ಸಿಗರೇಟ್ ಚಟದಿಂದ ಹೊರಬರೋದು ಕಷ್ಟವೇನಲ್ಲ
ಪ್ರತಿವರ್ಷವೂ ಸಿಗರೇಟ್ ಬೆಲೆ ಗಗನಕ್ಕೇರುತ್ತದೆ. ಆದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಎಷ್ಟು ಹಣವಾದರೂ ತೆತ್ತು ಸೇವನೆ ಮಾಡುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ. ಸಿಗರೇಟ್ ಸೇವನೆ ಆರೋಗ್ಯಕ್ಕೆ ಹಾನಿ ಮಾತ್ರವಲ್ಲ ಜೇಬಿಗೂ ಕತ್ತರಿಯಾಗುತ್ತಿದೆ.
ಇವತ್ತಿನ ಪರಿಸ್ಥಿತಿಯಲ್ಲಿ ಮಧ್ಯಮವರ್ಗದ ವ್ಯಕ್ತಿ ತನ್ನ ಸಂಪಾದನೆಯಲ್ಲಿ ಕನಿಷ್ಠ ಶೇ. 25ರಷ್ಟು ಭಾಗವನ್ನು ಸಿಗರೇಟ್ಗೆ ಹಾಕುತ್ತಾನೆ ಎನ್ನುವುದಾದರೆ ಆ ಸಂಸಾರ ಸಾಗುವುದಾದರೂ ಹೇಗೆ?. ಇತ್ತೀಚೆಗೆ ಸಿಗರೇಟ್, ಬೀಡಿ ಎಲ್ಲೆಂದರಲ್ಲಿ ಸೇದುವಂತಿಲ್ಲ. ಮಾರಾಟವೂ ಮಾಡುವಂತಿಲ್ಲ. ಆದರೂ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆ ಮಾಡಿ ದಂಡ ಕಟ್ಟಿಸಿಕೊಳ್ಳುವ ಜನರಿಗೇನು ಕೊರತೆಯಿಲ್ಲ.
ಸಿಗರೇಟ್ ಸೇದುವವರ ವಯಸ್ಸಿನ ಮಿತಿ ಏರಿಕೆಗೆ ಚಿಂತನೆ
ಯುವಕರಿಗೆ ಸಿಗರೇಟ್ ಸೇದುವುದು ಒಂದು ಫ್ಯಾಶನ್ ಆಗಿದೆ. ಒಂದು ಕಡೆ ಕುಳಿತು ಟೀ ಕುಡಿಯುತ್ತಾ ಒಂದೊಂದೇ ಧಮ್ ಎಳೆಯೋದು ಟೀ ಸ್ಟಾಲ್ಗಳಲ್ಲಿ ಕಂಡು ಬರುತ್ತದೆ. ಇದೊಂದು ದುಶ್ಚಟ ಆರೋಗ್ಯದ ಮೇಲೆ ಹಾನಿ ಮಾಡುತ್ತದೆ ಎಂಬ ಅರಿವಿದ್ದರೂ ಮೊದಮೊದಲು ಗೆಳೆಯರೊಂದಿಗೆ ಸೇರಿ ಆರಂಭವಾಗುವ ಚಟ ಬಳಿಕ ಅದು ಇಲ್ಲದೆ ಇರುವಂತಿಲ್ಲ ಎಂಬ ಮಟ್ಟಿಗೆ ಅದರ ಗುಲಾಮನನ್ನಾಗಿ ಮಾಡಿ ಬಿಡುತ್ತದೆ.
ತಂಬಾಕು ಎಲೆಯಿಂದ ಕೊರೊನಾ ಲಸಿಕೆ ತಯಾರಿಸಿದ ವಿಶ್ವದ ನಂ.2 ಸಿಗರೇಟ್ ಕಂಪನಿ!
