ಯಾಕೆ ಹಾಲಿವುಡ್ ಫಿಲ್ಮ್ ಮಾಡಬಾರ್ದಾ ಅಂದಿದ್ರು ಕಾಶಿನಾಥ್!
ಅದೊಂದು ನವೆಂಬರ್ ತಿಂಗಳ ದಿನ ಬೆಳ್ಳಗೆ ಎಂದಿನಂತೆ 9ಕ್ಕೆ ಸರಿಯಾಗಿ ನಾನು ಒನ್ಇಂಡಿಯಾ ಕಛೇರಿ ತಲುಪಿದೆ. ಹಮ್... ಬ್ರಹ್ಮಚಾರಿ ಜೀವನ... ಜೀವದ ಗೆಳತಿ ಎಂದು ಯಾರೂ ಇಲ್ಲದ ಸಮಯವದು. ಹಾಗಾಗಿ ನನ್ನ ಹುಟ್ಟುಹಬ್ಬವನ್ನು ನಮ್ಮ ಪೋಲಿಗೆಳೆಯರ ಜೊತೆ ರಾಜ್ಯೋತ್ಸವದ ಹಾಗೆ ಇಡೀ ತಿಂಗಳು ಆಚರಿಸುತ್ತಿದ್ದೆ.
ಅದೇ ಹುಟ್ಟು ಹಬ್ಬದ ಹ್ಯಾಂಗೋವರ್ ನಲ್ಲಿ ಇದ್ದ ನಾನು, ಇವತ್ತು ಏನು ಮಾಡಬೇಕು ಎಂದು ವಿಷಯಗಳನ್ನು ಲಿಸ್ಟ್ ಮಾಡುತ್ತಿದ್ದೆ. ಆಗಲೆ ನನ್ನ ಆಫೀಸ್ ಫೋನ್ ರಿಂಗ್ ಆಯಿತು.
ಕಣ್ಮರೆಯಾದ ಕಲಾಯೋಗಿ ಕಾಶಿನಾಥ್ ಅಪರೂಪದ ಚಿತ್ರಸಂಪುಟ
ಅತ್ತ ಕಡೆಯಿಂದ ಗೆಳೆಯ ಮಹೇಶ್ ಮಲ್ನಾಡ್ ಎಂದಿನಂತೆ ತನ್ನದೇ ಸ್ಟೈಲ್ ನಲ್ಲಿ "ಏನ್ ಗುರು, ಏನ್ಸಮಾಚಾರ?" ಎಂದರು. ನಾನು "ಏನಿಲ್ಲ ಗುರುವೇ ಏನಾದರು ವಿಶೇಷ ಸುದ್ದಿ ಇದ್ದರೆ ದಯಪಾಲಿಸಿ" ಎಂದೆ.
ಅವರು ತಗೋ ಗುರು "ಕಾಶಿನಾಥ್ ಟ್ವಿಟ್ಟರ್ ಅಕೌಂಟ್ ಓಪನ್ ಮಾಡಿದ್ದಾರೆ ನೊಡು. ಪ್ರಸಾದ ನಾಯಿಕ ಅವರ ಜೊತೆ ಸಂಭಾಷಣೆ ನಡೆಸಿ, ಅವರ ನಂಬರ್ ತಗೊಂಡಿದ್ದಾರೆ. ರಾಜೇಂದ್ರ ಬಂದ ಮೇಲೆ ನೀವಿಬ್ಬರೂ ಹೋಗಿ ಸಂದರ್ಶನ ತಗೊಂಡು ಬನ್ನಿ" ಎಂದರು.
ಕಾಶಿನಾಥ್ : ಪ್ರತಿಭಾವಂತ, ಸ್ವಾಭಿಮಾನಿ ಮತ್ತು ರೆಬೆಲ್
ಕಾಶಿನಾಥ್ ಎಂಬ ಹೆಸರು ಕೇಳಿದ ತಕ್ಷಣ ಮೈ ಜುಮ್ ಎನಿಸಿತು. ತಕ್ಷಣ ನಾನು ಮಹೇಶ್ ಗೆ "ಗುರುವೇ ದಯವಿಟ್ಟು ನಂಬರ್ ಕೊಡಿ, ರಾಜೇಂದ್ರ ಎಲ್ಲಿ ಇದ್ದಾರೋ ಅಲ್ಲಿಂದಾನೆ ಅವರನ್ನ ಎತ್ತಾಕೊಂಡು ಹೋಗಬಿಡತೀನಿ" ಅಂದೆ. ಕುಹುಕ್ಕನೆ ನಕ್ಕಿ ನಂಬರ್ ನೀಡಿದರು.
