ವಿಚಾರಣೆ ಮುಗಿಯೊಲ್ಲ, ಸೆರೆವಾಸ ತಪ್ಪೊಲ್ಲ: ಇದು ಭಾರತೀಯ ಜೈಲುಗಳ ಸ್ಥಿತಿ
'ಜೀವನದ ಅತಿ ಅಮೂಲ್ಯ ಸಮಯವನ್ನು ಜೈಲಿನಲ್ಲಿ ಕಳೆದೆ. ಬಡತನದ ಕುಟುಂಬಕ್ಕೆ ನಾನೇ ಆಧಾರ. ಭಟ್ಕಳದಲ್ಲಿ ಕೆಲಸ ಹುಡುಕಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿದೇಶಕ್ಕೆ ಹೋಗಿ ದುಡಿಯೋಣ ಎಂದರೆ ಪೊಲೀಸರು ಪಾಸ್ಪೋರ್ಟ್ ಕೊಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ'- ಶಂಕಿನ ಉಗ್ರನ ಹಣೆಪಟ್ಟಿ ಹೊತ್ತು ದಶಕದ ಕಾಲ ಜೈಲಿನಲ್ಲಿದ್ದು, ನಿರ್ದೋಷಿಯೆಂದು ಇತ್ತೀಚೆಗಷ್ಟೇ ಜೈಲಿನಿಂದ ಹೊರಬಂದ ಭಟ್ಕಳದ ಶಬ್ಬೀರ್ ಗಂಗೊಳ್ಳಿ ಕಣ್ಣಾಲಿಗಳನ್ನು ತುಂಬಿಕೊಂಡು ಹೇಳಿದ್ದರು.
ಕಾಶ್ಮೀರದ ಮೊಹಮ್ಮದ್ ಅಲಿ ಭಟ್, ನೇಪಾಳದ ರಾಜಧಾನ ಕಠ್ಮಂಡುವಿನಲ್ಲಿ ಶಾಲಗಳನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದ. 1996ರಲ್ಲಿ ಆತನನ್ನು ಪೊಲೀಸರು ಲಜ್ಪತ್ ನಗರ ಸ್ಫೋಟ ಪ್ರಕರಣದಲ್ಲಿ ಬಂಧಿಸಿ ದೆಹಲಿಗೆ ಕರೆತಂದರು. ಆಗ ಆತನಿಗೆ ಕೇವಲ 25ರ ಹರೆಯ. ಬಳಿಕ ಆತನನ್ನು ರಾಜಸ್ಥಾನಕ್ಕೆ ಕರೆದೊಯ್ದು ಸಮ್ಲೇತಿ ಸ್ಫೋಟ ಪ್ರಕರಣದ ಆರೋಪಿಯನ್ನಾಗಿಸಿದರು. ದೆಹಲಿ ಮತ್ತು ರಾಜಸ್ಥಾನಗಳೆರಡರ ಜೈಲುಗಳಲ್ಲಿ ಹಲವು ವರ್ಷ ಕಳೆದ. ಕೊನೆಗೆ ಈ ವರ್ಷದ ಜುಲೈ 22ರಂದು ರಾಜಸ್ಥಾನದ ಹೈಕೋರ್ಟ್ ಆತ ನಿರಪರಾಧಿ ಎಂದು ಘೋಷಿಸಿ ಬಿಡುಗಡೆಗೆ ಆದೇಶಿಸಿತು.
ನ್ಯಾಯದಾನ ವ್ಯವಸ್ಥೆ:ಯಾವ ರಾಜ್ಯಕ್ಕೂ ಇಲ್ಲ ಶೇ.60 ಕ್ಕಿಂತ ಹೆಚ್ಚು ಅಂಕ
ಅಂತಿಮವಾಗಿ ಮೊಹಮ್ಮದ್ ಅಲಿಗೆ 'ನ್ಯಾಯ' ಸಿಕ್ಕಿತು. ಆದರೆ ಪ್ರಯೋಜನವೇನು? ಆತನ ಜೀವನದ ಅತ ಮಹತ್ವದ 23 ವರ್ಷಗಳನ್ನು ಜೈಲಿನಲ್ಲಿಯೇ ಸವೆಸಿದ್ದ. ಬಿಡುಗಡೆಯಾದಾಗ ಆತನಿಗೆ 48 ವರ್ಷ. ಭಾರತದ ಸುದೀರ್ಘ ನ್ಯಾಯದಾನ ವ್ಯವಸ್ಥೆ ಇಂತಹ ನೂರಾರು 'ಆರೋಪಿ'ಗಳನ್ನು ಹಲವು ವರ್ಷ, ದಶಕಗಳ ಕಾಲ ಸೆರೆಯಲ್ಲಿ ಇರಿಸಿ ಕೊನೆಗೆ ಆತನ ತಪ್ಪಿತಸ್ಥನಲ್ಲ ಎಂದು ತೀರ್ಪು ನೀಡುವ ಮೂಲಕ 'ನ್ಯಾಯ' ದೊರಕಿಸುತ್ತದೆ. ಆದರೆ ತಪ್ಪು ಮಾಡದೆಯೇ ಸೆರೆಯಲ್ಲಿ ಕಳೆಯುವವರಿಗೆ ನಿಜಕ್ಕೂ ನ್ಯಾಯ ಸಿಗುತ್ತದೆಯೇ? ಎಷ್ಟೋ ಮಂದಿ ನಿರಪರಾಧಿಗಳು ಜೈಲಿನಲ್ಲಿಯೇ ಜೀವ ಕಳೆದುಕೊಂಡ ಉದಾಹರಣೆಗಳಿವೆ.
