ಸೋಲಿಗೊಂದು ಹೆಸರಿಡಲು ಸುಮ್ಮನೆ ತಯಾರಿ; ಮೈತ್ರಿ ಸರಕಾರ ಹುಷಾರಿ!
Recommended Video
ಜೆಡಿಎಸ್ ಕಡೆಯಿಂದ ಸಚಿವ ಜಿ.ಟಿ.ದೇವೇಗೌಡ ಅವರು ನೀಡಿದ ಹೇಳಿಕೆ ಬುಧವಾರದಂದು ನಾನಾ ಊಹೆಗಳಿಗೆ ಎಡೆ ಮಾಡಿಕೊಟ್ಟಿದೆ. ಮುಖ್ಯವಾಗಿ ಮೈತ್ರಿ ಸರಕಾರ ಉಳಿಯಲ್ಲವೇನೋ ಎಂಬ ಅಂದಾಜು ಶುರು ಆಗಿದೆ. ಆದರೆ ಕಾಂಗ್ರೆಸ್ ಗಾಗಲೀ ಜೆಡಿಎಸ್ ಗಾಗಲೀ ತಾನಾಗಿಯೇ ಈಗಿನ ಸರಕಾರವನ್ನು ಉರುಳಿಸುವುದು ಅಪಾಯಕಾರಿ ಎಂಬುದು ತಿಳಿದಿದೆ.
ಜಿ.ಟಿ.ದೇವೇಗೌಡರು ಹೇಳಿದ ಮಾತಿನಲ್ಲಿ ಸತ್ಯ ಇದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ನ ಕಾರ್ಯಕರ್ತರು ತಳ ಮಟ್ಟದಲ್ಲಿ ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗಲು ಸಾಧ್ಯವಾಗಿಲ್ಲ. ಅದಕ್ಕೆ ಅವರು ನೀಡಿದ ಕಾರಣ ಕೂಡ ವಾಸ್ತವವಾದದ್ದೇ. ಇನ್ನೇನು ಸ್ಥಳೀಯ ಸಂಸ್ಥೆಗಳ ಚುನಾವಣೆ ಬಂದಾಗ ಪ್ರತ್ಯೇಕವಾಗಿ ಚುನಾವಣೆ ಎದುರಿಸುವುದು ಹೇಗೆ ಎಂಬ ಪ್ರಶ್ನೆ ಕಾರ್ಯಕರ್ತರದು.
ಮೈಸೂರಿನಲ್ಲಿ ಕಾಂಗ್ರೆಸ್ ಸೋಲ್ತು ಅನ್ಕೊಳ್ಳಿ, ಸಮ್ಮಿಶ್ರ ಸರಕಾರದ ಕಥೆ?
ಇನ್ನು ಮಾಜಿ ಪ್ರಧಾನಿ ದೇವೇಗೌಡರು- ರಾಹುಲ್ ಗಾಂಧಿ ಮಧ್ಯದ ಮಾತುಕತೆಯಿಂದ ಮೈತ್ರಿ ಆಗಿದೆಯೇ ಹೊರತು ಅದರ ಆಚೆಗೆ ಅಥವಾ ಹೊರತಾಗಿ 'ಮೈತ್ರಿ' ಬೆಸೆದಿಲ್ಲ. ಸಾರ್ವಜನಿಕವಾಗಿ ಒಟ್ಟಾಗಿರುವಂತೆ ಕಾಣಿಸಿಕೊಳ್ಳುತ್ತಾರಾದರೂ ಆಂತರಿಕವಾಗಿ ಅಂತರ ಇದ್ದೇ ಇದೆ. ಇನ್ನು ಸರಕಾರ ಉರುಳುವ ವಿಚಾರಕ್ಕೆ ಬರುವುದಾದರೆ, ಈಗಿನ ಸನ್ನಿವೇಶದಲ್ಲಿ ಹಾಗಾದಲ್ಲಿ ಬಿಜೆಪಿಗೇ ಹೆಚ್ಚಿನ ಲಾಭವಾಗುತ್ತದೆ. ಅದು ಹೇಗೆಂದರೆ?
