ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಸಲಹೆ: ಮಂಜುನಾಥ ಬಾಡಗಿ ಸಂದರ್ಶನ
"ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುವುದಕ್ಕೆ ಕನ್ನಡದಲ್ಲಿ ಸರಿಯಾದ ಪಠ್ಯ ಸಾಮಗ್ರಿಗಳೇ ಇಲ್ಲ" ಎಂದರು ಮಾನಸಿಕ ಸಾಮರ್ಥ್ಯ (ಮೆಂಟಲ್ ಎಬಿಲಿಟಿ) ವಿಷಯದಲ್ಲಿ ಹನ್ನೆರಡು ವರ್ಷಗಳಿಂದ ಹತ್ತು ಲಕ್ಷಕ್ಕೂ ಹೆಚ್ಚು ಮಂದಿಗೆ ಪಾಠ ಮಾಡಿರುವ ಮಂಜುನಾಥ ಬಾಡಗಿ. ಇವರು ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನವರು.
ವಿಜಯನಗರದಲ್ಲಿರುವ ತಮ್ಮ ಕೋಚಿಂಗ್ ಸೆಂಟರ್ ನಲ್ಲಿ ಒನ್ಇಂಡಿಯಾ ಕನ್ನಡದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳು, ಕನ್ನಡಿಗರ ಪ್ರಯತ್ನ, ಅದಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಹಲವು ಮಹತ್ತರ ವಿಚಾರಗಳನ್ನು ಹಂಚಿಕೊಂಡರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ಸಿದ್ಧವಾಗಬೇಕು ಎಂಬ ವಿಚಾರದ ಬಗ್ಗೆಯೇ ಸುದೀರ್ಘವಾಗಿ ಮಾತನಾಡಿದರು.
ಕನ್ನಡಿಗರಿಗೆ ಅನ್ಯಾಯ : ಮೋದಿಗೆ ಸಿದ್ದರಾಮಯ್ಯ ಪತ್ರ
ದೆಹಲಿಯ ವಾಜೀರಾಂ ಅಂಡ್ ರವಿ, ಅಶ್ವಿನಿ ಕೋಚಿಂಗ್ ಸೆಂಟರ್, ರಾಜ್ ಗೋಪಾಲ್ ಕೋಚಿಂಗ್ ಸೆಂಟರ್ ಸೇರಿದಂತೆ ಕರ್ನಾಟಕದ- ದೇಶದ ನಾನಾ ಭಾಗಗಳಲ್ಲಿ ಮಾನಸಿಕ ಸಾಮರ್ಥ್ಯದ ವಿಷಯದ ಬೋಧನೆ ಮಾಡುತ್ತಾರೆ. ಈ ವಿಷಯದಲ್ಲಿ ಕೋಚಿಂಗ್ ನೀಡುವ ನಂಬರ್ ಒನ್ ಫ್ಯಾಕಲ್ಟಿ ಇವರು. ಮಂಡ್ಯದ ಈಗಿನ ಎಸ್ ಪಿ ರಾಧಿಕಾ, ಬೆಂಗಳೂರು ಉತ್ತರ ವಲಯದ ತಹಶೀಲ್ದಾರ್ ಹನುಮಂತರಾಯಪ್ಪ, ರಾಜ ಸರಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ಮಗ ಸೇರಿದಂತೆ ಅನೇಕ ಮಂದಿ ಇವರ ಸ್ಟೂಡೆಂಟ್ಸ್.
ಪ್ರಶ್ನೋತ್ತರಗಳಿಗಾಗಿ ಮುಂದೆ ಓದಿ...
ಕರ್ನಾಟಕದವರು ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಗೆ ಹೆಚ್ಚು ಪ್ರಯತ್ನಿಸುವುದಿಲ್ಲ ಎಂಬ ಆರೋಪವಿದೆಯಲ್ಲಾ?
ಮಂಜುನಾಥ ಬಾಡಗಿ: ಇದು ಈ ಹಿಂದೆ ಇದ್ದ ಆರೋಪ. ಈಗ ಕಾಲ ಬದಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆ ಕನ್ನಡದಲ್ಲಿರುತ್ತದೆ ಎಂಬ ಕಾರಣಕ್ಕೆ ಇದಕ್ಕೆ ಪ್ರಯತ್ನಿಸುತ್ತಾರೆ ವಿನಾ ಲೋಕಸೇವಾ ಆಯೋಗದ ಪರೀಕ್ಷೆಗೆ ಪ್ರಯತ್ನಿಸಲ್ಲ ಎಂಬ ಮಾತು ಹಿಂದೆ ಇತ್ತು. ಈಗ ಆ ರೀತಿ ಪರಿಸ್ಥಿತಿ ಇಲ್ಲ.
ಕನ್ನಡ ವಿದ್ಯಾರ್ಥಿಗಳಿಗೆ ಇರುವ ಮುಖ್ಯ ಸಮಸ್ಯೆ ಏನು?
