ಭಾರತೀಯರಲ್ಲಿ ದೇಶಭಕ್ತಿ ಕಿಚ್ಚು ಹಚ್ಚಿದ ಮನೋಜ್ ಕುಮಾರ್ ಸಿನಿಮಾಗಳು
ನವದೆಹಲಿ, ಆಗಸ್ಟ್ 9: ಅದು ಪಾಕಿಸ್ತಾನದ ಲಾಹೋರ್ ಮೂಲೆಯಲ್ಲಿ ಒಸಾಮಾ ಬಿನ್ ಲಾಡೆನ್ ಹತ್ಯೆಯಾದ ಸ್ಥಳ. ಇಂದಿಗೂ ಆ ಹೆಸರು ಕೇಳಿದರೆ ಹತ್ಯೆಯ ಕಥೆ ನೆನಪಿಗೆ ಬರುತ್ತದೆ. ಆದರೆ ಅದೇ ಸ್ಥಳದಲ್ಲಿ ಜನಿಸಿದ ಭಾರತೀಯ ಚಿತ್ರಪ್ರೇಮಿಯೊಬ್ಬರು ದೇಶಭಕ್ತಿಗೆ ನೀಡಿದ ಕೊಡುಗೆಯನ್ನು ನಾವು ಸ್ಮರಿಸಿಕೊಳ್ಳಬೇಕಾಗುತ್ತದೆ.
ತಮ್ಮ ಸಿನಿಮಾಗಳ ಮೂಲಕವೇ ಭಾರತೀಯರಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸಿದ ಆ ವ್ಯಕ್ತಿಯದ್ದು 75ರ ಹರೆಯದಲ್ಲೂ ಕುಗ್ಗದ ಉತ್ಸಾಹ. ದೇಶಕ್ಕಾಗಿ ಏನನ್ನಾದರೂ ಮಾಡಬೇಕು ಎಂಬುದೇ ಅವರ ತುಡಿತ. ಲಾಹೋರ್ ನೆಲದಲ್ಲಿ ಜನಿಸಿದ ಆ ವ್ಯಕ್ತಿಯು ಭಾರತದ ಸ್ವಾತಂತ್ರ್ಯ ಪ್ರೇಮಿಗಳ ಮನಸ್ಸು ಗೆದ್ದಿದ್ದು ಹೇಗೆ ಎನ್ನುವುದೇ ಬಲು ರೋಚಕ ಸಂಗತಿ.
ಭಾರತದ ಸ್ವಾತಂತ್ರ್ಯ ಯೋಧರಿಗೆ ಸ್ಪೂರ್ತಿಯಾದ ಕವಿತೆ, ಕಾವ್ಯ ಮತ್ತು ಸಂಗೀತದ ಸಾಲುಗಳು
ಭಾರತದಲ್ಲಿ ಮನರಂಜನೆ ಮೂಲಕವೇ ದೇಶದ ಬಗ್ಗೆ ಭಕ್ತಿಯ ಚಿಲುಮೆ ಚಿಮ್ಮಿಸಿದ ನಾಯಕರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಆ ಹೆಸರೇ ಮನೋಜ್ ಕುಮಾರ್. ಬಾಲಿವುಡ್ ಅಂಗಳದಲ್ಲಿ ಭರತ್ ಕುಮಾರ್ ಆಗಿ ಮಿಂಚು ಹರಿಸಿದ ವ್ಯಕ್ತಿಯ ಜೀವನ ಕಥನದ ಜೊತೆಗೆ ದೇಶಭಕ್ತಿಗೆ ಅವರು ನೀಡಿದ ಕೊಡುಗೆಯ ಕುರಿತು ಒಂದು ವಿಶೇಷ ವರದಿಗಾಗಿ ಮುಂದೆ ಓದಿ.
