ಕೋವಿಡ್ 2 ನೇ ಅಲೆ ವೇಳೆ ಮೃತರ ದೇಹ ಗಂಗಾಕ್ಕೆ ಎಸೆಯಲಾಗುತ್ತಿತ್ತು: ಮಿಷನ್ ಮುಖ್ಯಸ್ಥ!
ಲಕ್ನೋ, ಡಿಸೆಂಬರ್ 24: ಕೊರೊನಾ ವೈರಸ್ ಸಾಂಕ್ರಾಮಿಕದ ಎರಡನೇ ಅಲೆಯ ಸಂದರ್ಭದಲ್ಲಿ ಮೃತ ದೇಹವನ್ನು ಎಸೆಯಲು ಗಂಗಾ ನದಿಯು ಸುಲಭವಾಗಿ ಲಭ್ಯವಾಗುವ ಮೈದಾನದಂತೆ ಆಗಿತ್ತು ಎಂದು ಗುರುವಾರ ಬಿಡುಗಡೆ ಆದ ಹೊಸ ಪುಸ್ತಕವು ಉಲ್ಲೇಖ ಮಾಡಿದೆ. ಈ ಪುಸ್ತಕದಲ್ಲಿ ಗಂಗಾ ನದಿಯ ಬಗ್ಗೆ ವಿವರವಾದ ಮಾಹಿತಿ ಇದೆ.
Ganga: Reimagining, Rejuvenating, Reconnecting ಎಂಬ ಶೀರ್ಷಿಕೆಯ ಈ ಪುಸ್ತಕವನ್ನು ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ನಿರ್ದೇಶಕ ರಾಜೀವ್ ರಂಜನ್ ಮಿಶ್ರಾ ಹಾಗೂ ನಮಾಮಿ ಗಂಗೆಯ ಮುಖ್ಯಸ್ಥ ಪುಷ್ಕಲ್ ಉಪಾಧ್ಯಾಯ ಬರೆದಿದ್ದಾರೆ. ರಾಜೀವ್ ರಂಜನ್ ಮಿಶ್ರಾ 1987-ಬ್ಯಾಚ್ ತೆಲಂಗಾಣ-ಕೇಡರ್ನ ಐಎಎಸ್ ಅಧಿಕಾರಿಯಾಗಿದ್ದು, ಐದು ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದಾರೆ, ಡಿಸೆಂಬರ್ 31, 2021 ರಂದು ನಿವೃತ್ತರಾಗಲಿದ್ದಾರೆ. ಈ ಪುಸ್ತಕರವನ್ನು ಗುರುವಾರ ಆರ್ಥಿಕ ಸಲಹಾ ಸಂಸ್ಥೆಯ ಅಧ್ಯಕ್ಷ ಬಿಬೆಕ್ ಡೆಬ್ರಾಯ್ ಬಿಡುಗಡೆ ಮಾಡಿದ್ದಾರೆ.
ಪುಸ್ತಕದಲ್ಲಿನ "ಫ್ಲೋಟಿಂಗ್ ಕಾರ್ಪ್ಸಸ್: ಎ ರಿವರ್ ಡಿಫೈಲ್ಡ್" ಎಂಬ ಶೀರ್ಷಿಕೆಯ ಒಂದು ವಿಭಾಗದಲ್ಲಿ, ಕೊರೊನಾ ವೈರಸ್ ಸಾಂಕ್ರಾಮಿಕ ಸಂದರ್ಭದಲ್ಲಿ ಗಂಗಾ ನದಿಯ ಮೇಲೆ ಉಂಟಾದ ಪ್ರಭಾವದ ಬಗ್ಗೆ ಬೆಳಕು ಚೆಲ್ಲಿದೆ. ನದಿಯನ್ನು ಉಳಿಸುವ ನಿಟ್ಟಿನಲ್ಲಿ ಐದು ವರ್ಷಗಳ ಕಾಲ ನಡೆಸಿದ ಎಲ್ಲಾ ಪ್ರಯತ್ನವನ್ನು ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯು ಹಾಳುಗೆಡವಿದೆ ಎಂದು ಪುಸ್ತಕದಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ.
