ಕೊಟ್ಟ ಮಾತು ನೆರವೇರಿಸಲು ಮುಂದಾದರೆ ಕುಮಾರಣ್ಣನ ಸಂಪುಟದ ಅರ್ಧದಷ್ಟು ಸೀಟುಗಳು ಖಾಲಿ ಖಾಲಿ!
ಈ ಬಾರಿ ಲೋಕಸಭಾ ಚುನಾವಣೆ ಬಹಳ ಕಾವೇರಿತ್ತು ಎಂಬ ಸಾಲು ಬರೆಯುವಷ್ಟರಲ್ಲಿ, ಇಲ್ಲ, ಬಲು ಕಾಮಿಡಿಯಾಗಿತ್ತು ಎಂದು ಈಗ ಅನಿಸುತ್ತದೆ. ಕೆಲವು ರಾಜಕಾರಣಿಗಳು ನೀಡಿದ ಹೇಳಿಕೆಗಳು ಈಗ ಫಲಿತಾಂಶದ ಜತೆಗೆ ತಾಳೆ ಮಾಡಿ ನೋಡಿದರೆ ಏನು ಮಾಡಬಹುದು ಇವರೆಲ್ಲ ಎನಿಸುತ್ತದೆ. ಕೊಟ್ಟ ಮಾತಿನಂತೆ ನಡೆದುಕೊಂಡರೆ ಕುಮಾರಸ್ವಾಮಿ ಸಚಿವ ಸಂಪುಟವೇ ಖಾಲಿ ಖಾಲಿ ಎನಿಸುತ್ತದೆ.
ಮೊದಲಿಗೆ ಅವರ ಹಿರಿಯ ಸೋದರ ಎಚ್.ಡಿ.ರೇವಣ್ಣ ಕಾವಿ ತೊಡಬೇಕಾಗುತ್ತದೆ. ಮತ್ತಿಬ್ಬರು ಸಹ ಕಾವಿ ತೊಡುವ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಅನಿವಾರ್ಯ ಎದುರಾಗುತ್ತದೆ. ಸಹೃದಯಿ ಮತದಾರರು ಇವರ ಮಾತುಗಳನ್ನೆಲ್ಲ ಸಿಂಪಲ್ ಆಗಿ ತಗೊಂಡು, ಓಗ್ಲಿ ಬಿಡ್ರಣ್ಣೋ ಅಂದರೆ ಪರವಾಗಿಲ್ಲ. ಬೆನ್ನಟ್ಟಿ ಹೋಗಿ, ಹೇಳಿದಂಗೆ ಮಾಡಿ ಅಂದರೆ ಗತಿ ಏನು?
ಮೋದಿ ಮತ್ತೆ ಪ್ರಧಾನಿಯಾದರೆ ರೇವಣ್ಣ ರಾಜಕೀಯ ನಿವೃತ್ತಿ ಪಡೆಯುತ್ತಾರಾ?
ಆಪರೇಷನ್ ಕಮಲದ ಬಗ್ಗೆ ಹೇಳುತ್ತಿರಬಹುದಾ? ಯಡಿಯೂರಪ್ಪ ಅವರಿಗೆ ಕುಮಾರಸ್ವಾಮಿ ಏನಾದರೂ ಮಾತು ಕೊಟ್ಟಿದ್ದರಾ? ಹೀಗೆಲ್ಲ ಏನೇನೋ ಯೋಚಿಸಬೇಡಿ. ವಿಚಾರ ಸಿಂಪಲ್ ಇದೆ. ಎಚ್.ಡಿ.ರೇವಣ್ಣ, ಸಿ.ಎಸ್.ಪುಟ್ಟರಾಜು, ಎಸ್.ಆರ್.ಶ್ರೀನಿವಾಸ್ ಮುಂದೆ ಅದು ಹೇಗೆ ನಡೆದುಕೊಳ್ಳುತ್ತಾರೋ ಎಂಬುದು ಸದ್ಯದ ಪ್ರಶ್ನೆ.
