ಭಾರತದ ಆರ್ಥಿಕತೆಗೆ ಎನ್ಡಿಎ ಸರ್ಕಾರ ಕೊಟ್ಟ 7 ಪೆಟ್ಟುಗಳು!?
ನವದೆಹಲಿ, ಜೂನ್ 22: ಭಾರತದಲ್ಲಿ ಎರಡು ಅವಧಿಯ ಯುಪಿಎ ಸರ್ಕಾರದ ಆಡಳಿತದಿಂದ ಬೇಸತ್ತು ಹೋಗಿದ್ದ ದೇಶದ ಮತದಾರರು ಅಚ್ಛೇ ದಿನ್ ನಿರೀಕ್ಷೆಯಲ್ಲಿ 2014ರಲ್ಲಿ ಮೊದಲ ಬಾರಿಗೆ ಹೊಸ ಸರ್ಕಾರಕ್ಕೆ ಮಣೆ ಹಾಕಿದರು. 2014 ಮತ್ತು 2019ರಲ್ಲಿ ಚುನಾಯಿತಗೊಂಡ ಎನ್ ಡಿಎ ಸರ್ಕಾರ ನೀಡಿದ ಆಡಳಿತದ ಕುರಿತು ತಿಳಿದುಕೊಳ್ಳುವ ಸಮಯ ಬಂದಿದೆ.
ಭಾರತದಲ್ಲಿ ಸರಕು ಮತ್ತು ಸೇವಾ ತೆರಿಗೆ ಜಾರಿಗೊಳಿಸಿದ ನಂತರದಲ್ಲಿ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಪೆಟ್ರೋಲ್ ದರ ಶತಕ ಬಾರಿಸಿದ್ದರೆ, ಡೀಸೆಲ್ 100ರ ಆಸುಪಾಸಿನಲ್ಲಿದೆ. ಕೇಂದ್ರ ಸರ್ಕಾರದ ದುಡುಕಿನ ನಿರ್ಧಾರಗಳಿಗೆ ನೋಟ್ ಬ್ಯಾನ್, ಪೌರತ್ವ ತಿದ್ದುಪಡಿ ಕಾಯ್ದೆ, ನಾಗರಿಕ ನೋಂದಣಿ ಕಾಯ್ದೆ, ವಿವಾದಿತ ಕೃಷಿ ಕಾಯ್ದೆಗಳು ಹೀಗೆ ಸಾಲು ಸಾಲು ಉದಾಹರಣೆಗಳು ಸಿಗುತ್ತವೆ.
ಕಳೆದ ಏಳು ವರ್ಷಗಳಲ್ಲಿ "ಬಾಯ್ ಔರ್ ಬೆಹನ್", ಎಂದು ಭಾಷಣ ಶುರುವಿಟ್ಟುಕೊಳ್ಳುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತು ಕೇಳಿದ್ದೇ ಲಾಭ. ದೇಶದ ಜಿಡಿಪಿ, ಉದ್ಯೋಗ ಸೃಷ್ಟಿ, ರಫ್ತು ಪ್ರಮಾಣ, ಮೂಲಸೌಕರ್ಯ, ಆರ್ಥಿಕತೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ತೋರಿದ ಸಾಧನೆ ತೀರಾ ಕಳಪೆಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವೈಫಲ್ಯ ಅನುಭವಿಸಿರುವ ಏಳು ಕ್ಷೇತ್ರಗಳ ಕುರಿತು ಬಿಬಿಸಿ ನ್ಯೂಸ್ ಮಾಡಿರುವ ವರದಿಯ ಕುರಿತು ಒಂದು ವಿಶ್ಲೇಷಣಾತ್ಮಕ ವರದಿ ನಿಮ್ಮ "ಒನ್ ಇಂಡಿಯಾ" ಓದುಗರಿಗಾಗಿ ಇಲ್ಲಿದೆ.