ಗಂಗಾನದಿಯಲ್ಲಿ ಕೋವಿಡ್ ಮೃತದೇಹಗಳು
"ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯ ಸಂದರ್ಭದಲ್ಲಿ ಮೃತ ದೇಹಗಳ ಸಂಖ್ಯೆಯು ಇನ್ನಷ್ಟು ಹೆಚ್ಚಳವಾಯಿತು. ಈ ಸಂದರ್ಭದಲ್ಲಿ ಜಿಲ್ಲಾಡಳಿತಗಳು ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಸ್ಮಶಾನ ಹಾಗೂ ದಫನ ಸ್ಥಳವನ್ನು ವಿಸ್ತಾರ ಮಾಡಿತು. ಆದರೆ ಗಂಗಾ ನದಿ ಮೃತ ದೇಹಗಳನ್ನು ಸುಲಭವಾಗಿ ಎಸೆಯುವ ಸ್ಥಳವಾಯಿತು," ಎಂದು ಪುಸ್ತಕದಲ್ಲಿ ಇದೆ.
ಎಷ್ಟು ಮೃತ ದೇಹಗಳ ಗಂಗಾ ಪಾಲಾಗಿದೆ?
ಸುಮಾರು 300 ಕ್ಕಿಂತ ಹೆಚ್ಚು ಕೋವಿಡ್ ಮೃತ ದೇಹಗಳನ್ನು ನದಿಗಳಿಗೆ ಎಸೆಯಲಾಗಿದೆ. ಒಂದು ಸಾವಿರಷ್ಟು ಮೃತ ದೇಹಗಳನ್ನು ನದಿಗೆ ಎಸೆಯಲಾಗಿಲ್ಲ ಎಂದು ಈ ಪುಸ್ತಕದ ಮೂಲಕ ಹೇಳಿರುವ ಗಂಗಾ ಮಿಷನ್ ಮುಖ್ಯಸ್ಥರು ಈ ಬಗ್ಗೆ ಜಿಲ್ಲೆಗಳು ಒದಗಿಸಿದ ಡೇಟಾವವನ್ನು ಉಲ್ಲೇಖ ಮಾಡಿದ್ದಾರೆ. ಇನ್ನು ಈ ಪುಸ್ತಕದ ಕೆಲವು ಭಾಗಗಳನ್ನು ಮಿಶ್ರಾ ಅವರೇ ಬರೆದಿರುವುದು ಎಂದು ಸ್ಪಷ್ಟಪಡಿಸುವ ಕೆಲವು ಅಂಶಗಳು ಕೂಡಾ ಇದೆ. "ನಾನು ಗುರುಗ್ರಾಮದ ಮೇದಾಂತ ಎಂಬ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ, ಯಾರೂ ಇಲ್ಲದ, ಅರ್ಧ ಸುಟ್ಟ, ಬಾತು ಬಂದ ಮೃತ ದೇಹಗಳು ಗಂಗಾ ನದಿಯಲ್ಲಿ ತೇಲುತ್ತಿದೆ ಎಂಬ ಸುದ್ದಿಯು ತಿಳಿದು ಬಂದಿದೆ," ಎಂದು ಈ ಪುಸ್ತಕದಲ್ಲಿ ರಾಜೀವ್ ರಂಜನ್ ಮಿಶ್ರಾ ಬರೆದಿದ್ದಾರೆ. ಹಾಗೆಯೇ "ನಾನು ವಿವಿಧ ಜಿಲ್ಲಾ ಮ್ಯಾಜಿಸ್ಟ್ರೇಟ್ಗಳು ಮತ್ತು ಪಂಚಾಯತ್ ಸಮಿತಿಗಳ ವರದಿಗಳನ್ನು ಓದಿದಾಗ ಮೃತ ದೇಹಗಳ ಸಂಖ್ಯೆ 300 ಕ್ಕಿಂತ ಅಧಿಕ ಇಲ್ಲ ಎಂದು ತಿಳಿದು ಬಂದಿದೆ. ಆದರೆ ಖಂಡಿತವಾಗಿ ಸಾವಿರಾರು ಮೃತ ದೇಹ ಇರಲಿಲ್ಲ. ಬಿಹಾರದಲ್ಲಿ ಪತ್ತೆಯಾದ ಶವಗಳು ಯುಪಿಯಿಂದ ತೇಲಿ ಹೋದವುಗಳು," ಎಂದು ಕೂಡಾ ತಿಳಿಸಿದ್ದಾರೆ.
