ಸಿಡಿಮೇಕಿಂಗ್ ನಿಂದ ಹಿಡಿದು ಸಿಎಂ ಪಟ್ಟದ ವರೆಗೆ: ತಮಿಳುನಾಡಿನ ಅಮ್ಮ ಆಗ್ತಾರಾ ಚಿನ್ನಮ್ಮ?
ಬೆಂಗಳೂರು, ಫೆಬ್ರವರಿ, 08 :ಆಕೆ ಕೇವಲ ಸಾರ್ವಜನಿಕ ಸಂಪರ್ಕ ಅಧಿಕಾರಿಯ ಪತ್ನಿ ! ಆಕೆಗೆ ಜಿಲ್ಲಾಧಿಕಾರಿಯ ಸಂಪರ್ಕ ಸಿಕ್ಕಿ, ದೊಡ್ಡ ವ್ಯಕ್ತಿಗಳ ಸಂಪರ್ಕ ಸಿಕ್ಕಿತ್ತು. ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದ ಆಕೆ ನಟಿ ಕಂ ನಾಯಕಿ ಜಯಲಲಿತಾ ಆಯೋಜಿಸಿದ್ದ ಪಕ್ಷದ ಕಾರ್ಯಕ್ರಮವನ್ನು ವಿಡಿಯೋ ರೆಕಾರ್ಡ್ ಮಾಡಿಸಿ, ಅದು ಮಾಧ್ಯಮಗಳಿಗೆ ನೀಡಿ ಪ್ರಚಾರವಾದ ಬಳಿಕ ಅವನ್ನು ಸಂಗ್ರಹಿಸಿ ಸಿಡಿ ಮಾಡಿಕೊಡುತ್ತಿದ್ದಳು. ಹೀಗೆ ಬೆಳೆದ ಹಂತ ಹಂತವಾಗಿ ಬೆಳೆದು ಬಂದ ಅಕೆಗೆ 2017 ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಖುರ್ಚಿ ಮೇಲೆ ಕೂರುವ ಕ್ಷಣ. ಕೊನೆಗೆ ಆ ಆಸೆ ಕೊನೆ ಗೂಡಲಿಲ್ಲ !
ಜೈಲು ಶಿಕ್ಷೆ ಮುಗಿಸಿ ತಮಿಳುನಾಡು ರಾಜಕೀಯಕ್ಕೆ ಅಧಿಕೃತ ಎಂಟ್ರಿ ಕೊಟ್ಟಿರುವ ವಿವೇಕಾನಂದನ್ ಕೃಷ್ಣವೇಣಿ ಶಶಿಕಲಾ ತಮಿಳುನಾಡು ಪಾಲಿಗೆ ಚಿನ್ನಮ್ಮ ಆದ ಕತೆ. ದಿವಂಗತ ಜಯಲಲಿತಾ ತಮಿಳುನಾಡಿನಲ್ಲಿ ಅಮ್ಮಾ ಎಂದೇ ಖ್ಯಾತಿ ಪಡೆದಿದ್ದಾರೆ. ಜಯಲಲಿತಾ ಪರಮಾಪ್ತೆ ಶಶಿಕಲಾ ಚಿನ್ನಮ್ಮ ಎಂದೇ ಗುರುತಿಸಿಕೊಂಡಿದ್ದಾರೆ. ಜೈಲು ವಾಸ ಮುಗಿಸಿ ಅದ್ಧೂರಿ ಸ್ವಾಗತದೊಂದಿಗೆ ಚಿನ್ನಮ್ಮ ಎಂಟ್ರಿಕೊಡುತ್ತಿದ್ದಂತೆ ತಮಿಳುನಾಡು ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆ ಗರಿಗೆದರಿವೆ. ಆಡಳಿತ ರೂಢ ಎಐಎಡಿಎಂಕೆಯಲ್ಲಿ ರಾಜಕೀಯ ತಲ್ಲಣ ಶುರುವಾಗಿದೆ. ಚಿನ್ನಮ್ಮನ ಮುಂದಿನ ನಿರ್ಧಾರಗಳು ತಮಿಳುನಾಡು ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದರೂ ಅಚ್ಚರಿ ಪಡಬೇಕಿಲ್ಲ !