ಮಂಜುನಾಥ ಬಾಡಗಿ: ಕನ್ನಡದಲ್ಲಿ ಪಠ್ಯ ಸಾಮಗ್ರಿ ಸಿಗುವುದಿಲ್ಲ. ನಮ್ಮ ಗ್ರಾಮಾಂತರ ಭಾಗದ ಅಭ್ಯರ್ಥಿಗಳಲ್ಲಿ ಕೀಳರಿಮೆ ಇರುತ್ತದೆ. ಪದವಿ ಪಡೆದ ತಕ್ಷಣ ಆರ್ಥಿಕವಾಗಿ ಮನೆಯವರ ನೆರವಿಗೆ ನಿಲ್ಲಬೇಕೆಂಬ ಒತ್ತಡ ಇರುತ್ತದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಸರಿಯಾದ ಮಾರ್ಗದರ್ಶನ ಮಾಡುವವರನ್ನು ಹುಡುಕಿಕೊಳ್ಳಲು ವಿಫಲರಾಗುತ್ತಿದ್ದಾರೆ.
ಹಾಗಿದ್ದರೆ ತಯಾರಿ ಹೇಗೆ ಶುರು ಮಾಡಬೇಕು?
ಮಂಜುನಾಥ ಬಾಡಗಿ: ಎನ್ ಸಿಇಆರ್ ಟಿ ಪಠ್ಯಪುಸ್ತಕಗಳನ್ನೇ ಓದಬೇಕು. ನಾವು ಆರಿಸಿಕೊಂಡ ವಿಷಯಕ್ಕೆ ಅತ್ಯುತ್ತಮವಾಗಿ ಪಾಠ ಮಾಡಬಲ್ಲ ವ್ಯಕ್ತಿ ಯಾರು ಎಂಬುದನ್ನು ಗುರುತಿಸಬೇಕು. ಸಾಮಾನ್ಯ ಜ್ಞಾನದ ವಿಚಾರದಲ್ಲಿ ಒಬ್ಬರು ಚೆನ್ನಾಗಿ ಪಾಠ ಮಾಡಿದರೆ, ಮೆಂಟಲ್ ಎಬಿಲಿಟಿ ಒಬ್ಬರು, ಕನ್ನಡ, ಇತಿಹಾಸ, ಸಾರ್ವಜನಿಕ ಆಡಳಿತ ಹೀಗೆ ಒಬ್ಬೊಬ್ಬರು ಒಂದು ವಿಷಯ ಚೆನ್ನಾಗಿ ಹೇಳಿಕೊಡುತ್ತಾರೆ. ಅಂಥವರ ಬಳಿಯೇ ಪಾಠ ಹೇಳಿಸಿಕೊಳ್ಳಬೇಕು.
ನೀವು ಮೂರು ಬಾರಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ವಿಫಲರಾಗಿದ್ದರಂತೆ?
ಮಂಜುನಾಥ ಬಾಡಗಿ: ಹೌದು, ಆ ಅನುಭವವೇ ನನ್ನನ್ನು ಒಳ್ಳೆ ತರಬೇತುದಾರನನ್ನಾಗಿ ಮಾಡಿದೆ (ನಗು). ನಮಗೆ ಕೆಲವು ವಿಷಯ ಕಷ್ಟ ಅಂತಲೋ ಅಥವಾ ಇಷ್ಟ ಅಂತಲೋ ಅದರ ಮೇಲೆ ಗಮನ ಇಟ್ಟುಬಿಡ್ತೀವಿ. ಆಗ ಉಳಿದ ವಿಷಯಗಳು ನಿರ್ಲಕ್ಷ್ಯವಾಗುತ್ತವೆ. ಐಎಎಸ್ ಅಥವಾ ಕೆಎಎಸ್ ಮಾಡಲು ಎಲ್ಲ ವಿಷಯದ ಬಗ್ಗೆ ಓದಿಕೊಳ್ಳಬೇಕು. ಒಂದೇ ವಿಷಯ ತುಂಬ ಚೆನ್ನಾಗಿ ಓದಿಕೊಂಡುಬಿಟ್ಟರೆ ನನ್ನ ರೀತಿ ತರಬೇತುದಾರ ಆಗಬಹುದು.
