ವೃತ್ತಿ, ಪ್ರವೃತ್ತಿಯಾಚೆಗಿನ ದುಷ್ಪ್ರವೃತ್ತಿಯಿಂದ ದೂರವಿರುವುದು ಹೇಗೆ?
ವೃತ್ತಿ ಮತ್ತು ಪ್ರವೃತ್ತಿ ಮನುಷ್ಯನನ್ನು ಒಳಿತಿನೆಡೆಗೆ ಕೊಂಡೊಯ್ಯುತ್ತದೆ. ಕೆಲವರು ವೃತ್ತಿಯ ಜತೆಗೆ ತಮಗೆ ಇಷ್ಟವಾದುದನ್ನು ಪ್ರವೃತ್ತಿಯಾಗಿ ಮುಂದುವರೆಸುತ್ತಾರೆ. ಇದು ಅವರಿಗೆ ಸುಖ, ನೆಮ್ಮದಿ ಜತೆಗೆ ಹೆಸರು, ಖ್ಯಾತಿ ಎಲ್ಲವನ್ನೂ ತಂದುಕೊಡುತ್ತದೆ.
ಆದರೆ ಒಂದು ವೇಳೆ ಮನುಷ್ಯ ಇದೆರಡರ ಆಚೆಗಿರುವ ದುಷ್ಟ್ರವೃತ್ತಿಯತ್ತ ಮುಖ ಮಾಡಿದರೆ ಅದರಿಂದ ಬದುಕು ಹಾಳಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ. ಮನುಷ್ಯನ ಜೀವಿತಾವಧಿಯಲ್ಲಿ ಕಾಮ, ಕ್ರೋಧ, ಪ್ರಲೋಭನೆ, ಲೋಭ ಮುಂತಾದವುಗಳಲ್ಲಿ ಯಾವುದಾದರೊಂದು ಸೆಳೆಯದಿರದು. ಹೀಗಿರುವಾಗ ಅವುಗಳ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿ ನಾಶವಾಗುವ ಮುನ್ನ ಅವುಗಳಿಂದ ಪಾರಾಗುವುದು ಹೇಗೆ ಎಂಬುವುದನ್ನು ಅರಿತುಕೊಳ್ಳುವುದು ಅಗತ್ಯವಾಗಿದೆ.
ವಿಸ್ಮಯ ಗೂಡು ನಿರ್ಮಾಣದ ಕಲೆಗಾರ ಗೀಜುಗ...
ಮನುಷ್ಯನ ಮನಸ್ಸು ಹುಚ್ಚು ಕುದುರೆಯಂತೆ...!
ಹಾಗೆನೋಡಿದರೆ ಮನಸ್ಸು ಹುಚ್ಚು ಕುದುರೆಯಂತೆ ಎಲ್ಲೆಂದರಲ್ಲಿ ಓಡಾಡುತ್ತಿರುತ್ತದೆ. ಹೀಗಿರುವಾಗ ಅದು ಹಾದಿ ತಪ್ಪಿ ಹಿಡಿತ ಮೀರಿದ ಪ್ರಲೋಭನೆಗೆ ಒಳಗಾಗವುದು ಖಚಿತ. ಆಗ ಮನುಷ್ಯ ಏನು ಮಾಡಬಹುದು? ಇದು ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಪ್ರಶ್ನೆ. ಇದಕ್ಕೆ ಚಿಂತನಾಶೀಲರು ಪರಿಣಾಮಕಾರಿಯಾದ ಕೆಲವೊಂದು ಮಾರ್ಗಗಳನ್ನು ನಮ್ಮ ಮುಂದಿಟ್ಟಿದ್ದಾರೆ.
ಮಕ್ಕಳು ವಿಚಿತ್ರವಾದ ವಸ್ತುಗಳನ್ನು ಅಥವಾ ಇತರೆ ಭಯ ಹುಟ್ಟಿಸುವ ಪ್ರಾಣಿಗಳನ್ನು ಕಂಡಾಗ ಹೇಗೆ ಹೆದರಿ ಓಡಿ ತಾಯಂದಿರ ತೆಕ್ಕೆಗೆ ಬೀಳುತ್ತವೆಯೋ ಹಾಗೆ ನಾವು ದೇವರ ಕಡೆಗೆ ಧಾವಿಸಬೇಕು. ಆತನ ಕರುಣೆಗಾಗಿ, ಆಶ್ರಯಕ್ಕಾಗಿ ಬೇಡಿಕೊಳ್ಳಬೇಕು. ಸದಾ ಪ್ರಲೋಭನೆಗಳನ್ನು ನಿರಾಕರಿಸುವ ಮೂಲಕ ಅವುಗಳನ್ನು ಎದುರಿಸಲು ಅಗತ್ಯವಾದ ಧೈರ್ಯವನ್ನು ನೀಡಲು ದೇವರ ನೆರವನ್ನು ಯಾಚಿಸಬೇಕು. ಪ್ರಲೋಭನೆಯ ವಿರುದ್ಧ ಪ್ರತಿಭಟನೆಗೆ ಹಾಗೂ ನಿರಾಕರಣೆಗಳನ್ನು ಮುಂದುವರೆಸುವಾಗ ಸದಾ ನಾವು ದೇವರ ಕಡೆಗೆ ಮುಖವನ್ನಿಟ್ಟಿರಬೇಕು.
