ಕ್ರಿಯಾ ಸಮಾಧಿಯ ಮಹತ್ವದ ಬಗ್ಗೆ ನಿಮಗೆಷ್ಟು ಗೊತ್ತಿದೆ?
Recommended Video
ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಗಳು ಶಿವೈಕ್ಯರಾದರೆಂದು ಸೋಮವಾರ ಮಧ್ಯಾಹ್ನ ಸುದ್ದಿ ಹೊರಬಿದ್ದ ಕ್ಷಣದಿಂದ ಕೇಳಿಬರುತ್ತಿರುವ ಪದ 'ಕ್ರಿಯಾ ಸಮಾಧಿ'. ಸಿದ್ದಗಂಗಾ ಶ್ರೀಗಳ ಅಂತಿಮ ವಿಧಿ ವಿಧಾನ ನೆರವೇರುವ ಬಗೆಯನ್ನು ಜನ ಸಾಮಾನ್ಯರು ಕೂಡ ತಿಳಿಯುವ ಬಗೆಯಲ್ಲಿ ವಿವರಿಸುವುದು ಹೇಗೆ ಎಂದು ಆಲೋಚಿಸಿ, ಈ ಮಾದರಿಯಲ್ಲಿ ಪ್ರಯತ್ನಿಸಲಾಗಿದೆ.
ಇಡೀ ವಿಧಾನದ ಪ್ರಾಮುಖ್ಯ, ನಡೆಯುವ ವಿಧಿ-ವಿಧಾನ ಇತ್ಯಾದಿ ವಿಚಾರಗಳನ್ನು ಅಂಶಗಳಲ್ಲಿ ತೆರೆದಿಡುವ ಪ್ರಯತ್ನ ಇದು. ಆದಷ್ಟು ಸರಳವಾಗಿ, ವಿಷಯವನ್ನು ಗಹನವಾಗಿ ತಿಳಿಸಿಕೊಡುವುದಕ್ಕೆ ಯತ್ನಿಸಿದ್ದೇವೆ. ಮುಂದೆ ಓದಿ.
ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ಸಮಯದ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ?
* ಲಿಂಗ ಧಾರಣೆ ಮಾಡಿದ ಹಾಗೂ ಇಷ್ಟಲಿಂಗ ಪೂಜೆ ಮಾಡುವ ಅಧ್ಯಾತ್ಮ ಸಾಧಕರಿಗೆ ಮಾಡುವ ಅಂತಿಮ ವಿಧಿಗೆ ಕ್ರಿಯಾ ಸಮಾಧಿ ಎನ್ನುತ್ತಾರೆ. ಸಾಮಾನ್ಯವಾಗಿ ಲಿಂಗಾಯತರಲ್ಲೇ ಎಲ್ಲರಿಗೂ ಈ ರೀತಿ ಅಂತ್ಯ ಕ್ರಿಯೆ ಮಾಡುವುದಿಲ್ಲ. ಮೃತರ ದೇಹವನ್ನು ಮಣ್ಣಿನಿಂದ ಮುಚ್ಚಲಾಗುತ್ತದೆ. ಆದರೆ ಕ್ರಿಯಾ ಸಮಾಧಿ ವಿಧಾನದಲ್ಲಿ ವಿಭೂತಿ ಮತ್ತು ಉಪ್ಪನ್ನು ಬಳಸಿ ಮುಚ್ಚಿದ ನಂತರ ಗದ್ದುಗೆ ನಿರ್ಮಿಸಲಾಗುತ್ತದೆ. ಈ ಗದ್ದುಗೆಗೆ ಭವಿಷ್ಯದಲ್ಲಿ ಪೂಜೆ ಕೂಡ ಮಾಡಲಾಗುತ್ತದೆ.
ಮೃತರ ಶರೀರ ಒಳಗೆ ಕೂರಿಸುವಷ್ಟು ಸ್ಥಳಾವಕಾಶ
* ಕ್ರಿಯಾ ಸಮಾಧಿ ಎಂಬುದು ಲಿಂಗಾಯತರಲ್ಲಿ ಅನುಸರಿಸುವ ಅಂತಿಮ ವಿಧಿ ವಿಧಾನ ಪದ್ಧತಿ. ಈಗಾಗಲೇ ಹೇಳಿದಂತೆ ಲಿಂಗಧಾರಣೆ ಹಾಗೂ ಇಷ್ಟಲಿಂಗ ಪೂಜೆ ಮಾಡುವ ಆಧ್ಯಾತ್ಮಿಕ ಸಾಧಕರು ತಮ್ಮ ಜೀವನದಲ್ಲಿ ಈ ಕೈಂಕರ್ಯವನ್ನು ತಪಸ್ಸಿನಂತೆ ಮಾಡಿರಬೇಕು. ಹಾಗಿದ್ದಲ್ಲಿ ಮಾತ್ರ ಈ ಬಗೆಯ ಅಂತಿಮ ವಿಧಾನ ಅನುಸರಿಸಲಾಗುತ್ತದೆ.
