ಮೈತ್ರಿ ಸರಕಾರ ಕೆಡವುವ ಉತ್ಸಾಹದಲ್ಲಿದ್ದ ಯಡಿಯೂರಪ್ಪನವರಿಗೆ ಹೈಕಮಾಂಡ್ ಬ್ರೇಕ್!
ಯಡಿಯೂರಪ್ಪ ಅವರಿಗೆ ಅದೃಷ್ಟ ಇಲ್ಲವಾ ಎಂಬ ಪ್ರಶ್ನೆ ಕೇಳುವಂತಾಗಿದೆ. ಮೂಲಗಳ ಪ್ರಕಾರ, ಸದ್ಯಕ್ಕೆ ಕರ್ನಾಟಕ ಅಧಿಕಾರದಲ್ಲಿ ಇರುವ ಮೈತ್ರಿ ಸರಕಾರವನ್ನು ಬೀಳಿಸಲು ಸೂಕ್ತ ಸಮಯಕ್ಕೆ ಕಾಯುವ ಬಗ್ಗೆ ಬಿಜೆಪಿ ಹೈ ಕಮಾಂಡ್ ನಿಂದ ಸೂಚನೆ ಬಂದಿದೆ. ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಬೀಳಿಸುವುದರಲ್ಲಿ ಮಗ್ನವಾಗಿರುವ ನಾಯಕರಿಗೆ ಈಗ ಕರ್ನಾಟಕಕ್ಕೆ ಕೈ ಹಾಕುವುದು ಬೇಡ ಎನಿಸಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಕರ್ನಾಟಕದಲ್ಲಿ ಬಿಜೆಪಿ ಅತಿ ಹೆಚ್ಚು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ದಾಖಲಿಸಲಿದೆ ಎಂಬ ಚುನಾವಣೋತ್ತರ ಸಮೀಕ್ಷೆಗಳಿಂದ ಉತ್ತೇಜಿತರಾದ ಯಡಿಯೂರಪ್ಪ, ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರವನ್ನು ಕೆಡವಲು ಸಿದ್ಧರಾಗಿದ್ದರು. ಆದರೆ ಸದ್ಯಕ್ಕೆ ಆಪರೇಷನ್ ಕಮಲಕ್ಕೆ ಇಳಿಯಬೇಡಿ ಎಂಬ ಸೂಚನೆ ಮೇಲಿನ ಮಟ್ಟದ ನಾಯಕರಿಂದ ಸಂದೇಶ ಬಂದಿದ್ದು, ಆ ನಂತರ ಯಡಿಯೂರಪ್ಪ ಸುಮ್ಮನಾಗಿದ್ದಾರೆ.
ಬಿ.ಎಸ್.ಯಡಿಯೂರಪ್ಪಗೆ ಹೈಕಮಾಂಡ್ನಿಂದ ಭರ್ಜರಿ ಉಡುಗೊರೆ?
ಮೇ ಇಪ್ಪತ್ಮೂರನೇ ತಾರೀಕು ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ಬಿಜೆಪಿಗೆ ಜಿಗಿಯಲು ಕಾಂಗ್ರೆಸ್ ನ ಹತ್ತು ಹಾಗೂ ಜೆಡಿಎಸ್ ನ ಮೂವರು ಶಾಸಕರು ಸಿದ್ಧರಿದ್ದಾರೆ. ಆದರೆ ಯಾವಾಗ ಬಿಜೆಪಿ ನಾಯಕರೇ ಸದ್ಯಕ್ಕೆ ಆಪರೇಷನ್ ಬೇಡ ಅಂದರೋ ಇದೀಗ ಜೆಡಿಎಸ್ ಹಾಗೂ ಕಾಂಗ್ರೆಸ್ ನಿಂದ ಜಿಗಿಯಬೇಕು ಅಂತಿದ್ದ ಶಾಸಕರಿಗೆ ಎರಡು ಮನಸಾಗಿದೆ. ಈ ರೀತಿ ಮುಂದಕ್ಕೆ ಹಾಕಿದರೆ ಉಪ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟವಾಗುತ್ತದೆ ಎಂಬ ಅಳುಕು ಅವರದು.
ಇನ್ನು ಕೇಂದ್ರದಲ್ಲಿ ಮತ್ತೆ ಎನ್ ಡಿಎ ಅಧಿಕಾರ ಹಿಡಿದರೆ ರಾಜ್ಯದಲ್ಲಿ ಯಡಿಯೂರಪ್ಪ ನಾಯಕತ್ವ ಬದಲಾವಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಹಾಗೊಂದು ವೇಳೆ ಮಾಡಿದರೆ ಬಿಜೆಪಿಯಲ್ಲಿ ನಮ್ಮ ಭವಿಷ್ಯ ಏನಾಗುತ್ತದೆ ಎಂಬ ಚಿಂತೆ ಅವರಿಗಿದೆ. ಆದರೆ ಇಂಥ ಎಲ್ಲ ಊಹಾಪೋಹಾಗಳನ್ನು ನಾವು ಒಪ್ಪಲ್ಲ. ಲೋಕಸಭಾ ಚುನಾವಣೆ ಫಲಿತಾಂಶ ಬಂದ ಮೇಲೆ ಕಾದು ನೋಡಿ ಎಂದು ಯಡಿಯೂರಪ್ಪ ಅವರ ಆಪ್ತರು ಹೇಳುತ್ತಾರೆ.