ಡಿ.ಜೆ ಹಳ್ಳಿ ಗಲಭೆ ಹುಬ್ಬಳ್ಳಿಯಲ್ಲೂ ಮರುಕಳಿಸಿತೇ? ಅದೇ ದಾರಿ, ಅದೇ ಮಾದರಿ
ಬೆಂಗಳೂರು, ಮೇ. 18: ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದ ಪ್ರಚೋದನಕಾರಿ ಪೋಸ್ಟ್ ಬೆಂಗಳೂರಿನಲ್ಲಿ ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿಯನ್ನ ಸುಟ್ಟು ಹಾಕಿತ್ತು. ಇದೀಗ ಮಸೀದಿ ಕುರಿತು ಯುವಕನೊಬ್ಬ ಹಾಕಿಕೊಂಡಿದ್ದ ವಾಟ್ಸಪ್ ಸ್ಟೇಟಸ್ ವಿಡಿಯೋ ಹುಬ್ಬಳ್ಳಿ ಗಲಭೆಗೆ ನಾಂದಿ ಹಾಡಿದೆ. ಹುಬ್ಬಳ್ಳಿ -ಧಾರವಾಡದಲ್ಲಿ ವ್ಯಕ್ತಿಯೊಬ್ಬ ಹಾಕಿಕೊಂಡಿದ್ದ ಪೋಸ್ಟ್ ನಿಂದ ರೊಚ್ಚಿಗೆದ್ದ ಮುಸ್ಲಿಂ ಸಮುದಾಯ ಪೊಲೀಸ್ ಠಾಣೆ ಟಾರ್ಗೆಟ್ ಮಾಡಿಕೊಂಡು ದಾಳಿ ಮಾಡಿದೆ. ಹುಬ್ಬಳ್ಳಿ ಗಲಭೆ ನೋಡಿದರೆ ಕೆ.ಜಿ. ಹಳ್ಳಿ- ಡಿ.ಜೆ. ಹಳ್ಳಿಯಲ್ಲಿ ನಡೆದ ಗಲಭೆಗೂ- ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೂ ಸಾಮ್ಯತೆ ಕಾಣುತ್ತಿದೆ!
ಕೆ.ಜಿ ಹಳ್ಳಿ ಗಲಭೆ ಮೂಲ:
ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ್ ಅವರ ಅಕ್ಕನ ಮಗ ನವೀನ್ ಎಂಬ ಯುವಕ ಮಹಮದ್ ಪೈಗಂಬರ್ ಬಗ್ಗೆ ಅವಹೇಳನ ಹಾಕಿದ ಕಾರಣಕ್ಕೆ ಒಂದೇ ರಾತ್ರಿಯಲ್ಲಿ ಬೆಂಗಳೂರು ಹೊತ್ತು ಉರಿದಿತ್ತು. ನವೀನ್ ಮೇಲೆ ಹಲ್ಲೆ ಮಾಡುವ ಸಲುವಾಗಿ ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆಗೆ ಬೆಂಕಿ ಇಟ್ಟಿದ್ದರು. ಇದಾದ ಬಳಿಕ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಪೊಲೀಸ್ ಠಾಣೆಗಳೇ ಹೊತ್ತಿ ಉರಿದಿದ್ದವು. ಸಿಕ್ಕ ಸಿಕ್ಕವರಿಗೆ ಕಲ್ಲು ಬೀಸಿದ್ದರು. ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು.
ಈ ಪ್ರಕರಣ ಸಂಬಂಧ ನೂರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದರು. ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿಯೇ ಇದೊಂದು ಷಡ್ಯಂತ್ರ್ಯ ಎಂಬುದು ಗೊತ್ತಾಗಿತ್ತು. ಆ ಬಳಿಕ ಎನ್ಐಎ ಪ್ರಕರಣವನ್ನು ತನಿಖೆಗೆ ಎತ್ತಿಕೊಂಡಿತ್ತು. ಎಸ್ಡಿಪಿಐ, ಪಿಎಫ್ಐ ಸಂಘಟನೆಗಳ ಮುಖಂಡರ ಮನೆಗಳ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದರು. ಅಂತೂ ಗಲಭೆ ಎಬ್ಬಿಸಲು ಮುಸ್ಲಿಂ ಸಮುದಾಯದ ಹುಡುಗರು ಪ್ಲಾನ್ ರೂಪಿಸಿ ಕಲ್ಲುಗಳನ್ನು ಸಂಗ್ರಹಿಸಿದ್ದರು. ಬೆಂಗಳೂರು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು.
