ಬದುಕು ಬದಲಿಸಿದ ಕೊರೊನಾ ವೈರಸ್; ಗೇಟ್ ಕಾದರೆ ಸಂಬಳ ಸಿಗುವುದಿಲ್ಲ!
ಮುಂಬೈ, ಮೇ.31: ಭಾರತದ ವಾಣಿಜ್ಯ ನಗರಿ ಮುಂಬೈನಲ್ಲಿ ಬದುಕು ಮೊದಲಿನಂತಿಲ್ಲ. ಮಾರ್ಚ್.24ರ ನಂತರ ಮುಂಬೈ ಚಿತ್ರಣ ಬದಲಾಗಿದೆ. ಹಸಿವಿನ ಚೀಲ ತುಂಬಿಸಿಕೊಳ್ಳಲು ಪರಿಶ್ರಮಿಸುತ್ತಿದ್ದ ಕಾರ್ಮಿಕರು ಹೊತ್ತಿನ ಊಟಕ್ಕೂ ಪರಿತಪಿಸುವಂತಾ ಸ್ಥಿತಿ ನಿರ್ಮಾಣವಾಗಿದೆ.
Recommended Video
ಊರು ಬಿಟ್ಟು ಊರಿಗೆ ಬಂದು ಬದುಕು ಕಟ್ಟಿಕೊಂಡಿದ್ದ ಸೆಕ್ಯೂರಿಟಿ ಗಾರ್ಡ್ ಗಳಿಗೆ ಕೆಲಸ ಮೊದಲಿಗಿಂತಲೂ ಕಷ್ಟವಾಗುತ್ತಿದೆ. ಕೊರೊನಾ ವೈರಸ್ ಸೋಂಕು ಹರಡುವಿಕೆ ಭೀತಿ ನಡುವೆ ಜೀವ ಕೈಯಲ್ಲಿ ಹಿಡಿದು ಕಾರ್ಯ ನಿರ್ವಹಿಸುವಂತಾ ಅನಿವಾರ್ಯತೆ ಸೃಷ್ಟಿಯಾಗಿದೆ.
ತುತ್ತಿನ ಚೀಲ ತುಂಬಿಸಿಕೊಳ್ಳಲು ವಲಸೆ ಹೋದ ಕಾರ್ಮಿಕರಿಗೆಂಥಾ ಶಿಕ್ಷೆ?
ಮಹಾರಾಷ್ಟ್ರ ರಾಜ್ಯವೊಂದರಲ್ಲೇ 65,168 ಮಂದಿಗೆ ಕೊರೊನಾ ವೈರಸ್ ಕನ್ಫರ್ಮ್ ಆಗಿದೆ. 2,197 ಮಂದಿ ಮಹಾಮಾರಿಗೆ ಬಲಿಯಾಗಿದ್ದರೆ, 34,890 ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಈಗಾಗಲೇ 28,081 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಪೈಕಿ 38,442 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಮುಂಬೈನಲ್ಲೇ ಪತ್ತೆಯಾಗಿವೆ.
