ಉತ್ತರ ಕನ್ನಡ ಮೂಲದ ಗುರುದತ್ತ ಹೆಗಡೆ ಈಗ ಧಾರವಾಡದ ಜಿಲ್ಲಾಧಿಕಾರಿ
ಕರ್ನಾಟಕ ಸರ್ಕಾರ ಬುಧವಾರ 15ಕ್ಕೂ ಅಧಿಕ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಧಾರವಾಡದ ನೂತನ ಜಿಲ್ಲಾಧಿಕಾರಿಯಾಗಿ ಗುರುದತ್ತ ಹೆಗಡೆ ನೇಮಕವಾಗಿದ್ದು, ಅಧಿಕಾರ ಸ್ವೀಕಾರ ಮಾಡಿದರು. ಧಾರವಾಡ ಡಿಸಿಯಾಗಿದ್ದ ನಿತೇಶ್ ಕೆ. ಪಾಟೀಲ ವರ್ಗಾವಣೆಗೊಂಡಿದ್ದಾರೆ.
ಧಾರವಾಡದ ನೂತನ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ 2014ರ ಬ್ಯಾಚ್ನ ಐಎಎಸ್ ಅಧಿಕಾರಿ. ಗುರುದತ್ತ ನಾರಾಯಣ ಹೆಗಡೆಗೆ ನಿರ್ಗಮಿತ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಅಧಿಕಾರ ಹಸ್ತಾಂತರ ಮಾಡಿದರು. 2020ರಿಂದ ನಿತೇಶ್ ಕೆ. ಪಾಟೀಲ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಬೆಳಗಾವಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.
ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 17 ಐಎಎಸ್ ಅಧಿಕಾರಿಗಳ ವರ್ಗಾವಣೆ
ನೂತನ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಹೊನ್ನಗದ್ದೆ ಗ್ರಾಮದವರು. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಧಾರವಾಡದ ಕೆಇ ಬೋರ್ಡ ಶಾಲೆಯಲ್ಲಿ ಮಾಡಿದ್ದಾರೆ. ಪಿಯು ಶಿಕ್ಷಣವನ್ನು ಸಹ ಧಾರವಾಡದಲ್ಲಿಯೇ ಪೂರೈಸಿದ್ದಾರೆ. ಧಾರವಾಡದಲ್ಲಿ ವ್ಯಾಸಂಗ ಮಾಡಿದ ಅವರು ಈಗ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಾರೆ.
9 ವರ್ಷವಾದರೂ ರಚನೆಯಾಗದ ಸಿಎಸ್ಬಿ: ಐಪಿಎಸ್, ಐಎಎಸ್ ವರ್ಗಾವಣೆಗಿಲ್ಲ ಬ್ರೇಕ್..!
ಬೆಂಗಳೂರಿನ ಆರ್. ವಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಬಳಿಕ 2014ರಲ್ಲಿ ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾದರು.
ಹಲವು ಜಿಲ್ಲೆಗಳಲ್ಲಿ ಕೆಲಸ
ಐಎಎಸ್ ಅಧಿಕಾರಿಯಾದ ಬಳಿಕ ಗುರುದತ್ತ ಹೆಗಡೆ ಪ್ರೊಬೇಷನರಿ ಅವಧಿಯನ್ನು ಬೀದರ್ ಜಿಲ್ಲೆಯಲ್ಲಿ ಪೂರೈಸಿದರು. ಕೊಪ್ಪಳದ ಉಪವಿಭಾಗಾಧಿಕಾರಿಯಾಗಿ, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ಧಾರವಾಡ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮಾತನಾಡಿದ ಗುರುದತ್ತ ಹೆಗಡೆ, "ಜಿಲ್ಲೆಯ ಆಡಳಿತದಲ್ಲಿ ಇನ್ನಷ್ಟು ಪಾರದರ್ಶಕತೆ ತರುವುದು ಸೇರಿದಂತೆ, ತಾಲೂಕು ಹಾಗೂ ಹೋಬಳಿ ಮಟ್ಟದ ಆಡಳಿತದ ಮೇಲೆ ನಿರಂತರ ನಿಗಾವಹಿಸಿ ಜನರಿಗೆ ಸಕಾಲದಲ್ಲಿ ಸ್ಪಂದಿಸಲಾಗುವುದು" ಎಂದು ಹೇಳಿದ್ದಾರೆ.