ಹುಬ್ಬಳ್ಳಿಯಲ್ಲೂ ಇದೇ ಮಾದರಿ
ಹುಬ್ಬಳ್ಳಿಯಲ್ಲಿ ಕೂಡ ಇದೇ ಘಟನೆಯನ್ನು ಹೋಲುವ ಗಲಭೆ ನಡೆದಿದೆ. ಮುಸ್ಲಿಂ ಸಮುದಾಯದ ಮಸೀದಿ ಮೇಲೆ ಭಗವಾ ಧ್ವಜ ಹಾರುತ್ತಿರುವ 12 ಸೆಕೆಂಡಿನ ವಾಟ್ಸಪ್ ಸಂದೇಶ ಸ್ಟೇಟಸ್ ಹಾಕಿದ್ದ ಅಭಿಷೇಕ್ ಎಂಬುವನ ಮೇಲೆ ದಾಳಿ ಮಾಡಲು ಯತ್ನಿಸಿದ್ದಾರೆ. ಇದಕ್ಕೆ ಪೂರ್ವ ನಿಯೋಜನೆಯಂತೆ ಎರಡು ಲೋಡು ಕಲ್ಲು ಸಂಗ್ರಹಿಸಿದ್ದಾರೆ. ವಾಟ್ಸಪ್ ಸಂದೇಶದಿಂದ ಗಲಭೆ ಆಗುತ್ತದೆ ಎನ್ನುವ ಸಂದೇಶ ಪಡೆದಿದ್ದ ಪೊಲೀಸರು ಮೊದಲೇ ಎಚ್ಚೆತ್ತುಕೊಂಡು ಅಭಿಷೇಕ್ ಮನೆಗೆ ಭದ್ರತೆ ನೀಡಿದ್ದರು. ಅವಹೇಳನಕಾರಿ ಸುಳ್ಳು ಪೋಸ್ಟ್ ಹಾಕಿದ್ದ ಆತನನ್ನು ವಶಕ್ಕೆ ಪಡೆದಿದ್ದರು.
ಆದರೆ, ಇದನ್ನೇ ನೆಪ ಇಟ್ಟುಕೊಂಡು ನೂರಾರು ಮುಸ್ಲಿಂ ಸಮುದಾಯದ ಯುವಕರು ಕಲ್ಲು ತೂರಿದ್ದಾರೆ. ಶಾಂತಿ ಕಾಪಾಡುವಂತೆ ಪೊಲೀಸರು ಕೊಟ್ಟ ಕರೆಗೆ ಸ್ಪಂದಿಸಿಲ್ಲ. ಬದಲಿಗೆ ಕಲ್ಲುಗಳನ್ನು ಎಸೆದಿದ್ದಾರೆ. ಇದರಿಂದ ಪೊಲೀಸರಿಗೆ ಗಾಯಗಳಾಗಿವೆ. ಹಲವು ವಾಹನ ಕೂಡ ಜಖಂ ಆಗಿವೆ. ಹುಬ್ಬಳ್ಳಿ ಹಳೇ ಪೊಲೀಸ್ ಠಾಣೆ ಮೇಲೆ ಒಂದೇ ಸಮುದಾಯದ ಜನಾಂಗ ದಾಳಿ ಮಾಡಿ ಕಲ್ಲು ತೂರಿದ್ದಾರೆ. ಕಲ್ಲು ತೂರಿ ಹಲ್ಲೆಗೆ ಯತ್ನಿಸಿದ 100 ಕ್ಕೂ ಹೆಚ್ಚು ಆರೋಪಿಗಳನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಇನ್ನೂ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಕ್ಷಲುಕ ಕಾರಣಕ್ಕೆ ಪೋಸ್ಟ್ ನೆಪ ಇಟ್ಟುಕೊಂಡು ಗಲಭೆ ಎಬ್ಬಿಸಿರುವರು ಇದೀಗ ಜೈಲು ಕಂಬಿ ಎಣಿಸುತ್ತಿದ್ದಾರೆ. ಇದೀಗ ಮತ್ತಷ್ಟು ಆರೋಪಿಗಳ ತಲಾಷೆಗೆ ಹುಬ್ಬಳ್ಳಿ ಪೊಲೀಸರು ಮುಂದಾಗಿದ್ದಾರೆ. ಶಾಂತಿ ಕದಡದಂತೆ ಪೊಲೀಸರನ್ನು ನಿಯೋಜಿಸಲಾಗಿದೆ.
ಹಿಜಾಬ್, ಜಟ್ಕಾ ಕಟ್ ವಿವಾದ ಸಂದರ್ಭದಲ್ಲಿ ಸಹ ಶಾಂತಿಯುತವಾಗಿದ್ದ ಹುಬ್ಬಳ್ಳಿ ಒಂದು ಪೋಸ್ಟ್ ನಿಂದ ಕೆರಳಿದೆ. ಇದರ ಹಿಂದೆ ಒಂದು ಕೋಮಿನ ಕಲ್ಲಂಗಡಿ ಖಾಲಿ ಮಾಡಿಸಿದ್ದ ವಿಚಾರ ಹುಬ್ಬಳ್ಳಿಯಲ್ಲಿ ದಂಗೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಅಂತೂ ಹುಬ್ಬಳ್ಳಿಯಲ್ಲಿ ಸದ್ಯದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಕೆ.ಜಿ. ಹಳ್ಳೆ ಗಲಾಟೆಗೆ ಹೋಲಿಸಿದ್ರೆ ಹುಬ್ಬಳ್ಳಿ ಗಲಭೆ ಪೊಲೀಸರು ಮೊದಲೇ ಎಚ್ಚೆತ್ತುಕೊಂಡಿರುವುದರಿಂದ ಆಗಬಹುದಾದ ಭಾರಿ ಅನಾಹುತ ತಪ್ಪಿದೆ.
Recommended Video