ಪ್ರಲೋಭನೆ ತಡೆಯುವ ಸಿದ್ಧೌಷಧಿ ಯಾವುದು?
ನಮ್ಮ ಮನಸ್ಸನ್ನು ಒಂದಷ್ಟು ಒಳ್ಳೆಯ ಹಾಗೂ ಪ್ರಶಂಶನೀಯವಾದ ಸಂಗತಿಗಳ ಕಡೆಗೆ ತಿರುಗಿಸಬೇಕು. ಮನಸ್ಸಿನೊಳಗೆ ಪ್ರವೇಶಿಸುವ ಸದ್ಭಾವನೆಗಳು ಹೃದಯದಲ್ಲಿ ತುಂಬಿಕೊಂಡಿದ್ದೇ ಆದರೆ, ಅವುಗಳು ಎಲ್ಲ ಪ್ರಲೋಭನೆಗಳನ್ನು ಹಾಗೂ ದುರಾಲೋಚನೆಗಳನ್ನು ದೂರ ಅಟ್ಟುತ್ತವೆ. ಪ್ರಲೋಭನೆಗಳನ್ನು ತಡೆಯುವ ಸಿದ್ಧೌಷಧಿ ಏನೆಂದರೆ ಎಷ್ಟೇ ಸಣ್ಣದಿರಲಿ ಅಥವಾ ದೊಡ್ಡದಿರಲಿ ಮನಸ್ಸಿನೊಳಗಿನ ಸೂಕ್ಷ್ಮಾತಿಸೂಕ್ಷ್ಮ ಸೂಚನೆಗಳನ್ನು, ಭಾವನೆಗಳನ್ನು ನಮ್ಮ ಗುರುವಿನ ಎದುರು ತೆರೆದಿಡಬೇಕು. ಇಷ್ಟಾಗಿಯೂ ಆಸೆ, ಆಮಿಷಗಳು ನಮ್ಮನ್ನು ಪೀಡನೆ ಹಾಗೂ ಕೋಟಲೆಗೆ ಒಳಪಡಿಸುವುದು ಮುಂದುವರೆದರೆ ನಾವೆಂದು ಮಣಿಯುವುದಿಲ್ಲವೆಂಬ ದೃಢ ನಿರ್ಧಾರದ ಪ್ರತಿಭಟನೆ ಮುಂದುವರೆಸಬೇಕು.
ಸಂದಿಗ್ಧತೆಗಳಿಂದ ಪಾರು ಮಾಡಬಲ್ಲದು
ನಮ್ಮ ಮೇಲೆ ದಾಳಿ ಮಾಡುವ ದುಷ್ಪ್ರವೃತ್ತಿಗಳ ಉರುಬನ್ನು ಶಮನಗೊಳಿಸಬೇಕಾದರೆ ಭಗವಂತನನ್ನು ಕುರಿತು ನಿರಂತರವಾಗಿ ಪ್ರಾರ್ಥಿಸುವುದರ ಮೂಲಕ ಯಾವುದೇ ದುಷ್ಟ ಪ್ರವೃತ್ತಿಗಳು ಮನಸ್ಸಿನೊಳಗೆ ನುಸುಳಿ, ನೆಲೆಸಿ ಕ್ರಿಯಾಶೀಲವಾಗುವುದನ್ನು ತಡೆಯಬಹುದು. ಇದು ದುಷ್ಪ್ರವೃತ್ತಿಗಳ ಪ್ರಬಲವಾದ ಅಸ್ಪೋಟನೆಗೆ ಎದುರಾದ ಮತ್ತೊಂದು ಅಸ್ಪೋಟನೆಯನ್ನು ಪ್ರತಿಕ್ರಮವಾಗಿ ಒಡ್ಡುವ ಒಂದು ತಂತ್ರ ಎಂದರೆ ತಪ್ಪಾಗಲಾರದು. ಅತ್ಯಂತ ಕಷ್ಟದಿಂದ ಅತ್ಯಂತ ಶ್ರೇಷ್ಠವಾದುದನ್ನು ಅಥವಾ ಭಗವಂತನನ್ನು ಕುರಿತು ಮಂತ್ರೋಚ್ಛಾರಣೆಯ ದ್ವಾರಕೆಯನ್ನು ಸಲ್ಲಿಸುವುದರ ಮೂಲಕ ನಮ್ಮೊಳಗೆ ಜಾಗೃತವಾಗುವ ಉದಾತ್ತ ಭಾವವು ನಮ್ಮನ್ನು ಸಂದಿಗ್ಧತೆಗಳಿಂದ ಪಾರು ಮಾಡಬಲ್ಲದು ಎಂಬ ಜ್ಞಾನಿಗಳ ಮಾತನ್ನು