ಮುಂಬೈನಲ್ಲಿ 'ಸೆಕ್ಯೂರಿಟಿ' ಇಲ್ಲದ ಜೀವನ ಆರಂಭ
ಚೀನಾದಲ್ಲಿ ಜನ್ಮತಾಳಿದ ಕೊರೊನಾ ವೈರಸ್ ಸೋಂಕು ಭಾರತಕ್ಕೆ ಲಗ್ಗೆ ಇಟ್ಟಿದ್ದೇ ತಡ. ಸಾಲು ಸಾಲಾಗಿ ಜನರಿಗೆ ಸೋಂಕು ಹರಡುವುದಕ್ಕೆ ಆರಂಭವಾಯಿತು. ತೀವ್ರ ಮುನ್ನೆಚ್ಚರಿಕೆ ಕ್ರಮವಾಗಿ ಭಾರತದಲ್ಲಿ ಮೊದಲ ಬಾರಿಗೆ ಫೆಬ್ರವರಿ.24ರಂದು ಲಾಕ್ ಡೌನ್ ಘೋಷಿಸಲಾಯಿತು. ಯಾರೊಬ್ಬರು ಅನಗತ್ಯವಾಗಿ ಹೊರಗಡೆ ಸಂಚರಿಸುವಂತಿಲ್ಲ ಎಂಬ ಕಟ್ಟುನಿಟ್ಟಿನ ಆದೇಶ ಕೇಂದ್ರ ಸರ್ಕಾರದಿಂದ ಹೊರ ಬಿದ್ದಿತು. ಅಂದಿನಿಂದ ಇಂದಿನವರೆಗೂ ಮುಂಬೈನಲ್ಲಿ ಸೆಕ್ಯೂರಿಟಿ ಗಾರ್ಡ್ ಕಾರ್ಯವೈಖರಿ ಮತ್ತು ಅವಧಿ ಸಂಪೂರ್ಣ ಬದಲಾಗಿ ಹೋಗಿದೆ.
ಫೆ.24ಕ್ಕೂ ಮುನ್ನ ಹೀಗಿತ್ತು ಭದ್ರತಾ ಸಿಬ್ಬಂದಿ ಬದುಕು
ಮುಂಬೈನಲ್ಲಿ ಫೆಬ್ರವರಿ.24ರ ಲಾಕ್ ಡೌನ್ ಘೋಷಣೆಗೂ ಮೊದಲು ಸೆಕ್ಯೂರಿಟಿ ಗಾರ್ಡ್ ಕೆಲಸ ಬಲು ಸರಳವಾಗಿತ್ತು. ಕಟ್ಟಡವನ್ನು ಕಾಯುವುದು, ಅಪಾರ್ಟ್ ಮೆಂಟ್ ಗಳಲ್ಲಿ ವಾಸಿಸುವವರ ಕಾರ್ ತೊಳೆಯುವುದು, ಕಟ್ಟಡಕ್ಕೆ ಪ್ರತಿನಿತ್ಯ ಭೇಟಿ ನೀಡುವ ಜನರ ಹೆಸರು ಮತ್ತು ವಿಳಾಸವನ್ನು ನಮೂದಿಸಿಕೊಳ್ಳುವುದು. 12 ಗಂಟೆಗಳ ಈ ಕಾರ್ಯಕ್ಕೆ ತಿಂಗಳಿಗೆ ಕನಿಷ್ಠ 10,000 ರೂಪಾಯಿ ವೇತನ ಸಿಗುತ್ತಿತ್ತು. ಮುಂಬೈನಲ್ಲಿ ಸೆಕ್ಯೂರಿಟಿ ಗಾರ್ಡ್ ಗಳ ಬದುಕು ಸರಳ-ಸುಂದರ-ಸುಲಲಿತವಾಗಿ ಸಾಗಿತ್ತು.
ಲಾಕ್ ಡೌನ್ ಭಾರತದಲ್ಲಿ ದುಗ್ಗಾಣಿ ಇಲ್ಲದೇ ದಕ್ಕಿದ್ದು ದುಃಖ ಮಾತ್ರ!
