ಪ್ರವಾಹ ಪರಿಹಾರ: ಕಾಳಜಿ ಕೇಂದ್ರದಲ್ಲಿ ಕಣ್ಮನ ಸೆಳೆದ ಮಹಿಳಾ ಅಧಿಕಾರಿ
ಪ್ರವಾಹ ಸಂತ್ರಸ್ತರ ಕಾಳಜಿ ಕೇಂದ್ರಲ್ಲಿ ಊಟ, ಕೇಂದ್ರದಲ್ಲಿ ಮದ್ಯ ಸೇವನೆ ಮಾಡುತ್ತಿದ್ದವರಿಗೆ ಖಡಕ್ ಎಚ್ಚರಿಕೆ, ಮಳೆ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಮುಂಜಾನೆ 4 ಗಂಟೆಯ ತನಕ ಕೆಲಸ, ಸಂತ್ರಸ್ತರಿಗೆ ಆಹಾರದ ಕಿಟ್ ನೀಡಲು ವ್ಯವಸ್ಥೆ.... ಇದು ಈ ವಾರ ಗಮನ ಸೆಳೆದ ಪ್ರವಾಹ ಪೀಡಿತ ಶಿವಮೊಗ್ಗದಲ್ಲಿ ಮಹಿಳಾ ಅಧಿಕಾರಿಯೊಬ್ಬರ ಕೆಲಸ.
ಹೆಸರು ಚಾರುಲತಾ ಸೋಮಲ್. ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಸ್ಮಾರ್ಟ್ ಸಿಟಿ ಯೋಜನೆ ಎಂಡಿ. ಶಿವಮೊಗ್ಗ ನಗರದ ಹಲವು ಪ್ರದೇಶಗಳು ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾಗಿವೆ. ಈ ಸಂದರ್ಭದಲ್ಲಿ ಚಾರುಲತಾ ಅವರ ಕಾರ್ಯ ವೈಖರಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಚಿತ್ರಗಳು : ಶಿವಮೊಗ್ಗದಲ್ಲಿ ಯಡಿಯೂರಪ್ಪ ಪ್ರವಾಹ ಪರಿಸ್ಥಿತಿ ವೀಕ್ಷಣೆ
ತುಂಗಾ ನದಿ ತೀರದಲ್ಲಿರುವ ಶಿವಮೊಗ್ಗ ನಗರದ ಹಲವು ಪ್ರದೇಶಗಳು ಈ ಬಾರಿಯ ಮಳೆ, ಪ್ರವಾಹದಿಂದಾಗಿ ಹಾನಿಗೊಂಡಿವೆ. ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಕ್ಷಣ ಗಂಜಿ ಕೇಂದ್ರಗಳನ್ನು ಸ್ಥಾಪನೆ ಮಾಡಿ, ತಡರಾತ್ರಿಯ ತನಕ ಕೆಲಸ ಮಾಡಿ ಜನಪರ ಅಧಿಕಾರಿ ಎಂದು ಚಾರುಲತಾ ಹೆಸರುಗಳಿಸಿದ್ದಾರೆ.
17 ಜಿಲ್ಲೆಗಳ 80 ತಾಲೂಕು ಪ್ರವಾಹ ಪೀಡಿತ, ಸರ್ಕಾರದ ಘೋಷಣೆ
ಚಾರುಲತ 2012ನೇ ಬ್ಯಾ ಐಎಎಸ್ ಅಧಿಕಾರಿ. 2017ರಿಂದ 2018ರ ತನಕ ಮುಖ್ಯಮಂತ್ರಿ ಕಾರ್ಯಾಲಯದಲ್ಲಿ ಉಪ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಉಪ ವಿಭಗಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಚಾರುಲತಾ ಕಾರ್ಯ ನಿರ್ವಹಣೆ ಮಾಡುವಾಗ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಘೋಷಣೆ ಮಾಡಲಾಗಿದೆ. 2018ರ ಆಗಸ್ಟ್ನಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾಗಿ ನೇಮಕಗೊಂಡರು.
ಶಿವಮೊಗ್ಗ : ಬೀದಿಯಲ್ಲಿ ಬೈದಾಡಿಕೊಂಡ ಆಯುಕ್ತೆ, ಆಯನೂರು ಮಂಜುನಾಥ್
ಚಾರುಲತಾ ಸೋಮಲ್ ಕಾರ್ಯ ವೈಖರಿಗೆ ಶಿವಮೊಗ್ಗದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ಸಮಯದಲ್ಲಿ ಜಿಲ್ಲಾಡಳಿತ ಜೊತೆ ಸೇರಿ ಅವರು ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ನಗರದ ಬೀದಿದೀಪ, ಚರಂಡಿ ವ್ಯವಸ್ಥೆ, ಕಸದ ನಿರ್ವಹಣೆ, ನಗರವನ್ನು ಪ್ಲಾಸ್ಟಿಕ್ ಮುಕ್ತ ಮಾಡುವುದು ಸೇರಿದಂತೆ ವಿವಿಧ ವಿಚಾರಗಳಲ್ಲಿ ಚಾರುಲತಾ ಸೋಮಲ್ ದಿಟ್ಟ ನಿರ್ಧಾರಗಳನ್ನು ಜನರು ಶ್ಲಾಘಿಸಿದ್ದಾರೆ. ಉಳಿದ ಅಧಿಕಾರಿಗಳು ಸಹ ಇವರಿಂದ ಸ್ಫೂರ್ತಿ ಪಡೆದು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಕಳೆದ ವಾರ ಶಿವಮೊಗ್ಗದಲ್ಲಿ ಮಳೆ ಹೆಚ್ಚಾಯಿತು. ತುಂಗಾ ನದಿ ಮೈದುಂಬಿ ಹರಿಯಲು ಆರಂಭಿಸಿತು. ಇದರಿಂದಾಗಿ ಮೂರು ಗಂಜಿ ಕೇಂದ್ರಗಳನ್ನು ತೆರೆದು ಸಂತ್ರಸ್ತ ಜನರಿಗೆ ವಸತಿ ವ್ಯವಸ್ಥೆ ಮಾಡಲಾಯಿತು. ಕೇಂದ್ರಕ್ಕೆ ತಡರಾತ್ರಿ ದಿಢೀರ್ ಭೇಟಿ ಕೊಟ್ಟ ಆಯುಕ್ತರು ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು.
