Interesting Economics: ಮರಡೋನಾ ಥಿಯರಿ: ಹಣದುಬ್ಬರ ಇಟ್ಟುಕೊಂಡು ಆರ್ಬಿಐ ಜಾಣ್ಮೆ ಆಟ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಇತ್ತೀಚೆಗೆ ದ್ವೈಮಾಸಿಕ ಅವಧಿಗೆ ಒಂದಷ್ಟು ಕ್ರಮಗಳನ್ನ ಪ್ರಕಟಿಸಿತು. ಇದಕ್ಕೆ ಮುನ್ನ ಸತತ 10 ಬಾರಿ ಯಥಾಸ್ಥಿತಿ ಕಾಪಾಡಿಕೊಂಡು ಬರಲಾಗಿದ್ದ ರೆಪೋ ಮತ್ತು ರಿವರ್ಸ್ ರೆಪೋ ದರಗಳನ್ನು ಈ ಬಾರಿ ಏರಿಕೆ ಮಾಡಬಹುದು ಎಂದು ಕೆಲ ವಲಯಗಳಲ್ಲಿ ನಿರೀಕ್ಷೆ ಇತ್ತು. ಆದರೆ, 11ನೇ ಬಾರಿಯೂ ರೆಪೋ ಮತ್ತು ರಿವರ್ಸ್ ರೆಪೋ ದರದಲ್ಲಿ ಆರ್ಬಿಐ ಬದಲಾವಣೆ ಮಾಡಲಿಲ್ಲ.
ಆದರೆ, ಇನ್ನೊಂದು ಗಮನಾರ್ಹ ನಿರ್ಧಾರವನ್ನು ಆರ್ಬಿಐ ತೆಗೆದುಕೊಂಡಿತ್ತು. ಹಣದುಬ್ಬರದ ಗುರಿಯನ್ನು ಪರಿಷ್ಕರಿಸಿ ಶೇ. 5.7ರಷ್ಟಿದ್ದ ಗುರಿಯನ್ನು ಶೇ. 6.3ಕ್ಕೆ ಬದಲಾಯಿಸಿತು. ಕಚ್ಚಾತೈಲ ಬೆಲೆ ಹೆಚ್ಚಳವು ಆಹಾರ ಉತ್ಪನ್ನಗಳ ಬೆಲೆ ಮೇಲೆ ಪರಿಣಾಮ ಬೀರಿದ ಹಿನ್ನೆಲೆಯಲ್ಲಿ ಗ್ರಾಹಕ ದರ ಸೂಚಿ (CPI- Consumer Price Index) 2022ರ ಮಾರ್ಚ್ನಲ್ಲಿ ಶೇ. 6.95ಕ್ಕೆ ಬಂದು ನಿಂತಿತ್ತು. ಈ ಪರಿಸ್ಥಿತಿಯನ್ನು ನಿಭಾಯಿಸಲು ರಿಸರ್ವ್ ಬ್ಯಾಂಕ್ ಏನಾದರೂ ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ, ಸೂಕ್ಷ್ಮ ಆರ್ಥಿಕ ಪರಿಸ್ಥಿತಿಯಲ್ಲಿ ತೀರಾ ಕಠಿಣ ಕ್ರಮವನ್ನಂತೂ ತೆಗೆದುಕೊಳ್ಳಲು ಆಗಲ್ಲ, ಬಹಳ ಸಮತೋಲಿತವಾಗಿ ನಡೆ ಇಡಬೇಕಿತ್ತು. ಆರ್ಬಿಐ ಆ ಕೆಲಸ ಮಾಡಿತು.
ಮಾರ್ಚ್ನಲ್ಲಿ ಭಾರತದ ರೀಟೇಲ್ ಹಣದುಬ್ಬರ ಶೇ6.95ಕ್ಕೇರಿಕೆ!