ಇದೊಂದು ರೀತಿಯ ಭ್ರಮೆ
ಒತ್ತಡದಲ್ಲಿ ಕೆಲಸ ಮಾಡುವ ಬಹಳಷ್ಟು ಮಂದಿ ರಿಲ್ಯಾಕ್ಸ್ ಆಗಲು ಸಿಗರೇಟ್ ಸೇದುವ ಅಭ್ಯಾಸ ಮಾಡಿಕೊಂಡಿವುದಾಗಿ ಹೇಳುತ್ತಾರೆ. ಅವರಿಗೆ ಸಿಗರೇಟ್ ಸೇದಿದ ಬಳಿಕವಷ್ಟೆ ಮುಂದಿನ ಕೆಲಸ ಮಾಡಲು ಹುರುಪು ಬರುತ್ತದೆಯಂತೆ. ಇದೊಂದು ರೀತಿಯ ಭ್ರಮೆ, ಗೊತ್ತಿದ್ದೋ ಗೊತ್ತಿಲ್ಲದೆಯೋ ಮೋಜು ಮಸ್ತಿಯಲ್ಲಿ ಸಿಗರೇಟ್ ಸೇದೋದನ್ನು ಆರಂಭಿಸುವ ಯುವಕ, ಯುವತಿಯರು ಬಳಿಕ ಆ ಚಟದಿಂದ ಹೊರಬರಲಾರದೆ ಒದ್ದಾಡುತ್ತಾರೆ.
ಗಟ್ಟಿ ಮನಸ್ಸು ಮಾಡಿ ಸಿಗರೇಟ್ ಬಿಡಿ
ಹರೆಯದಲ್ಲಿ ಆರೋಗ್ಯ ಚೆನ್ನಾಗಿದ್ದಾಗ ಅದರ ಹೊಡೆತ ಗೊತ್ತಾಗುವುದಿಲ್ಲ ಒಮ್ಮೆ ಆರೋಗ್ಯ ತಪ್ಪಿದಾಗ ಸಿಗರೇಟ್ನ ಚಮತ್ಕಾರ ಗೊತ್ತಾಗಿ ಬಿಡುತ್ತದೆ. ನಮ್ಮ ಕಾಯಿಲೆಯಲ್ಲಿ ಅದರ ಪಾತ್ರ ಎಷ್ಟಿದೆ ಎಂಬುದು ಅರಿವಾಗುತ್ತದೆ. ಕಾಯಿಲೆ ಬಂದು ಅದರಿಂದ ಹೇಗೋ ಬಿಡುಗಡೆಗೊಂಡು ಇನ್ನು ಮುಂದೆ ಸಿಗರೇಟ್ ಸಹವಾಸ ಬೇಡಪ್ಪಾ ಎಂದು ಬಿಟ್ಟವರು ಬಹಳಷ್ಟು ಮಂದಿಯಿದ್ದಾರೆ. ಇವರ ಪೈಕಿ ಕೆಲವರು ಕೆಲವೊಮ್ಮೆ ಹಲವು ತೊಂದರೆಗಳಿಂದ ಬಳಲಿದ, ಮಾನಸಿಕವಾಗಿ ಕುಗ್ಗಿದ ನಿದರ್ಶನಗಳು ಬೇಕಾದಷ್ಟಿವೆ. ಆದರೂ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ.
ಆರ್ಥಿಕವಾಗಿಯೂ ಹೊರೆ
ಇವತ್ತಿನ ದಿನಗಳಲ್ಲಿ ಬೀಡಿ ಸಿಗರೇಟ್ ದುಬಾರಿಯಾಗಿದೆ. ಅದನ್ನು ಬಿಟ್ಟರೆ ಆರೋಗ್ಯ ಮಾತ್ರವಲ್ಲ, ಆರ್ಥಿಕವಾಗಿಯೂ ಸದೃಢರಾಗಲು ಸಾಧ್ಯವಿದೆ. ದುಶ್ಚಟಗಳನ್ನು ಕಲಿಯುವುದು ಸುಲಭ. ಆದರೆ ಅದನ್ನು ತ್ಯಜಿಸುವುದು ಕಷ್ಟದ ಕೆಲಸ. ಆದರೆ ಗಟ್ಟಿ ಮನಸ್ಸು ಮಾಡಿ ಅದಕ್ಕೆ ತಿಲಾಂಜಲಿ ಹೇಳುವುದು ಇಂದಿನ ಅನಿವಾರ್ಯತೆಯಾಗಿದೆ.
