ಕಷ್ಟಕಾಲದಲ್ಲಿ 500 ರೂ ನೀಡಿದ ಶಿಕ್ಷಕನಿಗೆ ಬ್ಯಾಂಕ್ ಸಿಇಒ ನೀಡಿದ ದುಬಾರಿ ಉಡುಗೊರೆ
ನವದೆಹಲಿ, ಅಕ್ಟೋಬರ್ 8: ಪಾಠ ಕಲಿಸಿದ, ಮಾರ್ಗದರ್ಶನ ಮಾಡಿದ ಹಾಗೂ ತಮ್ಮ ಏಳಿಗೆಗೆ ಬೇರೆ ಬೇರೆ ಮಾರ್ಗಗಳಲ್ಲಿ ನೆರವಾದ ಗುರುಗಳಿಗೆ ಶಿಷ್ಯರು ವಿವಿಧ ರೀತಿಯಲ್ಲಿ ಕಾಣಿಕೆ ಸಲ್ಲಿಸಿರುವುದನ್ನು ಕೇಳಿದ್ದೀರಿ. ಇತ್ತೀಚೆಗೆ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ಗುರುವಿಗೆ ಮನೆಯೊಂದನ್ನು ನಿರ್ಮಿಸಿಕೊಟ್ಟಿದ್ದು ಸುದ್ದಿಯಾಗಿತ್ತು. ಆದರೆ ಕಷ್ಟಕಾಲದಲ್ಲಿ ಹಣದ ಸಹಾಯ ಮಾಡಿದ್ದ ಗುರುವಿಗೆ ಬ್ಯಾಂಕ್ ಸಿಇಒ ಒಬ್ಬರು ದುಬಾರಿ ಉಡುಗೊರೆ ನೀಡಿದ್ದಾರೆ.
ಸಂದರ್ಶನಕ್ಕೆ ಹಾಜರಾಗಲು ಹಣವಿಲ್ಲದೆ ಪರದಾಡುತ್ತಿದ್ದಾಗ ಸಹಾಯ ಮಾಡಿದ್ದ ಶಿಕ್ಷಕರಿಗೆ ಅವರ ಶಿಷ್ಯ 30 ಲಕ್ಷ ರೂ ದಕ್ಷಿಣೆ ನೀಡಿದ್ದಾರೆ. ಐಡಿಎಫ್ಸಿ ಫಸ್ಟ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವಿ. ವೈದ್ಯನಾಥನ್ ಅವರು ತಮ್ಮ ಮಾಜಿ ಗಣಿತ ಶಿಕ್ಷಕ ಗುರುದಿಯಾಳ್ ಸರೂಪ್ ಸೈನಿ ಅವರ ಗಮನಕ್ಕೆ ತಾರದೆಯೇ ಸುಮಾರು 30ಲಕ್ಷ ರೂ ಮೊತ್ತದ ಒಂದು ಲಕ್ಷ ಈಕ್ವಿಟಿ ಷೇರುಗಳನ್ನು ವರ್ಗಾವಣೆ ಮಾಡಿದ್ದಾರೆ.
ಸಂಕಷ್ಟದಲ್ಲಿದ್ದ ಗುರುಗಳಿಗೆ ಹಳೇ ವಿದ್ಯಾರ್ಥಿಗಳಿಂದ ಆರ್ಥಿಕ ಸಹಾಯ
ವೈದ್ಯನಾಥನ್ ಅವರು ತನ್ ಜೀವನದ ಆರಂಭದ ಹಂತದಲ್ಲಿ ಸಹಾಯ ಮಾಡಿದ್ದಕ್ಕಾಗಿ ಸೈನಿ ಅವರಿಗೆ ಕೃತಜ್ಞತೆ ಸಲ್ಲಿಸಲು ಷೇರುಗಳನ್ನು ವರ್ಗಾವಣೆ ಮಾಡಿದ್ದಾರೆ. ಸಂದರ್ಶವೊಂದಕ್ಕೆ ತೆರಳಲು ವೈದ್ಯನಾಥನ್ಗೆ ಅವರು ಹಣ ನೀಡಿದ್ದರು. ಅದಕ್ಕೆ ಕೃತಜ್ಞತೆ ಸಲ್ಲಿಸಲು ಸೈನಿ ಅವರಿಗೆ ಈ ಉಡುಗೊರೆ ನೀಡಿರುವುದಾಗಿ ಫೇಸ್ಬುಕ್ ಪೋಸ್ಟ್ ವೈರಲ್ ಆಗಿದೆ. ಮುಂದೆ ಓದಿ.
500 ರೂ ನೀಡಿದ್ದ ಮೇಷ್ಟ್ರು
ಬಿಐಟಿಎಸ್ಗೆ ಪ್ರವೇಶ ಪಡೆಯಲು ತೆರಳುವಾಗ ವೈದ್ಯನಾಥನ್ ಬಳಿ ಹಣವಿರಲಿಲ್ಲ. ಸಂದರ್ಶನಕ್ಕೆ ಹಾಜರಾಗಲು ಮತ್ತು ಕೌನ್ಸೆಲಿಂಗ್ ಚಟುವಟಿಕೆಗಳನ್ನು ಪೂರ್ಣಗೊಳಿಸಲು ಪ್ರಯಾಣಿಸಲು ಅವರಿಗೆ ಕಷ್ಟವಾಗಿತ್ತು. ವೈದ್ಯನಾಥನ್ ಅವರಿಗೆ ಆಗ ಗಣಿತ ಶಿಕ್ಷಕರಾಗಿದ್ದ ಸೈನಿ ಅವರು ಸಂದರ್ಶನಕ್ಕೆ ತೆರಳಲು 500 ರೂ. ನೀಡಿದ್ದರು. ವೈದ್ಯ ಅವರು ಮೆಸ್ರಾದ ಬಿಐಟಿಎಸ್ನಲ್ಲಿ ಅಧ್ಯಯನ ಮಾಡಿದರು. ವೃತ್ತಿಪರ ಜೀವನದಲ್ಲಿ ಪ್ರಗತಿ ಸಾಧಿಸಿದರು.