ಅಂದು ಪಾಕಿಸ್ತಾನದ ಆ ನೆಲದಲ್ಲಿ ಜನಿಸಿದ ಮನೋಜ್ ಕುಮಾರ್: 1937ರಲ್ಲಿ ಪಾಕಿಸ್ತಾನದ ಅಬೋಟಾಬಾದ್ನಲ್ಲಿ ಮನೋಜ್ ಕುಮಾರ್ ಜನಿಸಿದರು. ಇವರು ಜನಿಸಿದ ಆ ನೆಲದಲ್ಲಿ ಉಗ್ರ ಒಸಾಮಾ ಬಿನ್ ಲಾಡೆನ್ ಹತ್ಯೆ ನಡೆಯಿತು ಎನ್ನುವುದು ಮತ್ತೊಂದು ವಿಶೇಷ. ಹೀಗೆ ಒಂದಕ್ಕೊಂದು ನಂಟು ಕಲ್ಪಿಸುವುದಕ್ಕೆ ಬಾಲಿವುಡ್ ಅಂಗಳದಲ್ಲಿ ಭರತ್ ಕುಮಾರ್ ಆಗಿ ದೇಶಭಕ್ತಿಗೆ ಅವರು ನೀಡಿದ ಕೊಡುಗೆಯೇ ಕಾರಣವಾಗಿದೆ.
ಮನೋಜ್ ಕುಮಾರ್ ಬಾಲ್ಯ ಮತ್ತು ಬೆಳವಣಿಗೆ: ಪಾಕಿಸ್ತಾನದ ಲಾಹೋರಿನಲ್ಲಿ ಮನೋಜ್ ಕುಮಾರ್ ಬಾಲ್ಯದ ವಿದ್ಯಾಭ್ಯಾಸ ಮಾಡಿದರು. ಆದರೆ 1947ರಲ್ಲಿ ಭಾರತ ಮತ್ತು ಪಾಕಿಸ್ತಾನ ಇಬ್ಭಾಗವಾದ ಸಂದರ್ಭದಲ್ಲಿ 10 ವರ್ಷದ ಮನೋಜ್ ಕುಮಾರ್ ಮತ್ತು ಇಡೀ ಕುಟುಂಬವೇ ಭಾರತದ ದೆಹಲಿಗೆ ಸ್ಥಳಾಂತರವಾಯಿತು. ಮನರಂಜನೆಯಲ್ಲಿ ಮನಸ್ಸು ನೆಟ್ಟಿದ್ದ ಮನೋಜ್ ಕುಮಾರ್ 1956ರ ಅಕ್ಟೋಬರ್ 9ರಂದು ಚಿತ್ರರಂಗಕ್ಕೆ ಹೆಸರುವಾಸಿಯಾಗಿದ್ದ ಮುಂಬೈ ನಗರಕ್ಕೆ ಕಾಲಿಟ್ಟರು. 19 ವರ್ಷಕ್ಕೆ ಮುಂಬೈಗೆ ಬಂದ ಅವರ ಕಣ್ಣಿನಲ್ಲಿ ದೊಡ್ಡ ಸ್ಟಾರ್ ಆಗುವ ಕನಸು ಕಟ್ಟಿಕೊಂಡಿತ್ತು. ಚಿತ್ರರಂಗದ ಹೋರಾಟದ ಪ್ರಯಾಣದ ಅಂದಿನಿಂದ ಶುರುವಾಯಿತು.