ಫೆ.24 ಮರುದಿನವೇ ಬದಲಾಯಿತು ವಾಣಿಜ್ಯ ನಗರಿ ಚಿತ್ರಣ
ಭಾರತದಲ್ಲಿ ಫೆಬ್ರವರಿ.24ರ ನಂತರ ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ಸೆಕ್ಯೂರಿಟಿ ಗಾರ್ಡ್ ಗಳ ಜೀವನ ಮತ್ತು ಕಾರ್ಯಶೈಲಿಯು ಸಂಪೂರ್ಣ ಬದಲಾಯಿತು. ದಿನದ 24 ಗಂಟೆಗಳೂ ನಾವು ಕಟ್ಟಡಗಳ ಬಾಗಿಲನ್ನು ಬಂದ್ ಮಾಡಬೇಕಿತ್ತು. ಪ್ರತಿಯೊಬ್ಬ ಡೆಲಿವೆರಿ ಬಾಯ್ಸ್ ನ್ನು ಗೇಟಿನ ಹೊರಗೆ ತಡೆದು ಅವರ ಕೈಗೆ ಸ್ಯಾನಿಟೈಸರ್ ಹಚ್ಚುವುದು. ಡೆಲಿವೆರಿ ಪ್ಯಾಕೇಟ್ ಗಳನ್ನು ಸೆಕ್ಯೂರಿಟಿ ಗಾರ್ಡ್ ಗಳೇ ಇಟ್ಟುಕೊಂಡು ಮಾಲೀಕರು ಬಂದಾಗ ಅವುಗಳನ್ನು ನೀಡುವ ಹೊಣೆಯನ್ನು ಹೊತ್ತುಗೊಳ್ಳಬೇಕಾಯಿತು. ಇಷ್ಟೆಲ್ಲ ಹೆಚ್ಚುವರಿ ಕಾರ್ಯಕ್ಕೆ ಒಂದು ಬಾರಿ 3,000 ರೂಪಾಯಿ ಬೋನಸ್ ನೀಡಿದ್ದಾರೆ ಅಷ್ಟೇ ಎಂದು ಸ್ವತಃ ಸೆಕ್ಯೂರಿಟಿ ಗಾರ್ಡ್ ಆಗಿರುವ ಸತ್ಪಾಲ್ ಪಾಲ್ ತಮ್ಮ ನೋವು ತೋಡಿಕೊಂಡಿದ್ದಾರೆ.
ಕನಿಷ್ಠ ವೇತನದ ಉದ್ಯೋಗದಿಂದ ಬದುಕಿಗಿಲ್ಲ ಭದ್ರತೆ
ಮುಂಬೈನಲ್ಲಿ ವಾಚ್ ಮೆನ್ ಗಳಾಗಿ, ಸೆಕ್ಯೂರಿಟಿ ಗಾರ್ಡ್ ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಅದೆಷ್ಟೋ ಜನರಿಗೆ ಮುಂಬೈ ಹೌಸಿಂಗ್ ಸೊಸೈಟಿಯು ಉದ್ಯೋಗ ಭದ್ರತೆಯನ್ನು ನೀಡಿದೆ. ಆದರೆ ಕನಿಷ್ಠ ವೇತನದಲ್ಲಿ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಮುಂಬೈನಂತಾ ನಗರದಲ್ಲಿ ಜೀವನ ರೂಪಿಸಿಕೊಳ್ಳುವುದಕ್ಕೆ 10,000 ರೂಪಾಯಿ ವೇತನ ಯಾವುದಕ್ಕೂ ಸಾಕಾಗುವುದಿಲ್ಲ. ಇದರ ನಡುವೆ ಲಾಕ್ ಡೌನ್ ಘೋಷಣೆಯಿಂದ ಮತ್ತಷ್ಟು ಆತಂಕ ಸೃಷ್ಟಿಯಾಗಿದ್ದು, ಸಾವಿರಾರು ವಲಸೆ ಕಾರ್ಮಿತರು ತಮ್ಮ ತಮ್ಮ ಊರುಗಳಿಗೆ ವಾಪಸ್ ತೆರಳಿದ್ದಾರೆ.
50 ಲಕ್ಷ ವಲಸೆ ಕಾರ್ಮಿಕರನ್ನು 'ಗೂಡು' ಮುಟ್ಟಿಸಿದ ಶ್ರಮಿಕ್ ರೈಲು!