ಕುಮಾರಸ್ವಾಮಿ ಮೇಲೆ ಗೂಬೆ ಕೂರಿಸಬಹುದು
ಒಂದು ವೇಳೆ ಜೆಡಿಎಸ್ ನಿಂದ ಸ್ವತಃ ಮೈತ್ರಿ ಕಡಿದುಕೊಂಡರೆ, ಕುಮಾರಸ್ವಾಮಿ ಅವರ ಜೆಡಿಎಸ್ ಬಳಿ ಮೂವತ್ತಾರು ಸೀಟಿತ್ತು. ಅದರೂ ಅವರನ್ನೇ ಮುಖ್ಯಮಂತ್ರಿ ಮಾಡಿದೆವು. ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ನೀಡಿದೆವು. ರೈತರ ಸಾಲ ಮನ್ನಾ ಮಾಡುವುದಕ್ಕೂ ಯಾವುದೇ ತಕರಾರು ಮಾಡಲಿಲ್ಲ. ಜಾತ್ಯತೀತ ಶಕ್ತಿಗಳು ಒಂದೇ ವೇದಿಕೆಯಲ್ಲಿ ನಿಲ್ಲಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ ಮಾಡಿದ ತ್ಯಾಗವನ್ನು ಕುಮಾರಸ್ವಾಮಿ ಅರ್ಥ ಮಾಡಿಕೊಂಡಿರಬೇಕು ಎಂದು ತನ್ನ ಪರವಾದ ವಾದ ಮಂಡಿಸುತ್ತದೆ ಕೈ ಪಕ್ಷ. ಅದರರ್ಥ ಎಲ್ಲ ರೀತಿಯ ಸಹಕಾರ- ಬೆಂಬಲ ನೀಡಿದರೂ ತಾವಾಗಿಯೇ ಬಂಧ ಬಿಡಿಸಿಕೊಂಡು ಹೋದರು ಎಂದು ಜೆಡಿಎಸ್ ಹಾಗೂ ಕುಮಾರಸ್ವಾಮಿ ಮೇಲೆ ಕಾಂಗ್ರೆಸ್ ನಿಂದ ಗೂಬೆ ಕೂರಿಸಬಹುದು. ಈಗಿನ ಸರಕಾರ ರಚನೆ ಆಗಿರುವುದು ರಾಹುಲ್ ಗಾಂಧಿ ಆಶೀರ್ವಾದದಿಂದ ಎಂಬುದನ್ನು ಸ್ವತಃ ಕುಮಾರಸ್ವಾಮಿ ಒಪ್ಪಿದ್ದಾರೆ. ಆಗ ಕಾಂಗ್ರೆಸ್ ನಿಂದ ಜನರ ಮುಂದೆ ಹೋಗಲು ಏನೇನೂ ಸಮಸ್ಯೆ ಇರುವುದಿಲ್ಲ. ಆದರೆ ಕಾಂಗ್ರೆಸ್ ಮಂಡಿಸುವ ಅಂಶಗಳನ್ನು ಜನರು ಒಪ್ಪಬೇಕು.
ಆಡಳಿತ ವಿರೋಧಿ ಅಲೆ ದೂರ ಮಾಡಲು ಸಿಎಂ ಕುರ್ಚಿ ತ್ಯಾಗ
ಇನ್ನು ಕಾಂಗ್ರೆಸ್ ನಿಂದಲೇ ಈಗಿನ ಸರಕಾರ ಕೆಡವಿದರೆ, ನಾವೇನೂ ಮುಖ್ಯಮಂತ್ರಿ ಸ್ಥಾನ ಕೇಳಿದವರಲ್ಲ. ಕಾಂಗ್ರೆಸ್ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆಯನ್ನು ಜನರ ಮನಸ್ಸಿನಿಂದ ದೂರ ಮಾಡಲು ಜೆಡಿಎಸ್ ಗೆ ಅಧಿಕಾರ ಕೊಟ್ಟರು. ಆದರೆ ಒಂದು ದಿನಕ್ಕೂ ನೆಮ್ಮದಿಯಾಗಿ ಆಡಳಿತ ನಡೆಸಲು ಬಿಡಲೇ ಇಲ್ಲ. ಅದರಲ್ಲೂ ಸಿದ್ದರಾಮಯ್ಯ ಬೆಂಬಲಿಗರು ಹೋದಲ್ಲಿ ಬಂದಲ್ಲಿ ಮಾನಸಿಕ ಹಿಂಸೆ ನೀಡಿದರು. ಸಿದ್ದರಾಮಯ್ಯ ಅವರೇ ನಮಗೆ ಈಗಲೂ ಮುಖ್ಯಮಂತ್ರಿ ಎಂದರು. ಸಿದ್ದರಾಮಯ್ಯ ಆಪ್ತರು ಪದೇಪದೇ ಆಪರೇಷನ್ ಕಮಲದ ಕಾವು ಎಬ್ಬಿಸುತ್ತಾ ಸುಗಮ ಆಡಳಿತಕ್ಕೆ ಸ್ಪೀಡ್ ಬ್ರೇಕರ್ ಆದರು. ಅಷ್ಟಾದರೂ ಕೋಮುವಾದಿ ಬಿಜೆಪಿಯನ್ನು ಅಧಿಕಾರ ಕೇಂದ್ರದಿಂದ ದೂರ ಇಡಲು ಮೈತ್ರಿ ಮಾಡಿಕೊಂಡೆವು. ನಮಗಾದ ಅವಮಾನ ಎಲ್ಲ ಸಹಿಸಿಕೊಂಡೆವು ಎಂದು ಜೆಡಿಎಸ್ ನಿಂದ ಕಾಂಗ್ರೆಸ್ ಮೇಲೆ ಆರೋಪಗಳನ್ನು ಮಾಡಬಹುದು.
ಜೆಡಿಎಸ್ ಮತ ಬಿಜೆಪಿಗೆ: ಜಿ.ಟಿ. ದೇವೇಗೌಡ ಹೇಳಿಕೆಗೆ ಸಿದ್ದರಾಮಯ್ಯ ಅಚ್ಚರಿ
ಅಧಿಕಾರ ಇದ್ದಾಗಲೇ ಹೀಗೆ, ಇಲ್ಲದಾಗ ಪರಿಸ್ಥಿತಿ ಹೇಗೆ?
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್- ಕಾಂಗ್ರೆಸ್ ಮಧ್ಯೆ ಮೈತ್ರಿಯೇ ಸರಿಯಾಗಿ ಆಗಿದ್ದಲ್ಲ. ಮೂರು ಕ್ಷೇತ್ರದಲ್ಲಿ (ಹಾಸನ, ಮಂಡ್ಯ, ತುಮಕೂರು) ಫಲಿತಾಂಶದಲ್ಲಿ ಸರಕಾರವನ್ನು ಬೀಳಿಸಿಕೊಂಡರೆ, ಒಂದು ವೇಳೆ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದುಬಿಟ್ಟರೆ ಮುಂದೆ ಎಂಥ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂಬುದು ಎರಡೂ ಪಕ್ಷಗಳಿಗೆ (ಜೆಡಿಎಸ್-ಕಾಂಗ್ರೆಸ್) ಗೊತ್ತಿದೆ. ಆದಾಯ ತೆರಿಗೆ ಇಲಾಖೆ ದಾಳಿಯಿಂದ ಅಕ್ಷರಶಃ ನಲುಗಿ ಹೋಗಿರುವ ಜೆಡಿಎಸ್, ಕಾಂಗ್ರೆಸ್ ಅಧಿಕಾರ ಕಳೆದುಕೊಂಡರೆ ಎಂಥ ಸವಾಲು ಅನುಭವಿಸಬೇಕಾಗುತ್ತದೆ ಎಂದು ತಿಳಿದುಕೊಂಡಿವೆ. ಒಂದು ವೇಳೆ ಕಾಂಗ್ರೆಸ್ ನೇತೃತ್ವದಲ್ಲೋ ಅಥವಾ ಬೆಂಬಲದಲ್ಲೋ ಕೇಂದ್ರದಲ್ಲಿ ಸರಕಾರ ರಚನೆಯಾದರೂ ರಾಜ್ಯದಲ್ಲಿ ಮೈತ್ರಿ ಸರಕಾರ ಉತ್ತಮವಾಗಿ ಕೆಲಸ ಮಾಡಬಹುದು. ಕಾಂಗ್ರೆಸ್ ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟು, ಜೆಡಿಎಸ್ ಉಪ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಬಹುದು ಅಥವಾ ಈಗ ಇರುವಂತೆಯೂ ಮುಂದುವರಿಸಬಹುದು. ಯಾವಾಗ ಆಪರೇಷನ್ ಕಮಲ ಮಾಡುತ್ತಾರೋ ಎಂದು ಗಾಬರಿ ಆಗುವ ಅಗತ್ಯವೂ ಇಲ್ಲ.