ಕಾಶಿನಾಥ್ ನಿಧನ: ಕಲಾಯೋಗಿಗೆ ಅಭಿಮಾನಿಗಳ ಕಂಬನಿ
ರಾಜೇಂದ್ರ ಅವರಿಗೆ ಫೋನ್ ಮಾಡಿದರೆ ಅವರಿಗೆ ಅಪಘಾತವಾಗಿ ಕಾಲಿಗೆ ಪೆಟ್ಟು ಬಿದ್ದಿದೆ ಮತ್ತು ಅವರು ಇವತ್ತು ಆಫೀಸ್ ಬರುವುದಿಲ್ಲ ಎಂದು ತಿಳಿಯಿತು. ತಕ್ಷಣ ತಲೆ ಮೇಲೆ ಕಲ್ಲು ಎತ್ತಿ ಹಾಕಿದಂತೆ ಆಯಿತ್ತು. ಒಬ್ಬ ಅನುಭವಿ ಪತ್ರಕರ್ತ ನನ್ನ ಜೊತೆ ಇರುತ್ತಾರೆ ಎಂಬ ಧೈರ್ಯದಿಂದಲೇ ಕುಣಿಯುತ್ತಿದ್ದ ಮತ್ತು ಬೀಗುತ್ತಿದ್ದ ನಾನು, ಒಬ್ಬನೇ ಅವರನ್ನು ಭೇಟಿ ಮಾಡಬೇಕು ಎಂದು ತಿಳಿದು ವಿಚಲಿತನಾದೆ.
ಹೇಗೋ ಧೈರ್ಯ ಮಾಡಿ ಮಹೇಶ್ ನೀಡಿದ ನಂಬರ್ ಗೆ ಫೋನ್ ಮಾಡಿದೆ. ಅತ್ತ ಕಡೆಯಿಂದ "Hello" ಎಂಬ ವಾಣಿ ಕೇಳಿಬಂದಿತು. ನಾನು "ನಮಸ್ಕಾರ ಸರ್, ನಾನು ಸಂದೇಶ್ ಒನ್ಇಂಡಿಯಾದಿಂದ ಮಾತಾಡ್ತಿದ್ದೀನಿ" ಎಂದೆ. ತಕ್ಷಣ ಆಕಡೆಯಿಂದ "ಹೇಳ್ರಿ ಸಂದೇಶ್" ಎಂಬ ಆತ್ಮೀಯತೆ, ಮತ್ತು ನಾನು ಅವರಿಗೆ ಚಿರಪರಿಚಿತ ಎನ್ನುವ ಭಾವನೆ ನನ್ನಲ್ಲಿ ಸ್ವಲ್ಪ ಮಟ್ಟಿಗೆ ಧೈರ್ಯ ತುಂಬಿತು.
ನಾನು "ಸರ್ ನಿಮ್ಮನ್ನು ಭೇಟಿ ಮಾಡಬೇಕು ಅಂತಾಯಿದ್ದೀನಿ" ಎಂದೆ. ಆಕಡೆಯಿಂದ "ಏನು ಬೇಟೆ ಆಡಬೇಕಾ? ಈ ಮುದ್ಯನ ಏನ್ರೀ ಬೇಟೆ ಆಡ್ತಿರಾ?" ಎಂದರು. ನಾನು ಅವರ ಹಾಸ್ಯ ಪ್ರಜ್ಞೆಗೆ ಜೋರಾಗಿ ನಕ್ಕಿದೆ. ಆದರೂ, "ಅಲ್ಲ ಸರ್ ಬೇಟಿ ಬೇಟಿ ಮೀಟ್ ಮಾಡಬೇಕು" ಎಂದೆ.
ಹುಬ್ಬಳ್ಳಿಯಲ್ಲಿ 'ಅನಂತನ ಅವಾಂತ'ರ ನೋಡಿದ 'ಅನುಭವ'!