"ನಾನೂ ಆದಷ್ಟು ಬೇಗ ವಾಪಸ್ ಊರಿಗೆ ಹೋಗುತ್ತೇನೆ"
ಸೆಕ್ಯೂರಿಟಿ ಗಾರ್ಡ್ ಗಳಿಗೆ ತಮ್ಮ ಕರ್ತವ್ಯದ ಜೊತೆಗೆ ಹೊಸ ಜವಾಬ್ದಾರಿಯನ್ನು ವಹಿಸಲಾಗಿದೆ. ಕಟ್ಟಡದೊಳಗೆ ಇರುವ ಪ್ರತಿಯೊಬ್ಬರನ್ನು ಕೊರೊನಾ ವೈರಸ್ ಸೋಂಕು ಹರಡುವುದರಿಂದ ರಕ್ಷಿಸುವುದು ನಮ್ಮ ಜವಾಬ್ದಾರಿ. ಆದರೆ ಪ್ರತಿನಿತ್ಯ ನಾವು ಹೊರಗಿನವರ ಜೊತೆಗೆ ಸಂಪರ್ಕ ಹೊಂದಬೇಕಾಗಿರುತ್ತದೆ. ಇದರಿಂದ ತಮ್ಮ ಜೀವಕ್ಕೆ ಎಲ್ಲಿ ಕುತ್ತು ಬರುತ್ತದೆಯೋ ಎಂಬ ಆತಂಕ ಕಾಡುತ್ತಿದ್ದು, ಆದಷ್ಟು ಬೇಗ ತಾವೂ ಕೂಡಾ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿರುವ ತಮ್ಮೂರಿಗೆ ವಾಪಸ್ ಹೋಗುತ್ತೇನೆ ಎಂದು 34 ವರ್ಷದ ಸತ್ಪಾಲ್ ಹೇಳಿದ್ದಾರೆ.
ನಾಲ್ಕು ಕಟ್ಟಡಗಳನ್ನು ಕಾಯುವುದಕ್ಕೆ ಒಬ್ಬ ವಾಚ್ ಮೆನ್
ಮುಂಬೈನಲ್ಲಿ ಅಂಧೇರಿ ಪ್ರದೇಶದಲ್ಲಿ ನಾಲ್ಕು ಕಟ್ಟಡಗಳನ್ನು ಕಾಯುವುದಕ್ಕಾಗಿ ಒಬ್ಬ ಸೆಕ್ಯೂರಿಟಿ ಗಾರ್ಡ್ ನ್ನು ನೇಮಿಸಲಾಗಿದೆ. ಮಧ್ಯಪ್ರದೇಶ ಸತ್ನಾ ಮೂಲದ 20 ವರ್ಷದ ಸೆಕ್ಯೂರಿಟಿ ಗಾರ್ಡ್ ಆಗಿರುವ ಸುದಂಶು ಪಾಂಡೆ ಕೂಡಾ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಭಾರತ ಲಾಕ್ ಡೌನ್ ನಂತರದಲ್ಲಿ ಈ ಪ್ರದೇಶದಲ್ಲಿ ನಿರಂತರ ಜಾಗರೂಕತೆಯಿಂದ ಕಾರ್ಯ ನಿರ್ವಹಿಸುವಂತಾ ಅನಿವಾರ್ಯತೆ ಸೃಷ್ಟಿಯಾಗಿದೆ ಎನ್ನುವುದು ಸದಂಶು ಪಾಂಡೆ ಮಾತು.
ಕೆಮ್ಮಿದರೆ, ಕ್ಯಾಕರಿಸಿದರೆ ಹೋಗುತ್ತೆ ಉದ್ಯೋಗ!