* ಮೃತರ ಶರೀರವನ್ನು ಕೂರಿಸಲು ಅನುಕೂಲ ಆಗುವಂತೆ ಸಮಾಧಿಯೊಳಗೆ ತ್ರಿಕೋನದ ಆಕೃತಿಯಲ್ಲಿ ವ್ಯವಸ್ಥೆ ಇರುತ್ತದೆ. ಅಂದ ಹಾಗೆ ಆ ಸಮಾಧಿ ಸ್ಥಳವನ್ನು ಮುಂಚಿತವಾಗಿಯೇ ಗುರುತು ಮಾಡಿಟ್ಟಿರುತ್ತಾರೆ. ಸಮಾಧಿಯೊಳಗೆ ಇಳಿಯಲು ಸಾಧ್ಯವಾಗುವಂತೆ ಮೆಟ್ಟಿಲು ಇರುತ್ತವೆ. ಅದು ಕೂಡ ಇಂತಿಷ್ಟೇ ಸಂಖ್ಯೆಯಲ್ಲಿ ಇರಬೇಕು ಎಂಬ ನಿಯಮ ಇದೆ. ಇನ್ನು ಕ್ರಿಯೆಗೆ ಸಂಬಂಧಿಸಿದ ಹಾಗೆ ವಿವಿಧ ಕಾರ್ಯಕ್ರಮಗಳು ನಡೆಯುವ ವೇಳೆ ದೀಪವನ್ನು ಹಚ್ಚಿ, ಇಡಲು ಪುಟ್ಟ- ಸಾಮಾನ್ಯ ಗಾತ್ರದ ಗೂಡಿನ ವ್ಯವಸ್ಥೆ ಮಾಡಲಾಗುತ್ತದೆ.
ಪುಣ್ಯ ನದಿಗಳ ಸ್ನಾನ, ನೂತನ ವಸ್ತ್ರ ಧಾರಣೆ
* ಇನ್ನು ಸಮಾಧಿಯ ಅಳತೆ ವಿಚಾರಕ್ಕೆ ಬಂದರೆ, ಒಂಬತ್ತು ಪಾದದಷ್ಟು ಉದ್ದವಾಗಿಯೂ, ಹಾಗೇ ಐದು ಪಾದದಷ್ಟು ಅಗಲವಾಗಿಯೂ ಇರುತ್ತದೆ. ಇಲ್ಲಿ ಪಾದವನ್ನು ಲೆಕ್ಕ ಹಾಕುವುದು ಮೃತರ ಪಾದದ ಆಧಾರದಲ್ಲಿ. ಮೊದಲೇ ಹೇಳಿದ ಹಾಗೆ ಕ್ರಿಯಾ ಸಮಾಧಿ ಸ್ಥಳವನ್ನು ಮುಂಚಿತವಾಗಿಯೇ ಗುರುತು ಹಾಕಿಡಲಾಗುತ್ತದೆ. ಶಿವಕುಮಾರ ಶ್ರೀಗಳು ತಮ್ಮ ಕ್ರಿಯಾ ಸಮಾಧಿಯ ಜಾಗವನ್ನು ತಾವೇ ಗುರುತಿಸಿದ್ದರು. ಇನ್ನು ಸಮಾಧಿ ಒಳ ಭಾಗಕ್ಕೆ ಹೋದಂತೆಲ್ಲ ಸ್ಥಳಾವಕಾಶ ವಿಶಾಲವಾಗುತ್ತದೆ.
* ಕ್ರಿಯಾ ಸಮಾಧಿಗೆ ಗುಂಡಿ ತೆಗೆದ ಮೆಲೆ ಒಳಗೆ ಗೋಡೆ ಇರುತ್ತದಲ್ಲಾ ಅವುಗಳನ್ನು ಮೊದಲಿಗೆ ತುಂಬ ನಯ ಮಾಡಿಕೊಳ್ಳಲಾಗುತ್ತದೆ. ಅದಕ್ಕೆ ಸುಣ್ಣ ಮತ್ತು ವಿಭೂತಿ ಹಚ್ಚಲಾಗುತ್ತದೆ.