ವಿಟಮಿನ್-ಇ ಮಾತ್ರೆಗಳು
ಬಹಳಷ್ಟು ಮಂದಿ ಇವತ್ತು ಸಿಗರೇಟ್ ಸೇವನೆ ಬಿಟ್ಟು ಉತ್ತಮ ಆರೋಗ್ಯ ಕಂಡು ಕೊಂಡಿದ್ದಾರೆ. ಸಿಗರೇಟ್ ಸೇವನೆ ಬಿಟ್ಟರೆ, ಆ ನಂತರ ವಿಟಮಿನ್- ಇ ಮಾತ್ರೆಗಳನ್ನು ಒಂದಷ್ಟು ಪ್ರಮಾಣದಲ್ಲಿ ಸೇವಿಸಬೇಕಂತೆ. ಇದರಿಂದ ಹೃದಯದ ಆರೋಗ್ಯಕ್ಕೆ ಹಾನಿಯಾಗುವುದಿಲ್ಲವಂತೆ. ಈ ಸಂಗತಿಯನ್ನು ಅಮೆರಿಕದಲ್ಲಿರುವ ಓಹಿಯೋ ಸ್ಟೇಟ್ ಯೂನಿವರ್ಸಿಟಿ ಸಂಶೋಧಕರು ತಿಳಿಸಿದ್ದಾರೆ. ಇ ವಿಟಮಿನ್ ನಿಂದ ಹೃದಯಕ್ಕೆ ಯಾವುದೇ ಸಮಸ್ಯೆ ಉಂಟಾಗದು. ರಕ್ತ ಪ್ರಸಾರ ಸುಗಮವಾಗಿರುತ್ತದೆ ಎಂದು ಅಧ್ಯಯನ ಸಂದರ್ಭದಲ್ಲಿ ಅವರು ಗಮನಿಸಿದ್ದಾರೆ. ಅಲ್ಲದೇ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಶೇ. 19 ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.
ನಾವೇ ಕಲಿತ ಚಟ ನಾವೇ ಬಿಡಬೇಕು
ಒಂದು ವಾರದಷ್ಟು ಸಮಯ ಧೂಮಪಾನ ಮಾಡದೆ ಇದ್ದವರಲ್ಲಿ ಶೇ.2.8 ರಷ್ಟು ರಕ್ತ ಪ್ರಸಾರದ ವ್ಯವಸ್ಥೆ ಸುಗಮವಾಗಿರುತ್ತಂತೆ. ವಿಟಮಿನ್ 'ಇ' ಯನ್ನು ಗಾಮ ಟೋಕೋಫೆರಾಲ್ ರೂಪದಲ್ಲಿ ಸೇವಿಸಿದರಲ್ಲಿ ಶೇ. 1.5 ರಷ್ಟು ವೃದ್ಧಿ ಕಂಡು ಬಂದ ಸಂಗತಿಯನ್ನು ವಿಜ್ಞಾನಿಗಳು ಜಗತ್ತಿಗೆ ತಿಳಿಸಿದ್ದಾರೆ. ಅದು ಏನೇ ಇರಲಿ ಧೂಮಪಾನ ಒಳ್ಳೆಯದಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಅದರಿಂದ ನರಕ ಅನುಭವಿಸಿ ಬಿಡುಗಡೆ ಆದವರು ಆರೋಗ್ಯವಾಗಿದ್ದಾರೆ.
ಇವತ್ತಿನಿಂದಲೇ ಧೂಮಪಾನ ಬಿಡಿ. ಆರೋಗ್ಯ ವೃದ್ಧಿಸಿ. ಒಂದು ವೇಳೆ ಸಿಗರೇಟ್ ಬಿಟ್ಟ ನಂತರ ತಮ್ಮ ಆರೋಗ್ಯದಲ್ಲಿ ಸಮಸ್ಯೆಗಳು ಕಂಡು ಬಂದರೆ ಸ್ವಯಂ ಚಿಕಿತ್ಸೆಗೆ ಮುಂದಾಗದೆ ವೈದ್ಯರನ್ನು ಭೇಟಿ ಮಾಡಿ ಸಲಹೆ, ಚಿಕಿತ್ಸೆ ಪಡೆಯಿರಿ. ನಾವೇ ಕಲಿತ ಚಟವನ್ನು ನಾವಷ್ಟೇ ಬಿಡಲು ಸಾಧ್ಯ ಎಂಬುದು ನಮ್ಮ ನೆನಪಿನಲ್ಲಿರಬೇಕಷ್ಟೆ.