ಚಿಕ್ಕಪುಟ್ಟ ಪಾತ್ರಗಳ ಮೂಲಕ ಚಿತ್ರರಂಗ ಪ್ರವೇಶ: ಸಣ್ಣ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಮನೋಜ್ ಕುಮಾರ್ ತಮಗೆ ವಹಿಸಿದ ಚಿಕ್ಕಪುಟ್ಟ ಪಾತ್ರಗಳ ಮೂಲಕವೇ ಜನಮೆಚ್ಚುಗೆ ಪಡೆದುಕೊಳ್ಳುವುದಕ್ಕೆ ಶುರು ಮಾಡಿದರು. ಅವರ ಸಾಧನೆ ಹಾದಿಯ ಪ್ರಯಾಣ ಹೀಗೆ ಪ್ರಾರಂಭವಾಯಿತು. ಕಂಚ್ ಕೀ ಗುದಿಯಾ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕ ನಟರಾಗಿ ಭರತ್ ಕುಮಾರ್ ಬಣ್ಣ ಹಚ್ಚಿದರು. ಆದರೆ ಹರಿಲಾಲ್ ಔರ್ ರಾಸ್ತಾ ಚಿತ್ರದ ನಂತರ ಯಶಸ್ವಿ ನಾಯಕ ನಟರಾಗಿ ಗುರುತಿಸಿಕೊಂಡರು. ಈ ಸಿನಿಮಾದ ನಟನೆಗಾಗಿ ಅವರು ಅಂದು 11,000 ರೂಪಾಯಿ ಸಂಭಾವನೆ ಪಡೆದುಕೊಂಡಿದ್ದರು.
3 ಲಕ್ಷ ರೂಪಾಯಿ ಸಂಪಾದಿಸುವ ಗುರಿ: ಭರತ್ ಕುಮಾರ್ ಬಾಲಿವುಡ್ ಪ್ರವೇಶದ ಹಿಂದೆ ಪ್ರಾರಂಭದಲ್ಲಿ 3 ಲಕ್ಷ ರೂಪಾಯಿ ಸಂಪಾದಿಸುವ ಗುರಿಯಿತ್ತು. ತಮ್ಮ ತಂದೆ-ತಾಯಿಗೆ 1 ಲಕ್ಷ, ಸಹೋದರನಿಗಾಗಿ 1 ಲಕ್ಷ ಹಾಗೂ ತಮಗಾಗಿ 1 ಲಕ್ಷ ರೂಪಾಯಿ ಗಳಿಸುವ ಉದ್ದೇಶವನ್ನು ಹೊಂದಿದ್ದರು. ಈ ಮೂರು ಲಕ್ಷ ರೂಪಾಯಿ ಗಳಿಸಿದ ನಂತರದಲ್ಲಿ ಭರತ್ ಕುಮಾರ್ ಆಲೋಚನೆ ಮತ್ತು ಗುರಿಯ ದಾರಿ ಬದಲಾಯಿತು. ತಮ್ಮ ಸಮಕಾಲೀನರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡರೆ, ಭರತ್ ಕುಮಾರ್ ಮಾತ್ರ ಕೇವಲ 40 ಸಿನಿಮಾಗಳನ್ನು ಮಾಡಿದ್ದರು.
ಭಗತ್ ಸಿಂಗ್ ಪಾತ್ರದಲ್ಲಿ ಭರತ್ ಕುಮಾರ್: ಒಂದು ಕಡೆಯಲ್ಲಿ ಮನರಂಜನೆಯ ಸಿನಿಮಾಗಳು ಬಿಗ್ ಸ್ಕ್ರೀನ್ ಮೇಲೆ ಲಗ್ಗೆ ಇಡುತ್ತಿದ್ದರೆ ಇನ್ನೊಂದು ಕಡೆಯಲ್ಲಿ ಸ್ವಾತಂತ್ರ್ಯ ಯೋಧರು, ದೇಶ ಭಕ್ತರ ಕುರಿತು ಸಂಶೋಧನೆಯಲ್ಲಿ ಭರತ್ ಕುಮಾರ್ ತೊಡಗಿಕೊಂಡಿದ್ದರು. ನಿರಂತರ ಐದು ವರ್ಷಗಳ ಅಧ್ಯಯನದಲ್ಲಿ ಸಾಹಿದ್ ಭಗತ್ ಸಿಂಗ್ ಕುರಿತು ಮಾಹಿತಿ ಕಲೆ ಹಾಕಿದರು. ಭಗತ್ ಸಿಂಗ್ ತಾಯಿಯನ್ನು ಭೇಟಿಯೂ ಇದರ ಭಾಗವಾಗಿತ್ತು. ಅಂತಿಮವಾಗಿ ಸಾಹಿದ್ ಎಂಬ ಚಲನಚಿತ್ರ ನಿರ್ಮಾಣ ಮಾಡಲಾಯಿತು. ಇದೇ ಸಿನಿಮಾಗಾಗಿ ಮನೋಜ್ ಕುಮಾರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಮನರಂಜನೆ ಮೂಲಕ ಸಾಮಾಜಿಕ ಸಂದೇಶ: ಭಾರತದಲ್ಲಿ ಸಿನಿಮಾ ಎನ್ನುವುದು ಕೇವಲ ಮನರಂಜನೆೆಯಾಗಿ ಉಳಿದಿಲ್ಲ. ಕೆಲವರ ಮಟ್ಟಿಗೆ ಸಿನಿಮಾ ಹಣ ಗಳಿಸುವ ಮಾರ್ಗವಾಗಿದ್ದರೆ, ಇನ್ನು ಕೆಲವರಿಗೆ ದುಡಿಮೆಗೆ ದಾರಿ ಆಗಿದೆ. ಆದರೆ ತಮ್ಮ ಚಿತ್ರಗಳ ಮೂಲಕವೇ ದೇಶಭಕ್ತಿ ಸಂದೇಶ ಸಾರಿದವರ ಸಾಲಿನಲ್ಲಿ ಮನೋಜ್ ಕುಮಾರ್ ಅಗ್ರಗಣ್ಯರಾಗಿ ಗುರುತಿಸಿಕೊಳ್ಳುತ್ತಾರೆ. ಮನರಂಜನೆಗಷ್ಟೇ ಸೀಮಿತವಾಗಿರದ ಇವರ ಸಿನಿಮಾಗಳು ದೇಶಭಕ್ತರಲ್ಲಿ ಉತ್ಸಾಹವನ್ನು ತುಂಬುವಂತಿವೆ. ಇವರು ತಮ್ಮ ಪಾತ್ರ ಮತ್ತು ಚಿತ್ರಗಳ ಮೂಲಕವೇ ಸ್ವಾತಂತ್ರ್ಯೋತ್ಸವ ಮತ್ತು ದೇಶದ ಕುರಿತು ಹೆಮ್ಮೆಯ ಮನೋಭಾವವನ್ನು ಹುಟ್ಟು ಹಾಕಿದ್ದಾರೆ. 75ರ ಹರೆಯದಲ್ಲೂ ದೇಶಕ್ಕಾಗಿ ಏನಾದರೂ ಮಾಡಬೇಕೆಂಬ ತುಡಿತ ಅವರದ್ದು ಎಂದು ತಿಳಿದಾಗ ನಿಜಕ್ಕೂ ಸಂತಸ ಮೂಡುತ್ತದೆ.
ದೇಶಭಕ್ತಿ ಸಾರಿ ಹೇಳಿದ ಮನೋಜ್ ಕುಮಾರ್ ಚಿತ್ರಗಳು: ಉಪ್ಕಾರ್, ಪೌರಬ್ ಔರ್ ಪಶ್ಚಿಮ್, ರೋಟಿ ಕಪಡಾ ಔರ್ ಮಕಾನ್ ಮತ್ತು ಕ್ರಾಂತಿ ಎಂಬ ಚಿತ್ರಗಳನ್ನು ಇಂದಿಗೂ ಭಾರತೀಯರು ಮರೆಯುವುದಕ್ಕೆ ಸಾಧ್ಯವಿಲ್ಲ. ಸ್ವಾತಂತ್ರ್ಯ ಹೋರಾಟ ಮತ್ತು ದೇಶಭಕ್ತಿ ಹಾಗೂ ಭಾವೈಕ್ಯತೆಯನ್ನು ಮೂಡಿಸುವ ನಿಟ್ಟಿನಲ್ಲಿ ಈ ಚಿತ್ರಗಳು ಜನಮಾಮನಸದಲ್ಲಿ ಅಚ್ಚಳಿಯದೇ ಉಳಿದು ಬಿಟ್ಟಿವೆ.