ನಿತ್ಯಾನಂದ ಸ್ವಾಮಿಯ ಮಹಾನ್ ಹಿಂದೂ ರಾಷ್ಟ್ರ 'ಕೈಲಾಸ' ಹೇಗಿದೆ? ಅಲ್ಲಿ ಏನೇನಿದೆ?
ನವದೆಹಲಿ, ಡಿಸೆಂಬರ್ 4: ದೇಶದಿಂದ ಪರಾರಿಯಾಗಿರುವ ಸ್ವಾಮಿ ನಿತ್ಯಾನಂದ ಈಕ್ವೆಡಾರ್ನಲ್ಲಿ ಖಾಸಗಿ ಭೂಮಿಯನ್ನೇ ದೇಶವನ್ನಾಗಿ ಪರಿವರ್ತಿಸಿಕೊಂಡು ಅದಕ್ಕೆ ತಮ್ಮದೇ ಪ್ರಧಾನಿ ಮತ್ತು ಮಂತ್ರಿಮಂಡಲವನ್ನು ರಚಿಸಿಕೊಂಡಿದ್ದಾರೆ. ಜತೆಗೆ ಅದಕ್ಕೆ 'ಕೈಲಾಸ' ಎಂಬ ಹೆಸರು ಇಟ್ಟಿದ್ದು, ಅದನ್ನು 'ಮಹಾನ್ ಹಿಂದೂ ರಾಷ್ಟ್ರ' ಎಂದೂ ಕರೆದುಕೊಂಡಿದ್ದಾರೆ.
ಈ ಹಿಂದೂ ರಾಷ್ಟ್ರ 'ಜ್ಞಾನೋದಯವಾದ ನಾಗರಿಕರ ಪುನರುಜ್ಜೀವನ'ದ ಸ್ಥಳ. ಈ 'ದೇಶ'ದ ಬಗ್ಗೆ ಮಾಹಿತಿ ನಿತ್ಯಾನಂದನ 'ಕೈಲಾಸ.ಓಆರ್ಜಿ ವೆಬ್ಸೈಟ್ನಲ್ಲಿ ಸಿಗುತ್ತದೆ. ಆರಂಭದಲ್ಲಿಯೇ 'ಎಚ್ಡಿಎಚ್ ನಿತ್ಯಾನಂದ ಪರಮಶಿವನ್' ದರ್ಶನವಾಗುತ್ತದೆ. 'ಎಚ್ಡಿಎಚ್' ಎಂದರೇನು? ಗೊಂದಲ ಬೇಡ. ಅದು 'ಹಿಸ್ ಡಿವೈನ್ ಹೋಲಿನೆಸ್' ಎಂಬುದರ ಸಂಕ್ಷಿಪ್ತ ರೂಪ. ದೈವಿಕ ಪಾವಿತ್ರ್ಯದ ನಿತ್ಯಾನಂದ ಪರಮಶಿವನ್ ಕೈಲಾಸವನ್ನು ಪುನರುಜ್ಜೀವನಗೊಳಿಸಿದವರು ಎಂದು ಅವರನ್ನು ಪರಿಚಯಿಸಲಾಗಿದೆ. ಇದು ಮಹಾನ್ ಮತ್ತು ಏಕೈಕ ಹಿಂದೂ ರಾಷ್ಟ್ರ ಎಂದು ಕರೆಯಲಾಗಿದೆ.
ನಿತ್ಯಾನಂದನ ಹೊಸ ದೇಶಕ್ಕೆ ಪ್ರಧಾನಿ, ಕ್ಯಾಬಿನೆಟ್ ರಚನೆ
ನಿತ್ಯಾನಂದ ಸ್ವಾಮಿಯ ಹೊಸ ದೇಶ 'ಕೈಲಾಸ' ತಮಾಷೆಯಾಗಿ ಕಂಡರೂ ಆ ಪರಿಕಲ್ಪನೆ ಸಾಕಷ್ಟು ಕುತೂಹಲ ಕೆರಳಿಸುವಂತಿದೆ. ದೇಶದಿಂದ ಪರಾರಿಯಾದ ವ್ಯಕ್ತಿ ತನ್ನದೇ 'ದೇಶ' ಸ್ಥಾಪಿಸಲು ಹೇಗೆ ಸಾಧ್ಯವಾಯಿತು? ಅದು ನಿಜಕ್ಕೂ ದೇಶವೇ ಎಂಬ ಪ್ರಶ್ನೆಗಳೂ ಮೂಡುತ್ತವೆ. ನಿತ್ಯಾನಂದನ 'ಕೈಲಾಸ ಹಿಂದೂ ದೇಶ'ದ ಸುತ್ತಲೂ ಹೆಣೆದಿರುವ ಕಥೆಗಳೇ ದೊಡ್ಡ ಪುಸ್ತಕವಾಗುತ್ತದೆ.