ನಾವು ಇಲ್ಲಿನ ಜನರನ್ನು ಸುರಕ್ಷಿತವಾಗಿ ನೋಡಿಕೊಂಡಂತೆ ಇಲ್ಲಿ ನಾನು ಅನಾರೋಗ್ಯಕ್ಕೆ ತುತ್ತಾದರೆ ನಮ್ಮನ್ನು ಕಾಳಜಿ ಮಾಡುವವರು ಯಾರೂ ಇಲ್ಲ. ಒಂದು ವೇಳೆ ನಮಗೆ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡರೆ ನಮ್ಮನ್ನು ಉದ್ಯೋಗದಿಂದಲೇ ತೆಗೆದುಹಾಕುತ್ತಾರೆ. ಏಕೆಂದರೆ ಜನರು ಈಗಾಗಲೇ ಕೊರೊನಾ ವೈರಸ್ ನಿಂದ ಸಾಕಷ್ಟು ಹೆದರಿದ್ದಾರೆ. ಆದ್ದರಿಂದ ಕಟ್ಟಡದ ನಿವಾಸಿಗಳ ಎದುರಿನಲ್ಲಿ ಆದಷ್ಟು ನಾನು ಸಹಜವಾಗಿ ಕೆಮ್ಮುವುದನ್ನು ನಿಯಂತ್ರಿಸಲು ಪ್ರಯತ್ನಿಸುತ್ತೇನೆ. ಅದೆಷ್ಟೋ ಬಾರಿ ಅಪಾರ್ಟ್ ಮೆಂಟ್ ಗಳಲ್ಲಿ ವಾಸಿಸುವವರಿಗೆ ಬರುವ ಪಾರ್ಸಲ್ ಗಳನ್ನು ಸ್ವತಃ ತಾವೇ ತೆಗೆದುಕೊಂಡು ಹೋಗಿ ಕೊಡಬೇಕಾಗುತ್ತದೆ ಅಂತಾರೆ ಸೆಕ್ಯೂರಿಟಿ ಗಾರ್ಡ್ ಆಗಿರುವ ಸದಂಶು ಪಾಂಡೆ.
ಊರಿನ ದಾರಿ ಕಾಯುತ್ತಿರುವ ಸೆಕ್ಯೂರಿಟಿ ಗಾರ್ಡ್
ದೇಶಾದ್ಯಂತ ವಲಸೆ ಕಾರ್ಮಿಕರನ್ನು ಗೂಡು ಸೇರಿಸುವುದಕ್ಕೆ ಶ್ರಮಿಕ್ ರೈಲುಗಳ ವ್ಯವಸ್ಥೆ ಕಲ್ಪಿಸುತ್ತಿದ್ದಂತೆ ತಮ್ಮ ತಂದೆ ಟಿಕೆಕ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ನನ್ನಲ್ಲಿ ಕೊರೊನಾ ವೈರಸ್ ಗೆ ಸಂಬಂಧಿಸಿದ ಯಾವುದೇ ರೀತಿಯ ಲಕ್ಷಣಗಳಿಲ್ಲ ಎನ್ನುವುದಕ್ಕೆ ವೈದ್ಯಕೀಯ ಪ್ರಮಾಣಪತ್ರವನ್ನೂ ಸಲ್ಲಿಸಿದ್ದೇನೆ. ನನಗೆ ರೈಲ್ವೆ ಟಿಕೆಟ್ ಸಿಕ್ಕಿದೆ ಎಂಬ ಸಂದೇಶವನ್ನೇ ಎದುರು ನೋಡುತ್ತಿದ್ದೇನೆ. ಒಮ್ಮೆ ನಾನು ಮಧ್ಯಪ್ರದೇಶದ ಸತ್ನಾಗೆ ತೆರಳಿದರೆ ಮುಂಬೈನಲ್ಲಿ ಪರಿಸ್ಥಿತಿ ಸಂಪೂರ್ಣ ತಿಳಿಯಾಗುವವರೆಗೂ ಈ ಕಡೆಗೆ ವಾಪಸ್ ಬರುವುದೇ ಇಲ್ಲ ಎನ್ನುವುದು ಸದಂಶು ಪಾಂಡೆ ಮಾತಾಗಿದೆ.