ತವರು ರಾಜ್ಯಕ್ಕೆ ಎಂಟ್ರಿ ಕೊಡುತ್ತಿರುವ ಶಶಿಕಲಾಗೆ ಭರ್ಜರಿ ಸ್ವಾಗತ !
ನಾಲ್ಕು ತಿಂಗಳಲ್ಲಿ ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದೆ. ಆಡಳಿತ ರೂಢ ಎಐಎಡಿಎಂಕೆ ಶಶಿಕಲಾ ಅವರ ಟಾರ್ಗೆಟ್. ಕರುಣಾನಿಧಿ ಇಲ್ಲದ ಡಿಎಂಕೆ ಪಕ್ಷ ಕಳೆಗುಂದಿದೆ. ದ್ರಾವಿಡ ನೆಲವನ್ನು ವಶಪಡಿಸಿಕೊಳ್ಳಲು ಬಿಜೆಪಿ ಈಗಾಗಲೇ ನಾನಾ ತಂತ್ರ ಎಣೆದಿದೆ. ಜೈಲುವಾಸ ಮುಗಿಸಿ ಅಮ್ಮ ಮಕ್ಕಳ ಮುನ್ನೇತ್ರ ಕಳಗಂ ಪಕ್ಷದ ಅಧಿನಾಯಕಿ ಶಶಿಕಲಾ ಜೈಲಿನಿಂದ ಬಿಡುಗಡೆಯಾಗಿ ತಮಿಳುನಾಡು ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿನ್ನಮ್ಮ ಎಂದೇ ಖ್ಯಾತಿ ಪಡೆದಿರುವ ಶಶಿಕಲಾ ಈಗಾಗಲೇ ತಮಿಳುನಾಡು ಸಿಎಂ ಪಟ್ಟದಲ್ಲಿ ಕೂರುವ ಗಳಿಕೆಯಲ್ಲಿ ತಪ್ಪಿ ಹೋಗಿತ್ತು. ಇದೀಗ ಅಧಿಕೃತ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿರುವ ಚಿನ್ನಮ್ಮ ತಮಿಳುನಾಡಿನ ಅಮ್ಮ ಆಗ್ತಾರಾ ಅನ್ನೋ ಕುತುಹಲ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಅವರ ಬೆಳೆದು ಬಂದ ಹಾದಿಯ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ಚಿನ್ನಮ್ಮ ಬೆಳೆದು ಬಂದ ದಾರಿ
ಚೆನ್ನೈನಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ಶಶಿಕಲಾ ನಟರಾಜನ್ ಎಂಬುವರನ್ನು ಮದುವೆಯಾಗಿದ್ದರು. ತಮಿಳುನಾಡಿನ ಸಿಎಂ ಆಗಿದ್ದ ಎಂ ಕರುಣಾನಿಧಿಯವರ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿದ್ದ ನಟರಾಜನ್ ಶಶಿಕಲಾ ಅವರ ಪತಿ ಕೂಡ ಹೌದು. ಹೀಗಾಗಿ ನಟರಾಜನ್ ಗೆ ಕುಡ್ಡಲೂರಿನ ಜಿಲ್ಲಾಧಿಕಾರಿಯಾಗಿದ್ದ ಚಂದ್ರಲೇಖಾ ಎಂಬುವರ ಆತ್ಮೀಯತೆ ಗಳಿಸಿದ್ದರು. ಎಂಜಿಆರ್ ಗೆ ತುಂಬಾ ಸಮೀಪವರ್ತಿಯಾಗಿದ್ದ ಚಂದ್ರಲೇಖಾ ಅವರ ಸಂಪರ್ಕ ಸಿಕ್ಕಿದ್ದ ಕಾರಣದಿಂದ ಶಶಿಕಲಾಗೆ ಸಹಜವಾಗಿ ಜಯಲಲಿತಾ ಸಂಪರ್ಕ ಸಾಧಿಸಿದರು.