ಸೋಲು ಎದುರಾದರೆ ಹೇಳಲು ಕಾರಣಗಳು
ಆದರೆ, ಕಾಂಗ್ರೆಸ್ ಗೆ ಅಥವಾ ಬಿಜೆಪಿಗೆ ದೇಶದಲ್ಲಿ ಹಾಗೂ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಜನ ಬೆಂಬಲ ದೊರಕಿ, ಕೇಂದ್ರದಲ್ಲಿ ಸರಕಾರ ರಚಿಸಿದರೆ ಆಗ ಮತ್ತೊಂದು ಸುತ್ತಿನ ಮ್ಯೂಸಿಕಲ್ ಛೇರ್ ಕರ್ನಾಟಕದಲ್ಲಿ ಶುರು ಆಗುತ್ತದೆ. ಏಕೆಂದರೆ, ಅತೃಪ್ತರು, ಅಸಮಾಧಾನಿತರು ಮುಖ್ಯವಾಗಿ ಕಾಯುತ್ತಿರುವುದು ಲೋಕಸಭಾ ಚುನಾವಣೆಯ ಜನಾದೇಶವನ್ನು. ಆಪರೇಷನ್ ಕಮಲಕ್ಕೆ ಇಳಿದು, ಎರಡು ಬಾರಿ ದೊಡ್ಡ ಮಟ್ಟದಲ್ಲಿ ಮುಖಭಂಗ ಅನುಭವಿಸಿದ ಬಿಜೆಪಿಯನ್ನು ನಂಬುವ ಸ್ಥಿತಿಯಲ್ಲಿ ಇತರ ಪಕ್ಷಗಳ ನಾಯಕರು ಇಲ್ಲ. ಇನ್ನು ಏನಾದರೂ ಹೆಚ್ಚು ಕಡಿಮೆ ಆಗಿ, ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದಲ್ಲೋ ಅಥವಾ ಬೆಂಬಲದಲ್ಲೋ ಸರಕಾರ ರಚನೆ ಆಗಿಬಿಟ್ಟರೆ ಎಂಬ ಸಣ್ಣದೊಂದು ಅಳುಕು ಕೂಡ ಇದೆ. ರಾಷ್ಟ್ರೀಯ ಪಕ್ಷಗಳು ಹೇಗೋ ಉಳಿದುಕೊಳ್ಳುತ್ತವೆ. ಆದರೆ ಜೆಡಿಎಸ್ ಪಾಲಿಗಂತೂ ಈಗ ಸಿಕ್ಕಿರುವುದು ಬಂಪರ್ ಲಾಟರಿ. ಅದನ್ನು ಕೈ ಚೆಲ್ಲಿ ಬಿಟ್ಟರೆ ಮತ್ತೆ ಏನು ಸನ್ನಿವೇಶವೋ ಎಂಬ ಆತಂಕವಂತೂ ಇದೆ. ಆದ್ದರಿಂದ ಮಂಡ್ಯ, ಹಾಸನ ಹಾಗೂ ತುಮಕೂರು ಸೇರಿದಂತೆ ಯಾವುದೇ ಪ್ರಮುಖ ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗೆ ಸೋಲು ಎದುರಾದರೆ ಹೇಳಲು ಕಾರಣಗಳಿರಲಿ ಎಂದು ಈಗಿನಿಂದಲೇ ಅಭ್ಯಾಸ ನಡೆದಿದೆ, ಅಷ್ಟೇ.
ಜೆಡಿಎಸ್ ಬೆಂಬಲಿಗರಿಂದ ಬಿಜೆಪಿಗೆ ಮತ: ಜಿಟಿಡಿ ಹೇಳಿಕೆಗೆ ಡಿಕೆಶಿ ಏನಂದ್ರು?