ಪರಮಶಿವನ ಅವತಾರ!
ಹಿಂದೂಯಿಸಂನಲ್ಲಿನ ಪುನರ್ಜನ್ಮದಲ್ಲಿ ಪರಮಶಿವನ ಅವತಾರವಾಗಿ 'ಎಚ್ಡಿಎಚ್' ಉದಯಿಸಿದ್ದಾರೆ. ಲಕ್ಷಾಂತರ ಜನರು ಅವರನ್ನು ಆರಾಧಿಸುತ್ತಿದ್ದಾರೆ. ಅವರನ್ನು ಹಿಂದೂಗಳ ನಾಯಕನೆಂದು ಗೌರವಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂದೂ ನಾಯಕನೆಂದು ಗುರುತಿಸಲಾಗಿದೆ. 26 ಭಾಷೆಗಳಲ್ಲಿ 300 ಪುಸ್ತಕಗಳನ್ನು ಬರೆದಿದ್ದಾರೆ. 20 ಮಿಲಿಯನ್ಗೂ ಅಧಿಕ ಪುಸ್ತಕಗಳು, ಲೇಖನಗಳು ಮಾರಾಟವಾಗಿವೆ, ಓದಲಾಗಿದೆ ಮತ್ತು ಡೌನ್ಲೋಡ್ ಮಾಡಲಾಗಿದೆ. ಗುರು ಪರಂಪರೆಯ ಅರುಣಾಚಲ ಸರ್ವಜ್ಞಪೀಠದ ಉತ್ತರಾಧಿಕಾರಿ ಎಂದು ಘೋಷಿಸಲಾಗಿದೆ. 100ಕ್ಕೂ ಅಧಿಕ ಸರ್ವಜ್ಞಪೀಠಗಳನ್ನು ಸ್ಥಾಪಿಸಿದ್ದಾರೆ ಎಂದು ನಿತ್ಯಾನಂದನ ಆಧುನಿಕ ಪರಮಶಿವನ ಅವತಾರ ಮತ್ತು ಆತ ಮಾಡಿರುವ ಮಹಾನ್ ಕಾರ್ಯಗಳ ದೊಡ್ಡ ಪಟ್ಟಿಯನ್ನೇ ನೀಡಲಾಗಿದೆ.
ಕೈಲಾಸ ದೇಶದ ಸ್ಥಾಪನೆ ಏಕೆ?
'ಕೈಲಾಸ' ದೇಶವನ್ನು ಸ್ಥಾಪಿಸಿರುವುದರ ಉದ್ದೇಶ ಸನಾತನ ಹಿಂದೂ ಧರ್ಮವನ್ನು ರಕ್ಷಿಸುವುದು ಮತ್ತು ಉಳಿಸುವುದು ಹಾಗೂ ಇಡೀ ಜಗತ್ತಿಗೆ ಹಂಚುವುದು ಮಾತ್ರವಲ್ಲದೆ, ಜಗತ್ತಿಗೆ ಇನ್ನೂ ಅರಿವಾಗದ ಶೋಷಣೆಯ ಕಥೆಯನ್ನು ಹಂಚಿಕೊಳ್ಳುವುದಾಗಿದೆ. ಈ ಗುರಿಯೆಡೆಗೆ ಅಧಿಕೃತ ಹಿಂದುತ್ವವನ್ನು ಆಧಾರಿಸಿದ ಪ್ರಬುದ್ಧ ಸಂಸ್ಕೃತಿ ಮತ್ತು ನಾಗರಿಕತೆಯ ಕಾಪಾಡುವಿಕೆ, ಪುನರುತ್ಥಾನ ಮತ್ತು ಪುನರುಜ್ಜೀವನಕ್ಕೆ ಕೈಲಾಸ ಬದ್ಧವಾಗಿದೆ ಎಂದು ನಿತ್ಯಾನಂದನ 'ಕೈಲಾಸ'ದ ವೆಬ್ಸೈಟ್ ತಿಳಿಸುತ್ತದೆ.
