ಲಾಕ್ಡೌನ್ ಹೊಡೆತ: ಬಾಣಲೆಯಿಂದ ಬೆಂಕಿಗೆ ಬಡವರು, ಕಾರ್ಮಿಕರು
ಬೆಂಗಳೂರು, ಮೇ 29: ಜಾಗತಿಕ ಪೀಡಗು ಕೊರೊನಾವೈರಸ್ ಭಾರತದಂತಹ ಅಭಿವೃದ್ದಿಶೀಲ ದೇಶವನ್ನು ಹಲವು ಆಯಾಮಗಳಲ್ಲಿ ಹೈರಾಣಾಗಿಸುತ್ತಿದೆ. ಅದರಲ್ಲೂ ಸೋಂಕು ತಡೆಗಟ್ಟಬೇಕು ಎಂಬ ಉದ್ದೇಶದಿಂದ ಬರೋಬ್ಬರಿ ಎರಡು ತಿಂಗಳಿನಿಂದ ಹೇರಲಾಗಿರುವ ಲಾಕ್ಡೌನ್, ದೇಶದ ಬಡವರ್ಗದ ಜನರನ್ನು ಬಾಣಲೆಯಿಂದ ಬೆಂಕಿಗೆ ದೂಡಿದೆ.
Recommended Video
ದಿನಗೂಲಿ ಕಾರ್ಮಿಕರು, ಕಾರ್ಮಿಕರು, ಬೀದಿ ಬದಿ ವ್ಯಾಪಾರಸ್ಥರು, ವಲಸೆ ಕಾರ್ಮಿಕರು, ಸಣ್ಣ ಅಂಗಡಿ ಮಾಲೀಕರು ಕೊರೊನಾವೈರಸ್ ಲಾಕ್ಡೌನ್ ನಿಂದ ತತ್ತರಿಸಿ ಹೋಗಿದ್ದಾರೆ. ಕೆಲಸ, ಆದಾಯವಿಲ್ಲದೇ ಮುಂದೇನು ಎಂಬ ಚಿಂತೆಯಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಈ ವರ್ಗದ ಜನ ಲಾಕ್ಡೌನ್ ಸಮಯದಲ್ಲಿ ಅನ್ನ, ಆಹಾರಕ್ಕಾಗಿ ತಾವು ಅಲ್ಪ ಸ್ವಲ್ಪ ಕೂಡಿಟ್ಟಿದ್ದ ಉಳಿತಾಯವನ್ನೂ ಕರಗಿಸಿದ್ದಾರೆ.
ಇಂತಹ ಜನರ ಮೇಲೆ ಲಾಕ್ಡೌನ್ ಭಾರೀ ಪರಿಣಾಮ ಬೀರುತ್ತಿರುವ ವರದಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಲಾಕ್ಡೌನ್ ಭಾರತದ ಬಡವರ ಮೇಲೆ ಎಷ್ಟು ಕೆಟ್ಟ ಪರಿಣಾಮ ಬೀರಿದೆ ಎಂಬುದಕ್ಕೆ ವಿಪರೀತ ಉದಾಹರಣೆಗಳು ಸಿಗುತ್ತಿವೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಸ ಬಿಕ್ಕಟ್ಟನ್ನು ಎದುರಿಸುವಂತಾಗಿದೆ.
ವಲಸೆ ಕಾರ್ಮಿಕರಿಗೆ ಉಚಿತ ಪ್ರಯಾಣ, ಊಟ ಕೊಡಿ: ಸುಪ್ರೀಂಕೋರ್ಟ್
ದೇಶಾದ್ಯಂತ ಲಾಕ್ಡೌನ್ ಸಮಯದಲ್ಲಿ ಹಸಿವು ಮತ್ತು ಆರ್ಥಿಕ ತೊಂದರೆಯಿಂದಾಗಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 200 ಕ್ಕೂ ಹೆಚ್ಚು ಜನ ತಮ್ಮ ತವರಿಗೆ ಪ್ರಯಾಣಿಸುವಾಗ ವಿವಿಧ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ.