ಆರ್ಥಿಕತೆಯಲ್ಲಿ ಹಣದ ಹರಿವನ್ನು ನಿಯಂತ್ರಿಸಲು ಸಾಮಾನ್ಯವಾಗಿ ಆರ್ಬಿಐ ಬಳಿ ಇರುವ ಅಸ್ತ್ರ ಎಂದರೆ ರೆಪೋ, ರಿವರ್ಸ್ ರೆಪೋ ಮೊದಲಾದ ಬ್ಯಾಂಕ್ ದರಗಳನ್ನು ಏರಿಸುವುದು. ಹೀಗೆ ಬ್ಯಾಂಕ್ ದರ ಏರಿಸಿದರೆ, ಅದರಲ್ಲೂ ರಿವರ್ಸ್ ರೆಪೋ ದರ ಏರಿಸಿದರೆ ಜನರು ತಮ್ಮ ಹಣವನ್ನು ಬ್ಯಾಂಕ್ಗಳಲ್ಲಿ ಠೇವಣಿ ಇರಿಸಲು ಮುಂದಾಗುತ್ತಾರೆ ಎಂಬ ಎಣಿಕೆ ಇರುತ್ತದೆ. ಆದರೆ, ಆರ್ಥಿಕತೆಯಲ್ಲಿನ ಬೇಡಿಕೆ ಈಗಲೂ ನಿರೀಕ್ಷಿತ ಮಟ್ಟಕ್ಕೆ ಬಂದಿಲ್ಲ. ಈ ಹಂತದಲ್ಲಿ ಬ್ಯಾಂಕ್ ದರ ಏರಿಕೆ ಮಾಡಿದರೆ ಅನುಕೂಲಕರ ಸ್ಥಿತಿ ನಿರ್ಮಾಣ ಆಗುವುದು ಕಷ್ಟವಾಗಿತ್ತು.
ಹಣದ ಹರಿವಿಗೆ ಕಡಿವಾಣದ ಉದ್ದೇಶ
ಆದ್ದರಿಂದ ಆರ್ಬಿಐ ತನ್ನ ಜಾಣ್ಮೆಯ ಆಟಕ್ಕೆ ಮುಂದಾಯಿತು. ಹಣದ ಹರಿವಿಗೆ ಕಡಿವಾಣ ಹಾಕುವುದು ಆರ್ಬಿಐನ ಉದ್ದೇಶವಾಗಿತ್ತು. ಅದಕ್ಕಾಗಿ ವೇರಿಯಬಲ್ ರೆಪೋ ರಿವರ್ಸ್ ರೆಪೋ ಹರಾಜು (VRRR Auctions) ಅಸ್ತ್ರ ಪ್ರಯೋಗಿಸುತ್ತಿದೆ. ಈ ಪ್ರಕ್ರಿಯೆ ಮೂಲಕ ಆರ್ಥಿಕತೆಯಲ್ಲಿ ಚಾಲನೆಯಲ್ಲಿರುವ ಹಣದಲ್ಲಿ 5 ಲಕ್ಷ ಕೋಟಿ ರೂ ಹಣವನ್ನು ಸೆಳೆದುಕೊಳ್ಳುವುದು ಆರ್ಬಿಐ ಗುರಿ.
ಆರ್ಬಿಐನ ಈ ವಿಆರ್ಆರ್ಆರ್ ಹರಾಜು ವಿಚಾರ ಬರುತ್ತಲೇ ಜನರು ಸರಕಾರಿ ಬಾಂಡ್ಗಳ (Government Bonds) ಮೇಲೆ ಹೂಡಿಕೆ ಮಾಡಲು ಮುಂದಾದರು. ನಿನ್ನೆ ಒಂದೇ ದಿನ ಬಾಂಡ್ ಮೌಲ್ಯ ಶೇ. 6.91 ರಿಂದ ಶೇ. 7.29ಕ್ಕೆ ಹೆಚ್ಚಾಯಿತು. ಬ್ಯಾಂಕ್ನಲ್ಲಿನ ಠೇವಣಿಯಿಂದ ಸಿಗುವ ಬಡ್ಡಿಗಿಂತ ಹೆಚ್ಚು ಹಣ ಸರಕಾರಿ ಬಾಂಡ್ಗಳಿಂದ ಜನರಿಗೆ ಸಿಗುತ್ತಿದೆ.
ಲಭ್ಯ ಇರುವ ವಸ್ತು ಅಲ್ಪ ಪ್ರಮಾಣ
ಕೆಲ ಅರ್ಥಶಾಸ್ತ್ರಜ್ಞರ ಪ್ರಕಾರ, ಲಭ್ಯ ಇರುವ ವಸ್ತು ಅಲ್ಪ ಪ್ರಮಾಣದಲ್ಲಿದ್ದು, ಅದನ್ನ ಕೊಳ್ಳಲು ಹಣದ ಹರಿವು ಹೆಚ್ಚಾಗಿದ್ದರೆ ಆಗ ಹಣದುಬ್ಬರದ ಸ್ಥಿತಿ ನಿರ್ಮಾಣವಾಗುತ್ತದೆ. ಇದನ್ನ ನಿಯಂತ್ರಿಸಲು ಹಣದ ಹರಿವಿಗೆ ಕಡಿವಾಣ ಹಾಕಬೇಕಾಗುತ್ತದೆ. ಆರ್ಬಿಐ ಈಗ ಮಾಡುತ್ತಿರುವುದೂ ಇದನ್ನೇ.