ತಳ್ಳಿಹಾಕುವಂತಿಲ್ಲ. ನಾವು ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪುಗಳನ್ನು, ಪಾಪಕೃತ್ಯಗಳನ್ನು ಮಾಡಿರುತ್ತೇವೆ. ಆದರೆ ಅದು ತಪ್ಪು ಎಂದು ಗೊತ್ತಾದಾಗ ಅದರ ಪರಿಹಾರಕ್ಕೆ ಮುಂದಾಗಬೇಕು. ತುಂಬಾ ಸಲ ನಮ್ಮಲ್ಲಿ ನಮ್ಮೊಳಗಿನಿಂದಲೇ ಉದ್ಭವಿಸುವ ಕೆಟ್ಟ ಆಲೋಚನೆಗಳು, ಚಿತ್ತದಸ್ವಾಸ್ಥ್ಯವನ್ನೇ ಕೆಡಿಸುತ್ತವೆ. ಆದರೆ ಅವುಗಳಿಗೆ ವಶವಾಗದಂತೆ ನಮ್ಮನ್ನು ಕಾಯ್ದುಕೊಳ್ಳುವುದು ಬಹುಮುಖ್ಯ.
ಮರದ ಮೇಲಿನ ಹಕ್ಕಿಗಳು ಹಾರಿ ಹೋಗುತ್ತವೆ
ಕೆಲವೊಮ್ಮೆ ಕೆಟ್ಟ ಆಲೋಚನೆಗಳು ನಮ್ಮಲ್ಲಿ ಮೂಡುವುದು ಸಹಜ. ಅದು ಪಾಪವೂ ಅಲ್ಲ. ಆದರೆ ಅದಕ್ಕೆ ತಲೆಬಾಗಿ ಅದನ್ನು ಒಪ್ಪಿಕೊಂಡು ಮುನ್ನಡೆಯುವುದು ಮಾತ್ರ ಪಾಪವೇ. ಶ್ರೀ ರಾಮಕೃಷ್ಣರು ತಮ್ಮ ಉಪದೇಶವೊಂದರಲ್ಲಿ ಹೀಗೆಯೇ ಹೇಳಿದ್ದಾರೆ. ಭಗವಂತನ ಭಜನೆ ಹಾಗೂ ನಾಮಜಪ ಮಾಡಿದರೆ ಸಾಕು. ಎಲ್ಲ ಪಾಪಗಳೂ ಪರಿಹಾರವಾಗುತ್ತವೆ. ಈ ದೇಹವೆಂಬ ಮರದಲ್ಲಿ ಪಾಪವೆಂಬ ಹಕ್ಕಿಗಳು ಗೂಡು ಕಟ್ಟಿಕೊಂಡಿವೆ. ಭಜನೆ ಮಾಡುವುದು ಚಪ್ಪಾಳೆ ತಟ್ಟಿದಂತೆ. ಚಪ್ಪಾಳೆ ತಟ್ಟಿದಾಗ ಮರದ ಮೇಲಿನ ಹಕ್ಕಿಗಳು ಹಾರಿ ಹೋಗುವಂತೆ ಭಗವನ್ನಾಮಸ್ಮರಣೆಯಿಂದ ಪಾಪಗಳೆಲ್ಲವೂ ಹಾರಿಹೋಗುತ್ತವೆ. ಎಲ್ಲರಿಗೂ ಅರ್ಥವಾಗುವಂತಿರುವ ಈ ಉಪದೇಶ ಮನಸ್ಸಿನ ಅಸ್ವಸ್ಥತೆಗಳಿಗೆ ಸುಲಭವಾದ ಪರಿಹಾರ ಎಂದರೆ ತಪ್ಪಾಗಲಾರದು. ಜಪ, ತಪ, ಇವು ದೈನಂದಿನ ಚಟುವಟಿಕೆಗಳ ನಡುವೆ ಚಕ್ರವಾಗಿ ತಿರುಗುತ್ತಲೇ ಇರಬೇಕು. ಆಗ ನಮ್ಮ ಹೃದಯದ ಬೇಗೆಯೆಲ್ಲವೂ ತಣ್ಣಗಾಗುತ್ತದೆ. ಭಗವಂತನ ನಾಮಜಪದಲ್ಲಿ ಆಶ್ರಯ ಪಡೆದು ಎಷ್ಟೋ ಪಾಪಿಗಳೂ ಪಾಪ ಮುಕ್ತರೂ ಆಗಿದ್ದಾರೆ ಎಂಬುದನ್ನು ಮರೆಯುವಂತಿಲ್ಲ.