ಆಗ್ರಾದಲ್ಲಿದ್ದ ಶಿಕ್ಷಕ
ಕೆಲಸಕ್ಕೆ ಸೇರಿದ ಬಳಿಕ ವೈದ್ಯನಾಥನ್ ಅವರು ತಮಗೆ ನೀಡಿದ್ದ ಹಣವನ್ನು ಮರಳಿ ನೀಡಲು ಸೈನಿ ಅವರನ್ನು ಹುಡುಕಾಡಿದರು. ಆದರೆ ಸೈನಿ ಅವರು ಕೆಲಸ ತೊರೆದಿದ್ದರು. ಹಲವು ವರ್ಷಗಳು ಉಳಿದ ಬಳಿಕ ಮಾಜಿ ಸಹೋದ್ಯೋಗಿಯೊಬ್ಬರ ಸಹಾಯದಿಂದ ಅವರು ತಮ್ಮ ಮೇಷ್ಟ್ರು ಆಗ್ರಾದಲ್ಲಿ ಇದ್ದಾರೆ ಎಂಬುದನ್ನು ಕಂಡುಕೊಂಡರು. ಅವರಿಗೆ ಕರೆ ಮಾಡಿ, ಆ ಸಮಯದಲ್ಲಿ ಮಾಡಿದ ಸಹಾಯಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
ಗುರು ಪರಂಪರೆಗೆ ಹೊಸ ಭಾಷ್ಯ: ನಿವೃತ್ತರಾದ ನೆಚ್ಚಿನ ಶಿಕ್ಷಕನಿಗೆ ವಿಶಿಷ್ಟ ಗುರುದಕ್ಷಿಣೆ
ಬ್ಯಾಂಕ್ ನೀಡಿದ ಪ್ರಕಟಣೆ
'ಐಡಿಎಫ್ಸಿ ಫಸ್ಟ್ ಬ್ಯಾಂಕ್ ಲಿ.ದ 1,00,000 ಪೂರ್ಣ ಪಾವತಿಯ ಈಕ್ವಿಟಿ ಷೇರುಗಳನ್ನು ವೈದ್ಯನಾಥನ್ ಅವರು ನಿಮಗೆ ವರ್ಗಾಯಿಸಿದ್ದಾರೆ ಎಂದು ತಿಳಿಸಲು ಬಯಸುತ್ತೇವೆ. ತಮ್ಮ ಮಾಜಿ ಶಾಲಾ ಶಿಕ್ಷಕ ಗುರುದಿಯಾಳ್ ಸರೂಪ್ ಸೈನಿ ಅವರಿಗೆ ಉಡುಗೊರೆಯಾಗಿ ಅವರು ತಮ್ಮ ವೈಯಕ್ತಿಕ ಸಾಮರ್ಥ್ಯದಿಂದ ಅವರು ಈ ವರ್ಗಾವಣೆ ಮಾಡಿದ್ದಾರೆ' ಎಂದು ಬ್ಯಾಂಕ್ ತಿಂಗಳ ಆರಂಭದಲ್ಲಿ ನೀಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಈ ರೀತಿಯ ಗುರು-ಶಿಷ್ಯರು ಇದ್ದಾರೆಯೇ?
ವೈದ್ಯನಾಥನ್ ಅವರು ಶಿಕ್ಷಕರ ಕಡೆಗೆ ತೋರಿಸಿದ ಈ ಗೌರವವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಈ ಕಾಲದಲ್ಲಿಯೂ ಈ ರೀತಿ ಮನಸ್ಥಿತಿ ಹೊಂದಿರುವ ವ್ಯಕ್ತಿಗಳು ಇದ್ದಾರೆಯೇ ಎಂದು ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದು ನಿಜವಾದ ಗುರುಶಿಷ್ಯ ಸಂಬಂಧ. ಅನೇಕ ವಿದ್ಯಾರ್ಥಿಗಳಿಗೆ ಹೀಗೆ ಸಹಾಯ ಮಾಡುವ ಗುರುಗಳು ಸಿಗುವುದಿಲ್ಲ. ಆದರೆ ಅನೇಕ ವಿದ್ಯಾರ್ಥಿಗಳು ಕೂಡ ಆ ಮಟ್ಟಕ್ಕೆ ಏರಿದ ಬಳಿಕ ಅದೇ ವಿಧೇಯತೆಯನ್ನು ಉಳಿಸಿಕೊಳ್ಳುವುದಿಲ್ಲ. ಇದು ಬಹಳ ಅಪರೂಪದ ಹಾಗೂ ಸ್ಫೂರ್ತಿದಾಯಕ ಘಟನೆ ಎಂದು ಬಣ್ಣಿಸಿದ್ದಾರೆ.