ಹಾವು ಕಡಿತದಿಂದ ಭಾರತದಲ್ಲಿ ಸತ್ತವರ ಸಂಖ್ಯೆ ಎಷ್ಟು? ಇಲ್ಲಿದೆ ಅಧ್ಯಯನ ಬಿಚ್ಚಿಟ್ಟ ಮಾಹಿತಿ
ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ 12 ಲಕ್ಷ ಮಂದಿ ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ. ಇವರಲ್ಲಿ ಅರ್ಧಕ್ಕಿಂತ ಹೆಚ್ಚಿನವರು 30-69 ವರ್ಷ ವಯೋಮಾನದವರು. ಕಾಲು ಭಾಗದಷ್ಟು ಮಕ್ಕಳು ಎಂದು ಅಧ್ಯಯನವೊಂದು ತಿಳಿಸಿರುವುದಾಗಿ ಬಿಬಿಸಿ ವರದಿ ಮಾಡಿದೆ.
ರಸಲ್ಸ್ ವೈಪರ್ಸ, ಕ್ರೈಟ್ಸ್ ಮತ್ತು ಕೋಬ್ರಾ ಹಾವುಗಳ ಕಡಿತದಿಂದ ಬಹುತೇಕರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನುಳಿದ ಸಾವುಗಳು 12 ವಿವಿಧ ಜಾತಿಯ ಹಾವುಗಳ ಕಡಿತದಿಂದ ಸಂಭವಿಸಿವೆ. ಬಹುತೇಕ ಹಾವು ಕಡಿತದ ಘಟನೆಗಳು ಮಾರಣಾಂತಿಕವಾಗಲು ಕಾರಣ ತತ್ ಕ್ಷಣದ ವೈದ್ಯಕೀಯ ಸೌಲಭ್ಯಗಳು ಹಾವು ಕಚ್ಚಿದ ಪ್ರದೇಶದಲ್ಲಿ ಲಭ್ಯವಿಲ್ಲದಿರುವುದು ಮತ್ತು ಚಿಕಿತ್ಸೆ ದೊರಕದಿರುವುದು ಎಂದು ಅಧ್ಯಯನ ಹೇಳಿದೆ.
ಜೂನ್, ಸೆಪ್ಟೆಂಬರ್ ನಲ್ಲಿ ಹಾವಿನಿಂದ ಹೆಚ್ಚು ಸಾವು
ಅರ್ಧದಷ್ಟು ಸಾವುಗಳು ಜೂನ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಸಂಭವಿಸಿವೆ. ಈ ಸಮಯದಲ್ಲಿ ಹಾವುಗಳು ಹೊರಬರುತ್ತವೆ. ಹೆಚ್ಚಿನ ಮಂದಿಗೆ ಹಾವುಗಳು ಕಚ್ಚಿರುವುದು ಕಾಲಿನ ಭಾಗಕ್ಕೆ. ರಸಲ್ಸ್ ವೈಪರ್ ಭಾರತ ಹಾಗೂ ದಕ್ಷಿಣಾ ಏಷಿಯಾದ ಇತರೆ ದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಇಲಿಗಳನ್ನು ತಿನ್ನುವ ಈ ಹಾವು ಸಾಮಾನ್ಯವಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮನುಷ್ಯರು ವಾಸವಿರುವ ಜಾಗಗಳಲ್ಲಿ ಕಂಡುಬರುತ್ತವೆ. ಭಾರತದ ಕ್ರೈಟ್ ಹಾವು ಹಗಲಿನಲ್ಲಿ ಶಾಂತವಾಗಿ ಕಾಣುತ್ತದಾದರೂ ರಾತ್ರಿ ವೇಳೆ ದಾಳಿಯ ಸ್ವಭಾವ ಹೊಂದಿರುತ್ತದೆ. ಇದರ ಉದ್ದ ಸುಮಾರು ಐದು ಅಡಿ ಒಂಬತ್ತು ಇಂಚು ಇರುತ್ತದೆ. ಕೋಬ್ರಾ ಸಾಮಾನ್ಯವಾಗಿ ಮಬ್ಬುಗತ್ತಲಲ್ಲಿ/ಸಂಜೆ ವೇಳೆ/ರಾತ್ರಿ ವೇಳೆ ಕಚ್ಚುತ್ತದೆ. ಇದರ ವಿಷದಿಂದ ದೇಹದೊಳಗೆ ಬ್ಲೀಡ್ ಆಗುತ್ತದೆ. ತತ್ ಕ್ಷಣ ಚಿಕಿತ್ಸೆ ಅಗತ್ಯವಿರುತ್ತದೆ.