ದೇಶದ ಜಿಡಿಪಿ ಕುಸಿತದ ಹಿಂದಿನ ಕಾರಣ
ಭಾರತದ ಒಟ್ಟು ದೇಶೀಯ ಉತ್ಪಾದನೆ ಬಗ್ಗೆ ಸ್ಪಷ್ಟ ಗುರಿ ಹೊಂದಲಾಗಿದೆ. 2025ರ ವೇಳೆಗೆ ಜಿಡಿಪಿಯು 5 ಟ್ರಿಲಿಯನ್ ಡಾಲರ್ ಆಗಿರಲಿದೆ ಅಥವಾ ಹಣದುಬ್ಬರದ ಚೇತರಿಕೆ ಬಳಿಕ 3 ಟ್ರಿಲಿಯನ್ ಆಗಬಹುದು. ಕೊರೊನಾವೈರಸ್ ಹರಡುವಿಕೆಗೂ ಮೊದಲು 2.6 ಟ್ರಿಲಿಯನ್ ಡಾಲರ್ ಗುರಿ ಹೊಂದಲಾಗಿದ್ದು, ಸಾಂಕ್ರಾಮಿಕ ಪಿಡುಗಿನಿಂದ ಅದರಲ್ಲಿ 200 ರಿಂದ 300 ಬಿಲಿಯನ್ ಡಾಲರ್ ಕಡಿತಗೊಂಡಿದೆ. "ಜಾಗತಿಕ ತೈಲ ಬೆಲೆಗಳಿಂದ ಹೆಚ್ಚುತ್ತಿರುವ ಹಣದುಬ್ಬರ ಕೂಡ ಒಂದು ದೊಡ್ಡ ಭಾಗವಾಗಿದೆ," ಎಂದು ಅರ್ಥಶಾಸ್ತ್ರಜ್ಞ ಅಜಿತ್ ರಾನಡೆ ಹೇಳಿದ್ದಾರೆ.
ದೇಶದ ಆರ್ಥಕತೆ ಮತ್ತು ಜಿಡಿಪಿ ಕುಸಿತಕ್ಕೆ ಕೊರೊನಾವೈರಸ್ ಕಾರಣವಲ್ಲ. ನರೇಂದ್ರ ಮೋದಿ ಪ್ರಧಾನಿ ಆಗುವುದಕ್ಕೂ ಮೊದಲು ಭಾರತದ ಜಿಡಿಪಿ ಶೇ. 7 ರಿಂದ 8 ರಷ್ಟಿತ್ತು. 2019-20ನೇ ಸಾಲಿನ ನಾಲ್ಕನೇ ತ್ರೈಮಾಸಿಕದ ವೇಳೆಗೆ ಅದು ಶೇ.3.1ಕ್ಕೆ ಇಳಿಮುಖವಾಗಿದ್ದು, ದಶಕದಲ್ಲಿ ಐತಿಹಾಸಿಕ ಕುಸಿತ ಎಂದು ಗುರುತಿಸಿಕೊಂಡಿತು. 2016ರಲ್ಲಿ ತೆಗೆದುಕೊಂಡ ನೋಟ್ ಬ್ಯಾನ್ ನಿರ್ಧಾರದಿಂದ ಹಣದ ಪ್ರಸರಣ ಕಡಿಮೆಯಾದರೆ, ಹೊಸ ಸರಕು ಮತ್ತು ಸೇವಾ ತೆರಿಗೆ ನೀತಿ ಉದ್ಯಮಗಳಿಗೆ ಭಾರಿ ಹೊಡೆತ ಕೊಟ್ಟಿತು.
ಭಾರತದಲ್ಲಿ ಹೆಚ್ಚಿದ ನಿರುದ್ಯೋಗ ಸಮಸ್ಯೆ
"2011-12ರಿಂದಲೂ ದೇಶದಲ್ಲಿ ಮಂದಗತಿಯ ಬಂಡವಾಳ ಹೂಡಿಕೆಯೇ ದೊಡ್ಡ ಸವಾಲಾಗಿತ್ತು. 2016ರಲ್ಲಿ ನೋಟ್ ಬ್ಯಾನ್ ಮತ್ತು ಜಿಎಸ್ ಟಿ ಕಾಯ್ದೆ ಸೇರಿದಂತೆ ಸರ್ಕಾರದ ಹಲವು ದಿಢೀರ್ ನಿರ್ಧಾರಗಳಿಂದ ಆರ್ಥಿಕತೆಗೆ ಭಾರಿ ಪೆಟ್ಟು ಬಿದ್ದಿತು, ಎಂದು ಭಾರತೀಯ ಆರ್ಥಿಕತೆಯನ್ನು ಮೇಲ್ವಿಚಾರಣೆ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮಹೇಶ್ ವ್ಯಾಸ್ ಹೇಳಿದ್ದಾರೆ. ಜಿಎಸ್ ಟಿ, ನೋಟ್ ಬ್ಯಾನ್ ಜೊತೆ ಲಾಕ್ ಡೌನ್ ಕೂಡ ನಿರುದ್ಯೋಗ ಸಮಸ್ಯೆ ಹೆಚ್ಚಲು ಕಾರಣವಾಗಿತ್ತು.