ನಿಮ್ಮ ಹಿನ್ನೆಲೆ, ಇಂದಿನ ಸ್ಥಾನ ಮಾನದ ಬಗ್ಗೆ ಹೇಳಿ
ಮಂಜುನಾಥ ಬಾಡಗಿ: ನನ್ನ ಇಪ್ಪತ್ತೆಂಟು ವರ್ಷದವರೆಗೆ ಒಂದೇಒಂದು ರುಪಾಯಿ ದುಡಿದವನಲ್ಲ. ನನಗೆ ಸಿಕ್ಕಿದ್ದ ಎಲ್ ಐಸಿ ಡೆವಲಂಪ್ ಮೆಂಟ್ ಆಫೀಸರ್ ಹುದ್ದೆ ಹಾಗೂ ನನ್ನ ಹೆಂಡತಿ ಗುಣಾ ರಾಣಿ ಜೈಲರ್ ವಾರ್ಡನ್ ಕೆಲಸ ಒಟ್ಟಿಗೆ ಬಿಟ್ಟೆವು. ಅಲ್ಲಿಂದ ಆರಂಭವಾದ ನನ್ನ ಪ್ರಯಾಣ ಇಂದಿಗೆ ಭಾರತದಲ್ಲೇ ಹೆಸರು ತಂದುಕೊಟ್ಟಿದೆ. ಮೆಂಟಲ್ ಎಬಿಲಿಟಿ ವಿಷಯ ಪಾಠ ಮಾಡುವುದರಲ್ಲಿ ನನಗಿರುವಷ್ಟು ಅನುಭವ ಉಳಿದವರಿಗೆ ಇಲ್ಲ. ನನ್ನ ಅನುಭವ ಹಾಗೂ ಸಾಮರ್ಥ್ಯದ ಪ್ರಯೋಜನ ಕನ್ನಡದವರಿಗೆ ಅಗಬೇಕು.
ಕನ್ನಡದವರು, ಕರ್ನಾಟಕದವರು ಯಾವ ವಿಷಯ ಅಥವಾ ಕ್ಷೇತ್ರ ಆರಿಸಿಕೊಂಡರೆ ಹೆಚ್ಚಿನ ಸಾಧನೆ ಮಾಡಬಹುದು?
ಮಂಜುನಾಥ ಬಾಡಗಿ: ಯಾವುದೇ ವಿಷಯ- ಕ್ಷೇತ್ರ ಆರಿಸಿಕೊಂಡರೂ ಸಾಧನೆ ಮಾಡಬಹುದು. ಅದರಲ್ಲೂ ಬಿ.ಎಡ್, ಡಿ.ಎಡ್ ವಿಷಯ ತೆಗೆದುಕೊಂಡರೆ ಭವಿಷ್ಯವೂ ಚೆನ್ನಾಗಿರುತ್ತದೆ. ಆದರೆ ಆ ಬಗ್ಗೆ ಅವರಿಗೊಂದು ಒಲವಿರಬೇಕು.
ನೀವು ಹೇಳಿಕೊಡುವ ಪಾಠ ಉಳಿದವರಿಗಿಂತ ವಿಶಿಷ್ಟ ಏಕೆ, ಹೇಗೆ?
ಮಂಜುನಾಥ ಬಾಡಗಿ: ನನ್ನ ಅನುಭವದ ಆಧಾರದಲ್ಲಿ ಪರೀಕ್ಷೆಗಳಿಗೆ ಬರಬಹುದಾದ ಪ್ರಶ್ನೆಗಳ ವಿಧಾನವನ್ನು ತಿಳಿದುಕೊಂಡಿದ್ದೇನೆ. ಎಷ್ಟು ಬಗೆಯಲ್ಲಿ ಸಮಸ್ಯೆಗಳನ್ನು ಬಿಡಿಸಬಹುದು, ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದು ಹೇಗೆ ಅನ್ನೋದನ್ನು ಕಲಿಸಿಕೊಡುತ್ತೇನೆ. ಇದರಿಂದ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚುತ್ತದೆ. ಯಶಸ್ಸು ಸಿಗುವ ಪ್ರಮಾಣ ಹೆಚ್ಚು.
ಈ ವರೆಗೆ ಎಷ್ಟು ಮಂದಿಗೆ ಪಾಠ ಮಾಡಿದ್ದೀರಿ? ಯಶಸ್ಸಿನ ಪ್ರಮಾಣ ಏನು?
ಮಂಜುನಾಥ ಬಾಡಗಿ: ಹತ್ತು ಲಕ್ಷಕ್ಕೂ ಹೆಚ್ಚು ಮಂದಿಗೆ ಪಾಠ ಮಾಡಿದ್ದೀನಿ. ನಾಲ್ಕೈದು ಸಾವಿರಕ್ಕೂ ಹೆಚ್ಚು ಮಂದಿ ಐಎ ಎಸ್, ಐಪಿಎಸ್, ಬ್ಯಾಂಕ್ ಆಫೀಸರ್ ಗಳು, ಪೊಲೀಸ್ ಅಧಿಕಾರಿಗಳು, ಕೆಎಎಸ್ ಅಧಿಕಾರಿಗಳು...ಹೀಗೆ ನಾನಾ ಹುದ್ದೆಗಳನ್ನು ಪಡೆದಿದ್ದಾರೆ.
ಮಂಜುನಾಥ ಅವರ ಇಮೇಲ್ ಐಡಿ [email protected]