ಶೇ 68ರಷ್ಟು ವಿಚಾರಣಾಧೀನ ಕೈದಿಗಳು
ಭಾರತದ ಜೈಲುಗಳಲ್ಲಿರುವ ಶೇ 68ರಷ್ಟು ಕೈದಿಗಳು ಅಪರಾಧಕ್ಕಾಗಿ ಯಾವುದೇ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿಲ್ಲ. ಅವುಗಳಲ್ಲಿ ಹೆಚ್ಚಿನವರು ತಮ್ಮ ವಿರುದ್ಧದ ಪ್ರಕರಣದ ವಿಚಾರಣೆ ಇಂದು ಆರಂಭವಾಗುತ್ತದೆ ಎಂಬ ಆಶಯದೊಂದಿಗೇ ವರ್ಷಗಟ್ಟಲೆ ಜೈಲಿನಲ್ಲಿದ್ದು ಕಾಯುತ್ತಿದ್ದಾರೆ. ಅಪರಾಧ ಎಸಗಿದವರು ಮತ್ತು ಸುಳ್ಳು ಪ್ರಕರಣದಲ್ಲಿ ಜೈಲು ಸೇರಿದವರು- ಇಬ್ಬರ ಸ್ಥಿತಿಯೂ ಒಂದೇ. ಜೈಲುಗಳಲ್ಲಾದರೂ ಅವರು ನೆಮ್ಮದಿಯಿಂದ ಇರಲು ಸಾಧ್ಯವೇ? ಭಾರತದ ಜೈಲುಗಳ ವ್ಯವಸ್ಥೆ ಬಗ್ಗೆ ನಡೆದಿರುವ ಅಧ್ಯಯನಗಳು, ಅವುಗಳ ಕರಾಳತೆಯನ್ನು ಬಿಚ್ಚಿಡುತ್ತವೆ. 2019ರ ಭಾರತದ ನ್ಯಾಯಾಂಗ ವ್ಯವಸ್ಥೆಯ ಕುರಿತಾದ ವರದಿ ಜೈಲುಗಳ ಕುರಿತ ಪ್ರತ್ಯೇಕವಾಗಿ ಬೆಳಕು ಚೆಲ್ಲಿದೆ.
ಜೈಲುಗಳ ಸಾಮರ್ಥ್ಯಕ್ಕೂ ಮೀರಿದ ಕೈದಿಗಳು
ಭಾರತದ ಜೈಲುಗಳು ಅದರ ಸಾಮರ್ಥ್ಯವನ್ನೂ ಮೀರಿ ತುಂಬಿ ತುಳುಕುತ್ತಿವೆ ಎನ್ನುತ್ತದೆ 'ಇಂಡಿಯನ್ ಜಸ್ಟೀಸ್ ರಿಪೋರ್ಟ್-2019'. ದೇಶದ ಜೈಲುಗಳಲ್ಲಿ ಅದರ ಸಾಮರ್ಥ್ಯಕ್ಕೂ ಶೇ 114ರಷ್ಟು ಹೆಚ್ಚಿನ ಕೈದಿಗಳಿದ್ದಾರೆ. 36 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ 17ರಲ್ಲಿ ಶೇ 100ರಷ್ಟು ಜೈಲು ವಾಸದ ಪ್ರಮಾಣವಿದೆ. ಛತ್ತೀಸಗಡದಲ್ಲಿ ಶೇ 190ರಷ್ಟು ಕೈದಿಗಳಿದ್ದರೆ, ದೆಹಲಿಯಲ್ಲಿ ಶೇ 180ರಷ್ಟು ಈ ಪ್ರಮಾಣವಿದೆ. ಅತಿ ಕಡಿಮೆಯೆಂದರೆ ನಾಗಾಲ್ಯಾಂಡ್ನಲ್ಲಿ ಶೇ 28 ಮತ್ತು ಗೋವಾದಲ್ಲಿ ಶೇ 37ರಷ್ಟಿದೆ.
