ಗಾಂಧೀಜಿ ಆರೋಗ್ಯ ಹೇಗಿತ್ತು ಗೊತ್ತೇ? ಮೊದಲ ಬಾರಿಗೆ ದಾಖಲೆ ಬಹಿರಂಗ
ನವದೆಹಲಿ, ಮಾರ್ಚ್ 27: ಕೃಶವಾದ ದೇಹ, ಅದಕ್ಕೆ ಸುತ್ತಿದ ಎರಡು ತುಂಡು ಉಡುಪುಗಳು, ಕೈಯಲ್ಲೊಂದು ಕೋಲು, ವೃತ್ತಾಕಾರದ ಚೌಕಟ್ಟಿನ ಕನ್ನಡಕ- ಇದು ಮಹಾತ್ಮ ಗಾಂಧಿ ಎಂದಾಗ ತಕ್ಷಣ ಬರುವ ಚಿತ್ರಣ.
ಅಷ್ಟು ಪುಟ್ಟ ದೇಹದಲ್ಲಿ ನಿರಂತರ ಹೋರಾಟಗಳನ್ನು ಮಾಡುವ, ಉಪವಾಸ ಸತ್ಯಾಗ್ರಹಗಳನ್ನು ನಡೆಸುವ, ಕಿಲೋಮೀಟರ್ಗಟ್ಟಲೆ ನಡೆಯುವ, ಸಭೆ-ಭಾಷಣಗಳಲ್ಲಿ ಭಾಗವಹಿಸುವ ಚೈತನ್ಯ ಎಲ್ಲಿಂದ ಬರುತ್ತಿತ್ತು? ಅವರ ಆರೋಗ್ಯ ಹೇಗಿತ್ತು? ಎಂಬ ಕುತೂಹಲಗಳು ಮೂಡುತ್ತವೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇದೇ ಮೊದಲ ಬಾರಿಗೆ ಮಹಾತ್ಮ ಗಾಂಧಿ ಅವರ ವೈಯಕ್ತಿಕ ಆರೋಗ್ಯದ ವರದಿ ಬಹಿರಂಗವಾಗಿದೆ. ಮಹಾತ್ಮರಾಗಿದ್ದರೂ ಅವರು ಜನಸಾಮಾನ್ಯರಲ್ಲಿ ಒಂದಾಗಿ ಬದುಕಿದವರು. ಅವರಂತೆಯೇ ಆರೋಗ್ಯ ಸಮಸ್ಯೆಗಳನ್ನು ಕೂಡ ಎದುರಿಸಿದ್ದರು. ದೀರ್ಘ ಕಾಲ ಅಧಿಕ ರಕ್ತದೊತ್ತಡದಿಂದ ಬಳಲಿದ್ದರು. ಇವುಗಳ ನಡುವೆಯೂ ಅವರು ತಮ್ಮ ಬದುಕನ್ನೇ ಸಂದೇಶವನ್ನಾಗಿಸಿದರು. ಕುಷ್ಠರೋಗಪೀಡಿತ ರೋಗಿಗಳಿಗೆ ಅದರ ವಿರುದ್ಧ ಹೋರಾಡಲು ಜತೆಗೂಡಿದರು.
ಗಾಂಧೀಜಿ ಅವರ ವೈಯಕ್ತಿಕ ಆರೋಗ್ಯದ ಮಾಹಿತಿಗಳು ನವದೆಹಲಿಯ ರಾಷ್ಟ್ರೀಯ ಗಾಂಧಿ ಮ್ಯೂಸಿಯಂನಲ್ಲಿ ಸುರಕ್ಷಿತವಾಗಿತ್ತು. ಈ ಮಾಹಿತಿಯನ್ನು ಇದೇ ಮೊದಲ ಬಾರಿಗೆ ಬಹಿರಂಗಗೊಳಿಸಲಾಗಿದೆ.