ಮರಡೋನಾ
ಇನ್ಫ್ಲೇಷನ್
ಥಿಯರಿ:
ಕುತೂಹಲ
ಎಂದರೆ
ಇದನ್ನ
ಮರಡೋನಾ
ಹಣದುಬ್ಬರ
ಥಿಯರಿ
ಎಂದೂ
ಸಾಂಕೇತಿಕವಾಗಿ
ಕರೆಯುತ್ತಾರೆ.
ಮರಡೋನಾ
ಎಂದರೆ
ಅದೇ
ಅರ್ಜೆಂಟೀನಾದ
ಫುಟ್ಬಾಲ್
ಮಾಂತ್ರಿಕ
ಡಿಯಾಗೋ
ಮರಡೋನಾ
(Diego
Maradona)
ಅವರೆ.
ಈ
ಮರಡೋನಾಗೂ
ಹಣದುಬ್ಬರದ
ಥಿಯರಿಗೂ
ಎತ್ತಣದಿಂದೆತ್ತಣ
ಸಂಬಂಧ
ಎನಿಸಬಹುದು.
ಸಂಬಂಧ
ಇದೆ.
ಗೋಲ್ ಆಫ್ ದ ಸೆಂಚುರಿ ನೆನಪಿಸಿಕೊಳ್ಳಿ:
ಡಿಯಾಗೋ ಮರಡೋನಾ ವಿಶ್ವದ ಸರ್ವಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರು. 1986ರ ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯ ಅರ್ಜೆಂಟೀನಾ ಮತ್ತು ಇಂಗ್ಲೆಂಡ್ ನಡುವೆ ನಡೆದಿತ್ತು. ಅದರಲ್ಲಿ ಮರಡೋನಾ ಗಳಿಸಿದ ಒಂದು ಗೋಲು 'ಶತಮಾನದ ಗೋಲು' ಎಂದು ಪರಿಗಣಿಸಾಗಿದೆ. ಮರಡೋನಾ ಅವರು ಐವರು ಇಂಗ್ಲೆಂಡ್ ಡಿಫೆಂಡರ್ಗಳನ್ನು ತಮ್ಮ ಡ್ರಿಬ್ಲಿಂಗ್ ಮೂಲಕ ವಂಚಿಸಿ ಗೋಲು ಗಳಿಸಿದ್ದರು. ಫುಟ್ಬಾಲ್ನಲ್ಲಿ ಡ್ರಿಬ್ಲಿಂಗ್ ಎಂದರೆ ಸಾಮಾನ್ಯವಾಗಿ ಚೆಂಡು ಹೊಂದಿರುವ ಆಟಗಾರ ಅತಿಂದಿತ್ತ ಸರಿಸುತ್ತಾ ಎದುರಾಳಿ ಆಟಗಾರರನ್ನು ವಂಚಿಸುತ್ತಾ ಮುನ್ನಡೆಯುತ್ತಾರೆ. ಆದರೆ, ಮರಾಡೋನಾ ನೇರವಾಗಿ ಸಾಗಿ ಹೋಗಿದ್ದರು. ಆದರೂ ಕೂಡ ಅವರನ್ನು ಮುನ್ನಡೆಯನ್ನು ತಡೆಯಲು ಐವರು ಡಿಫೆಂಡರ್ಸ್ ಮಾಡಿದ ಪ್ರಯತ್ನ ವಿಫಲವಾಯಿತು. ಇದು ಹೇಗೆ ಸಾಧ್ಯವಾಯಿತು? ಇದನ್ನ ಗೋಲ್ ಆಫ್ ದ ಸೆಂಚುರಿ ಎಂದು ಬಣ್ಣಿಸಲಾಗುತ್ತದೆ.