ನನಗೆ ಆಘಾತ ಉಂಟು ಮಾಡಿತು
"ಟಿವಿ ಚಾನೆಲ್ಗಳು, ಮ್ಯಾಗಜಿನ್ಗಳಲ್ಲಿ, ದೈನಂದಿನ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮ ವೆಬ್ಸೈಟ್ಗಳಲ್ಲಿ ಗಂಗಾ ನದಿಯಲ್ಲಿ ಶವಗಳು ತೇಲುವ ಭೀಕರ ದೃಶ್ಯಗಳು ಇದ್ದವು, ಮೃತ ದೇಹಗಳನ್ನು ಗಂಗಾ ನದಿಗೆ ಎಸೆಯಲಾಗುತ್ತಿದೆ ಎಂದು ವರದಿಗಳು ಆಗಿದ್ದವು. ಇದು ನನಗೆ ಭಾರೀ ಆಘಾತವನ್ನು ಉಂಟು ಮಾಡಿತು. ನಾನು ಎನ್ಎಂಸಿಜಿ ಮಹಾನಿರ್ದೇಶಕನಾಗಿ ಗಂಗಾ ನದಿಯನ್ನು ಕಾಪಾಡುವುದೇ ನನ್ನ ಕೆಲಸ. ಈ ಹಿಂದಿನ ಸ್ವಚ್ಛತೆಯನ್ನು ಮತ್ತೆ ತರುವುದು ಕೂಡ ನನ್ನ ಕೆಲಸ. ಆದರೆ ಗಂಗಾ ನದಿಯಲ್ಲಿ ಶವಗಳು ತೇಲುವುದು ನೋಡಿ ನನಗೆ ಆಘಾತವಾಯಿತು," ಎಂದು ರಾಜೀವ್ ರಂಜನ್ ಮಿಶ್ರಾ ತಿಳಿಸಿದ್ದಾರೆ.
ಮೃತ ದೇಹವನ್ನು ನದಿ ದಡದಲ್ಲಿ ದಫನ ಮಾಡುವ ಸಂಪ್ರದಾಯ
ಇನ್ನು ಉತ್ತರ ಪ್ರದೇಶದ ಕೆಲವು ಸಮುದಾಯಗಳಲ್ಲಿ ಮೃತ ದೇಹವನ್ನು ಗಂಗಾ ನದಿಯ ದಡದಲ್ಲಿ ಮಣ್ಣು ಮಾಡುವ ಸಂಪ್ರದಾಯವಿದೆ. ಈ ಬಗ್ಗೆಯೂ ಪುಸ್ತಕದಲ್ಲಿ ಉಲ್ಲೇಖ ಮಾಡಲಾಗಿದೆ. "ಈ ಗಂಗಾ ನದಿಯ ಪಕ್ಕದಲ್ಲಿ ಮೃತ ದೇಹವನ್ನು ಮಣ್ಣು ಮಾಡುವುದು ಅಥವಾ ಗಂಗಾ ನದಿಯಲ್ಲಿ ಮೃತ ದೇಹಗಳು ತೇಲುವುದು ಇಲ್ಲಿನ ಸ್ಥಳೀಯ ಜನರಿಗೆ ಅಸಾಮಾನ್ಯ ದೃಶ್ಯವೇನಲ್ಲ. ಆದರೆ ನದಿ ತೀರದಲ್ಲಿ ಮೃತ ದೇಹಗಳನ್ನು ಹೆಚ್ಚಿನ ಪ್ರಮಾಣದಲ್ಲಿ ದಫನ ಮಾಡಿರುವುದು, ನದಿಯಲ್ಲಿ ಮೃತ ದೇಹಗಳು ರಾಶಿ ರಾಶಿಯಾಗಿ ತೇಲುವುದು ಈ ಪರಿಸ್ಥಿತಿಯ ಗಂಭೀರತೆಯನ್ನು, ಬಿಕ್ಕಟ್ಟನ್ನು ಒತ್ತಿ ಹೇಳಿದೆ," ಎಂದು ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ನಿರ್ದೇಶಕ ರಾಜೀವ್ ರಂಜನ್ ಮಿಶ್ರಾ ಹೇಳಿದ್ದಾರೆ. (ಒನ್ಇಂಡಿಯಾ ಸುದ್ದಿಗಳು)