'ದ್ವೀಪವಾಗಿದೆ ಬದುಕು,' ಸುದ್ದಿಯೇ ಆಗದ ಜಮ್ಮು-ಕಾಶ್ಮೀರದ ನೈಜ ಕತೆ...
"ನಿಮ್ಮ ಪ್ರಕರಣದ ವಿಚಾರಣೆಯನ್ನು ಮುಂದೂಡಿದ್ದೇವೆ..." ಎಂಬ ನ್ಯಾಯಾಧೀಶರ ಮಾತು ಅಲ್ತಾಫ್ ಹುಸೇನ್ ಲೋನೆಯ ಕನಸಲ್ಲೂ ಕಾಡುತ್ತದೆ. ಆ ಸಾಲನ್ನು ಕೇಳಿದರೆ ಯಾರಲ್ಲೂ ಹೇಳಿಕೊಳ್ಳಲಾಗದ ಅಸಹಾಯಕತೆಯೊಂದು ಆವರಿಸಿಕೊಳ್ಳುತ್ತದೆ.... ಇನ್ನೆಷ್ಟು ದಿನ ಈ ನರಕ ಎಂದು ತನ್ನನ್ನೇ ತಾನು ಪ್ರಶ್ನಿಸಿಕೊಳ್ತಾನೆ...
ಹೌದು ಇದು ಕಾಶ್ಮೀರದ ಕತೆ! ಕಾಶ್ಮೀರದ ಇಂದಿನ ಸ್ಥಿತಿಗತಿಯ ಬಗ್ಗೆ ಬಿಬಿಸಿ ವೆಬ್ ಸೈಟ್ ನಲ್ಲಿ ಪ್ರಕರಣವಾದ ಲೇಖನದ ಅನುವಾದ ಇದು. ಈ ಲೇಖನದ ಭಾವಾನುವಾದದ ಪೂರ್ಣರೂಪ ಇಲ್ಲಿದೆ.
'ಮರಳಿ ಗೂಡು ಸೇರುತ್ತೇವೆ' ಕಾಶ್ಮೀರದ ಗಾಯಕಿ ಕಣ್ತುಂಬಿ ಹೇಳಿದ ಮಾತು...
ಆಗಸ್ಟ್ 5 ರಂದು ಭಾರತ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370 ನೇ ವಿಧಿಯ ಅಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ನಂತರ ಕಾಶ್ಮೀರದ ಚಿತ್ರಣ ಸಂಪೂರ್ಣ ಬದಲಾಗಿದೆ.
ಲೆಕ್ಕವೇ ಸಿಗದಷ್ಟು ಜನರನ್ನು ಪೊಲಿಸರು ವಶಕ್ಕೆ ಪಡೆದಿದ್ದಾರೆ, ನಿಷ್ಕಾರಣವಾಗಿ! ಪ್ರಕರಣ ದಾಖಲಿಸದೆ ಅವರನ್ನು ಬಂಧಿಸಲಾಗಿದೆ... ಅವರ ಸ್ಥಿತಿ ಏನಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕೆಂದರೆ ಫೋನ್ ಇಲ್ಲ, ಸಂವಹನದ ಯಾವ ಸಾಧನಗಳೂ ಇಲ್ಲ... ಅಕ್ಷರಶಃ ದ್ವೀಪದಂತಾಗಿದೆ ಬದುಕು!
ವಕೀಲರ ಮುಷ್ಕರದಲ್ಲಿ ಬಡವಾದ ಜನರು!
ಅಲ್ತಾಫ್ ಹುಸೇನ್ ತನ್ನ ತಮ್ಮ ಶಬ್ಬಿರ್ ನನ್ನು ಸಾರ್ವಜನಿಕ ಭದ್ರತಾ ಕಾಯ್ದೆ(ಪಿಎಸ್ ಎ) ಅಡಿಯಲ್ಲಿ ವಶಕ್ಕೆ ಪಡೆದಿದ್ದರ ವಿರುದ್ಧ ಕೋರ್ಟಿನಲ್ಲಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಶಬ್ಬಿರ್ ನನ್ನು ಪ್ರತಿನಿಧಿಸೋಕೆ ಲಾಯರ್ ಗಳೇ ಸಿಗುತ್ತಿಲ್ಲ. ಇದು ಕೇವಲ ಶಬ್ಬಿರ್ ಕತೆ ಮಾತ್ರವಲ್ಲ, ಆಗಸ್ಟ್ 5 ರ ನಂತರ ಎಷ್ಟೋ ಜನರನ್ನು ಬಂಧಿಸಲಾಗಿದ್ದು, ಜಮ್ಮು ಮತ್ತು ಕಾಶ್ಮೀರ ಬಾರ್ ಕೌನ್ಸಿಲ್ ನ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಸದಸ್ಯರು ಸೇರಿದಂತೆ 50 ಕ್ಕೂ ಹೆಚ್ಚು ಜನರನ್ನೂ ಬಂಧಿಸಲಾಗಿದೆ. ತನ್ನಿಮಿತ್ತ ತಮ್ಮ ಸಹೋದ್ಯೋಗಿಗಳನ್ನು ಬಿಡುಗಡೆ ಮಾಡುವವರೆಗೂ ನಾವು ಯಾವ ಕೇಸನ್ನೂ ತೆಗೆದುಕೊಳ್ಳುವುದಿಲ್ಲ ಎಂದು ವಕೀಲರು ಧರಣಿ ಕೂತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಪೊಲೀಸ್ ವಶದಲ್ಲಿರುವ ಹಲವರನ್ನು ಬಿಡಗುಡೆ ಮಾಡಲು ಸಾಧ್ಯವಾಗುತ್ತಿಲ್ಲ. ವಿಚಾರಣೆಯ ದಿನಾಂಕ ಯಾವುದು? ಯಾವಾಗ ಬರಬೇಕು ಎಂಬಿತ್ಯಾದಿ ಮಾಹಿತಿ ತಿಳಿಯಲು ಸಂವಹನವಿಲ್ಲ!
