಯವಾದ ಔಷಧಿಗಳನ್ನು ತಲುಪಿಸುವ ಕಾರ್ಯವನ್ನು ಕಂಪನಿಯು ನಿರ್ವಹಿಸಿಕೊಂಡು ಬರುತ್ತಿದೆ.