ನ್ಯಾಯಾಂಗ, ನ್ಯಾಯದ ಪರ ದನಿ ಎತ್ತಿದ್ದೇವೆ: ನ್ಯಾ. ಕುರಿಯನ್ ಜೋಸೆಫ್
ಶಿಕ್ಷೆಗೊಳಗಾದವರು ಶೇ 30.87
ಹಾಗಾದರೆ ಜೈಲುಗಳು ಅವುಗಳ ಸಾಮರ್ಥ್ಯಕ್ಕಿಂತಲೂ ಹೆಚ್ಚು ಕೈದಿಗಳನ್ನು ಹೊಂದಿರುವುದೇಕೆ? ಈ ಮೊದಲೇ ಹೇಳಿದಂತೆ ಪ್ರಕರಣಗಳ ವಿಚಾರಣೆ ಎಲಾಸ್ಟಿಕ್ನಂತೆ ಎಳೆಯುತ್ತಲೇ ಹೋಗುತ್ತದೆ. 2016ರ ಡಿಸೆಂಬರ್ ಅಂತ್ಯದವರೆಗಿನ ಪ್ರಕಾರ ಭಾರತಾದ್ಯಂತ ವಿವಿಧ ಜೈಲುಗಳಲ್ಲಿ 4,50,696 ಕೈದಿಗಳಿದ್ದಾರೆ. ಅವರಲ್ಲಿ ಶೇ 68.50 ಮಂದಿ ಇನ್ನೂ ವಿಚಾರಣೆ ಎದುರಿಸುತ್ತಿದ್ದಾರೆ. ಶೇ 30.87ರಷ್ಟು ಮಂದಿ ಅಪರಾಧ ಸಾಬೀತಾಗಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಕರ್ನಾಟಕದಲ್ಲಿ ಶೇ 75ರಷ್ಟು ವಿಚಾರಣಾಧೀನ ಕೈದಿಗಳಿದ್ದು, ಈ ಪಟ್ಟಿಯಲ್ಲಿ ರಾಜ್ಯ 15ನೇ ಸ್ಥಾನದಲ್ಲಿದೆ. ಜೈಲುಗಳ ನಿರ್ವಹಣೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಕೇರಳ ಮೊದಲ ಸ್ಥಾನದಲ್ಲಿದೆ.
ತಿಂಗಳಿಗೆ ಸರಾಸರಿ 2500 ರೂ. ವೆಚ್ಚ
ಕಾರಾಗೃಹಗಳಲ್ಲಿ ಮಹಿಳಾ ಸಿಬ್ಬಂದಿಯ ಸಂಖ್ಯೆ ಶೇ 10ಕ್ಕಿಂತ ಅಧಿಕ ಇರುವುದು 17 ರಾಜ್ಯಗಳಲ್ಲಿ ಮಾತ್ರ. ಇದರಿಂದ ಮಹಿಳಾ ಕೈದಿಗಳ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತವಾಗಿದೆ. ಐದು ರಾಜ್ಯಗಳಲ್ಲಿ ಶೇ 20ಕ್ಕಿಂತಲೂ ಕಡಿಮೆ ಬಂದೀಖಾನೆ ಸಿಬ್ಬಂದಿ ಇದ್ದಾರೆ. ದೇಶದ 1421 ಕಾರಾಗೃಹಗಳಲ್ಲಿ ಕೇವಲ 621 ಬಂದೀಖಾನೆ ಸಿಬ್ಬಂದಿ ಇದ್ದಾರೆ. 19 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಬ್ಬ ಕೈದಿಗೆ ಆಹಾರ, ಬಟ್ಟೆ, ಔಷಧ, ವೈದ್ಯಕೀಯ ಸೌಲಭ್ಯ ಮತ್ತು ಇತರೆ ಯೋಜನೆಗಳಿಗೆ ತಿಂಗಳಿಗೆ ಸರಾಸರಿ 2500 ರೂ. ವೆಚ್ಚ ಮಾಡಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ 95,366 ಕೈದಿಗಳನ್ನು ಕೇವಲ ಒಬ್ಬ ಬಂದೀಖಾನೆ ಸಿಬ್ಬಂದಿ ನಿಭಾಯಿಸುತ್ತಿದ್ದಾರೆ.