* ಮೃತರ ಶರೀರವನ್ನು ಸಮಾಧಿಯೊಳಗೆ ಕೂರಿಸುವ ಮೊದಲಿಗೆ ಸಮಾಧಿಗೆ ಪೂಜೆ ಮಾಡಲಾಗುತ್ತದೆ. ಇನ್ನು ಮೃತರಿಗೆ ಪುಣ್ಯ ನದಿಗಳ ನೀರಿನ ಸ್ನಾನ, ಹೊಸ ವಸ್ತ್ರ ಧಾರಣೆ ಮಾಡಿ, ಪದ್ಮಾಸನ ಸ್ಥಿತಿಯಲ್ಲಿ ಕೂರಿಸಿ, ಪೂಜೆ ಮಾಡಿ, ಕ್ರಿಯಾ ಸಮಾಧಿ ಬಳಿ ಮೆರವಣಿಗೆಯಲ್ಲಿ ತರಲಾಗುತ್ತದೆ.
ತಮ್ಮ ಸಮಾಧಿಯ ನಿರ್ಮಾಣಕ್ಕೆ ತಾವೇ ಅಡಿಗಲ್ಲು ಹಾಕಿದ್ದ ಸಿದ್ದಗಂಗಾಶ್ರೀಗಳು!
ಕೊರಳಿಗೆ ಇಷ್ಟ ಲಿಂಗ ಕಟ್ಟುತ್ತಾರೆ
* ಸ್ಥಳದಲ್ಲಿಯೇ ಒಬ್ಬರು ಹಿರಿಯ ಸನ್ಯಾಸಿಗೆ ಕ್ರಿಯಾಮೂರ್ತಿಯ ಗೌರವ ಸಿಗುತ್ತದೆ. ಆ ನಂತರ ನಡೆಯುವುದು ವಿವಿಧ ಕಳ ಪೂಜೆ, ಪುಣ್ಯಾಹ, ನಾಂದಿ, ಗುರುಗಳ ಸ್ಮರಣೆ. ಈ ಎಲ್ಲ ಪದ್ಧತಿಗಳು ಏಕೋವಿಂಶತಿ ಮಹೇಶ್ವರ ಪೂಜೆ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
* ಮೃತರು ಪೂಜಿಸುತ್ತಾ ಬಂದ ಇಷ್ಟಲಿಂಗಕ್ಕೆ ಪೂಜೆ ಮಾಡಿ, ಅದನ್ನು ಅವರ ಕೊರಳಿಗೆ ಕಟ್ಟುತ್ತಾರೆ.
ವಿಭೂತಿ-ಉಪ್ಪಿನಿಂದ ಮುಚ್ಚಲಾಗುತ್ತದೆ
* ಮೃತರ ಶರೀರವನ್ನು ಸಮಾಧಿಯೊಳಗೆ ಇಳಿಸಿ, ವಿಭೂತಿ ಹಾಗೂ ಉಪ್ಪಿನಿಂದ ಮುಚ್ಚಲಾಗುತ್ತದೆ. ಶಿವ ಪಂಚಾಕ್ಷರಿ ಮಂತ್ರ ಬರೆದ ನೂರೆಂಟು ತಾಮ್ರದ ಯಂತ್ರಗಳನ್ನು ಸಮಾಧಿಯ ನಾಲ್ಕು ಗೋಡೆಗೆ ಹಾಕಲಾಗುತ್ತದೆ. ಇನ್ನು ಒಂದು ಯಂತ್ರವನ್ನು ಮೃತರ ಪಾರ್ಥಿವ ಶರೀರದ ಬಾಯೊಳಗೆ ಇಡಲಾಗುತ್ತದೆ.
* ಮೃತರ ಶರೀರವನ್ನು ಸಂಪೂರ್ಣ ಮುಚ್ಚುವ ಮೊದಲಿಗೆ ಅವರ ತಲೆಯ ಮೇಲಿನ ಪೇಟವನ್ನು ಉತ್ತರಾಧಿಕಾರಿಗೆ ತೊಡಿಸುತ್ತಾರೆ. ಇನ್ನು ಮುಂದೆ ಯಾವುದೇ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸಿಕೊಂಡು ಹೋಗವ ವಾಗ್ದಾನವನ್ನು ಆ ಉತ್ತರಾಧಿಕಾರಿಯು ಎಲ್ಲರ ಮುಂದೆ ನೀಡುತ್ತಾರೆ.