ಹೆಚ್ಚುತ್ತಿರುವ ರಸ್ತೆ ಅಪಘಾತ: ಕಾನೂನು ಉಲ್ಲಂಘನೆ, ದುಬಾರಿ ಜೀವನ
ದೇಶದಲ್ಲಿ ಇತರ ಯಾವುದೇ ಸಾಂಕ್ರಾಮಿಕ ರೋಗಗಳಿಗಿಂತ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚು. ಇದನ್ನು ಸಾಧ್ಯವಾದಷ್ಟು ಮಟ್ಟದಲ್ಲಿ ತಪ್ಪಿಸಲು ಸರಕಾರ ಮತ್ತು ಸಂಬಂಧಪಟ್ಟ ಇಲಾಖೆಯು ಪ್ರಯತ್ನವನ್ನು ನಡೆಸುತ್ತಿದ್ದರೂ, ಅಪಘಾತದ ಪ್ರಮಾಣದಲ್ಲಿ ಇಳಿಕೆಯಾಗುತ್ತಿಲ್ಲ.
ಹೆದ್ದಾರಿಗಳಲ್ಲಿ ಅಪಘಾತಗಳು ಮತ್ತು ಸಾವು ನೋವುಗಳ ಅಂಕಿಅಂಶವನ್ನು ಅವಲೋಕಿಸುವುದಾದರೆ 2021-22ರಲ್ಲಿ, ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬರು, ದಿವಸವೊಂದಕ್ಕೆ 415 ಮತ್ತು ವರ್ಷಕ್ಕೆ ಸರಾಸರಿ 1.5 ಲಕ್ಷ ಜನರು ರಸ್ತೆ ಅಪಘಾತದಿಂದ ಸಾವನ್ನಪ್ಪುತ್ತಿದ್ದಾರೆ.
Breaking:ಬೆಳಗಾವಿಯಲ್ಲಿ ಕ್ರೂಸರ್ ಪಲ್ಟಿ- ಕೂಲಿ ಕೆಲಸಕ್ಕೆ ತೆರಳುತ್ತಿದ್ದ 7 ಕಾರ್ಮಿಕರ ದುರ್ಮರಣ
ಕೇಂದ್ರ ಸರಕಾರ ಇದರ ಸಂಖ್ಯೆಯನ್ನು ಇಳಿಮುಖ ಮಾಡಲು ಸಾಕಷ್ಟು ಬದಲಾವಣೆಯನ್ನು ತಂದಿದೆ. ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಚಾಲನಾ ಪರವಾನಿಗೆ ಇಲ್ಲದೇ ವಾಹನ ಒಡಿಸುವವರಿಗೆ ದೊಡ್ಡ ಮೊತ್ತದ ದಂಡ ಅಥವಾ ಶಿಕ್ಷೆ, ಅಪಘಾತದಿಂದ ಮರಣ ಹೊಂದಿದರೆ ಚಾಲಕನಿಗೆ ಜ್ಯೆಲು ಶಿಕ್ಷೆ.. ಈ ಮುಂತಾದ ಕ್ರಮಗಳನ್ನು ತೆಗೆದುಕೊಂಡಿದೆ. ಇದರ ಜೊತೆಗೆ, ವಾಹನ ತಯಾರಿಕಾ ಸಂಸ್ಥೆಗಳಿಗೂ ಹೊಸ ಷರತ್ತನ್ನು ವಿಧಿಸಿದೆ.
ಆದರೆ, ಸರಕಾರದ ಮಟ್ಟದಲ್ಲಿ ಎಷ್ಟೇ ಕ್ರಮ ತೆಗೆದುಕೊಂಡರೂ, ಅದನ್ನು ಸಾರ್ವಜನಿಕರಿಗೆ ತಲುಪಿಸಬೇಕಾದವರು ಸಾರಿಗೆ ಇಲಾಖೆ ಮತ್ತು ಅಲ್ಲಿನ ಅಧಿಕಾರಿಗಳು. ಕಾನೂನು ಬಿಗಿಯಾದಷ್ಟು ಅದನ್ನು ಉಲ್ಲಂಘಿಸುವವರೂ ಇರುತ್ತಾರೆ ಎನ್ನುವುದನ್ನು ಅರಿತೂ ಅಧಿಕಾರಿಗಳು ಸುಮ್ಮನಾದರೆ ಅಪಘಾತದ ಸಂಖ್ಯೆಗಳು ಹೆಚ್ಚಾಗುತ್ತವೆ. ಅದಕ್ಕೆ ಉದಾಹರಣೆಗಳು ಇಲ್ಲದಿಲ್ಲ.