ಅನುದಾನ ಬಳಸಿಕೊಳ್ಳದ ರಾಜ್ಯಗಳು
ಪ್ರತಿ ವರ್ಷವೂ ಕಾರಾಗೃಹಗಳ ನಿರ್ವಹಣೆಗಾಗಿ ಬಜೆಟ್ನಲ್ಲಿ ಹಣ ಮೀಸಲಿಡಲಾಗುತ್ತದೆ. ಯಾವುದೇ ರಾಜ್ಯವು ಆ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಂಡ ಉದಾಹರಣೆ ಇಲ್ಲ. ಪಶ್ಚಿಮ ಬಂಗಾಳ ಶೇ 99ರಷ್ಟು ಅನುದಾನ ಬಳಕೆ ಮಾಡಿಕೊಂಡರೆ, ಶೇ 98ರಷ್ಟು ಬಳಸಿಕೊಳ್ಳುವ ಕೇರಳ ನಂತರದ ಸ್ಥಾನದಲ್ಲಿದೆ. ಕರ್ನಾಟಕ ಶೇ 97ರಷ್ಟು ಅನುದಾನ ಬಳಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಕಾರಾಗೃಹ ಸಿಬ್ಬಂದಿಯ ಕೊರತೆ ಸಾಕಷ್ಟಿದ್ದು, ಕೊರತೆಯಿರುವ ರಾಜ್ಯಗಳಲ್ಲಿ ಏಳನೇ ಸ್ಥಾನದಲ್ಲಿದೆ. ಶೇ 25.7ರಷ್ಟು ಕಾರಾಗೃಹ ಅಧಿಕಾರಿ, ಶೇ 14.6ರಷ್ಟು ಕೇಡರ್ ಸ್ಟಾಫ್, ಶೇಏ 33.3ರಷ್ಟು ಬಂದೀಖಾನೆ ಸಿಬ್ಬಂದಿ, ಶೇ 56.1ರಷ್ಟು ವೈದ್ಯಕೀಯ ಸಿಬ್ಬಂದಿ ಮತ್ತು ಶೇ 61.1ರಷ್ಟು ವೈದ್ಯಕೀಯ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ.
ವರ್ಷ ಬದಲಾದರೂ ವ್ಯವಸ್ಥೆ ಬದಲಾಗುತ್ತಿಲ್ಲ
ವರ್ಷಗಳು ಬದಲಾದರೂ ಭಾರತೀಯ ನ್ಯಾಯಾಂಗ ವ್ಯವಸ್ಥೆ ಬದಲಾಗುತ್ತಿಲ್ಲ ಎನ್ನುತ್ತವೆ ಅಂಕಿ ಅಂಶಗಳು. ಕಳೆದ 40 ವರ್ಷಗಳಲ್ಲಿನ ಬದಲಾವಣೆಗಳನ್ನು ಗಮನಿಸಿದ್ದ ಸುಪ್ರೀಂಕೋರ್ಟ್, ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳ ಸಂಖ್ಯೆ ವಿಪರೀತವಾಗಿರುವುದು ನ್ಯಾಯಾಂಗ ವ್ಯವಸ್ಥೆಗೆ ಅವಮಾನಕರ ಎಂದು ಹೇಳಿತ್ತು. ಹೀಗೆ ಕೈದಿಗಳು ವಿಚಾರಣೆ ಎದುರಿಸುತ್ತಿರುವುದು ಅಮಾನವೀಯ. ನಮ್ಮ ಜೈಲುಗಳನ್ನು ಕತ್ತಲೆಯ ಕೂಪದಿಂದ ಹೊರತರಬೇಕು. ಬಹುದೊಡ್ಡ ಸಂಖ್ಯೆಯ ಪುರುಷರು ಮತ್ತು ಮಹಿಳೆಯರು ತಾಳ್ಮೆಯಿಂದಲೋ ಅಥವಾ ಹತಾಶೆಯಿಂದಲೋ ಕಾಯುತ್ತಿದ್ದಾರೆ. ಆದರೆ ನ್ಯಾಯಕ್ಕಾಗಿ ಅವರ ಕಾಯುವಿಕೆ ವ್ಯರ್ಥವಾಗುತ್ತಿದೆ ಎಂದು ಕೋರ್ಟ್ ಬೇಸರ ವ್ಯಕ್ತಪಡಿಸಿತ್ತು.