ಸ್ಥಳೀಯರಿಗೆ ದಕ್ಕಿದ ಸೆಕ್ಯೂರಿಟಿ ಗಾರ್ಡ್ ಉದ್ಯೋಗ
ಇನ್ನು, ಮುಂಬೈನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ಅದೆಷ್ಟೋ ಮಂದಿ ಕೊರೊನಾ ವೈರಸ್ ಗೆ ಹೆದರಿ ತಮ್ಮೂರಿಗೆ ವಾಪಸ್ ಆಗಿದ್ದಾರೆ. ಇದರಿಂದ ಸ್ಥಳೀಯರು ಸೆಕ್ಯೂರಿಟಿ ಗಾರ್ಡ್ ಉದ್ಯೋಗವನ್ನು ಮಾಡುತ್ತಿದ್ದಾರೆ. ಅಂಥದ್ದೇ ಘಟನೆಗೆ ಉದಾಹರಣೆಯೇ 27 ವರ್ಷದ ಗಣೇಶ್ ಕರ್ಕಿ. ಬಹುತೇಕರು ಲಾಕ್ ಡೌನ್ ನಿಂದ ಉದ್ಯೋಗ ಕಳೆದುಕೊಂಡರೆ, ಇವರಿಗೆ ಲಾಕ್ ಡೌನ್ ಘೋಷಣೆ ಬಳಿಕ ಸೆಕ್ಯೂರಿಟಿ ಗಾರ್ಡ್ ಉದ್ಯೋಗವು ಅರಿಸಿ ಬಂತು.
ನೇಪಾಳದಿಂದ ಬಂದು ಭಾರತದಲ್ಲಿ ಸಿಲುಕಿದವರಿಗೆ ಉದ್ಯೋಗ
ಫೆಬ್ರವರಿ ಮಧ್ಯಭಾಗದಲ್ಲಿ ರಜೆ ದಿನಗಳನ್ನು ಕಳೆಯುವುದಕ್ಕಾಗಿ ಮುಂಬೈನಲ್ಲಿರುವ ಸಹೋದರನ ನಿವಾಸಕ್ಕೆ ಗಣೇಶ್ ಕರ್ಕಿ ಮುಂಬೈನಿಂದ ಆಗಮಿಸಿದ್ದರು. ಫೆ.24ರಂದು ಭಾರತದಲ್ಲಿ ಲಾಕ್ ಡೌನ್ ಘೋಷಣೆ ಆಗುತ್ತಿದ್ದಂತೆ ರೈಲ್ವೆ, ವಿಮಾನ ಸಂಚಾರಗಳೆಲ್ಲ ಬಂದಾದವು. ನಂತರ ಗಣೇಶ್ ಮುಂಬೈನಲ್ಲಿಯೇ ಸಿಲುಕಿಕೊಂಡರು. ಈ ಹಿನ್ನೆಲೆ ತಾತ್ಕಾಲಿಕ ಉದ್ಯೋಗ ಹುಡುಕುತ್ತಿದ್ದ ಸಂದರ್ಭದಲ್ಲಿ ಸೆಕ್ಯೂರಿಟಿ ಗಾರ್ಡ್ ಉದ್ಯೋಗವು ಸಿಕ್ಕಿದೆ. ಆದರೆ ಈ ಉದ್ಯೋಗಕ್ಕೆ ತಿಂಗಳಿಗೆ 9,000 ವೇತನ ನೀಡುತ್ತಿದ್ದು, ಯಾವುದಕ್ಕೂ ಸಂಬಳ ಸಾಕಾಗುತ್ತಿಲ್ಲ. ನೇಪಾಳದಲ್ಲಿ ರೈತರು ಇದಕ್ಕಿಂತ ಅಧಿಕ ವೇತನವನ್ನು ಸಂಪಾದಿಸುತ್ತಾರೆ. ನೇಪಾಳ ಸರ್ಕಾರಕ್ಕೆ ತಮ್ಮನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿಕೊಂಡಿದ್ದು, ಆದಶಷ್ಟು ಬೇಗನೇ ತಮ್ಮೂರಿಗೆ ವಾಪಸ್ ಹೋಗುವುದಾಗಿ ಗಣೇಶ್ ಕರ್ಕಿ ಬೇಸರದಲ್ಲೇ ಹೇಳುತ್ತಿದ್ದಾರೆ.