ಮಹಾತ್ಮ ಗಾಂಧಿ ಹತ್ಯೆ ತಡೆಯಬಹುದಿತ್ತೆಂದು ಕಾರಣ ಬಿಚ್ಚಿಟ್ಟ ಕಲ್ಯಾಣಮ್
ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ಐಸಿಎಂಆರ್) 'ಗಾಂಧಿ ಆಂಡ್ ಹೆಲ್ತ್ @150' (ಗಾಂಧಿ ಮತ್ತು ಆರೋಗ್ಯ @150) ಪುಸ್ತಕದಲ್ಲಿ ಗಾಂಧೀಜಿ ಅವರ ಆರೋಗ್ಯದ ವಿವರಗಳನ್ನು ಪ್ರಕಟಿಸಿದೆ. ಇದನ್ನು ಧರ್ಮಶಾಲಾದಲ್ಲಿ 14ನೇ ದಲೈಲಾಮಾ ಬಿಡುಗಡೆ ಮಾಡಿದ್ದಾರೆ.
ಕೇವಲ 46.7 ಕೆ.ಜಿ. ತೂಕ
1937ರಲ್ಲಿ ದಾಖಲಿಸಿದಂತೆ ಮಹಾತ್ಮಾ ಗಾಂಧಿ ಅವರ ಎತ್ತರ 5 ಅಡಿ 5 ಇಂಚು ಅಥವಾ 165 ಸೆಂಟಿಮೀಟರ್. ಆಗ ಅವರು ಇದ್ದದ್ದು ಕೇವಲ 46.7 ಕೆ.ಜಿ. ತೂಕ. ಈಗಿನ ವೈದ್ಯಕೀಯ ಲೆಕ್ಕಾಚಾರಗಳ ಪ್ರಕಾರ ಮಹಾತ್ಮ ಗಾಂಧಿ ಅವರು ಒಬ್ಬ ವ್ಯಕ್ತಿ ಹೊಂದಿರಬೇಕಾದ ಸಹಜ ಸರಾಸರಿಗಿಂತ ಕಡಿಮೆ ತೂಕ ಹೊಂದಿದ್ದರು. ಈ ತೂಕದ ಪ್ರಮಾಣವಿರುವ ವ್ಯಕ್ತಿಯನ್ನು ಇಂದು ಅಪೌಷ್ಟಿಕತೆಯಿಂದ ಬಳಲುತ್ತಿರುವುದಾಗಿ ಪರಿಗಣಿಸುತ್ತಾರೆ.
1 ಕೋಟಿ ಬಹುಮಾನದ ಗಾಂಧಿ ಶಾಂತಿ ಪ್ರಶಸ್ತಿಗೆ 4 ವರ್ಷದಿಂದ ಆಯ್ಕೆ ಇಲ್ಲ
ಮೂರು ಬಾರಿ ವಿಪರೀತ ಕಾಯಿಲೆ
ಇಷ್ಟೇ ಅಲ್ಲ, ಆರೋಗ್ಯ ದಾಖಲೆಗಳು ಮಹಾತ್ಮ ಗಾಂಧಿ ಅವರು ಅನುಭವಿಸಿದ ಅನಾರೋಗ್ಯ ಸಮಸ್ಯೆಗಳ ಬಗ್ಗೆಯೂ ಮಾಹಿತಿ ನೀಡಿವೆ. 1925, 1936 ಮತ್ತು 1944ರಲ್ಲಿ ಮೂರು ಸಲ ಮಲೇರಿಯಾ ಸೇರಿದಂತೆ ಗಂಭೀರ ಕಾಯಿಲೆಗಳಿಗೆ ತುತ್ತಾಗಿದ್ದರು. 1919ರಲ್ಲಿ ಪೈಲ್ಸ್ ಮತ್ತು 1924ರಲ್ಲಿ ಅಪೆಂಡಿಸೈಟಿಸ್ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು.
ಲಂಡನ್ನಲ್ಲಿದ್ದಾಗ ಶ್ವಾಸಕೋಶ ಮತ್ತು ಎದೆಯ ಭಾಗಗಳಲ್ಲಿ ಪಾರ್ಶ್ವಶೂಲೆ- ಉರಿಯೂತಕ್ಕೆ ಒಳಗಾಗಿದ್ದರು. ಬ್ರಿಟಿಷರ ವಿರುದ್ಧದ ಉಪವಾಸ ಸತ್ಯಾಗ್ರಹದ ವೇಳೆ ಹಲವು ಬಾರಿ ಅವರ ಸ್ಥಿತಿ ಸಾವಿನ ಸಮೀಪ ಸುಳಿದಿತ್ತು.