ಅವರು "ಸರಿ ಬನ್ನಿ ಮನೇಲೆ ಇದ್ದೀನಿ. ಎಷ್ಟೊತ್ತಿಗೆ ಬರುತ್ತೀರಾ? " ಎಂದರು. ನಾನು "ಹತ್ತು ನಿಮಿಷದಲ್ಲಿ ನಿಮ್ಮನೆ ಹತ್ತಿರ ಇರುತ್ತೀನಿ ಸರ್. ನಿಮ್ಮನೆ ಜಯನಗರದಲ್ಲಿ ಎಲ್ಲಿ ಬರತ್ತೆ?" ಎಂದೆ. ಅದಕ್ಕೆ ಅವರ "ಅದು ಎಲ್ಲು ಬರಲ್ಲ ರೀ, ಅಲ್ಲೆ ಇರುತ್ತೆ ನೀವು ಹೀಗೆ ಬನ್ನಿ" ಎಂದು ದಾರಿ ಹೇಳಿದರು. ನಾನು "ಆಯ್ತು ಸರ್ ಥ್ಯಾಂಕ್ಸ್" ಎಂದೆ. "ಆಯ್ತು ಹುಷಾರಾಗಿ ಬನ್ನಿ" ಎಂದು ಫೋನ್ ಕಟ್ ಮಾಡಿದರು.
ಅಲ್ಲಿಯವರೆಗೂ ಚಿರಪರಿಚಿತವಾಗಿದ್ದ ಜಯನಗರ ನನಗೆ ಅಂದೆ ಮೋಸ್ಟ್ ಕನ್ಫ್ಯೂಸಿಂಗ್ ಏರಿಯಾ ಆಗಿತ್ತು. ಎಲ್ಲೆಲೋ ಹೋಗಿ ಕಡೆಗೆ ಅವರ ಮನೆಯ ಮುಂದೆಯೇ ನಿಂತು ಫೋನ್ ಮಾಡಿದೆ. "ಸಾರ್ ನಾನು ನೀವು ಹೇಳಿದ ರೋಡಲ್ಲೇ ಕಾರ್ನರ್ ನಲ್ಲಿ ನಿಂತಿದ್ದೀನಿ. ನಿಮ್ಮ ಮನೆ ಯಾವುದು ಗೊತ್ತಾಗ್ತಾ ಇಲ್ಲ" ಎಂದೆ.
ಇಹಲೋಕದ ಪಯಣ ಮುಗಿಸಿದ ಕಾಶಿನಾಥ್ ಅಂತಿಮ ದರ್ಶನ
ಅವರು "ಹೌದಾ ಒಂದು ನಿಮಿಷ ಇರಿ" ಎಂದರು. ತಕ್ಷಣ ಎಲ್ಲಿಂದಲೋ "ರೀ ಸಂದೇಶ್" ಎಂಬ ಮಾತು ಕೇಳಿಸಿತು. ಯಾರಪ್ಪ ಎಂದು ಅತ್ತಿತ್ತ ನೋಡಿದೆ. "ಇಲ್ ನೋಡ್ರಿ" ಎಂದರು. ಆಮೇಲೆ ಹಸಿರು ಬಣ್ಣದ ಮನೆಯ ಮುಂದೆಯೇ ನಿಂತು ನನ್ನನ್ನ ಕೈಬೀಸಿ ಕರೆಯುತ್ತಿದ್ದರು. ಅವರೇ ಇಂದು ನಮ್ಮನೆಲ್ಲ ಅಗಲಿದ "ಕಾಶಿನಾಥ್"!
ನಂತರ ನಾನು ಅವರ ಎಷ್ಟೋ ವರ್ಷದ ಗೆಳೆಯ ಎಂಬಂತೆ ನನ್ನ ಜೊತೆ ಉಭಯಕುಶಲೋಪರಿ ನಡೆಸಿದರು. ಅವರು "Hollywood" ಚಿತ್ರ ಮಾಡಬೇಕು ಎಂಬ ಆಸೆಯನ್ನು ಬಿಚ್ಚಿಟ್ಟರು. ಅವರ Hollywood ಬಗ್ಗೆ ಮಾತನಾಡಿದ ತಕ್ಷಣ ನಾನು ಸುಮ್ಮನಾದೆ. ಅದ್ದಕ್ಕೆ ಅವರು "ಯಾಕಪ್ಪ ಆಸೆ ಇರಬಾರದಾ?" ಎಂದರು.