"ಯುದ್ಧದಲ್ಲಿ ಬೆನ್ನು ಮಾಡಿ ಹೋಗುವುದು ಸೈನಿಕರ ಲಕ್ಷಣವಲ್ಲ"
ಮುಂಬೈನಲ್ಲಿ ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಈ ಸಂದರ್ಭವನ್ನು ಯೋಧರಂತೆ ನಿಂತು ಎದುರಿಸಬೇಕಿದೆ. ಅದನ್ನು ಬಿಟ್ಟು ಯುದ್ಧದಲ್ಲಿ ಬೆನ್ನು ತೋರಿಸಿ ಎಂದಿಗೂ ಓಡಿ ಹೋಗುವುದಿಲ್ಲ ಎಂದು ಸೆಕ್ಯೂರಿಟಿ ಗಾರ್ಡ್ ಆಗಿರುವ 40 ವರ್ಷದ ಭರತ್ ತಿವಾರಿ ಹೇಳಿದ್ದಾರೆ. ಮಧ್ಯಪ್ರದೇಶ ರೇವಾನಲ್ಲಿ ತಮ್ಮ ಪತ್ನಿ ಹಾಗೂ ಮಕ್ಕಳು ನನಗಾಗಿ ಕಣ್ಣೀರು ಹಾಕುತ್ತಿದ್ದಾರೆ. ವಾಪಸ್ ತೆರಳುವಂತೆ ಅಂಗಲಾಚುತ್ತಿದ್ದಾರೆ. ಆದರೆ ಕೊರೊನಾ ವೈರಸ್ ಸೋಂಕಿಗೆ ಹೆದರಿ ಓಡಿ ಹೋಗುವ ಜಾಯಮಾನ ನನ್ನದಲ್ಲ.
24 ಗಂಟೆಗಳ ಕಾಲ ಉದ್ಯೋಗ ಮಾಡುತ್ತಿರುವ ಭರತ್ ತಿವಾರಿ
ಮುಂಬೈನ ಎರಡು ಕಡೆಗಳಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಮನೋಜ್ ತಿವಾರಿ ಉದ್ಯೋಗ ಮಾಡುತ್ತಿದ್ದಾರೆ. ದಿನದ 24 ಗಂಟೆಗಳ ಕಾಲ ಸೆಕ್ಯೂರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮನೋಜ್ ಅವರಿಗೆ ಒಂದು ಕಡೆಯಲ್ಲಿ 5,000 ವೇತನ ನೀಡಿದರೆ, ಇನ್ನೊಂದು ಕಡೆಯಲ್ಲಿ 6,000 ರೂಪಾಯಿ ವೇತನ ನೀಡಲಾಗುತ್ತಿದೆ. ಕಳೆದ ಹಲವು ದಿನಗಳಿಂದಲೂ ವೇತನ ಹೆಚ್ಚಳಕ್ಕಾಗಿ ಮನವಿ ಮಾಡಿಕೊಳ್ಳುತ್ತಿದ್ದರೂ ಯಾರೊಬ್ಬರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದರ ನಡುವೆ ಸ್ಯಾನಿಟೈಸರ್ ನ್ನು ಕೂಡಾ ನಾನು ಸ್ವಂತ ಹಣದಲ್ಲಿ ತೆಗೆದುಕೊಳ್ಳುತ್ತಿದ್ದೇನೆ. ಏಕೆಂದರೆ ಈ ಮೊದಲು ಅಪಾರ್ಟ್ ಮೆಂಟ್ ನಲ್ಲಿರುವವರು ಒಂದು ಸ್ಯಾನಿಟೈಸರ್ ಕೊಡಿಸುವುದಕ್ಕೆ ಐದು ದಿನ ತೆಗೆದುಕೊಂಡಿದ್ದರು. ಹೀಗಾಗಿ ಈ ಬಾರಿ ನಾನು ನನ್ನ ಸ್ವಂತ ಹಣದಲ್ಲಿ ಸ್ಯಾನಿಟೈಸರ್ ಖರೀದಿಸಿದ್ದೇನೆ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.