ಮಹಾತ್ಮ ಮಾಡಿದ್ದು ಹತ್ತು ನಿಮಿಷದ ಭಾಷಣ! ಹಳ್ಳಿಗರು ನೀಡಿದ್ದು ಬುಟ್ಟಿಗಟ್ಟಲೆ ದೇಣಿಗೆ!
ಇಸಿಜಿ ದಾಖಲೆ ಸಹಜವಾಗಿತ್ತು
ಆದರೆ, ಅವರು ಹೃದಯದಿಂದ ಹೆಚ್ಚು ಆರೋಗ್ಯವಂತರಾಗಿದ್ದರು. 1937-1940ರ ಅವಧಿಯಲ್ಲಿನ ಎಲೆಕ್ಟ್ರೋ ಕಾರ್ಡಿಯೋಗ್ರಾಮ್ (ಇಸಿಜಿ) ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಸಹಜ ಸ್ಥಿತಿಯಲ್ಲಿತ್ತು. 1939ರ ದಾಖಲೆಯು ಪರಿಧಮನಿಯ ಅದಕ್ಷತೆ ಬಗ್ಗೆ ಯಾವುದೇ ಪುರಾವೆಯಿಲ್ಲ ಎಂದಿದೆ. ಆದರೆ, ಗಾಂಧೀಜಿ ಅವರ ವಯಸ್ಸನ್ನು ಪರಿಗಣಿಸಿ ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿ ಅವರ ಇಸಿಜಿ ಸಹಜವಾಗಿದೆ ಎಂದು ವರದಿ ಹೇಳಿದ್ದರೂ ಅವರ ಹೃದಯನಾಳಗಳು ಹಾನಿಗೊಳಗಾಗಿದ್ದವು ಎಂಬುದಾಗಿ ಐಸಿಎಂಆರ್ ಪ್ರಧಾನ ನಿರ್ದೇಶಕ ಡಾ. ಬಲರಾಮ್ ಭಾರ್ಗವ ಪುಸ್ತಕದಲ್ಲಿ ಬರೆದಿದ್ದಾರೆ.
ಆ ಕಹಿ ಅನುಭವದ ನಂತರ ಗಾಂಧೀಜಿ ಮತ್ತೆ ಮೈಸೂರಿಗೆ ಬರಲಿಲ್ಲ...
|
ಕಾಡಿದ ಅಧಿಕ ರಕ್ತದೊತ್ತಡ
1927ರಿಂದಲೂ ಅಧಿಕ ರಕ್ತದೊತ್ತಡ ಸಮಸ್ಯೆಗೆ ಒಳಗಾಗಿದ್ದ ಗಾಂಧೀಜಿ, 1940ರ ಫೆಬ್ರವರಿ 19ರಂದು ದಾಖಲಾದ ಮಾಹಿತಿಯಲ್ಲಿ 220/110ರ ರಕ್ತದೊತ್ತಡ ಹೊಂದಿದ್ದರು. ಕೆಲವು ತಿಂಗಳ ಬಳಿಕ ಡಾ. ಸುಶೀಲಾ ನಯ್ಯರ್ ಅವರಿಗೆ ಪತ್ರ ಬರೆದಿದ್ದ ಅವರು, 'ನನ್ನ ರಕ್ತದೊತ್ತಡ ಅಧಿಕವಾಗಿಯೇ ಉಳಿದಿದೆ. ಹೀಗಾಗಿ ಮೂರು ಹನಿ ಸರ್ಪಗಂಧ ತೆಗೆದುಕೊಂಡಿದ್ದೇನೆ' ಎಂದು ಹೇಳಿದ್ದರು. ಇದರ ನಡುವೆಯೂ ಅವರು ಬದುಕುಳಿದರು ಮತ್ತು ಸ್ವಾತಂತ್ರ್ಯ ಚಳವಳಿಯ ತಮ್ಮ ಹೋರಾಟದುದ್ದಕ್ಕೂ ಸಂಯಮ, ತಾಳ್ಮೆಯನ್ನು ಕಾಯ್ದುಕೊಂಡಿದ್ದರು.