2005ರಲ್ಲಿ ಇಂಗ್ಲೆಂಡ್ನ ಸೆಂಟ್ರಲ್ ಬ್ಯಾಂಕ್ ಗವರ್ನರ್ ಮೆರ್ವಿನ್ ಕಿಂಗ್ ಅವರು ಈ ಗೋಲನ್ನು ಆಧುನಿಕ ಆರ್ಥಿಕತೆಯ ಒಳಸುಳಿಗಳಿಗೆ ಹೋಲಿಕೆ ಮಾಡಿ ವ್ಯಾಖ್ಯಾನಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ಮೆರ್ವಿನ್ ಕಿಂಗ್ ವಿಶ್ಲೇಷಣೆ
"ಮರಡೋನಾ 60 ಯಾರ್ಡ್ನಷ್ಟು ದೂರ ಮುನ್ನುಗ್ಗುತ್ತಾ ಐವರು ಆಟಗಾರರನ್ನು ವಂಚಿಸಿ ಗೋಲು ಭಾರಿಸಿದರು. ನೇರವಾಗಿ ಸಾಗಿದ ಮರಡೋನಾ ಡಿಫೆಂಡರ್ಗಳನ್ನು ಏಮಾರಿಸಲು ಹೇಗೆ ಸಾಧ್ಯವಾಯಿತು? ಇದಕ್ಕೆ ಉತ್ತರ ಎಂದರೆ ಇಂಗ್ಲೆಂಡ್ನ ಡಿಫೆಂಡರ್ಗಳು ಮರಡೋನಾ ಯಾವ ಕಡೆ ಡ್ರಿಬ್ಲಿಂಗ್ ಮಾಡಬಹುದು ಎಂದು ಅಂದಾಜು ಮಾಡುತ್ತಾ ಪ್ರತಿಕ್ರಿಯಿಸಿದರು. ಮರಡೋನಾ ಎಡಕ್ಕೋ ಅಥವಾ ಬಲಕ್ಕೋ ಡ್ರಿಬ್ಲಿಂಗ್ ಮಾಡಬಹುದು ಎಂಬ ಡಿಫೆಂಡರ್ಸ್ ಅಂದಾಜು ತಪ್ಪಾಗಿತ್ತು. ಮರಡೋನಾ ನೇರವಾಗಿ ಹೋಗಿದ್ದರಿಂದ ಇಂಗ್ಲೆಂಡ್ ಆಟಗಾರರು ಯಾಮಾರಿಹೋಗಿದ್ದರು" ಎಂದು ಮೆರ್ವಿನ್ ಕಿಂಗ್ ವಿಶ್ಲೇಷಿಸಿದ್ದರು.
ಆರ್ಥಿಕತೆಯೂ ಹೀಗೇ ಕೆಲಸ ಮಾಡುತ್ತದೆ:
ಮರಡೋನಾ ಅವರ ಆ ಡ್ರಿಬ್ಲಿಂಗ್ ಕೌಶಲ್ಯದಂತೆಯೇ ಹಣಕಾಸ ನೀತಿಯೂ ಕೆಲಸ ಮಾಡುತ್ತದೆ. ಸೆಂಟ್ರಲ್ ಬ್ಯಾಂಕ್ ಏನು ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಮಾರುಕಟ್ಟೆ ಬಡ್ಡಿ ದರಗಳ ವ್ಯತ್ಯಯ ಆಗುತ್ತದೆ. ಬ್ಯಾಂಕ್ ದರಗಳನ್ನು ಏರಿಸುವ ಬಗ್ಗೆ ಸೆಂಟ್ರಲ್ ಬ್ಯಾಂಕ್ ಮಾತನಾಡಿದರೂ ಸಾಕು ಮಾರುಕಟ್ಟೆ ಕೂಡಲೇ ಸ್ಪಂದಿಸುತ್ತದೆ ಎಂದು ಮೆರ್ವಿನ್ ಕಿಂಗ್ ಅವರು ಹೇಳಿದ್ದರು.
ಈಗ ಆರ್ಬಿಐನ ಹಣಕಾಸು ನೀತಿಯೂ ಇದೇ ಜಾಣತನದಲ್ಲಿ ನಡೆದಿದೆ ಎಂದು ಇಲ್ಲಿನ ಕೆಲ ತಜ್ಞರು ಅಭಿಪ್ರಾಯಪಡುತ್ತಾರೆ. ಆರ್ಬಿಐ ವಿಆರ್ಆರ್ಆರ್ ಹರಾಜಿನ ಬಗ್ಗೆ ಪ್ರಸ್ತಾಪ ಮಾಡುತ್ತಲೇ ಸರಕಾರಿ ಬಾಂಡ್ಗಳಿಗೆ ಬೇಡಿಕೆ ಬಂದಿದೆ. ಸರಕಾರ ತಾತ್ಕಾಲಿಕವಾಗಿ ಮಾರುಕಟ್ಟೆಯಲ್ಲಿನ ಹಣದ ಹರಿವಿಗೆ ಕಡಿವಾಣ ಹಾಕಲು ಇದರಿಂದ ಸಾಧ್ಯವಾಗುತ್ತದೆ.
(ಒನ್ಇಂಡಿಯಾ ಸುದ್ದಿ)