ಅವಳಿ ನಗರದ ಸಂಪರ್ಕ ಚೆನ್ನಾಗಿದೆ
ಗುರುದತ್ತ ಹೆಗಡೆ ಅವರು ಹುಬ್ಬಳ್ಳಿಯಲ್ಲಿರುವ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯೊಂದಿಗೆ ಹೆಚ್ಚುವರಿಯಾಗಿ ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಹಾಗೂ ಬಿಆರ್ಟಿಎಸ್ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕರ್ನಾಟಕ ಸರ್ಕಾರ ಇದೀಗ ಗುರುದತ್ತ ಹೆಗಡೆಯನ್ನು ಧಾರವಾಡ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿದ್ದು, ಅಧಿಕಾರ ಸ್ವೀಕಾರ ಮಾಡಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಗುರುದತ್ತ ಹೆಗಡೆ, "ಕಳೆದ ಸುಮಾರು ಒಂದು ವರ್ಷದಿಂದ ಜಿಲ್ಲೆಯಲ್ಲಿಯೇ ವಿವಿಧ ಹುದ್ದೆಗಳನ್ನು ನಿಭಾಯಿಸಿರುವುದು ಹಾಗೂ ಸ್ಥಳೀಯವಾಗಿ ಸಂಪೂರ್ಣ ವ್ಯಾಸಂಗ ಮಾಡಿರುವುದು, ವಾಸದ ಪರಿಚಯವಿರುವುದರಿಂದ ಆಡಳಿತ ನಿರ್ವಹಣೆಗೆ ನೆರವಾಗಬಹುದು" ಎಂದು ಹೇಳಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆ
ಧಾರವಾಡದ ಜಿಲ್ಲಾಧಿಕಾರಿಯಾಗಿದ್ದ ನಿತೇಶ್ ಕೆ. ಪಾಟೀಲ ಬೆಳಗಾವಿಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿದ್ದಾರೆ. 2012ನೇ ಬ್ಯಾಚ್ ಐಎಎಸ್ ಅಧಿಕಾರಿ ನಿತೇಶ್ ಕೆ. ಪಾಟೀಲ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಕೆರೊಟಗಿ ಗ್ರಾಮದವರು. ಪ್ರೊಬೆಷನರಿ ಅವಧಿಯಲ್ಲಿ ಶಿವಮೊಗ್ಗ, ಬಳ್ಳಾರಿಯಲ್ಲಿ ಕೆಲಸ ಮಾಡಿದ್ದರು. ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದರು. ದೀಪಾ ಚೋಳನ್ ವರ್ಗಾವಣೆ ಬಳಿಕ ಧಾರವಾಡದ ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದರು.
Recommended Video
ನೀರಿನ ಪೂರೈಕೆಗೆ ಆದ್ಯತೆ ನೀಡಲಾಗುತ್ತದೆ
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಗುರುದತ್ತ ಹೆಗಡೆ, "ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆ ಹೆಚ್ಚಿಸುವುದು ಮೊದಲ ಧ್ಯೇಯವಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಈಗ ಸಾಕಷ್ಟು ಪ್ರಮಾಣದಲ್ಲಿ ನೀರು ಲಭ್ಯವಿದೆ. ನಾಗರಿಕರಿಗೆ ಅದನ್ನು ಸಮರ್ಪಕವಾಗಿ ಪೂರೈಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಮಹಾನಗರಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿದ್ದೇನೆ. ಮಂಗಳವಾರ ಸರ್ಕಾರದ ಕಾರ್ಯದರ್ಶಿಗಳೊಂದಿಗೆ ಈ ಬಗ್ಗೆ ಸಭೆ ನಡೆಯಲಿದೆ" ಎಂದು ಹೇಳಿದರು.