ಮಹಾತ್ಮಾ ಗಾಂಧೀಜಿಗೆ ಸರಳಾ ದೇವಿಯೊಂದಿಗಿತ್ತು ಪ್ರೇಮ ಸಂಬಂಧ!
|
79,000 ಕಿ.ಮೀ. ನಡಿಗೆ
ಗಾಂಧೀಜಿ ಅವರು ಪ್ರತಿದಿನ ಸುಮಾರು 18 ಕಿ.ಮೀ. ನಡೆಯುತ್ತಿದ್ದರು. 1913-1948ರ ಅವಧಿಯಲ್ಲಿನ ಚಳವಳಿಗಳ ವೇಳೆ ಅವರು ಸುಮಾರು 79,000 ಕಿ.ಮೀ. ನಡೆದಿದ್ದಾರೆ. ಇದು ಭೂಮಿಯನ್ನು ಎರಡು ಭಾರಿ ಸುತ್ತಿದ್ದಕ್ಕೆ ಸಮ ಎಂದು 166 ಪುಟಗಳ ಪುಸ್ತಕ ತಿಳಿಸಿದೆ.
ಗಾಂಧೀಜಿ ಜಾತಕ
ಇದರಲ್ಲಿ ಗಾಂಧೀಜಿ ಅವರ ಜಾತಕವೂ ಅಡಕವಾಗಿದೆ. ಗುಜರಾತ್ನ ಪೋರ್ಬಂದರ್ನಲ್ಲಿ 1869ರ ಅಕ್ಟೋಬರ್ 2ರಂದು ಬೆಳಿಗ್ಗೆ 7.45ಕ್ಕೆ ಅವರು ಜನಿಸಿದ್ದರು. ನಕ್ಷತ್ರಗಳು ಅವರಲ್ಲಿ ಮಹಾಪುರುಷ ಯೋಗ, ಮಹಾನ್ ಆಕಾಂಕ್ಷೆ, ಸ್ವಯಂ ನಂಬಿಕೆ ಮತ್ತು ಜನಸಮೂಹದೊಂದಿಗೆ ಸಂಪರ್ಕಿಸುವ ಸಾಮರ್ಥ್ಯವನ್ನು ತೋರಿಸುತ್ತವೆ. ಅವರ ಗ್ರಹಗತಿಗಳು ಅವರಲ್ಲಿನ ಅತೀವ ಹೋರಾಟದ ಉತ್ಸಾಹ, ಜನಪ್ರಿಯತೆ, ಸತ್ಯಶೀಲತೆ ಮತ್ತು ಮಿದುಭಾಷಿತನವನ್ನು ಹೇಳುತ್ತವೆ ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
|
ಸ್ವಯಂ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದರು
ಗಾಂಧೀಜಿ ಅವರಿಗೆ ಔಷಧಗಳೆಂದರೆ ಇಷ್ಟವಿರಲಿಲ್ಲ. ಆಧುನಿಕ ವೈದ್ಯರನ್ನು ಅವರು ದೂರವೇ ಇರಿಸಿದ್ದರು. ಅದರ ಬದಲು ಪ್ರಕೃತಿ ಚಿಕಿತ್ಸೆಗಳನ್ನು ಸ್ವತಃ ಕಲಿತಿದ್ದರು. ತಮ್ಮ ಅನಾರೋಗ್ಯ ಸಮಸ್ಯೆಗಳಿಗೆ ಸ್ವಯಂ ಪರಿಹಾರ ಕಂಡುಕೊಳ್ಳುತ್ತಿದ್ದರು. 'ಭೂಮಿ ಮತ್ತು ನೀರು' ಚಿಕಿತ್ಸೆಗಳನ್ನು ಬಳಸಿ ತಮ್ಮ ದೇಹದ ಮೇಲೆ ಸಾಕಷ್ಟು ಪ್ರಯೋಗಗಳನ್ನು ನಡೆಸಿದ್ದರು ಎಂದು ಪುಸ್ತಕ ವಿವರಿಸಿದೆ.