ಮಹಿಳೆಯರನ್ನು ಕೋರ್ಟ್ಗೆ ಹಾಜರುಪಡಿಸಲು ನಿತ್ಯಾನಂದಸ್ವಾಮಿಗೆ ಗಡುವು
ಈಗ ಹಿಂದೂ ದೇಶಗಳೇ ಇಲ್ಲ!
ಮಹಾಭಾರತದ ವೇಳೆ ಹಿಂದೂಗಳು 56 ದೇಶಗಳನ್ನು 200 ರಾಜ್ಯಗಳನ್ನು, 1700 ಸಂಸ್ಥಾನಗಳನ್ನು ಮತ್ತು 10,000 ಸಂಪ್ರದಾಯಗಳನ್ನು ಹೊಂದಿದ್ದರು. ಈ ಎಲ್ಲ ದೇಶಗಳಲ್ಲಿಯೂ ನಮ್ಮನ್ನು (ಹಿಂದೂ) ಶೋಷಿಸಲಾಗಿದೆ. ಇಂತಹ ಶೋಷಣೆಗೊಳಗಾದ ಹಿಂದೂಗಳಿಗಾಗಿ ಕೈಲಾಸ ದೇಶವಿದೆ. ಈಗ ನಾವು ಎಲ್ಲ 56 ದೇಶಗಳನ್ನೂ ಕಳೆದುಕೊಂಡಿದ್ದೇವೆ. ಕೊನೆಯದಾಗಿ ಕಳೆದುಕೊಂಡಿರುವುದು ನೇಪಾಳವನ್ನು. 56 ದೇಶಗಳನ್ನು ಹೊಂದಿದ್ದ ನಮಗೆ ಈಗ ಒಂದೂ ಉಳಿದಿಲ್ಲ. ನಾನು ಎಲ್ಲ ಶೋಷಿತ ಹಿಂದೂಗಳ ಧ್ವನಿಯಾಗಿದ್ದೇನೆ. ನಾನು ಹಿಂದೂ ದೇಶವೊಂದನ್ನು ಸ್ಥಾಪಿಸಿ ಪುನರುಜ್ಜೀವಗೊಳಿಸುತ್ತೇನೆ. ಇದು ವೇದದ ತತ್ವಗಳೊಂದಿಗೆ ನಿರ್ಮಾಣವಾಗಲಿದೆ ಎಂದು ನಿತ್ಯಾನಂದ ಹೇಳಿಕೊಂಡಿದ್ದಾರೆ.
ಕೈಲಾಸದಲ್ಲಿಯೂ ರಕ್ಷಣಾ ಇಲಾಖೆ
ನಿತ್ಯಾನಂದ ಸ್ಥಾಪಿಸಿಕೊಂಡಿರುವ ದೇಶದಲ್ಲಿ ಅವರದೇ ಆದ ಸರ್ಕಾರವಿದೆಯಂತೆ. ಅದರಲ್ಲಿ ಹಲವು ಇಲಾಖೆಗಳು ಮತ್ತು ಸಂಸ್ಥೆಗಳಿವೆ. ಮುಖ್ಯವಾಗಿ ಅದರ ನೇತೃತ್ವ ಇರುವುದು 'ಎಚ್ಡಿಎಚ್' ಕಚೇರಿಯಲ್ಲಿ. ಜತೆಗೆ 'ಹೋಮ್ಲ್ಯಾಂಡ್ ಸೆಕ್ಯುರಿಟಿ ಮತ್ತು ಡಿಫೆನ್ಸ್' ಎಂಬ ಇಲಾಖೆಯಿದೆ. ಅದು ಹಿಂದೂಗಳ ಹಕ್ಕು ಮತ್ತು ಹಿತಾಸಕ್ತಿಗಳ ರಕ್ಷಣೆಗೆ ಮತ್ತು ಹೋರಾಟಕ್ಕೆ, ಜಗತ್ತಿನೆಲ್ಲೆಡೆ ಶೋಷಣೆಗೆ ಒಳಗಾದ ಹಿಂದೂಗಳ ಪರ ಕಾನೂನು ನೆರವು ನೀಡಲು ವ್ಯವಸ್ಥೆ ನೀಡಲಾಗುತ್ತದೆಯಂತೆ. ಇನ್ನು ಪರಮಶಿವನ ದೇಶಕ್ಕೆ ಬರುವ ಎಲ್ಲ ದೇಣಿಗೆಗಳನ್ನು ಸಂಗ್ರಹಿಸಲು ಕರೆನ್ಸಿಗಳ ನಿರ್ವಹಣೆಗೆ 'ಖಜಾನೆ ಇಲಾಖೆ' ಇದೆ. ಉದ್ದಿಮೆಗಳು, ವಿಶ್ವವಿದ್ಯಾಲಯಗಳು, ಸಮುದಾಯಗಳು, ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ ಮುಂತಾದವುಗಳಿಗೆ 'ವಾಣಿಜ್ಯ ಇಲಾಖೆ' ಇದೆ.