ಗಂಜಿ ಕೇಂದ್ರದಲ್ಲಿನ ಸಂತ್ರಸ್ತರಿಗೆ ಊಟ ಬಡಿಸಿದ ಚಾರುಲತಾ ಸೋಮಲ್, ತಾವು ಸಹ ಅಲ್ಲಿಯೇ ಊಟ ಮಾಡುವ ಮೂಲಕ ಆಹಾರದ ಗುಣಮಟ್ಟ ಪರೀಕ್ಷಿಸಿದರು. ಸಂತ್ರಸ್ತರ ಕೇಂದ್ರದಲ್ಲಿ ಮದ್ಯಪಾನ ಮಾಡುತ್ತಿದ್ದವರಿಗೆ ಖಡಕ್ ಎಚ್ಚರಿಕೆ ಕೊಟ್ಟರು.
ಎಂತಹ ಪರಿಸ್ಥಿತಿಯಲ್ಲಿಯೂ ಜನರಿಗೆ ನೆರವಾಗಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ತುಂಗಾ ನದಿ ಪ್ರವಾಹ ಹೆಚ್ಚಾಗಿ ಕೋಟೆ ರಸ್ತೆ ಬಳಿ ಮಂಟಪ ಮುಳುಗಿದಾಗ ನದಿ ಅಕ್ಕಪಕ್ಕದ ಹಲವು ಪ್ರದೇಶಗಳಿಗೆ ನೀರು ನುಗ್ಗಿತ್ತು. ಆಗ ಮುಂಜಾನೆ 4 ಗಂಟೆ ತನಕ ಕೆಲಸ ಮಾಡಿದ ಹೆಗ್ಗಳಿಕೆ ಚಾರುಲತಾ ಸೋಮಲ್ ಅವರದ್ದು.
ಆಯನೂರು ಜೊತೆ ಜಟಾಪಟಿ : ಅದು ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಆಡಳಿತ ನಡೆಸುದ್ದ ಕಾಲ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸಿ. ತಮ್ಮಣ್ಣ ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದರು. ಎಂಎಲ್ಸಿ, ಬಿಜೆಪಿ ನಾಯಕ ಆಯನೂರು ಮಂಜುನಾಥ್ ಜೊತೆಗಿದ್ದರು.
ಬಡಾವಣೆಯೊಂದರಲ್ಲಿ ಬೀದಿ ದೀಪದ ವಿಚಾರ ಬಂದಾಗ ಆಯನೂರು ಮಂಜುನಾಥ್, "ಏನ್ ಕೇಳಿದ್ರು ಆಗುತ್ತೆ ಅಂತಿಯಲ್ಲಮ್ಮಾ, ಇದು ಜನರ ನೋವು, ಜನರ ಸಮಸ್ಯೆ ನಿಮ್ಮ ಬಳಿ ಹೇಳಬಾರದೇ? ಜನರು ಸಾಯಬೇಕಾ, ನಿಮಗೆ ಮರ್ಯಾದೆ ಬೇಕು" ಎಂದರು.
ಆಯನೂರು ಮಂಜುನಾಥ್ಗೆ ಖಡಕ್ ಆಗಿ ತಿರುಗೇಟು ಕೊಟ್ಟ ಚಾರುಲತಾ ಸೋಮಲ್, "ನೀವು ಹೀಗೆ ಏಕವಚನದಲ್ಲಿ ಮಾತನಾಡಬಾರದು. ನೀವು ಸರಿಯಾಗಿ ಮಾತನಾಡಿ, ನಾವು ನಿಮಗೆ ಗೌರವ ಕೊಡುತ್ತಿಲ್ಲವೇ? ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ" ಎಂದು ಜಿಲ್ಲಾ ಉಸ್ತುವಾರಿ ಸಚಿವರ ಮುಂದೆಯೇ ಹೇಳಿ ದೊಡ್ಡ ಸುದ್ದಿ ಮಾಡಿದ್ದರು.
ಚಾರುಲತಾ ಸೋಮಲ್ ಕಳೆದ ಒಂದು ವರ್ಷದಿಂದ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದು, ಈಗ ವರ್ಗಾವಣೆಯಾಗಬಹುದು ಎಂಬ ಸುದ್ದಿಗಳು ಹಬ್ಬಿವೆ.