ದೇಶದಲ್ಲಿ 45 ವರ್ಷಗಳ ನಂತರ ಮೊದಲ ಬಾರಿಗೆ 2017-18ನೇ ಸಾಲಿನಲ್ಲಿ ನಿರುದ್ಯೋಗ ಪ್ರಮಾಣ ಶೇ.6.1ಕ್ಕೆ ಏರಿಕೆಯಾಗಿದೆ. ಸಿಎಂಐಇ ನಡೆಸಿದ ಹೌಸ್ ಹೋಲ್ಡ್ ಸಮೀಕ್ಷೆಯಲ್ಲಿ ಅಂಕಿ-ಅಂಶಗಳನ್ನು ಉಲ್ಲೇಖಿಸಲಾಗಿದೆ. ಪಿಇಡಬ್ಲ್ಯು ಸಂಶೋಧನೆ ಅಂದಾಜಿನ ಪ್ರಕಾರ, 2021ನೇ ಸಾಲಿನ ಆರಂಭದಿಂದ ಈವರೆಗೆ 25 ದಶಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. 75 ದಶಲಕ್ಷ ಭಾರತೀಯರು ಮತ್ತೊಮ್ಮೆ ಬಡತನದ ಸುಳಿಗೆ ಸಿಲುಕಿದ್ದಾರೆ. 10 ಕೋಟಿ ಮಧ್ಯಮ ವರ್ಗದ ಭಾರತೀಯರು ಮುಂದಿನ ಐದು ವರ್ಷಗಳ ಲಾಭವನ್ನು ಕಳೆದುಕೊಂಡಿದ್ದಾರೆ.
"ಭಾರತದಲ್ಲಿ ಪ್ರತಿವರ್ಷ ಆರ್ಥಿಕತೆಗೆ ಅಗತ್ಯವಿರುವ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ವೈಫಲ್ಯ ಅನುಭವಿಸಿದೆ," ಎಂದು ರಾನಡೆ ಹೇಳಿದ್ದಾರೆ. ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ಕೇವಲ 43 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದಿದ್ದಾರೆ.
ದೇಶದಲ್ಲಿ ಉತ್ಪಾದನೆ, ರಫ್ತು ಪ್ರಮಾಣದಲ್ಲಿ ಇಳಿಕೆ
ಇಡೀ ಜಗತ್ತಿನ ಎದುರು "ಮೇಕ್ ಇನ್ ಇಂಡಿಯಾ" ಪರಿಚಯಿಸಿದ ಪ್ರಧಾನಿ ಮೋದಿ, ಭಾರತವನ್ನು ಜಾಗತಿಕ ಉತ್ಪಾದನಾ ಶಕ್ತಿ ಕೇಂದ್ರವನ್ನಾಗಿ ಪರಿವರ್ತಿಸಬೇಕಿತ್ತು. ದೇಶದ ಜಿಡಿಪಿಯಲ್ಲಿ ಶೇ.25ರಷ್ಟು ಉತ್ಪಾದನೆ ಆಗುತ್ತಿದ್ದು, ಏಳು ವರ್ಷಗಳಲ್ಲಿ ಅದರ ಪಾಲು ಶೇ.15ಕ್ಕೆ ಸ್ಥಿರವಾಗಿದೆ. ಆರ್ಥಿಕ ದತ್ತಾಂಶ ಮತ್ತು ವಿಶ್ಲೇಷಣೆಯ ಕೇಂದ್ರದ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಉತ್ಪಾದನಾ ವಲಯದಲ್ಲಿ ಉದ್ಯೋಗಗಳ ಸೃಷ್ಟಿ ಅರ್ಧದಷ್ಟು ಕಡಿಮೆಯಾಗಿದೆ. ಕಳೆದೊಂದು ದಶಕದಿಂದ ರಫ್ತು ಪ್ರಮಾಣ 300 ಬಿಲಿಯನ್ ಡಾಲರ್ ಗೆ ಅಂಟಿಕೊಂಡಿದೆ.