12 ಕೋಟಿ ಜನರು ನಿರುದ್ಯೋಗಿಗಳಾಗಿದ್ದಾರೆ
ಲಾಕ್ಡೌನ್ನಿಂದ ಉಂಟಾದ ಹಠಾತ್ ಆರ್ಥಿಕ ಹೊಡೆತದಿಂದ ಭಾರತದಲ್ಲಿ ಸುಮಾರು 12 ಕೋಟಿ ಜನರು ನಿರುದ್ಯೋಗಿಗಳಾಗಿದ್ದಾರೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ವರದಿ ಮಾಡಿದೆ. ಈ ವರದಿ ಕೇಂದ್ರ ಸರ್ಕಾರವನ್ನು ನಿಜಕ್ಕೂ ಆತಂತಕ್ಕೆ ದೂಡಿದೆ. ಮೊದಲೇನಿರುದ್ಯೋಗ ತಾಂಡವಾಡುತ್ತಿತ್ತು. ಈಗ ಹೊಸ ಅಂಕಿ-ಅಂಶಗಳು ಸರ್ಕಾರಗಳ ಬುಡವನ್ನೇ ಅಲಗಾಡಿಸುತ್ತಿದೆ.
ಬಡತನ ರೇಖೆಗಿಂತ ಕೆಳಕ್ಕೆ ಹೋಗುತ್ತಾರೆ
ಮೇ 31 ರ ನಂತರ ಲಾಕ್ಡೌನ್ ನಿರ್ಬಂಧಗಳನ್ನು ಮತ್ತಷ್ಟು ಸಡಿಲಗೊಳಿಸುವುದಾಗಿ ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಹೀಗಿದ್ದಾಗ್ಯೂ ಸಮೀಪದರಲ್ಲೇ ಭಾರತದಲ್ಲಿ ಕನಿಷ್ಠ 10 ಕೋಟಿ ಬಡವರು ವಿಶ್ವಬ್ಯಾಂಕ್ ನಿರ್ಧರಿಸಿದ ಬಡತನ ರೇಖೆಗಿಂತ ಕೆಳಕ್ಕೆ ಹೋಗುತ್ತಾರೆ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಈ ವೇಳೆ ದೇಶದಲ್ಲಿ ಬಡತನದಿಂದ ಬಳಲುತ್ತಿರುವ ಜನರ ಸಂಖ್ಯೆ ಶೇ 60 ರಿಂದ ಶೇ 68 ಕ್ಕೆ ಏರಿಕೆಯಾಗಬಹುದು ಎಂದು ಐಪಿಇ ಗ್ಲೋಬಲ್ನ ವ್ಯವಸ್ಥಾಪಕ ನಿರ್ದೇಶಕ ಅಶ್ವಜಿತ್ ಸಿಂಗ್ ಅವರ ಹೇಳಿಕೆ ಉಲ್ಲೇಖಿಸಿ ಬ್ಲೂಮ್ಬರ್ಗ್ ವರದಿ ಮಾಡಿದೆ. ಕಳೆದ ಒಂದು ದಶಕದಲ್ಲಿ ದೇಶದಲ್ಲಿ ಇಷ್ಟು ಪ್ರಮಾಣದ ಬಡತನ ಕಂಡು ಬಂದಿರಲಿಲ್ಲ ಎಂದು ಸಿಂಗ್ ಹೇಳುತ್ತಾರೆ.
ಬಡವರಿಗೆ ನಗದು ಹಣದ ಅವಶ್ಯಕತೆ ಇದೆ
ಭಾರತದ ಬಡವರು ತಮ್ಮ ಜೀವನದ ಅತಿದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಅವರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ ಪ್ರಮುಖವಾಗಿ ನಗದು ಹಣ ನೀಡಬೇಕು ಎಂದು ನೊಬೆಲ್ ಪ್ರಶಸ್ತಿ ವಿಜೇತ ಆರ್ಥಿಕ ತಜ್ಞ ಅಭಿಜಿತ್ ಬ್ಯಾನರ್ಜಿ, ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಮತ್ತು ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳುತ್ತಿದ್ದಾರೆ.