ವಿನಾಶಕಾರಿ ಶಕ್ತಿಗಳಿಂದ ಬಿಡಿಸಿಕೊಳ್ಳಬೇಕು
ಮನಸ್ಸಿನೊಳಗೆ ಅನಪೇಕ್ಷಣೀಯವಾದ ವಿಚಾರಗಳೂ ಹಾಗೂ ಚಾಂಚಲ್ಯಗಳೂ ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕು. ಯಾವಾಗ ಇವು ನಮ್ಮ ಮನಸ್ಸಿನೊಳಕ್ಕೆ ನುಗ್ಗಲು ಪ್ರಯತ್ನಿಸುತ್ತವೆಯೋ ಆಗ ನಮ್ಮ ಮನಸ್ಸನ್ನು ಭಗವಂತನ ಕಡೆಗೆ ತಿರುಗಿಸಿ ಪ್ರಾರ್ಥಿಸಬೇಕು. ಹೀಗೆ ಮಾಡುವುದರಿಂದ ಸಾಧ್ಯವಾದಷ್ಟು ಮಟ್ಟಿಗೆ ನಮ್ಮನ್ನು ಮುತ್ತಿಕೊಳ್ಳುವ ವಿನಾಶಕಾರಿ ಶಕ್ತಿಗಳಿಂದ ಬಿಡಿಸಿಕೊಳ್ಳಬಹುದು ಎಂಬುವುದಾಗಿ ಶ್ರೀ ಸ್ವಾಮಿ ಬ್ರಹ್ಮಾನಂದರು ತಿಳಿಸಿದ್ದಾರೆ. ದೇವರಲ್ಲಿ ಶರಣು ಹೋಗುವುದರಿಂದ ಬಹಳಷ್ಟು ಸಾರಿ ದೈಹಿಕ ಮತ್ತು ಮಾನಸಿಕ ವೇದನೆಗಳಿಂದ ಮುಕ್ತಿಹೊಂದಬಹುದು. ಭಗವದ್ಗೀತೆಯಲ್ಲಿ ಕೃಷ್ಣ ಮಾಡಿರುವ ಉಪದೇಶದಲ್ಲಿ ನಾನು ನಿನ್ನನ್ನು ಸರ್ವಪಾಪಗಳಿಂದಲೂ ಬಿಡಿಸುತ್ತೇನೆ. ಅಷ್ಟೇ ಅಲ್ಲ ನನ್ನ ಭಕ್ತನಾದವನು ಎಂದೂ ನಾಶ ಹೊಂದುವುದಿಲ್ಲ ಎಂದು ಹೇಳಿದ್ದಾನೆ. ಬನ್ನಿ ನಮ್ಮಲ್ಲಿಗೆ ಯಾರು ದುಃಖ ಭಾರದಿಂದ ಪರಿತಪಿಸುತ್ತಿದ್ದಿರೋ ಅವರೆಲ್ಲರಿಗೂ ನಾನು ಆಶ್ರಯವಾಗುತ್ತೇನೆ ಎಂದು ಏಸು ಕ್ರಿಸ್ತ ಹೇಳಿದ್ದಾನೆ. ಹೀಗೆ ದೇವರ ಕಡೆಯಿಂದ ಸ್ಪಷ್ಟವಾದ ಆಶ್ವಾಸನೆಗಳಿರುವಾಗ ಸುಖಾ ಸುಮ್ಮನೆ ಸಂಕಟಪಡದೆ ದೇವರತ್ತ ಮುಖ ಮಾಡುವುದು ಒಳ್ಳೆಯದು.