ಭಾರತವು ಬಾಂಗ್ಲಾದೇಶದಂತ ಸಣ್ಣ ಪ್ರತಿಸ್ಪರ್ಧಿಗಳ ಎದುರು ಮಾರುಕಟ್ಟೆಯಲ್ಲಿ ಸ್ಪರ್ಧಿಸುವುಕ್ಕೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ಆ ರಾಷ್ಟ್ರಗಳು ರಫ್ತು ಪ್ರಮಾಣದ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಗಾರ್ಮೆಂಟ್ಸ್ ವಲಯ ಮತ್ತು ಹೆಚ್ಚು ಹೆಚ್ಚು ಕಾರ್ಮಿಕರನ್ನು ಹೊಂದಿದ್ದಾರೆ.
ಕೇಂದ್ರ ಸರ್ಕಾರವು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ತೆರಿಗೆಗಳನ್ನು ವಿಧಿಸುತ್ತಿರುವುದು ಸ್ವಯಂ ಉದ್ಯೋಗ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಉರುಳಾಗುತ್ತಿದೆ.
ಮೂಲಸೌಕರ್ಯ ಅಭಿವೃದ್ಧಿಯಲ್ಲೂ ಸರ್ಕಾರದ ವೈಫಲ್ಯ
"ಪ್ರಧಾನಮಂತ್ರಿ ನರೇಂದ್ರ ಮೋದಿ ಒಂದು ದಿನ ಸುಮಾರು 36 ಕಿಲೋ ಮೀಟರ್ ಹೆದ್ದಾರಿಗೆ ಚಾಲನೆ ನೀಡುತ್ತಾರೆ. ಆದರೆ ಹಿಂದಿನದನ್ನು ಲೆಕ್ಕಕ್ಕೆ ತೆಗೆದುಕೊಂಡಾಗ ಅದು ಸರಾಸರಿ 8 ರಿಂದ 11 ಕಿ.ಮೀ ಆಗುತ್ತದೆ", ಎಂದು ಮೂಲಸೌಕರ್ಯ ಸಂಸ್ಥೆ ಫೀಡ್ಬ್ಯಾಕ್ ಇನ್ಫ್ರಾ ಸಹ-ಸಂಸ್ಥಾಪಕ ವಿನಾಯಕ ಚಟರ್ಜಿ ಹೇಳಿದರು. ಸೌರ ಮತ್ತು ಗಾಳಿ ಆಧಾರಿತ ವಿದ್ಯುತ್ ಉತ್ಪಾದನೆ ಪ್ರಮಾಣ ಐದು ವರ್ಷಗಳಲ್ಲಿ ದ್ವಿಗುಣಗೊಂಡಿದೆ. ಪ್ರಸ್ತುತ ಸುಮಾರು 100 ಗಿಗಾವಾಟ್ ಉತ್ಪಾದಿಸಲಾಗುತ್ತಿದ್ದು, ಭಾರತವು 2023ರ ವೇಳೆಗೆ 175 ಗಿಗಾವಾಟ್ಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ.
ಲಕ್ಷಾಂತರ ಶೌಚಾಲಯಗಳ ನಿರ್ಮಾಣ, ವಸತಿ ಸಾಲಗಳು, ಸಬ್ಸಿಡಿ ಅಡುಗೆ ಅನಿಲ ಮತ್ತು ಬಡವರಿಗೆ ಕೊಳವೆ ನೀರು ಸೇರಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಜನಪ್ರಿಯ ಯೋಜನೆಗಳನ್ನು ಅರ್ಥಶಾಸ್ತ್ರಜ್ಞರು ಸ್ವಾಗತಿಸಿದ್ದಾರೆ. ಆದರೆ ಅನೇಕ ಶೌಚಾಲಯಗಳು ಬಳಕೆ ಆಗುತ್ತಿಲ್ಲ ಅಥವಾ ನೀರಿನ ವ್ಯವಸ್ಥೆಯಿಲ್ಲ. ಇಂಧನ ಬೆಲೆ ಏರಿಕೆ, ಸಬ್ಸಿಡಿ ಕಡಿತಕ್ಕೆ ವಿರೋಧಿಸಿದ್ದಾರೆ.