ಮೋದಿ ಗೆದ್ದರೆ ರಾಜಕೀಯ ನಿವೃತ್ತಿ ಎಂದಿದ್ದರು ರೇವಣ್ಣ
ಒಂದು ವೇಳೆ ಮೋದಿ ಮತ್ತೆ ಪ್ರಧಾನಿಯಾದರೆ ರಾಜಕೀಯ ನಿವೃತ್ತಿಯನ್ನು ಪಡೆಯುತ್ತೇನೆ ಎಂದು ಲೋಕೋಪಯೋಗಿ ಸಚಿವ ರೇವಣ್ಣ ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಅದರ ಜತೆಗೆ ನನಗೆ ಇಪ್ಪತ್ತೆರಡನೇ ನಂಬರ್ ಲಕ್ಕಿ ನಂಬರ್. ಅದು ಇದು ಅಂತ ಹೇಳಿದ್ದರು. ಆದರೆ ಎಲ್ಲ ಮಾತಿಗಿಂತ ಹೈಲೈಟ್ ಆಗಿದ್ದು 'ರಾಜಕೀಯ ನಿವೃತ್ತಿ' ಬಗ್ಗೆ ಹೇಳಿದ್ದು. ಆ ನಂತರ ರೇವಣ್ಣ ಅವರು ಸಹ ಆ ಬಗ್ಗೆ ಹಾಗಲ್ಲ ಹೀಗೆ ಅಂತ ಹೇಳಿದ್ದಾರೆ. ಪಾಪ ಅವರು ರಾಜಕೀಯದಲ್ಲಿ ಇರಲಿ. ಆದರೆ ಒಂದು ಸಲ ನಿವೃತ್ತಿಯ ಮಾತನಾಡಿ, ಆ ನಂತರ ಯು ಟರ್ನ್ ಹೊಡೆದ ಬಗ್ಗೆ ಈಗ ಮತ್ತೆ ಸುದ್ದಿ ಆಗಿದ್ದಕ್ಕಿಂತ ಹೆಚ್ಚಾಗಿ ರೇವಣ್ಣ ಅವರು ಹೆಚ್ಚು ಟ್ರೋಲ್ ಆಗ್ತಿದ್ದಾರೆ. ಹಾಗೊಂದು ವೇಳೆ ರೇವಣ್ಣ ಅವರು ತಮ್ಮ ಮಾತಿಗೆ ಬದ್ಧರಾಗಿ ರಾಜಕೀಯ ನಿವೃತ್ತಿಯೇ ತೆಗೆದುಕೊಂಡು ಬಿಟ್ಟರೆ? ಈ ಬಗ್ಗೆ ರೇವಣ್ಣನವರನ್ನೇ ಕೇಳಬೇಕು.
ನಿಖಿಲ್ ಸೋತರೆ...ಎಂದಿದ್ದರು ಪುಟ್ಟರಾಜು
ಒಂದು ವೇಳೆ ನಿಖಿಲ್ ಕುಮಾರಸ್ವಾಮಿ ಅವರು ಸೋತುಹೋದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಂಡು ಬಿಡ್ತೀನಿ ಅಂದಿದ್ದರು ಸಚಿವ ಸಿ.ಎಸ್.ಪುಟ್ಟರಾಜು. ಪಾಪ, ಅವರನ್ನು ಯಾರೂ ಕೇಳಿರಲಿಲ್ಲ. ಆದರೂ ಆ ಮಾತು ಹೇಳಿಬಿಟ್ಟರು. ಮಂಡ್ಯದಿಂದ ದೂರದ ಶಿವಮೊಗ್ಗಕ್ಕೆ ಚುನಾವಣೆ ಪ್ರಚಾರಕ್ಕೆ ತೆರಳಿದ್ದರು. ಪಾಪ, ಅಲ್ಲಾದರೂ ಪುಟ್ಟರಾಜು ಸುಮ್ಮನಿರಬಹುದಿತ್ತು. ಆದರೆ ಅಲ್ಲಿ ಅದೇ ರಾಜಕೀಯ ನಿವೃತ್ತಿ ಮಾತನಾಡಿದರು. ಇನ್ನೂ ತಮಾಷೆ ಏನೆಂದರೆ, ಚೆಲುವರಾಯಸ್ವಾಮಿ ಯಾರ ಪರವಾಗಿ ಪ್ರಚಾರ ಮಾಡುತ್ತಾರೋ ಅವರೆಲ್ಲ ಸೋತಿದ್ದಾರೆ ಅಂತ ಬೇರೆ ಹೇಳಿದ್ದರು. ಸ್ವಾಮಿ, ಪುಟ್ಟರಾಜು ಅವರೇ ನಿಮಗೆ ಗೌರವ ಉಳಿಸಿಕೊಳ್ಳುವ ಸಮಯ. ರಾಜಕೀಯ ನಿವೃತ್ತಿ ತೆಗೆದುಕೊಂಡು ಬಿಡಿ ಅಂತ ಮೇಲುಕೋಟೆಯಲ್ಲಿ ಯಾರಾದರೂ ಕೇಳಿದರೆ ಏನು ಮಾಡ್ತೀರಿ? ಅವರಿಗೆ ಏನು ಹೇಳ್ತೀರಿ?