ಕಾರ್ಮಿಕರಲ್ಲಿ ನಂಬಿಕೆ ಮೂಡುತ್ತಿಲ್ಲ
ಭಾರತದಲ್ಲಿ ಕೊರೊನಾವೈರಸ್ ಪಾಸಿಟಿವ್ ಪ್ರಕರಣಗಳು ಮೊದಲಿಗಿಂತ ವೇಗವಾಗಿ ಹೆಚ್ಚುತ್ತಿರುವುದರಿಂದ ಲಾಕ್ಡೌನ್ ತೆರವಾಗುತ್ತದೆ ಎಂಬ ಬಗ್ಗೆ ಬಡವರು, ಕಾರ್ಮಿಕರಲ್ಲಿ ನಂಬಿಕೆ ಮೂಡುತ್ತಿಲ್ಲ. ಲಾಕ್ಡೌನ್ ಮುಂದುವರೆದರೆ ಬಡವರು ಸುಧಾರಿಸಿಕೊಳ್ಳುವುದು ಕನಸಿನ ಮಾತೇ ಎಂದು ಆರ್ಥಿಕ ವರದಿಗಳು ಹೇಳುತ್ತಿವೆ.
ಈ ಕಾರ್ಮಿಕರಲ್ಲಿ ಹೆಚ್ಚಿನವರು, ತಮ್ಮ ಕುಟುಂಬವನ್ನು ಪೋಷಿಸಲು ಯಾವುದೇ ಉದ್ಯೋಗವಕಾಶಗಳನ್ನು ಪಡೆಯದಿರಬಹುದು ಎಂದು ಆರ್ಥಿಕ ವರದಿಗಳು ಅಂದಾಜಿಸಿವೆ.
ಒಂದೂವರೆ ವರ್ಷ ಪರಿಣಾಮ ಇರಲಿದೆ
ಮೇ 31 ರ ನಂತರ ಲಾಕ್ಡೌನ್ ಗಮನಾರ್ಹವಾಗಿ ಸಡಿಲಗೊಂಡರೂ, ನಂತರದ ಲಾಕ್ಡೌನ್ ಪರಿಣಾಮವು 18 ತಿಂಗಳಿಗಿಂತ ಹೆಚ್ಚು ಕಾಲ ಉಳಿಯಬಹುದು ಎಂದು ಇಂಡಿಯಾ ಟುಡೇ ವರದಿ ಹೇಳುತ್ತದೆ. ಸಂಪತ್ತಿನ ಪಿರಾಮಿಡ್ ರೂಪದ ಹಂಚಿಕೆ ಪರಿಣಾಮ ಬೀರಿದರೆ ಆರ್ಥಿಕತೆ ಮೇಲಕ್ಕೆತ್ತಬಹುದು, ಬಡವರ ಜೀವನ ಮಟ್ಟ ಸುಧಾರಿಸಬಹುದು ಎಂದು ಹೇಳುತ್ತದೆ. ಲಾಕ್ಡೌನ್ ನಿಂದ ಲಕ್ಷಾಂತರ ಜೀವಗಳನ್ನು ಉಳಿಸಲಾಗಿದೆ ಎಂದು ಕೇಂದ್ರ ಸರ್ಕಾರಗಳು ಲಾಕ್ಡೌನ್ನ್ನು ಸಮರ್ಥಿಸಿಕೊಳ್ಳುತ್ತಿದೆ. ಆದರೆ, ಖಂಡಿತವಾಗಿಯೂ ದೇಶದ ಬಡಜನರ ಹಸಿವು,ನಿರುದ್ಯೋಗಿಗಳ ಕೂಗನ್ನು ಎದುರಿಸವ ಸವಾಲು ಕೇಂದ್ರ ಸರ್ಕಾರಕ್ಕೆ ಎದುರಾಗಿದೆ.