'ಆಶ್ರಮದಲ್ಲಿ ಮಧ್ಯರಾತ್ರಿ ಎಬ್ಬಿಸಿ ವಿಡಿಯೋ ಮಾಡುವಂತೆ ಹಿಂಸೆ ಮಾಡ್ತಿದ್ರು'
ಕೈಲಾಸವಾಸಿಗಳಿಗೆ ಇನ್ನಷ್ಟು ಸೌಲಭ್ಯಗಳು
'ಕೈಲಾಸವಾಸಿ'ಗಳಿಗೆ ಪಟ್ಟಣ ಯೋಜನೆ, ಸಮುದಾಯ ಅಭಿವೃದ್ಧಿ, ಪರಿಸರ ರಕ್ಷಣೆ ಮುಂತಾದವುಗಳಿಗಾಗಿ 'ಗೃಹ ಇಲಾಖೆ' ಇದೆ. ನಾಗರಿಕರ ಜೀವನಶೈಲಿ, ತರಬೇತಿಗಳಿಗೆ 'ಮಾನವ ಸೇವೆಗಳ ಇಲಾಖೆ' ರಚಿಸಲಾಗಿದೆ. ಹಾಗೆಯೇ ವೇದ, ಆಗಮಿಕಗಳನ್ನು ಕಲಿಸಲು, ಸಂಶೋಧನೆಗಳನ್ನ ನಡೆಸಲು 'ಶಿಕ್ಷಣ ಇಲಾಖೆ' ಇದೆ. ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರಗಳಿಗೆ 'ತಂತ್ರಜ್ಞಾನ ಇಲಾಖೆ' ಸ್ಥಾಪಿಸಲಾಗಿದೆ. ನಿತ್ಯಾನಂದ ಯೋಗ, ಆಯುರ್ವೇದ ಮುಂತಾದ ಪ್ರಾಚೀನ ಹಿಂದೂ ವೈದ್ಯ ವಿಜ್ಞಾನಗಳನ್ನು ಬಳಸಿ ಆರೋಗ್ಯ ಕಾಪಾಡಲು 'ಆರೋಗ್ಯ ಇಲಾಖೆ' ಇದೆ. ಹಿಂದೂ ಗ್ರಂಥಾಲಯ, ಜ್ಞಾನಕೇಂದ್ರಗಳನ್ನು ಉಳಿಸುವುದರಿಂದ ಮತ್ತು ಸಂಶೋಧನೆ, ತರಬೇತಿಗಳಿಂದ ಸನಾತನ ಹಿಂದೂ ಧರ್ಮ ಪುನರುಜ್ಜೀವನಕ್ಕೆ 'ಜ್ಞಾನೋದಯ ನಾಗರಿಕತೆಯ ಇಲಾಖೆ' ಇದೆ ಎಂದು ಹೇಳಲಾಗಿದೆ.
ಹೊಸ ದೇಶ ನಿರ್ಮಾಣ ಸಾಧ್ಯವೇ?