ಹೇಬಿಯಸ್ ಕಾರ್ಪಸ್
ಪೊಲೀಸರ ಕಾರಣವಿಲ್ಲದೆ ಹಲವರನ್ನು ವಶಕ್ಕೆ ಪಡೆದ ಕಾರಣ ಬಂಧಿತರು ಅಥವಾ ಅವರ ಪರವಾಗಿ ಬೇರೆ ವ್ಯಕ್ತಿಗಳು ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಗಳನ್ನು ದಾಖಲಿಸಿದ್ದಾರೆ. ಅಂದರೆ ಯಾವುದೇ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಬಂಧನದಲ್ಲಿಟ್ಟಾಗ ಆ ರೀತಿಯ ಬಂಧನಕ್ಕೆ ಕಾರಣ ತಿಳಿಯಲು ಬಂಧಿತ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಆದೇಶ ನೀಡುವ ಅರ್ಜಿ ಇದಾಗಿದೆ. ಹೇಬಿಯಸ್ ಕಾರ್ಪಸ್ ಸಲ್ಲಿಸಲು ವಕೀಲರೇ ಜನರಿಗೆ ನೆರವು ನೀಡುತ್ತಿದ್ದಾರೆ. ಕೇವಲ ಶಬ್ಬಿರ್ ಮಾತ್ರವಲ್ಲ ಕಾಶ್ಮೀರದಲ್ಲಿ ಹಲವು ಯುವಕು, ಮಧ್ಯವಯಸ್ಕರು ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಅವರನ್ನೇ ನಂಬಿಕೊಂಡ ಕುಟುಂಬಸ್ಥರ ಪಾಡು ನರಕವಾಗಿದೆ.
ಕಾಶ್ಮೀರದಲ್ಲಿರುವ ಅತ್ತೆ-ಮಾವ ಸಂಪರ್ಕಕ್ಕೆ ಸಿಗುತ್ತಿಲ್ಲ: ಊರ್ಮಿಳಾ ಮಾತೋಂಡ್ಕರ್
ವ್ಯಾಪಾರಿಗಳದ್ದು ಮತ್ತೊಂದು ಕತೆ
ಇನ್ನು ವ್ಯಾಪಾರಿಗಳದ್ದು ಇನ್ನೊಂದು ಕತೆ. ಅಂಗಡಿ ತೆರೆಯದೆ ಇದ್ದರೆ ವ್ಯಾಪಾರವಿಲ್ಲ, ಹೊಟ್ಟೆಗೆ ಹಿಟ್ಟಿಲ್ಲ. ಅಂಗಡಿ ತೆರೆದರೆ ಸರ್ಕಾರದ ನಿಲುವನ್ನು ಸ್ವಾಗತಿಸಿದ್ದೇವೆ ಎಂದುಕೊಂಡು ಉಗ್ರರು ತಮ್ಮನ್ನು ಕೊಂದರೆ ಎಂಬ ಭಯ... ಇಂಥ ಸಂದಿಗ್ದದಲ್ಲಿ ದಿನದೂಡುತ್ತಿದ್ದಾರೆ ಅವರು.
ರಂಜನ್ ಗೊಗೊಯ್ ಭೇಟಿ ಯಾವಾಗ?
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ತಾವೇ ಖುದ್ದಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿ ಅಲ್ಲಿನ ಸ್ಥಿತಿಗತಿ ಅವಲೋಕಿಸುತ್ತೇನೆ, ನಿಜಕ್ಕೂ ಅಲ್ಲಿನ ಸ್ಥಿತಿ ಕೆಲವು ವರದಿಗಳು ಹೇಳುವಷ್ಟು ಚಿಂತಾಜನಕವಾಗಿದೆಯೇ ಎಂಬುದನ್ನು ನಾನೇ ತಿಳಿಯುತ್ತೇನೆ ಎಂದಿದ್ದರು. ಆದರೆ ಅವರು ಕಾಶ್ಮೀರಕ್ಕೆ ತೆರಳುವ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಒಟ್ಟಿನಲ್ಲಿ ಮುಂದೇನು ಎಂಬುದೇ ಗೊತ್ತಿಲ್ಲದೆ, ಹೊರಗಿನ ಜಗತ್ತಿನ ಆಗುಹೋಗುಗಳ ಮಾಹಿತಿಯೇ ಇಲ್ಲದೆ ದ್ವೀಪದಲ್ಲಿ ಬದುಕುವಂತಾಗಿದೆ ಕಾಶ್ಮೀರಿಗಳ ಪಾಡು!