ಜಯಲಲಿತಾ ಸಂಪರ್ಕ
ಅದು 1980 ರ ದಶಕ. ಎಂಜಿಆರ್ ಗೆ ಸಮೀಪವರ್ತಿ ಜಿಲ್ಲಾಧಿಕಾರಿಯಾಗಿದ್ದ ಚಂದ್ರಲೇಖಾ ಅವರು ಸೌತ್ ಆರ್ಕಟ್ ಜಿಲ್ಲಾಧಿಕಾರಿಯಾಗಿದ್ದರು. ಇದೇ ಅವಧಿಯಲ್ಲಿ ಎಐಎಡಿಎಂಕೆ ಪಕ್ಷದಲ್ಲಿ ಜಯಲಲಿತಾ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡುವ ದೊಡ್ಡ ಮಟ್ಟದ ಚಟುವಟಿಕೆ ಗರಿಗೆದರಿತ್ತು. ಈ ವೇಳೆ ಜಯಲಲಿತಾ ಅವರ ಸಂಪರ್ಕ ಸಾಧಿಸಿದ್ದ ಶಶಿಕಲಾ ನಟರಾಜನ್, ಜಯಲಲಿತಾ ಪರ ಕೆಲಸ ಮಾಡುತ್ತಿದ್ದರು. ಪಕ್ಷದ ಕಾರ್ಯಕ್ರಮಗಳಲ್ಲಿ ವಿಡಿಯೋ ರೆಕಾರ್ಡ್ ಮಾಡಿಸುತ್ತಿದ್ದರು. ಕಾರ್ಯಕ್ರಮ, ಸಭೆಗಳ ವಿಡಿಯೋ ಸಂಗ್ರಹಿಸಿ ಜಯಲಲಿತಾ ಗೆ ನೀಡುತ್ತಿದ್ದರು. ಹೀಗಾಗಿ ಶಶಿಕಲಾ ಜಯಲಲಿತಾಗೆ ದಿನೇ ದಿನೇ ಸಮೀಪವರ್ತಿಯಾದರು. 1996 ರ ವೇಳೆಗೆ ಎಐಎಡಿಎಂಕೆ ಪಕ್ಷದ ನಾಯಕ ಎಂ.ಜಿ. ರಾಮಚಂದ್ರನ್ ಮತ್ತು ಅವರ ವಾರಸುದಾರಿಕೆ ರಾಜಕಾರಣ ಮುಗಿದಿತ್ತು. 1990 ರ ದಶಕದಲ್ಲಿ ತಮಿಳುನಾಡಿನಲ್ಲಿ ಕರುಣಾನಿಧಿ ಸರ್ಕಾರ ಮತ್ತು ರಾಷ್ಟ್ರಪತಿ ಆಡಳಿತ ಪದೇ ಪದೇ ಬಂದು ರಾಜಕೀಯ ಅನಿಶ್ಚಿತತೆ ನಿರ್ಮಾಣವಾಗಿತ್ತು. ಎಂಜಿಆರ್ ಆಪ್ತೆಯಾಗಿದ್ದ ಕುಮಾರಿ ಜಯಲಲಿತಾ 1991 ರಲ್ಲಿ ಮೊದಲ ಬಾರಿಗೆ ತಮಿಳುನಾಡಿನ ಸಿಎಂ ಆಗಿ ಪದಗ್ರಹಣ ಮಾಡಿ ಅಧಿಕಾರ ಚಲಾಯಿಸಿದ್ದರು. ಆರಂಭದಿಂದಲೂ ಜಯಲಲಿತಾ ಆಪ್ತೆಯಾಗಿದ್ದ ಶಶಿಕಲಾ , ಯಂಕಾಲವಾದಂತೆ ಪ್ರಭಾವ ಸಾಧಿಸಿದರು. ಜಯಲಲಿತಾ ಅವರನ್ನು ನಿಯಂತ್ರಣ ಮಾಡುತ್ತಾರೆ ಎನ್ನುವ ಮಟ್ಟಿಗೆ ಬೆಳೆದು ನಿಂತರು.