ನಿತ್ಯಾನಂದ ಹೇಳಿಕೊಂಡಿರುವ 'ಕೈಲಾಸ' ಮಹಾನ್ ಹಿಂದೂ ದೇಶ ಸ್ಥಾಪನೆಯನ್ನು ಗಂಭೀರವಾಗಿ ಪರಿಗಣಿಸಿದರೂ ಅದು ವಾಸ್ತವವಾಗಿ ಕಾರ್ಯಸಾಧುವೇ ಎಂಬ ಪ್ರಶ್ನೆ ಮೂಡುತ್ತದೆ. ಯಾವುದೇ ವ್ಯಕ್ತಿ ಖಾಸಗಿಯಾಗಿ ಎಷ್ಟೇ ದೊಡ್ಡ ಜಮೀನು ಖರೀದಿಸಿ ಅದನ್ನು ಸ್ವಂತದ್ದೆಂದು ಪ್ರತಿಪಾದಿಸಿದರೂ ಆತ ಒಂದು ದೇಶ, ಕಾನೂನು ಮತ್ತು ನಿಯಮಗಳಿಗೆ ಒಳಪಟ್ಟಿರುತ್ತಾನೆ. ಆತ ತನ್ನ ಭೂಮಿಯಲ್ಲಿ ಪ್ರತ್ಯೇಕ ಕಾನೂನು ಮತ್ತು ಆಡಳಿತ ಸ್ಥಾಪಿಸಲು ಸಾಧ್ಯವಿಲ್ಲ. ಒಂದು ದೇಶದ ರಚನೆ ಸುಲಭವಲ್ಲ. ಎರಡು ಅಥವಾ ಅದಕ್ಕಿಂತ ಹೆಚ್ಚಿನ ಬೃಹತ್ ಸಮುದಾಯದ ಜನರು ದೇಶವಿಭಜನೆಯನ್ನು ಬಯಸಿ ಪ್ರತ್ಯೇಕ ದೇಶವನ್ನು ಬಯಸಿದ್ದರೂ ಅದು ಸರಳ ಪ್ರಕ್ರಿಯೆಯಾಗುವುದಿಲ್ಲ. ಏಕೆಂದರೆ ಒಂದು ದೇಶ ತನ್ನದೇ ನೆಲ ಎಂದು ಭಾವಿಸಿರುವ ಭಾಗವನ್ನು ಇದಕ್ಕಾಗಿ ಕಳೆದುಕೊಳ್ಳಬೇಕಾಗುತ್ತದೆ.
ಹೊಸ ದೇಶ ನಿರ್ಮಾಣ ಸುಲಭವಲ್ಲ
ಇದಕ್ಕೆ ಮುಖ್ಯವಾಗಿ ಅಂತಾರಾಷ್ಟ್ರೀಯ ಕಾನೂನು ಹಾಗೂ ವಿಶ್ವಸಂಸ್ಥೆಯ ಸಹಕಾರ ಅಗತ್ಯವಾಗಿದೆ. ಇದು ಒಂದು ದೇಶದ ಸಾರ್ವಭೌಮತೆಯ ಅಧಿಕಾರವನ್ನು ಇನ್ನೊಂದಕ್ಕೆ ವರ್ಗಾಯಿಸುವ ಪ್ರಕ್ರಿಯೆ. ಹೀಗಾಗಿ 'ಮೂಲ ದೇಶ' ಎಂದು ಪರಿಗಣಿಸಲಾದ ರಾಷ್ಟ್ರದ ಅನುಮತಿಯಿಲ್ಲದೆ ವಿಶ್ವಸಂಸ್ಥೆಯಾಗಲೀ ಅಥವಾ ಯಾವುದೇ ಅಂತಾರಾಷ್ಟ್ರೀಯ ಸಂಸ್ಥೆಯಾಗಲೀ ಒಂದು ಪ್ರದೇಶವನ್ನು ತೆಗೆದುಕೊಂಡು ಪ್ರತ್ಯೇಕ ದೇಶವನ್ನಾಗಿಸಲು ಸಾಧ್ಯವಿಲ್ಲ. ಉದಾಹರಣೆಗೆ 2008ರಲ್ಲಿ ಸರ್ಬಿಯಾದಿಂದ ತಾನು ಸ್ವತಂತ್ರಗೊಂಡಿರುವುದಾಗಿ ಕೊಸೋವೋ ಘೋಷಿಸಿಕೊಂಡಿತು. ಇದಕ್ಕೆ ವಿಶ್ವಸಂಸ್ಥೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಸದಸ್ಯರ ಅನುಮೋದನೆ ದೊರೆತರೂ ಅದಕ್ಕೆ ದೇಶವಾಗಿ ಸಾರ್ವಭೌಮತ್ವ ದೊರಕಿಲ್ಲ. ಏಕೆಂದರೆ ಈಗಲೂ ಸರ್ಬಿಯಾ ಆ ಪ್ರದೇಶದ ಮೇಲೆ ತನ್ನ ನಿಯಂತ್ರಣ ಪ್ರತಿಪಾದಿಸಿದೆ. ಹಾಗೆಯೇ ಇರಾಕ್ನಿಂದ ಕುರ್ದಿಸ್ತಾನ್ ಪ್ರತ್ಯೇಕಿಸುವ ಪ್ರಯತ್ನವೂ ಕೈಗೂಡಿಲ್ಲ.