ದೇಶದಲ್ಲಿ ಔಪಚಾರಿಕ ಆರ್ಥಿಕತೆಗೆ ಒಗ್ಗಿಕೊಂಡ ಜನ
ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳಲ್ಲಿ ಇದೂ ಒಂದಾಗಿದೆ. ಭಾರತವು ಡಿಜಿಟಲ್ ಪಾವತಿಗಳಲ್ಲಿ ಜಾಗತಿಕ ನಾಯಕನಂತೆ ಆಗಿದ್ದು, ಸರ್ಕಾರದ ಬೆಂಬಲಿತ ಪಾವತಿ ವ್ಯವಸ್ಥೆಗೆ ಸಾರ್ವಜನಿಕರು ಹೊಂದಿದ್ದಾರೆ. ಜನ ಧನ್ ಯೋಜನೆಯು ಬ್ಯಾಂಕಿಲ್ಲದ ಲಕ್ಷಾಂತರ ಬಡ ಕುಟುಂಬಗಳಿಗೆ "ಯಾವುದೇ ಪಾವತಿ" ಇಲ್ಲದೇ ಬ್ಯಾಂಕ್ ಖಾತೆಗಳೊಂದಿಗೆ ಔಪಚಾರಿಕ ಆರ್ಥಿಕತೆಗೆ ಪ್ರವೇಶಿಸಲು ಅನುವು ಮಾಡಿಕೊಟ್ಟಿತು. ಖಾತೆಗಳು ಮತ್ತು ಠೇವಣಿಗಳ ಸಂಖ್ಯೆಯಲ್ಲಿ ಏರಿಕೆ ಆಯಿತಾದರೂ ಈ ಖಾತೆಗಳಲ್ಲಿ ಹಲವು ಬಳಕೆಯಾಗುತ್ತಿ ಎಂಬುದು ಸ್ಪಷ್ಟವಾಗುತ್ತಿದೆ. ಆದರೆ, ಮಧ್ಯವರ್ತಿಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಇದೊಂದು ಉತ್ತಮ ಹೆಜ್ಜೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ಆರೋಗ್ಯ ವಲಯದ ಬಗ್ಗೆ ನಿರ್ಲಕ್ಷ್ಯ
"ಹಿಂದಿನ ಸರ್ಕಾರಗಳಂತೆ ಇದು ಆರೋಗ್ಯ ರಕ್ಷಣೆಯನ್ನು ನಿರ್ಲಕ್ಷಿಸುವುದನ್ನು ಮುಂದುವರೆಸಿದೆ. ವಿಶ್ವದಲ್ಲೇ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಹಣ ಖರ್ಚು ಮಾಡುವಲ್ಲಿ ಭಾರತವು ಅತ್ಯಂತ ಕಡಿಮೆ ಮಟ್ಟದಲ್ಲಿದೆ," ಎಂದು ಅರ್ಥಶಾಸ್ತ್ರಜ್ಞ ರೀತಿಕಾ ಖೇರಾ ಹೇಳಿದ್ದಾರೆ. ಪ್ರಾಥಮಿಕ ಮತ್ತು ತೃತೀಯ ಆರೈಕೆ ವಲಯಕ್ಕೆ ಒತ್ತು ನೀಡಲಾಗುತ್ತಿದೆ. "ಇದು ಅಮೆರಿಕಾ ಶೈಲಿಯ ಆರೋಗ್ಯ ವ್ಯವಸ್ಥೆ ಕಡೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದು, ಅದು ಬಲು ದುಬಾರಿ ಎನಿಸಲಿದೆ," ಎಂದಿದ್ದಾರೆ.