2012 ರಲ್ಲಿ ಬಿರುಗಾಳಿ
ಜಯಲಲಿತಾ ಅವರು ಶಶಿಕಲಾ ಅವರ ಕುಟುಂಬದ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದು ಪಕ್ಷದಲ್ಲಿ ದೊಡ್ಡ ಮಟ್ಟದ ಬಿರುಗಾಳಿ ಎಬ್ಬಿಸಿತ್ತು. ಅಂತಿಮವಾಗಿ ಶಶಿಕಲಾ ಅವರನ್ನು ದೂರು ಇಡುವಂತೆ ಎಐಎಡಿಎಂಕೆ ಪಕ್ಷದ ಮುಖಂಡರು ಪಟ್ಟು ಹಿಡಿದು ಕೂತಿದ್ದರು. ಪಕ್ಷದಿಂದ ಶಶಿಕಲಾ ಅವರನ್ನು ಉಚ್ಛಾಟನೆ ಮಾಡಲಾಗಿತ್ತು. ಶಶಿಕಲಾ ಕ್ಷಮಾಪಣಾ ಪತ್ರ ಸಲ್ಲಿಸಿ ಸಾರಿ ಕೇಳಿದ್ದರು. ತದನಂತರ ಶಶಿಕಲಾ ಮತ್ತೆ ಎಐಎಡಿಎಂಕೆಯಲ್ಲಿ ಸಕ್ರಿಯ ರಾಜಕಾರಣದಲ್ಲಿ ತೊಡಗಿದ್ದರು.
ಜಯಲಲಿತಾ ಜೈಲಿಗೆ
ಜಯಲಲಿತಾ ಮುಖ್ಯಮಂತ್ರಿಯಾಗಿದ್ದ ವೇಳೆ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ದೂರು ಜಯಲಲಿತಾ ಕೊರಳಿಗೆ ಸುತ್ತಿಕೊಂಡಿತ್ತು. ಸಕ್ರಿಯ ರಾಜಕಾರಣದಲ್ಲಿ ತೊಡಗಿದ್ದ ಜಯಲಲಿತಾ ಅವರಿಗೆ ನಾಲ್ಕು ವರ್ಷಗಳ ಶಿಕ್ಷೆ ವಿಧಿಸಿ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿತ್ತು. ಹೀಗಾಗಿ ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಂದು ತಿಂಗಳು ಕಳೆದಿದ್ದರು. ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದು ಪಡಿಸಿದ ಬಳಿಕ ಜಯಲಲಿತಾ ಬಿಡುಗಡೆಯಾಗಿದ್ದರು. ಆದರೆ, ಅಷ್ಟರಲ್ಲಿ ಜಯಲಲಿತಾ ಅವರಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿತ್ತು. 2016 ಡಿಸೆಂಬರ್ ನಲ್ಲಿ ಜಯಲಲಿತಾ ತಮಿಳುನಾಡಿನ ಅಪೋಲೋ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಅಮ್ಮಾ ಎಂದೇ ಖ್ಯಾತಿ ಪಡೆದಿದ್ದ ಜಯಲಲಿತಾ ಸಾವಿನ ಬಳಿಕ ಸಹಜವಾಗಿ ಶಶಿಕಲಾ ಮತ್ತು ಸಹೋದರ ದಿನಕರನ್ ಎಐಎಡಿಎಂಕೆಯಲ್ಲಿ ಪ್ರಾಬಲ್ಯ ಸ್ಥಾಪಿಸಿದ್ದರು. ಜಯಲಲಿತಾ ಸಾವಿನ ಬಳಿಕ ಪಕ್ಷದ ಅಧಿನಾಯಕಿಯಾಗಿ ಶಶಿಕಲಾ ಅವರನ್ನು ಆಯ್ಕೆ ಮಾಡಲಾಗಿತ್ತು
ಕುರ್ಚಿ ಏರುವ ಮುನ್ನ ಜೈಲಿಗೆ