ಒಂದು ದೇಶವಾಗಲು ಏನು ಬೇಕು?
ಯಾವುದೇ ರಾಷ್ಟ್ರ ಸ್ವತಂತ್ರವೆಂದು ತನ್ನದೇ ಕಾನೂನು, ಭೌಗೋಳಿಕ ವ್ಯವಸ್ಥೆ ಪಡೆದುಕೊಳ್ಳುವುದು ಹೇಗೆ ಎಂಬುದು ಈಗಲೂ ಸ್ಪಷ್ಟವಾಗಿ ಹೇಳಲಾಗುವುದಿಲ್ಲ. ಆದರೆ ವಿಶ್ವಸಂಸ್ಥೆ ಅದರ ಸ್ವಾತಂತ್ರ್ಯವನ್ನು ಪರಿಗಣಿಸಿದಾಗ ಅದಕ್ಕೆ ಸಾರ್ವಭೌಮತ್ವ ಸಿಗುತ್ತದೆ. ಒಂದು ಪ್ರತ್ಯೇಕ ದೇಶ ನಿರ್ಮಾಣಕ್ಕೆ ಯಾವುದೇ ವ್ಯಕ್ತಿ ಅಥವಾ ಗುಂಪು ಮುಂದಾದರೆ ಅದಕ್ಕೆ ಅಲ್ಲಿನ ಮೂಲ ನಿವಾಸಿಗಳ ಬೆಂಬಲ ಬೇಕು. ಹಾಗೆಯೇ ಅದಕ್ಕೆ ಭೌಗೋಳಿಕ ಗಡಿ ಇರಬೇಕು. ತನ್ನದೇ ಆಡಳಿತ ವ್ಯವಸ್ಥೆ ಸೃಷ್ಟಿಸಿಕೊಳ್ಳಬೇಕು. ನಿತ್ಯಾನಂದನ ಜಾಲತಾಣಗಳನ್ನು ನೋಡಿದಾಗ ಅದರಲ್ಲಿ ಆಡಳಿತ ವ್ಯವಸ್ಥೆಯ ದೊಡ್ಡ ವಿಭಾಗವೇ ಇದೆ. ಆದರೆ ಆತನ 'ಕೈಲಾಸ' ದೇಶ ಎಲ್ಲಿದೆ, ಅದರ ಭೌಗೋಳಿಕತೆ ಯಾವ ರೀತಿ ಇದೆ ಇತ್ಯಾದಿ ಮಾಹಿತಿ ಇಲ್ಲ. ಒಂದಷ್ಟು ಭೂಮಿಯನ್ನು ಖರೀದಿ ಮಾಡಿ ಅದನ್ನು ತನ್ನದೇ ದೇಶ ಎಂದು ಒಬ್ಬ ವ್ಯಕ್ತಿ ಹೇಳಿಕೊಳ್ಳಲು ಸಾಧ್ಯವೂ ಇಲ್ಲ, ಅದು ಮಾನ್ಯವೂ ಆಗುವುದಿಲ್ಲ.