ಕಲಬುರಗಿ ಬಸ್ ಅಪಘಾತ: 7 ಮಂದಿ ಸಜೀವ ದಹನ ಶಂಕೆ
ಪ್ರತೀನಿತ್ಯ ಕಾರ್ಮಿಕರನ್ನು ಬೆಳಗಾವಿಗೆ ಕರೆದುಕೊಂಡು ಬರುತ್ತಿವೆ
ಕಳೆದ ಭಾನುವಾರ (ಜೂನ್ 26) ಗೋಕಾಕ್ ನಿಂದ ಬೆಳಗಾವಿಗೆ ಕ್ರೂಷರ್ ವಾಹನದಲ್ಲಿ ಬರುತ್ತಿದ್ದ ಏಳು ಕೂಲಿ ಕಾರ್ಮಿಕರು ವಾಹನ ನಾಲೆಗೆ ಬಿದ್ದಿದ್ದರಿಂದ ಸಾವನ್ನಪ್ಪಿದ್ದಾರೆ. ಸ್ಥಳೀಯರ ಪ್ರಕಾರ ಇದಕ್ಕೆ ಮೂಲ ಕಾರಣ ಚಾಲಕರ ನಡುವಿನ ಪೈಪೋಟಿಯ ವೇಗ ಮತ್ತು ನಿಗದಿತ ಸಂಖ್ಯೆಗಿಂತ ವಾಹನ ಓವರ್ ಲೋಡ್ ಆಗಿದ್ದದ್ದು. ಈ ವಾಹನಗಳು ಪ್ರತೀನಿತ್ಯ ಕಾರ್ಮಿಕರನ್ನು ಬೆಳಗಾವಿಗೆ ಕರೆದುಕೊಂಡು ಬರುತ್ತಿವೆ. ಆದರೂ ಇದು, ಸಂಚಾರಿ ಪೊಲೀಸರ ಅಥವಾ ಆರ್ಟಿಓ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ ಎನ್ನುವುದಿಲ್ಲಿ ಪ್ರಶ್ನೆ.
ವಾಣಿಜ್ಯ ಬಳಕೆಗೆ ವೈಟ್ ಬೋರ್ಡ್ ವಾಹನಗಳು ಬಳಕೆ
ಕಲಬುರಗಿ, ಬಾಗಲಕೋಟೆ, ನಿಪ್ಪಾಣಿಯಲ್ಲೂ ನಡೆದ ರಸ್ತೆ ಅಪಘಾತದಲ್ಲಿ ಹಲವರು ಸಾವನ್ನಪ್ಪಿದ್ದರು. ಇದೆಲ್ಲಾ, ವೇಗದ ಚಾಲನೆ, ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರು, ವಾಹನಗಳಲ್ಲಿ, ಗ್ಯಾಸ್ ಸಿಲಿಂಡರ್, ತೈಲ ಪದಾರ್ಥ, ಪೆಟ್ರೋಲ್ ತುಂಬಿದ ದ್ವಿಚಕ್ರವಾಹನಗಳನ್ನು ಸಾಗಿಸುವುದು ಮುಂತಾದವುದರಿಂದ. ಕೆಲವೊಂದು ಕಡೆ ವಾಣಿಜ್ಯ ಬಳಕೆಗೆ ವೈಟ್ ಬೋರ್ಡ್ ವಾಹನಗಳು ಬಳಕೆಯಾಗುತ್ತಿದ್ದರೂ ಅದನ್ನು ಸಮರ್ಥವಾಗಿ ತಡೆಯುವ ಅಧಿಕಾರಿಗಳ ಕೊರತೆಯೂ ಇದೆ. ಯಾಕೆಂದರೆ,ಇಂತಹ ಅಪಘಾತಗಳು ಹೆಚ್ಚು ವರದಿಯಾಗುವುದು ಹೆದ್ದಾರಿಗಳಲ್ಲಿ. ಚೆಕ್ ಪೋಸ್ಟ್ ಕಣ್ಣುತಪ್ಪಿಸಿ ಎಷ್ಟು ದಿನ ಈ ರೀತಿ ವಾಹನಗಳಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಬಳಸಲು ಸಾಧ್ಯ?