ಗುಬ್ಬಿಯ ವಾಸಣ್ಣ ಈಗ ಏನ್ಮಾಡ್ತಾರೆ?
ಗುಬ್ಬಿ ಶಾಸಕರು- ಜೆಡಿಎಸ್ ನಿಂದ ಸಚಿವರೂ ಆಗಿರುವ ಎಸ್.ಆರ್.ಶ್ರೀನಿವಾಸ್ ಅವರಿಗೆ ಅತ್ಯುತ್ಸಾಹ. ದೇವೇಗೌಡರನ್ನು ತುಮಕೂರು ಲೋಕಸಭಾ ಕ್ಷೇತ್ರದಿಂದ ಗೆಲ್ಲಿಸಿಕೊಂಡು ಬಂದೇ ಬರ್ತೀನಿ. ಇಲ್ಲದಿದ್ದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟುಬಿಡ್ತೀನಿ ಎಂದು ವೀರಾವೇಶದಿಂದ ಹೇಳಿದರು. ಜೆಡಿಎಸ್ ನಿಂದ ಶಾಸಕರಾಗಿ ಇರುವವರೇ ಮೂವತ್ತೇಳು ಮಂದಿ. ಅದರಲ್ಲಿ ಈ ರೀತಿ ಚಾಲೆಂಜ್ ಬೇರೆ ಹಾಕಿದ್ದರು. ಈಗ ನೋಡಿದರೆ ತುಮಕೂರಿನಲ್ಲಿ ದೇವೇಗೌಡರು ಸೋತಿದ್ದಾರೆ. ಗುಬ್ಬಿಯ ವಾಸಣ್ಣ ಅವರು ಎಲ್ಲಿ ಕಾಣಿಸಿದರೂ ಯಾವಾಗಣ್ಣ ರಾಜೀನಾಮೆ ಕೊಡ್ತೀಯಾ ಅಂದರೆ ಉತ್ತರ ಏನು ಕೊಡ್ತಾರೆ?
ಅನುಸರಿಸುವುದಕ್ಕೆ ಖಂಡಿತಾ ಯೋಗ್ಯವಲ್ಲ
ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಮತ್ತೆ ಯಾವುದೇ ಚುನಾವಣೆ ವಿಷಯಾಧಾರಿತ ಆಗಿರಬೇಕು. ಅದನ್ನು ಬಿಟ್ಟು, ಮೋದಿ ಗೆದ್ದರೆ ದೇಶ ಬಿಟ್ಟು ಹೋಗ್ತೀನಿ, ಬಸ್ ಸ್ಟ್ಯಾಂಡಲ್ಲಿ ನಿಂತು ವಿಷ ಕುಡಿಯುತ್ತೀನಿ... ರಾಜಕೀಯ ನಿವೃತ್ತಿ ತೆಗೆದುಕೊಳ್ತೀನಿ ಇಂಥ ಮಾತನಾಡುವ ಮುಂಚೆ ಅದರ ಪರಿಣಾಮ ಏನು ಅಂತ ಯೋಚನೆ ಮಾಡಬೇಕು. ಸಾರ್ವಜನಿಕ ಜೀವನದಲ್ಲಿ ಇದ್ದು, ಜವಾಬ್ದಾರಿಯುತ ಹುದ್ದೆಯಲ್ಲಿ ಇರುವಾಗ ಮತ್ತೂ ಎಚ್ಚರಿಕೆಯಿಂದ ಇರಬೇಕು. ಹೀಗೆ ಉದಾಹರಣೆ ಕೊಡುವುದಕ್ಕೆ ಬೇಕಾದಷ್ಟು ಸಿಗುತ್ತದೆ. ಆದರೆ ಅನುಸರಿಸುವುದಕ್ಕೆ ಖಂಡಿತಾ ಯೋಗ್ಯವಲ್ಲ.