ಕೈದಿಗಳಲ್ಲಿ ಅನಕ್ಷರಸ್ಥರು, ಬಡವರೇ ಹೆಚ್ಚು
1978ರಲ್ಲಿ ಜೈಲಿನಲ್ಲಿರುವ ಕೈದಿಗಳ ಪೈಕಿ ಶೇ 54ರಷ್ಟು ವಿಚಾರಣಾಧೀನ ಕೈದಿಗಳೇ ಇದ್ದರು. 2017ರ ವೇಳೆಗೆ ಇಷ್ಟೆಲ್ಲ ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಿದ್ದರೂ ವಿಚಾರಣಾಧೀನ ಕೈದಿಗಳ ಸಂಖ್ಯೆ ಶೇ 68ಕ್ಕೆ ಏರಿದೆ. ಈ 40 ವರ್ಷಗಳಲ್ಲಿ ಬದಲಾಗದೆ ಇರುವ ಮತ್ತೊಂದು ಅಂಶವಿದೆ. ಅದು, ಜೈಲು ಸೇರುತ್ತಿರುವವರಲ್ಲಿ ಶೇ 65ಕ್ಕೂ ಹೆಚ್ಚಿನವರು ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದವರು. ಅವರಲ್ಲಿಯೂ ಅಧಿಕ ಸಂಖ್ಯೆಯಲ್ಲಿ ಇರುವುದು ಯುವಜನರು, ಭಾಗಶಃ ಅನಕ್ಷರಸ್ಥರು ಮತ್ತು ಬಡವರು.
15ನೇ ಸ್ಥಾನದಲ್ಲಿ ಭಾರತ
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ವರದಿ ಪ್ರಕಾರ, ಯಾವುದೇ ನ್ಯಾಯಾಲಯ ತಪ್ಪಿತಸ್ಥ ಎಂದು ತೀರ್ಪು ನೀಡದೆಯೇ ಇದ್ದರೂ ಕನಿಷ್ಠ 3.08 ಲಕ್ಷ ಕೈದಿಗಳು ದೇಶದ ಜೈಲುಗಳಲ್ಲಿದ್ದಾರೆ. ಇದು ತಪ್ಪಿತಸ್ಥರೆಂದು ಘೋಷಿಸಲಾದ ಅಪರಾಧಿಗಳ ಪ್ರಮಾಣಕ್ಕಿಂತಲೂ ದೊಡ್ಡದು. ವಿಚಾರಣಾಧೀನ ಕೈದಿಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ 217 ದೇಶಗಳ ಪೈಕಿ ಭಾರತ 15ನೇ ಸ್ಥಾನದಲ್ಲಿದೆ. ಈ ವರದಿಯ ಪ್ರಕಾರ ಭಾರತದಲ್ಲಿ ಜೈಲಿನಲ್ಲಿರುವ ಮೂವರಲ್ಲಿ ಒಬ್ಬ ಆರೋಪಿ ಮಾತ್ರ ಅಪರಾಧಕ್ಕಾಗಿ ಶಿಕ್ಷೆಗೆ ಗುರಿಯಾಗುತ್ತಾನೆ.
ರಾಜ್ಯದಲ್ಲಿ ಜೈಲಿನಲ್ಲಿ ಇರುವವರು...
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ವರದಿ ಅನ್ವಯ 2017ರ ವೇಳೆಗೆ ಕರ್ನಾಟಕದ ಜೈಲಿನಲ್ಲಿ 14,549 ಕೈದಿಗಳಿದ್ದು, ಅವರಲ್ಲಿ 10,199 ಮಂದಿ ವಿಚಾರಣೆ ಎದುರಿಸುತ್ತಿದ್ದಾರೆ. 4,124 ಮಂದಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಅಂದರೆ ರಾಜ್ಯದ ಜೈಲುಗಳಲ್ಲಿ ಸೆರೆವಾಸ ಅನುಭವಿಸುತ್ತಿರುವವರಲ್ಲಿ ಶೇ 70.1ರಷ್ಟು ಮಂದಿ ವಿಚಾರಣಾಧೀನ ಕೈದಿಗಳಾಗಿದ್ದಾರೆ. 77,000ಕ್ಕೂ ಅಧಿಕ ಮಂದಿ ಒಂದು ವರ್ಷಕ್ಕೂ ಹೆಚ್ಚು ಸಮಯ ಜೈಲಿನಲ್ಲಿ ಕಳೆದು ನಿರ್ದೋಷಿಯೆಂದು ಬಿಡುಗಡೆಯಾಗಿದ್ದಾರೆ. 4,876 ಮಂದಿ ತಪ್ಪಿತಸ್ಥರಲ್ಲದಿದ್ದರೂ ಐದು ವರ್ಷಕ್ಕೂ ಹೆಚ್ಚು ಕಾಲ ಸೆರೆವಾಸ ಅನುಭವಿಸಿದ್ದಾರೆ.