2018 ರಲ್ಲಿ ಪ್ರಾರಂಭಿಸಲಾದ ಪ್ರಧಾನಿ ಮೋದಿಯ ಮಹತ್ವಾಕಾಂಕ್ಷೆ ಆರೋಗ್ಯ ವಿಮಾ ಯೋಜನೆ ಕೊವಿಡ್-19 ಸಮಯದಲ್ಲಿಯೂ ಸಹ ಕಡಿಮೆ ಬಳಕೆಯಲ್ಲಿದೆ. "ಇದು ದೀರ್ಘಾವಧಿ ನಿರೀಕ್ಷೆಯಾಗಿದ್ದರೂ, ಹೆಚ್ಚಿನ ಜನರು ಅದನ್ನು ಬಳಸಬೇಕಿದೆ," ಎಂದು ಸಾರ್ವಜನಿಕ ಆರೋಗ್ಯ ತಜ್ಞ ಡಾ.ಶ್ರೀನಾಥ್ ರೆಡ್ಡಿ ಹೇಳಿದ್ದಾರೆ.
ಕೃಷಿ ವಲಯದಿಂದ ದೇಶದ ಜಿಡಿಪಿಗೆ ಸಿಗುವ ಕೊಡುಗೆ
ದೇಶದಲ್ಲಿ ದುಡಿಯುವ ವರ್ಗದಲ್ಲಿ ಶೇ.50ರಷ್ಟು ಮಂದಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರೂ ಕೂಡ ಒಟ್ಟು ದೇಶೀಯ ಉತ್ಪಾದನೆ(ಜಿಡಿಪಿ)ಯಲ್ಲಿ ಕೃಷಿ ವಲಯದ ಕೊಡುಗೆ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ಭಾರತದ ಕೃಷಿ ಕ್ಷೇತ್ರಕ್ಕೆ ಸುಧಾರಣೆಯ ಅಗತ್ಯವಿದೆ ಎಂದು ಬಹುತೇಕರು ಒಪ್ಪುತ್ತಾರೆ. ಕಳೆದ ವರ್ಷ ಅಂಗೀಕರಿಸಿದ ವಿವಾದಿತ ಕೃಷಿ ಕಾಯ್ದೆಗಳಿಂದ ತಮ್ಮ ಆದಾಯ ಮತ್ತಷ್ಟು ಕುಗ್ಗಲಿದೆ ಎಂದು ಕುಪಿತಗೊಂಡ ರೈತರು ನವದೆಹಲಿಯಲ್ಲಿ ತಿಂಗಳುಗಟ್ಟಲೇ ಪ್ರತಿಭಟನೆ ಕುಳಿತುಕೊಂಡಿದ್ದಾರೆ. ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಪ್ರಧಾನಿ ಮೋದಿ ನೀಡಿದ ಭರವಸೆ ನಿಜವಲ್ಲ ಎನ್ನುತ್ತಿದ್ದಾರೆ.
ಸಣ್ಣಪುಟ್ಟ ಸುಧಾರಣೆಗಳು ಅಲ್ಪ ಸಾಧನೆ ಮಾಡುತ್ತವೆ, "ಅದರ ಬದಲಿಗೆ ಕೃಷಿಯನ್ನು ಹೆಚ್ಚು ಕೈಗೆಟುಕುವ ಮತ್ತು ಲಾಭದಾಯಕವಾಗಿಸಲು ಸರ್ಕಾರ ಹೆಚ್ಚು ಹೆಚ್ಚು ಖರ್ಚು ಮಾಡಬೇಕಾಗಿದೆ," ಎಂದು ಅರ್ಥಶಾಸ್ತ್ರಜ್ಞ ಪ್ರೊಫೆಸರ್ ಆರ್ ರಾಮಕುಮಾರ್ ಹೇಳಿದ್ದಾರೆ.
"ನೋಟ್ ಬ್ಯಾನ್ ದೇಶದ ವಿನಿಮಯ ಕೊಂಡಿಯನ್ನೇ ತತ್ತರಿಸುವಂತೆ ಮಾಡಿತು. 2017ರ ಸರಕು ಸೇವೆ ತೆರಿಗೆ ಕಾಯ್ದೆ(ಜಿಎಸ್ ಟಿ) ಬೆಲೆಗಳ ಏರಿಕೆಗೆ ಕಾರಣವಾಯಿತು. 2020ರ ಕೊವಿಡ್-19 ಲಾಕ್ಡೌನ್ಗಳಿಂದ ಎದುರಾದ ಸಂಕಷ್ಟಗಳನ್ನು ನಿವಾರಿಸುವಲ್ಲಿ ಸರ್ಕಾರ ವೈಫಲ್ಯ ಅನುಭವಿಸಿದೆ," ಎಂದಿದ್ದಾರೆ.