ತಂತ್ರಜ್ಞಾನ ಅಳವಡಿಕೆ ಕಡ್ಡಾಯ, ವಾಹನದ ಆನ್ ರೋಡ್ ಬೆಲೆ ಹೆಚ್ಚು
ಸರಕಾರ ಹಲವಾರು ಮುಂಜಾಗೃತಾ ಕ್ರಮಗಳನ್ನು ಇತ್ತೀಚಿನ ದಿನಗಳಲ್ಲಿ ಮಾಡುತ್ತಿದೆ. ವಾಹನ ನಿರ್ಮಾಣ ಸಂಸ್ಥೆಗಳಿಗೂ ಹಲವು ಷರತ್ತುಗಳನ್ನು ಕೇಂದ್ರ ಭೂಸಾರಿಗೆ, ಹೆದ್ದಾರಿ ಸಚಿವಾಲಯ ವಿಧಿಸಿದೆ. ಅದರಲ್ಲಿ ಪ್ರಮುಖವಾಗಿ, ಏರ್ಬ್ಯಾಗ್, ಎಬಿಸಿ, ಕ್ರ್ಯಾಷ್ ಟೆಸ್ಟಿಂಗ್, ಇಲೆಕ್ಟ್ರಾನಿವ್ ಸ್ಟೆಬಿಲಿಟಿ ಕಂಟ್ರೋಲ್, ಸೀಟ್ ಬೆಲ್ಟ್ ಅಲರಾಂ, ಬಂಪರ್ ಕ್ಯಾಮೆರಾ ಇತ್ಯಾದಿಗಳು. ಇಂತಹ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ ಕಡ್ಡಾಯ ಮಾಡಿರುವುದರಿಂದ ವಾಹನದ ಆನ್ ರೋಡ್ ಬೆಲೆಯೂ ಹೆಚ್ಚಾಗುತ್ತಿದೆ. ಜೊತೆಗೆ, ಯೆಲ್ಲೋ ಬೋರ್ಡ್ ವಾಹನಗಳ ದರವೂ ಹೆಚ್ಚಾಗಲಿದೆ.
ಕರ್ನಾಟಕ ರಾಜ್ಯ ಟ್ರಾವೆಲ್ಸ ಮಾಲಿಕರ ಸಂಘದ ಅಧ್ಯಕ್ಷ ಕೆ ರಾಧಾಕೃಷ್ಣ ಹೊಳ್ಳ
ಈ ಬಗ್ಗೆ 'ಒನ್ ಇಂಡಿಯಾ' ಜೊತೆ ಮಾತನಾಡಿದ ಕರ್ನಾಟಕ ರಾಜ್ಯ ಟ್ರಾವೆಲ್ಸ ಮಾಲಿಕರ ಸಂಘದ ಅಧ್ಯಕ್ಷ ಕೆ ರಾಧಾಕೃಷ್ಣ ಹೊಳ್ಳ, "ಸರಕಾರ ರಸ್ತೆ ಅಪಘಾತವನ್ನು ನಿಯಂತ್ರಿಸಲು ಹಲವು ಪ್ರಯತ್ನಗಳನ್ನು ಮಾಡುತ್ತಿವೆ. ವಾಹನ ನಿರ್ಮಾಣ ಸಂಸ್ಥೆಗಳಿಗೂ ಹಲವು ಷರತ್ತುಗಳನ್ನು ವಿಧಿಸಿದೆ. ಮುಂದಿನ ದಿನಗಳಲ್ಲಿ ವಾಹನದ ಬೆಲೆಯೂ ಹೆಚ್ಚಾಗುವುದು ಒಂದು ಕಡೆ, ಟ್ರಾವೆಲ್ಸ್ ಸಂಸ್ಥೆಗಳೂ ದರವನ್ನು ಪರಿಷ್ಕರಿಸಬೇಕಾಗುತ್ತದೆ. ವೈಟ್ ಬೋರ್ಡ್ ವಾಹನಗಳು ವಾಣಿಜ್ಯ ಉದ್ದೇಶಕ್ಕಾಗಿ ಬಳಕೆಯಾಗುತ್ತಿರುವುದಕ್ಕೆ ನಿಯಂತ್ರಣ ಹೇರಬೇಕಿದೆ. ನಮ್ಮ ಸಾರಿಗೆ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳು ಈ ಸಂಬಂಧ ಎಷ್ಟು ಸಭೆಗಳನ್ನು ಕರೆದಿದ್ದಾರೆ? ಸರಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ"ಎಂದು ಹೊಳ್ಳ ಹೇಳಿದ್ದಾರೆ.