ತಕ್ಷಣ ನಾನು ನಾನು "ಛೆಛೆ ಹಾಗಲ್ಲ ಸಾರ್" ಎಂದೆ. ನನ್ನ ಮಾತನ್ನು ಅರ್ಧಕ್ಕೆ ಬ್ರೇಕ್ ಮಾಡಿ, "ಬೀಳೊ ಮರಾನಪ್ಪ ನಾನು ಅಷ್ಟೂ ಆಸೆ ಇರೋದು ತಪ್ಪಾ? ಎಂದರು. ನಾನು "ಇಲ್ಲ ಸಾರ್ ಇಷ್ಟ್ ಮಾಡಿರೋ ನಿಮಗೆ ಅದು ದೊಡ್ಡ ವಿಷಯಾನ ಬಿಡಿ ಸರ್ ಮಾಡ್ತೀರಂತೆ" ಎಂದೆ.
ಅಲ್ಲಿಗೆ ಅವರ ಜೊತೆ ನಾನು ಕಳೆದ ಆ ಒಂದು ಗಂಟೆ ನನಗೆ ಜೀವನದ ಎಷ್ಟೋ ಪಾಠಗಳನ್ನು ಹೇಳಿ ಕೊಟ್ಟಿತ್ತು. "ಸರಿ ಸರ್ ನಾನಿನ್ನು ಬರ್ತನಿ" ಎಂದೆ. "ಆಯ್ತು ಒಳೆದಾಗಲಿ" ಎಂದು ಸ್ವಚ್ಛ ಮನಸಿನಿಂದ ಹರಸಿದರು. ನಂತರ ಆಫೀಸ್ ಗೆ ಬಂದು ಅವರ Hollywood ಕನಸಿನ ಬಗ್ಗೆ ಲೇಖನ ಬರೆದೆ.
ಕಾಮೆಂಟ್ ಬಾಕ್ಸ್ ನಲ್ಲಿ ಶುದ್ಧ ಅವಿವೇಕಿಗಳು ಅವರ ಬಗ್ಗೆ ಬಾಯಿಗೆ ಬಂದಂತೆ ಅಪಹಾಸ್ಯ ಮಾಡಿ ಕಾಮೆಂಟ್ ಮಾಡಿದರು. ನೋಡಿ ಬೇಸರವಾದರೂ ನಮ್ಮ ಕಾಶಿನಾಥ್ ಏನೆಂಬುದು ನಿಜವಾದ ಕನ್ನಡಿಗರಿಗೆ ಗೊತ್ತು ಎಂದು ಸಮಾಧಾನ ಮಾಡಿಕೊಂಡೆ.
ಏಕೋ ಏನೋ ರಾತ್ರಿ ಪಾಳಿ ಮುಗಿಸಿ 11:00 ಗಂಟೆಯಾದರು ಗಾಢ ನಿದ್ರೆಯಲ್ಲಿ ಇದ್ದ ನಾನಗೆ ಗೆಳೆಯ ಮನೋಜ್ ಫೋನ್ ಮಾಡಿ, ಅವರ ಅಗಲಿಕೆಯ ಬಗ್ಗೆ ಹೇಳಿದಾಗ, ನಾನು ಅವರನ್ನು ಭೇಟಿ ಮಾಡಿದ ಆ ದಿನ ನೆನಪಿಸಿ, ಎಲ್ಲ ಘಟನೆಗಳು ಕಣ್ಣು ಮುಂದೆ ಹಾದು ಹೊದವು, ಕಣ್ಣು ಕೂಡ ಮಂಜಾದವು.
ನನ್ನ ಹತ್ತಿರ ಅವತ್ತು ಸ್ಮಾರ್ಟ್ ಫೋನ್ ಇದ್ದಿದರೇ ಅವರ ಜೊತೆ ಒಂದು ಸೆಲ್ಫಿ ತೆಗೆದುಕೊಳ್ಳಬಹುದ್ದಿತ್ತು. ಅವತ್ತು ಸ್ಮಾರ್ಟ್ ಫೋನ್ ಇರಲ್ಲಿಲ್ಲ, ಇವತ್ತು ಸ್ಮಾರ್ಟ್ ಫೋನ್ ಇದೆ ಆದರೆ ಅವರೇ ಇಲ್ಲ!