ಮಲಗಿದ್ದ ಹಾಸಿಗೆಯೊಳಗಿತ್ತು ವಿಷಸರ್ಪ! ಬಳ್ಳಾರಿಯಲ್ಲಿ ಹಾವು ಕಚ್ಚಿ ಮಹಿಳೆ ಸಾವು
2001 ರಿಂದ 2014 ಅವಧಿಯಲ್ಲಿ ಹೆಚ್ಚು ಪ್ರಕರಣ
ಈ ಅಧ್ಯಯನದಲ್ಲಿ ಕಂಡು ಬಂದ ಮತ್ತೊಂದು ಅಂಶವೆಂದರೆ, 2001 ರಿಂದ 2014 ಅವಧಿಯಲ್ಲಿ ಶೇಕಡಾ 70ರಷ್ಟು ಹಾವು ಕಡಿತದ ಸಾವುಗಳು ಸಂಭವಿಸಿವೆ. ಅದೂ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಒಡಿಷಾ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಈಗಿನ ತೆಲಂಗಾಣ, ರಾಜಾಸ್ಥಾನ ಮತ್ತು ಗುಜರಾತ್ ಈ ಎಂಟು ರಾಜ್ಯಗಳಲ್ಲಿ. ಭಾರತೀಯರಲ್ಲಿ 70 ವರ್ಷಗಳೊಳಗೆ ಹಾವು ಕಡಿತದಿಂದ ಸಾವು ಸಂಭವಿಸಬಹುದಾದ ಸರಾಸರಿ ಅಂದಾಜು, 250 ಮಂದಿಯಲ್ಲಿ ಒಬ್ಬರು. ಕೆಲವೊಂದು ಪ್ರದೇಶಗಳಲ್ಲಿ ಪ್ರತಿ ನೂರು ಮಂದಿಯಲ್ಲಿ ಒಬ್ಬರು ಹಾವು ಕಡಿತಕ್ಕೆ ಬಲಿಯಾಗುವ ಸಾಧ್ಯತೆಯನ್ನು ಅಧ್ಯಯನ ತಿಳಿಸಿದೆ.
ಗ್ರಾಮೀಣ ಭಾಗಗಳಲ್ಲಿ ಸುರಕ್ಷೆಯ ಅರಿವು ಮೂಡಿಸಬೇಕಿದೆ
ಗ್ರಾಮ ಭಾರತದಲ್ಲಿ ಮುಂಗಾರು ಹಂಗಾಮಿನಲ್ಲಿ ಗ್ರಾಮೀಣ ಸಮುದಾಯ ಹಾವು ಕಡಿತಕ್ಕೆ ಬಲಿಯಾಗುವ ಸಂಭವ ಬಹಳ ಹೆಚ್ಚಿದೆ. ಹಾಗಾಗಿ ಗ್ರಾಮೀಣ ಭಾರತದಲ್ಲಿ "ಹಾವುಗಳಿಂದ-ಸುರಕ್ಷೆ" ಪಡೆಯುವ ವಿಧಾನಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಗಮ್ ಬೂಟ್ ಧರಿಸುವುದು, ಕೈಗಸುಗಳನ್ನು ಧರಿಸುವುದು, ಬ್ಯಾಟರಿ ಬಳಸುವುದರಿಂದ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ.
ಬಂಟ್ವಾಳದಲ್ಲಿ ಪತ್ತೆಯಾಯಿತು ಅತಿ ಅಪರೂಪದ ಬಿಳಿ ಹೆಬ್ಬಾವು
ಹಾವು ಕಡಿತ ಜಾಗತಿಕವಾದ ಆರೋಗ್ಯ ಆದ್ಯತೆಯ ವಿಷಯ
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಹಾವು ಕಡಿತ ಜಾಗತಿಕವಾದ ಆರೋಗ್ಯ ಆದ್ಯತೆಯ ವಿಷಯವಾಗಿದೆ. ಹಾವು ಕಡಿತವೆಂಬುದು ಆರೋಗ್ಯದ ವಿಚಾರವಾಗಿ ಬಹಳ ತಾತ್ಸಾರಕ್ಕೊಳಪಟ್ಟಿರುವ/ ಕಡೆಗಣಿಸಲ್ಪಟ್ಟಿರುವ ಅನಾರೋಗ್ಯದ ಸಮಸ್ಯೆಯಾಗಿದೆ. ಪ್ರತಿ ವರ್ಷ ವಿಶ್ವದಾದ್ಯಂತ 81,000 ದಿಂದ 1,38,000 ಮಂದಿ ಹಾವು ಕಡಿತದಿಂದ ಸಾಯುತ್ತಿದ್ದಾರೆ. ಇದರ ಮೂರು ಪಟ್ಟು ಮಂದಿ ಬದುಕುಳಿದರೂ ಶಾಶ್ವತ ವಿಕಲತೆಯನ್ನು ಹೊಂದುತ್ತಾರೆ ಎಂಬುದಾಗಿಯೂ ಅಧ್ಯಯನ ತಿಳಿಸಿದೆ.
ಕೃಪೆ: ಬಿಬಿಸಿ