ಶಶಿಕಲಾ ಅವರು ಶಾಸಕಾಂಗ ಪಕ್ಷದ ನಾಯಕಿಯಾಗಿದ್ದಳು. 2017 ರಲ್ಲಿ ಒ. ಪನ್ನೀರ್ ಸೆಲ್ವಂ ಅವರನ್ನು ಆಕ್ಟಿಂಗ್ ಚೀಪ್ ಮಿನಿಸ್ಟರ್ ಆಫ್ ತಮಿಳುನಾಡು ಆಗಿ ಅಧಿಕಾರ ಸ್ವೀಕರಿಸಿದ್ದರು. ಶಶಿಕಲಾ ನಟರಾಜನ್ ಅವರ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪದ ಪ್ರಕರಣದ ತೀರ್ಪು ಸುಪ್ರೀಂಕೋರ್ಟ್ ನಲ್ಲಿ ಬಾಕಿ ಇತ್ತು. ಶಶಿಕಲಾ ಅವರ ಮೇಲಿನ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪು 2017 ರಲ್ಲಿ ಪ್ರಕಟಗೊಳ್ಳುವುದು ಬಾಕಿಯಿದ್ದ ಕಾರಣ ಶಶಿಕಲಾ ಅವರು ಸಿಎಂ ಕುರ್ಚಿ ಮೇಲೆ ಕೂರುವ ಅವಕಾಶ ತಪ್ಪಿತ್ತು. ದುರಾದೃಷ್ಟವಶಾತ್ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ಮತ್ತು ಆಪ್ತೆ ಇಳವರಿಸಿ ಇತರರಿಗೆ ನಾಲ್ಕು ವರ್ಷ ಶಿಕ್ಷೆ ವಿಧಿಸಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಶಶಿಕಲಾ ನಟರಾಜನ್ ಪರಪ್ಪನ ಅಗ್ರಹಾರ ಜೈಲಿಗೆ ಸೇರಿದರು. ಆನಂತರ ಎಐಎಡಿಎಂಕೆ ಯಲ್ಲಿ ನಾನಾ ಬದಲಾವಣೆಯಾಗಿ ಪಳನಿಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಇದೇ ಸಮಯದಲ್ಲಿ ಶಶಿಕಲಾ ಅವರನ್ನು ಎಐಎಡಿಎಂಕೆ ಪಕ್ಷದಿಂದ ಉಚ್ಛಾಟನೆ ಮಾಡಲಾಯಿತು.
ಅಮ್ಮ ಪಾರ್ಟಿ ಕಟ್ಟಿದ ಚಿನ್ನಮ್ಮ
ಹೀಗೆ ಎಐಎಡಿಎಂಕೆಯಿಂದ ಹೊರ ಬಿದ್ದ ಶಶಿಕಲಾ ಅವರ ಸಹೋದರ ಟಿ.ಟಿ.ವಿ. ದಿನಕರನ್ ಅಮ್ಮಾ ಮಕ್ಕಳ ಮುನ್ನೇತ್ರ ಕಳಗಂ ಪಾರ್ಟಿ ರಚಿಸಲಾಯಿತು. ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ದಿನಕರನ್ ಕಾರ್ಯ ನಿರ್ವಹಿಸುತ್ತಿದ್ದು ಅಧ್ಯಕ್ಷರಾಗಿರುವ ಶಶಿಕಲಾ ನಟರಾಜನ್ ಜೈಲು ಶಿಕ್ಷೆ ಮುಗಿಸಿ ಇದೀಗ ತಮಿಳುನಾಡಿಗೆ ಎಂಟ್ರಿ ಕೊಟ್ಟಿದ್ದಾರೆ. ಪುಟ್ಟ ಹೆಜ್ಜೆ ಇಟ್ಟು ಬೆಳೆದು ಬಂದ ಎಐಎಡಿಎಂಕೆ ಪಕ್ಷದಿಂದ ದೂರವಾಗಿರುವ ಚಿನ್ನಮ್ಮ ಇದೀಗ ಅಧಿಕೃತ ಸಮರ ಸಾರಿದ್ದಾರೆ. ಮುಂದೆ ತಮಿಳುನಾಡು ರಾಜಕೀಯದಲ್ಲಿ ಏನೇನು ಬದಲಾವಣೆಯಾಗಲಿವೆ ಎಂಬುದು ಕಾದು ನೋಡಬೇಕು ಸಿಡಿ ತಯಾರಿಕೆಯಿಂದ ರಾಜಕಾರಣ ಆರಂಭಿಸಿ ಸಿಎಂ ಖುರ್ಚಿ ಗೆ ಆಯ್ಕೆಯಾಗುವ ವರೆಗೂ ಬೆಳೆದು ಬಂದ ದಾರಿ ಮಾತ್ರ ರೋಚಕ.